ಕೋಟ : ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಮತ್ತು ಕೋಟದ ಸಾಲಿಗ್ರಾಮ ಮಕ್ಕಳ ಮೇಳವು ‘ಸುವರ್ಣ ಪರ್ವ’ದ ಸರಣಿ ಕಾರ್ಯಕ್ರಮವಾಗಿ ಎರಡು ದಿವಸಗಳ ಆಹ್ವಾನಿತ ತಂಡಗಳ ‘ಯಕ್ಷ ತ್ರಿವಳಿ’ ಯಕ್ಷೋತ್ಸವವು ದಿನಾಂಕ 17 ಎಪ್ರಿಲ್ 2025ರ ಗುರುವಾರ ಮತ್ತು 18 ಏಪ್ರಿಲ್ 2025ರ ಶುಕ್ರವಾರದಂದು ಕೋಟ ಮೂರ್ಕೈಯ ಹಂದೆ ಮಹಾ ವಿಷ್ಣು ವಿನಾಯಕ ದೇವಸ್ಥಾನದಲ್ಲಿ ನಡೆಯಲಿದೆ.
ಮೊದಲ ದಿನ ಸಂಜೆ 5.30ಕ್ಕೆ ಅಕಾಡೆಮಿಯ ಅಧ್ಯಕ್ಷರಾದ ತಲ್ಲೂರು ಶಿವರಾಮ ಶೆಟ್ಟಿಯವರ ಸಭಾ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮದಲ್ಲಿ ಕುಂದಾಪುರದ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕಿರಣ ಕುಮಾರ ಕೊಡ್ಗಿ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಸಮಾರಂಭದಲ್ಲಿ ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ, ಉದ್ಯಮಿ ಮೊಳಹಳ್ಳಿ ದಿನೇಶ್ ಹೆಗ್ಡೆ, ಗೀತಾನಂದ ಫೌಂಡೇಶನ್ ಇದರ ಪ್ರವರ್ತಕರಾದ ಆನಂದ ಸಿ. ಕುಂದರ್, ಉಡುಪಿ ಯಕ್ಷಗಾನ ಕಲಾರಂಗದ ಮುರಳಿ ಕಡೆಕಾರ್, ಕೋಟತಟ್ಟು ಪಂಚಾಯತ್ ಇದರ ಅಧ್ಯಕ್ಷರಾದ ಸತೀಶ್ ಬಾರಿಕೆರೆ, ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕ ಎಚ್. ಶ್ರೀಧರ ಹಂದೆ, ಅಧ್ಯಕ್ಷರಾದ ಬಲರಾಮ ಕಲ್ಕೂರ, ಕಾರ್ಯಾಧ್ಯಕ್ಷರಾದ ಮಹೇಶ ಉಡುಪ, ಉಪಾಧ್ಯಕ್ಷರಾದ ಜನಾರ್ದನ ಹಂದೆ, ಅಕಾಡೆಮಿಯ ರಿಜಿಸ್ಟ್ರಾರ್ ನಮೃತಾ ಎನ್., ಸದಸ್ಯ ಸಂಚಾಲಕ ರಾಘವ ಎಚ್. ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಮಕ್ಕಳ ಕ್ಷೇತ್ರದ ಅನನ್ಯ ಸಾಧಕರಾದ ಗುರು ದೇವದಾಸ ಕೂಡ್ಲಿ ಇವರನ್ನು ‘ಸುವರ್ಣ ಪುರಸ್ಕಾರ’ ನೀಡಿ ಗೌರವಿಸಲಾಗುವುದು.
ಎರಡನೇ ದಿನದ ಸಮಾರೋಪ ಸಮಾರಂಭದಲ್ಲಿ ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಇದರ ಅಧ್ಯಕ್ಷರಾದ ರಾಮಚಂದ್ರ ಐತಾಳ್, ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿಯಾದ ಪೂರ್ಣಿಮಾ, ಯಕ್ಷ ವಿಮರ್ಶಕ ಬೇಳೂರು ರಾಘವ ಶೆಟ್ಟಿ. ಯಕ್ಷ ಸಂಘಟಕ ಸುದರ್ಶನ ಉರಾಳ, ಹಂದೆ ದೇವಸ್ಥಾನದ ಆನುವಂಶಿಕ ಮೊಕ್ತೇಸರಾದ ಅಮರ ಹಂದೆ ಉಪಸ್ಥಿತಿಯಲ್ಲಿ ಮಕ್ಕಳ ಕ್ಷೇತ್ರದ ಯಕ್ಷ ಸಾಧಕ ಶ್ರೀಧರ ಹೆಬ್ಬಾರ್ ಕರ್ಜೆ ಇವರನ್ನು ಗೌರವಿಸಲಾಗುವುದು.
ಕಾರ್ಯಕ್ರಮದಲ್ಲಿ ಕೋಟ ಕಲಾ ಪೀಠ ಇವರಿಂದ ಬಡಗು ತಿಟ್ಟು ಯಕ್ಷಗಾನ ‘ಮೈಂದ ದ್ವಿವಿಧ ಕಾಳಗ’, ಯಕ್ಷ ಆರಾಧನಾ ಕಿದಿಯೂರು ಇವರಿಂದ ಬಡಗುತಿಟ್ಟು ಯಕ್ಷ್ಗಗಾನ ‘ಶಶಿಪ್ರಭಾ ಪರಿಣಯ’ ಹಾಗೂ ಮಯೂರ ಪ್ರತಿಷ್ಠಾನ ಮಂಗಳೂರು ಇವರಿಂದ ತೆಂಕು ತಿಟ್ಟು ಯಕ್ಷಗಾನ ‘ಶರಣ ಸೇವಾ ರತ್ನ’ ಎಂಬ ಯಕ್ಷ ತ್ರಿವಳಿ ಪ್ರದರ್ಶನಗೊಳ್ಳಲಿದೆ ಎಂದು ಸಾಲಿಗ್ರಾಮ ಮಕ್ಕಳ ಮೇಳದ ಕಾರ್ಯದರ್ಶಿ ಸುಜಯೀಂದ್ರ ಹಂದೆ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Previous Articleಸಂಭ್ರಮದಿಂದ ಅನಾವರಣಗೊಂಡ ‘ರಜಾ ಮಜಾ’ ಮಕ್ಕಳ ಬೇಸಿಗೆ ಶಿಬಿರ