ಮಂಗಳೂರು : ಸರಯೂ ಬಾಲ ಯಕ್ಷವೃಂದ ಕೋಡಿಕಲ್ ಇದರ ರಜತ ಮಹೋತ್ಸವ ಸಂಭ್ರಮ ಸಮಾರಂಭದ ಅಂಗವಾಗಿ ಆಯೋಜಿಸಿದ 15 ದಿನಗಳ ಯಕ್ಷಪಕ್ಷ – ರಜತ ಸರಯೂ ಕಾರ್ಯಕ್ರಮದ 9ನೇ ದಿನದ ಕಾರ್ಯಕ್ರಮ ದಿನಾಂಕ 26 ಮೇ 2025ರ ಸೋಮವಾರದಂದು ಕದ್ರಿ ದೇವಳದ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕದ್ರಿ ದೇವಸ್ಥಾನದ ಟ್ರಸ್ಟಿಗಳಲ್ಲಿ ಓರ್ವರಾದ ಶ್ರೀ ರಾಜೇಂದ್ರ ಮಾತನಾಡಿ “ಯಕ್ಷಗಾನದ ಬಗ್ಗೆ ಅಧ್ಯಯನ. ಅದರ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರಿಂದ ನಾವು ಜೀವನದಲ್ಲಿ ಎತ್ತರಕ್ಕೆ ಏರಬಹುದು. ಹಾಗೆಯೇ ಸರಯೂ ಸಂಸ್ಥೆಯ ಶಿಕ್ಷಣಾರ್ಥಿಗಳು ಕೂಡಾ ಪುರಾಣ ಕಥೆಗಳಲ್ಲಿ ಬರುವ ಆದರ್ಶ ಪಾತ್ರಗಳನ್ನು ಅಭ್ಯಸಿಸಿ ಉತ್ತಮ ಜೀವನ ನಡೆಸಬೇಕು. ರಜತ ವರ್ಷಗಳ ಇತಿಹಾಸವುಳ್ಳ ಈ ಸಂಸ್ಥೆ ಇನ್ನೂ ಬೆಳಗಲಿ” ಎ೦ದರು. ‘ಚಾರ್ಲಿ ಚಾಪ್ಲಿನ್’ ಖ್ಯಾತಿಯ ಹಾಸ್ಯಗಾರ ಸೀತಾರಾಂ ಕುಮಾರ್ ಕಟೀಲು ತಮ್ಮ ತಿರುಗಾಟದ ಅನುಭವವನ್ನು ವಿವರಿಸುತ್ತಾ ಸಂಸ್ಥೆಗೆ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಯೋಗಪಟು, ತುಳುಕೂಟದ ಉಪಾಧ್ಯಕ್ಷರಾದ ಜೆ. ವಿ. ಶೆಟ್ಟಿ ಇವರಿಗೆ ‘ಯಕ್ಷ ಸರಯೂ’ ಬಿರುದಿತ್ತು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು “ಯಕ್ಷಗಾನ ಪ್ರೇಮಿಯಾದ ತನ್ನನ್ನು ಸಂಸ್ಥೆ ಸನ್ಮಾನಿಸಿದ್ದು ಸಂತೋಷದ ವಿಚಾರ. ನಾನು ನಾನಾ ಕ್ಷೇತ್ರಗಳಲ್ಲಿ ದುಡಿಯುತ್ತಾ ನಿವೃತ್ತಿಯಾಗಿದ್ದರೂ ಪ್ರವೃತ್ತ ನಾಗಿ ಕಾಣಿಸಿಕೊಳ್ಳುವಲ್ಲಿ ಇದು ನನಗೆ ಸಹಕಾರಿಯಾಗಿದೆ. ಎಲ್ಲರಿಗೂ ಶುಭವಾಗಲಿ” ಎಂದು ಹೇಳಿದರು. ಪ್ರಭಾಕರ ರಾವ್ ಪೇಜಾವರ ಉಪಸ್ಥಿತರಿದ್ದರು.
ಪ್ರತೀಕ್ ರಾವ್ ಪ್ರಾರ್ಥಿಸಿ, ಸುಧಾಕರ ರಾವ್ ಸ್ವಾಗತಿಸಿ, ನಿತ್ಯಶ್ರೀ ಪೂಜಾರಿ ಸನ್ಮಾನಪತ್ರ ವಾಚಿಸಿ, ಸಂಸ್ಥೆಯ ನಿರ್ದೇಶಕ ರವಿ ಅಲೆವೂರಾಯ ವರ್ಕಾಡಿ ಕಾರ್ಯಕ್ರಮ ನಿರ್ವಹಿಸಿ, ಕೃತಿ ದೇವಾಡಿಗ ಧನ್ಯವಾದವಿತ್ತರು.
ಸಭಾ ಕಾರ್ಯಕ್ರಮದ ಬಳಿಕ ‘ಬ್ರಹ್ಮ ಕಪಾಲ’ ಯಕ್ಷಗಾನ ಪ್ರದರ್ಶನಗೊಂಡಿತು.
Subscribe to Updates
Get the latest creative news from FooBar about art, design and business.