ಹಿಮ್ಮೇಳದೊಂದಿಗೆ ಮಧುರ ಹೊಂದಾಣಿಕೆ, ಮುಮ್ಮೇಳದ ಕಲಾಭಿವ್ಯಕ್ತಿ ಚೈತನ್ಯಶೀಲವಾಗಿಸುವ ನುಡಿಸುವಿಕೆ, ಮದ್ದಳೆಗಾರಿಕೆಯಲ್ಲಿ ಶುದ್ಧ, ಹೃದ್ಯ, ನಿರೂಪಣೆ, ಪ್ರಬುದ್ಧ ಮದ್ದಳೆವಾದನ. ಪರಿಪೂರ್ಣವಾಗಿ ಸಭಾಲಕ್ಷಣ, ಒಡ್ಡೋಲಗ, ಯುದ್ಧಕುಣಿತ ಹೀಗೆ ನೀರಾಳವಾಗಿ ಬಾರಿಸುವ ಸಾಲಿಗೆ ಸೇರಿದವರು ರಾಘವೇಂದ್ರ ಹೆಗಡೆ ಯಲ್ಲಾಪುರ.
ಯಲ್ಲಾಪುರದ ಮಂಚಿಕೇರಿಯಲ್ಲಿ 1988ರಲ್ಲಿ ಜನಿಸಿದ ಹೆಗಡೆಯವರು ಎಸ್.ಎಸ್.ಎಲ್.ಸಿ. ಯವರೆಗೆ ವಿದ್ಯಾಭ್ಯಾಸ ಮುಗಿಸಿ, ಭಾವ ಸುಬ್ರಮಣ್ಯ ಹೆಗಡೆ ಯವರ ಪ್ರೇರಣೆ ಮೇರೆಗೆ ಕಲೆಯಲ್ಲಿ ಪರಿಪೂರ್ಣತೆ ಸಾಧಿಸುವ ಉದ್ದೇಶದಿಂದ ಶ್ರೀಮಯ ಕಲಾಕೇಂದ್ರ ಗುಣವಂತೆಯಲ್ಲಿ ಎರಡು ವರ್ಷ ಯಕ್ಷಗಾನದ ಕುಣಿತ, ಮದ್ದಳೆ ವಾದನದ ಬಗ್ಗೆ ಅಭ್ಯಾಸ ಮಾಡಿದರು.
ನಗರ ಸುಬ್ರಹ್ಮಣ್ಯ ಆಚಾರ್, ಹೆರಂಜಾಲು ವೆಂಕಟರಮಣ ಗಾಣಿಗ, ಗಜಾನನ ಹೆಗಡೆ ಮೂರೂರು ಇವರ ಗುರುತನದಲ್ಲಿ ಸಾಕಷ್ಟು ಪರಿಪೂರ್ಣತೆಯನ್ನು ಪಡೆದು, ಸೌಕೂರು ಮೇಳದಲ್ಲಿ ಮದ್ದಳೆವಾದಕರಾಗಿ, ಅನಿವಾರ್ಯ ಸಂದರ್ಭದಲ್ಲಿ ಮೇಳದ ವ್ಯಾನ್ ಚಾಲಕರಾಗಿ 6 ವರ್ಷ ತಿರುಗಾಟ ಮಾಡಿದರು. ಕಳೆದ 9 ವರ್ಷದಿಂದ ಅಮೃತೇಶ್ವರಿ ಮೇಳದಲ್ಲಿ ಪ್ರಧಾನ ಮದ್ದಳೆ ವಾದಕರಾಗಿ ತಿರುಗಾಟ ನಡೆಸುತ್ತಿದ್ದಾರೆ.
ಸ್ಪಷ್ಟ ಘಾತದ ಪೆಟ್ಟು, ಗುಂಪು, ಛಾಪು, ಸ್ಪೂಟ ಉರಳಿಕೆ, ಇವರಿಗೆ ಪೆಟ್ಟು-ಮಟ್ಟುಗಳೊಂದಿಗೆ ಸಮಕಾಲೀನ ಯಕ್ಷರಂಗದ ಸೃಜನಾತ್ಮಕ ನುಡಿತ, ಭಣಿತಗಳು ಹಸ್ತಗತವಾಗಿವೆ. ಇದರಿಂದಾಗಿ ರಾಘವೇಂದ್ರ ಹೆಗಡೆಯವರು ಪ್ರದರ್ಶನ, ಕೂಟದಲ್ಲಿ ಬಲು ಬೇಡಿಕೆಯ ಕಲಾವಿದರು.
ಸಮರ್ಥ ಮದ್ದಳೆವಾದಕರಾದ ಇವರು ಮೇಳದಲ್ಲಿ ಅಪರೂಪಕ್ಕೆ ವೇಷ ಮಾಡುವುದುಂಟು. ಹಾಗೆ ಬಿಡುವಿನ ಸಮಯದಲ್ಲಿ ಮನೆಯಲ್ಲೇ ಮದ್ದಳೆಯ ತರಗತಿನ್ನು ಮಾಡುತ್ತಾರೆ. ಶಂಕರ ಭಾಗವತರು, ಮಂದಾರ್ತಿ ರಾಮಣ್ಣ, ಕಾಳಿಂಗ ನಾವಡರು, ಗೋಪಾಲ ಗಾಣಿಗರು, ಕೆ.ಪಿ. ಹೆಗಡೆಯವರು, ರಾಘವೇಂದ್ರ ಮಯ್ಯರು, ಸುಬ್ರಹ್ಮಣ್ಯ ಆಚಾರ್, ಪ್ರಸನ್ನ ಭಟ್ಟರು, ಸುರೇಶ್ ಶೆಟ್ಟಿಯವರು, ವಿದ್ವಾನ್ ಗಣಪತಿ ಭಟ್ಟರು ಮತ್ತು ಪ್ರಸಾದ್ ಮೊಗೆಬೆಟ್ಟು ಇವರ ನೆಚ್ಚಿನ ಕಲಾವಿದರು. ಸಂಗೀತ ಕೇಳುವುದು, ಪುಸ್ತಕ ಓದುವುದು, ಕವನ ಬರೆಯುವುದು ಇವರ ಹವ್ಯಾಸವಾಗಿದೆ.
ಮದ್ದಳೆಯ ಕಸುವು-ಕಸುಬು ಯಕ್ಷಗಾನ ಲೋಕದಲ್ಲಿ ವಿಶೇಷ ಮಾನ್ಯತೆಯನ್ನು ಕಾಣುವಲ್ಲಿ ನಿಚ್ಚಳ ಗೆಲುವು ಕಂಡಿದೆ. ರಂಗಧರ್ಮ, ಪಾತ್ರನ್ಯಾಯ, ಪ್ರಸಂಗಗಳ ಔಚಿತ್ಯ ಮನಗಂಡು ವಾದನ ವಿಧಾನದಲ್ಲಿ ಪ್ರತಿಭೆ ಮೆರೆಯುವ ರಾಘವೇಂದ್ರ ಹೆಗಡೆಯವರಿಗೆ ಹಲವಾರು ಸಂಘ, ಸಂಸ್ಥೆಗಳು ಸನ್ಮಾನ, ಪುರಸ್ಕಾರವನ್ನು ನೀಡಿದೆ. ಇತ್ತೀಚೆಗೆ ಕೆಲವು ವರ್ಷದಿಂದ ಸಾಲಿಗ್ರಾಮದ ಪಾರಂಪಳ್ಳಿಯಲ್ಲಿ ಮಡದಿ ನಮನಾ ಹೊಳ್ಳರವರೊಂದಿಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಈ ಹಿಂದೆ ಬೇಹರಿನ್ ನಲ್ಲಿ ಕಾರ್ಯಕ್ರಮ ನೀಡಿದ ಇವರು ಇದೀಗ ಯು. ಕೆ. ಯಲ್ಲಿ (ಇಂಗ್ಲೆಂಡಿನಲ್ಲಿ) ಮ್ಯಾಂಚೆಸ್ಟರ್, ಡರ್ಬಿ, ಸೋಲಿಹುಲ್, ಕಾರ್ಡಿಫ್ ಮತ್ತು ಬೆಸಿಲ್ವಿನ್ ನಲ್ಲಿ ಯು.ಕೆ. ಯ ಅನಿವಾಸಿ ಯಕ್ಷಗಾನ ಅಭಿಮಾನಿ ಮಂಡಲಿಯ ಸಹಕಾರದಲ್ಲಿ ಯಕ್ಷಗಾನ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾರೆ.
ಎಲ್ಲರೊಂದಿಗೆ ಆತ್ಮೀಯವಾಗಿ ಎಲ್ಲಾ ವಿಚಾರದ ಬಗ್ಗೆ ಹಂಚಿಕೊಳ್ಳುವ ರಾಘವೇಂದ್ರ ಹೆಗಡೆಯವರು ಕೋಟ, ಸಾಲಿಗ್ರಾಮ ಪರಿಸರದಲ್ಲಿ ನಮ್ಮ ರಾಘು ಹೆಗಡೆಯಾಗಿದ್ದಾರೆ. ಇವರಿಗೆ ಇವರು ನಂಬಿರುವ ಕಲಾಮಾತೆ ಯು. ಕೆ. ಯಲ್ಲಿ ಯಶಸ್ವಿ ತಿರುಗಾಟ ನಡೆಸಿ, ಕಲಾ ವಿಭಾಗದಲ್ಲಿ ಇನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ ಎಂದು ಶುಭ ಹಾರೈಸೋಣ.