ಕಾರ್ಕಳ : ಕಾರ್ಕಳ ಯಕ್ಷ ಕಲಾರಂಗದವರು ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಸಹಯೋಗದೊಂದಿಗೆ ಹದಿನಾಲ್ಕನೇ ವರ್ಷದ ಯಕ್ಷಗಾನ ಶಿಕ್ಷಣ ಅಭಿಯಾನವು ದಿನಾಂಕ 26 ಜೂನ್ 2025ರಂದು ಕಾರ್ಕಳ ಕಾರೋಲ್ ಗುಡ್ಡೆ ಕಲ್ಲಗುಪ್ಪೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ತರಗತಿಯ ಉದ್ಘಾಟನಾ ಸಮಾರಂಭ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಿವೃತ್ತ ಪ್ರಾಚಾರ್ಯ ಕಲಾರಂಗದ ಸಂಚಾಲಕ ಪ್ರೊ. ಪದ್ಮನಾಭ ಗೌಡ ಇವರು ಮಾತನಾಡಿ “ಕಲೆಯನ್ನು ಪ್ರೀತಿಸಿದವರು ಕಲಾವಿದರಾಗುತ್ತಾರೆ, ಕಲಾವಿದರನ್ನು ಪ್ರೀತಿಸಿದವರು ಕಾಮಧೇನು ಆಗುತ್ತಾರೆ. ಈ ಮಾತಿಗೆ ಸಾಕ್ಷಿ ನಮ್ಮ ಕಲಾವಿದರ ಕಾಮಧೇನು ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟರು” ಎಂದು ಹೇಳಿದರು.
ಮಿಯ್ಯಾರು ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಸನ್ಮತಿ ನಾಯಕ್ ಅಧ್ಯಕ್ಷತೆ ವಹಿಸಿ, ಯಕ್ಷ ಶಿಕ್ಷಣ ತರಗತಿ ಉದ್ಘಾಟಿಸಿ ಮಕ್ಕಳಿಗೆ ಶುಭ ಹಾರೈಸಿದರು. ಶಾಲಾ ಸಂಸ್ಥಾಪಕರಾದ ಇಸ್ರೋ ವಿಜ್ಞಾನಿ ಜನಾರ್ದನ ರಾವ್ ಇಡ್ಯಾ ಮಾತನಾಡಿ “ನಮ್ಮ ಕಲೆಯನ್ನು ಮುಂದಿನ ಕಾಲಕ್ಕೆ ಕೊಂಡೊಯ್ಯುವ ಸುಲಭ ವಿಧಾನ ಈ ಯಕ್ಷ ಶಿಕ್ಷಣ ಅಭಿಯಾನ” ಎಂದು ಎರಡು ಸಂಸ್ಥೆಗಳನ್ನು ಅಬಿನಂದಿಸಿದರು.
ಕಲಾರಂಗ ಹಾಗೂ ಕಾರ್ಕಳ ಘಟಕದ ಅಧ್ಯಕ್ಷರಾದ ವಿಜಯ ಶೆಟ್ಟಿ, ಕೋಶಾಧ್ಯಕ್ಷ ಶ್ರೀವರ್ಮ ಅಜ್ರಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ವಿಜಯ ಶೆಟ್ಟಿ, ಉಪಾಧ್ಯಕ್ಷೆ ಶ್ರೀಮತಿ ದೀಪ್ತಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಜಿತ್ ಕುಮಾರ್, ಕಾರ್ಯದರ್ಶಿ ಸಮಿತ್ರಾ, ಗ್ರಾಮ ಪಂ. ಉಪಾಧ್ಯಕ್ಷೆ ಶ್ರೀ ದೇವಿ ಉಪಸ್ಥಿತರಿದ್ದರು. ಕಾರ್ಕಳ ಘಟಕದ ಕಾರ್ಯದರ್ಶಿ ಕಾಂತಾವರ ಮಹಾವೀರ ಪಾಂಡಿ ಯಕ್ಷ ಶಿಕ್ಷಣದ ಬಗ್ಗೆ ಪ್ರಾಸ್ತಾವಿಕವಾಗಿ ತಿಳಿ ಹೇಳಿದರು. ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಮನೋಹರ್ ಸ್ವಾಗತಿಸಿ, ಸಹ ಶಿಕ್ಷಕಿ ಶ್ರೀಮತಿ ವನಿತಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ವಿಜ್ಞಾನ ಶಿಕ್ಷಕಿ ಶ್ರೀಮತಿ ಸುನಂದಾ ಧನ್ಯವಾದವಿತ್ತರು. ನಂತರ ಯಕ್ಷಗಾನ ಗುರು ಸಾಣೂರು ಗಣೇಶ ಶೆಟ್ಟಿಯವರು ವೀಳ್ಯ ಪಡೆದು ತರಗತಿ ಆರಂಭಿಸಿದರು.