ಬೆಂಗಳೂರು : ಜನಪದರು ಸಾಂಸ್ಕೃತಿಕ ವೇದಿಕೆ (ರಿ.) ಇವರ ವತಿಯಿಂದ ಪ್ರತಿ ತಿಂಗಳ 2ನೇ ಶನಿವಾರ ನಡೆಯುವ ಸರಣಿ ರಂಗಮಾಲೆ – 95ರಲ್ಲಿ ಯಕ್ಷಗಾನ ಮತ್ತು ನಾಟಕ ಪ್ರದರ್ಶನವನ್ನು ದಿನಾಂಕ 14 ಮತ್ತು 15 ಜೂನ್ 2025ರಂದು ಬೆಂಗಳೂರಿನ ನಿಂಬೆಕಾಯಿಪುರದ ಶ್ರೀ ಅಭಯಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿರುವ ಜನಪದರು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 14 ಜೂನ್ 2025ರಂದು ಸಂಜೆ 7-00 ಗಂಟೆಗೆ ಮಂಜುನಾಥ್ ಎಲ್. ಬಡಿಗೇರ ಇವರ ನಿರ್ದೇಶನದಲ್ಲಿ ದೊಡ್ಡಬ್ಯಾಡರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಂದ ಮೂಡಲಪಾಯ ಯಕ್ಷಗಾನ ಪ್ರಸಂಗ ‘ಕರ್ಣ ಅರ್ಜುನರ ಕಾಳಗ’ ಪ್ರದರ್ಶನಗೊಳ್ಳಲಿದೆ.
ದಿನಾಂಕ 15 ಜೂನ್ 2025ರಂದು ಸಂಜೆ 6-30 ಗಂಟೆಗೆ ಮಂಗಳೂರಿನ ಆಯನ ನಾಟಕದ ಮನೆ ಪ್ರಸ್ತುತ ಪಡಿಸುವ ‘ಅಶ್ವತ್ಥಾಮ’ NOT OUT ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ. ರಂಗದಲ್ಲಿ ಚಂದ್ರಹಾಸ್ ಉಳ್ಳಾಲ್, ಪ್ರಭಾಕರ್ ಕಾಪಿಕಾಡ್ ಮತ್ತು ಡಾ. ದಿನೇಶ್ ನಾಯಕ್ ನಟಿಸಲಿದ್ದು, ಮೋಹನಚಂದ್ರ ಇವರು ನಿರ್ದೇಶನ ಮಾಡಲಿದ್ದಾರೆ.
ನಾಟಕದ ಬಗ್ಗೆ :
ಮಹಾಭಾರತದ ಹಲವಾರು ದುರಂತ ಪಾತ್ರಗಳಲ್ಲಿ ಅಶ್ವತ್ಥಾಮನ ಪಾತ್ರವೂ ಒಂದು. ಕುರುಕ್ಷೇತ್ರ ಯುದ್ಧದ ಬಳಿಕ ಉಪಪಾಂಡವರ ಹತ್ಯೆಯ ಕಾರಣದಿಂದಾಗಿ ಸಾವಿಲ್ಲದೆ ಸದಾ ಮರಣಕ್ಕಾಗಿ ಹಪಹಪಿಸುವ ಶಾಪಗ್ರಸ್ತ. ನಾಟಕ ಸುತ್ತುವುದೇ ಸಾವಿಲ್ಲದ ಬದುಕು ಒಂದು ಶಾಪ ಎಂದು ಗ್ರಹಿಸಿದ (ಕೃಷ್ಣನ) ಚಿಂತನೆ ; ಸತ್ತಿದ್ದರೂ ಇನ್ನೂ ಅಜರಾಮರ ಎಂದು ಬದುಕುವ (ಅಶ್ವತ್ಥಾಮನ) ಮನ:ಸ್ಥಿತಿ. ಇವೆರಡರ ನಡುವೆ ತನ್ನವರ ಕೊಲೆಯ ಪ್ರತೀಕಾರದಿಂದ ನಿರ್ಮಾಣಗೊಂಡ ಯುದ್ಧದ ಕಾರಣಗಳ ಹಿಂದಿರುವ (ಶಕುನಿಯ) ಮರ್ಮ..
ಈ ಮೇಲಿನ ಮೂರೂ ಪಾತ್ರಗಳು ನಾವೇ ಅಲ್ಲವೇ..? ಅದು ನಮ್ಮೊಳಗೇ ಇಲ್ಲವೇ..? ಸಹಸ್ರಾರು ಕಾಲ ಸಾವಿನ ಸರಮಾಲೆಯನ್ನೇ ಕಂಡ ಈ ಜಗತ್ತಿನಲ್ಲಿ ನಾವು ರಕ್ತ ಪಿಪಾಸು ರಾಜಕಾರಣದ ಪ್ರಲೋಭನೆಗೆ ಸಿಲುಕಿ ಯುದ್ಧೋನ್ಮಾದಿ ಮನಸ್ಥಿತಿಗೆ ತುತ್ತಾಗಿದ್ದೇವೆ ಅಲ್ಲವೇ..? ಸರಣಿ ಸಾವಿನ ಕಥಾನಕವೇ ಆಗಿರುವ ಮಹಾಕಾವ್ಯ ಮಹಾಭಾರತದಿಂದ ನಮಗಿನ್ನೂ ಪಾಠ ಕಲಿಯಲು ಸಾಧ್ಯವಾಗಿದೆಯೆ..? ಸ್ವಸ್ಥ ಮನಸ್ಸುಗಳಿಗೆ ಕಾಲ ಪಕ್ವಗೊಂಡಿಲ್ಲವೇ..?