ಬೆಳ್ತಂಗಡಿ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ವತಿಯಿಂದ ನಡೆಯುವ 2025-26ನೇ ಸಾಲಿನ ಯಕ್ಷಧ್ರುವ ಯಕ್ಷ ಶಿಕ್ಷಣ ನಾಟ್ಯಾಭ್ಯಾಸ ಕಾರ್ಯಕ್ರಮವು ಸರ್ಕಾರಿ ಪ್ರೌಢಶಾಲೆ ನಿಡ್ಲೆಯಲ್ಲಿ ದಿನಾಂಕ 20 ಜೂನ್ 2025ರ ಶುಕ್ರವಾರದಂದು ಉದ್ಘಾಟನೆಗೊಂಡಿತು.
ಕಾರ್ಯಕ್ರಮವನ್ನು ಫೌಂಡೇಶನ್ನಿನ ಕೇಂದ್ರ ಸಮಿತಿಯ ಟ್ರಸ್ಟಿಗಳೂ ಆಗಿರುವ ಸಂಘಟಕರಾದ ಶ್ರೀ ಭುಜಬಲಿ ಬಿ. ಧರ್ಮಸ್ಥಳ ಇವರು ಉದ್ಘಾಟಿಸಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶ್ರೀಯುತರು “ಉತ್ತಮ ಕಲಾವಿದರಾದ ಈಶ್ವರ ಪ್ರಸಾದ್ ಇವರು ಗುರುಗಳಾಗಿ ಸಿಗುತ್ತಿರುವುದು ನಿಮ್ಮ ಭಾಗ್ಯ. ವಿದ್ಯಾಭ್ಯಾಸದ ಜೊತೆಗೆ ಯಕ್ಷಗಾನವನ್ನು ಕಲಿಯಿರಿ. ಇದು ನಿಮ್ಮ ಭವಿಷ್ಯಕ್ಕೆ ಪೂರಕ” ಎಂದು ಕಿವಿ ಮಾತು ಹೇಳಿದರು. ಪಟ್ಲ ಫೌಂಡೇಶನ್ ಟ್ರಸ್ಟಿನ ಕಾರ್ಯ ಚಟುವಟಿಕೆಗಳನ್ನು ತಿಳಿಸಿದರು. ಪಟ್ಲ ಶ್ರೀ ಸತೀಶ್ ಶೆಟ್ಟಿ ಇವರ ಕಾರ್ಯವೈಖರಿಯನ್ನು ಪ್ರಶಂಶಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಟ್ರಸ್ಟಿನ ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಶ್ರೀ ಸುರೇಶ್ ಶೆಟ್ಟಿಯವರು ಕಳೆದ ಮೂರು ವರ್ಷಗಳಿಂದ ವಿವಿಧ ಶಾಲೆಗಳಲ್ಲಿ ನಡೆಯುತ್ತಿರುವ ಯಕ್ಷನಾಟ್ಯ ಅಭಿಯಾನ ಕಾರ್ಯಕ್ರಮದ ಬಗ್ಗೆ ತಿಳಿಸುತ್ತಾ ಪ್ರಸ್ತುತ ಸಾಲಿನಲ್ಲಿ ನಡೆಯುವ ನಾಟ್ಯ ಅಭಿಯಾನ ಕಾರ್ಯಕ್ರಮದ ಬಗ್ಗೆ ಮತ್ತು ಪಟ್ಲ ಫೌಂಡೇಶನ್ ಟ್ರಸ್ಟ್ ಕಾರ್ಯ ಚಟುವಟಿಕೆಗಳನ್ನು ತಿಳಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶಾಲಾ ಹಳೆ ವಿದ್ಯಾರ್ಥಿಗಳು ಕೂಡಾ ಉಪಸ್ಥಿತರಿದ್ದರು.