ಕಾರ್ಕಳ : ಕಾರ್ಕಳ ಯಕ್ಷಕಲಾರಂಗ ಮತ್ತು ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಸಹಯೋಗದಲ್ಲಿ ಪ್ರಾಥಮಿಕ ಮಕ್ಕಳಿಗೆ ಉಚಿತವಾಗಿ ನಡೆಯುವ ಯಕ್ಷ ಶಿಕ್ಷಣ ಅಭಿಯಾನವು ದಿನಾಂಕ 23 ಜೂನ್ 2025ರ ಸೋಮವಾರದಂದು ಕುಕ್ಕುಂದೂರು ಅಯ್ಯಪ್ಪ ನಗರ ಸರಕಾರಿ ಶಾಲೆಯಲ್ಲಿ ಉದ್ಘಾಟನೆಗೊಂಡಿತು.
ಉದ್ಘಾಟನಾ ಸಮಾರಂಭದ ಸಭಾದ್ಯಕ್ಷತೆಯನ್ನು ವಹಿಸಿದ್ದ ಕಾರ್ಕಳ ಅಯ್ಯಪ್ಪ ನಗರ ಸರಕಾರಿ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಸುಮೀತ್ “ಶಿಕ್ಷಣವನ್ನು ಪ್ರೀತಿಸಿ, ಕಲೆಯನ್ನು ಗೌರವಿಸಿದ ಒಬ್ಬ ಸುಸಂಸ್ಕೃತ ವಿದ್ಯಾರ್ಥಿ ಜೀವನ ಸಾಪಲ್ಯತೆ ಪಡೆಯುತ್ತಾನೆ” ಎಂದು ಹೇಳಿದರು. ಯಕ್ಷ ಶಿಕ್ಷಣ ಅಭಿಯಾನ ಉದ್ಘಾಟಿಸಿದ ನಿಕಟಪೂರ್ವ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಸದಾನಂದ ಪುರೋಹಿತರು ಮಾತನಾಡಿ “ಭಾಷಾ ಪಾಂಡಿತ್ಯ, ಸಂಸ್ಕಾರ, ಗೌರವ ಕೊಡುವ ಶಿಸ್ತಿನ ಸಾಹಿತ್ಯ ಕಲೆ ಯಕ್ಷಗಾನ. ಈ ಕಲೆ ಪ್ರಾಥಮಿಕ ಹಂತದಲ್ಲೇ ತಿಳಿ ಹೇಳಬೇಕು” ಎಂದರು.
ಯಕ್ಷ ಶಿಕ್ಷಣದ ಬಗ್ಗೆ ಪ್ರಾಸ್ತಾವಿಕವಾಗಿ ಕಲಾವಿದ ಮಹಾವೀರ ಪಾಂಡಿ ಮಾತಾನಾಡಿದರು. ಯಕ್ಷಕಲಾರಂಗದ ಅಧ್ಯಕ್ಷ ವಿಜಯ ಶೆಟ್ಟಿ, ಕೋಶಾಧ್ಯಕ್ಷ ಶ್ರೀ ವರ್ಮ ಅಜ್ರಿ ಸಾಂಧರ್ಬಿಕವಾಗಿ ಮಾತನಾಡಿದರು. ಇನ್ನೋರ್ವ ನಿಕಟ ಪೂರ್ವ ಅಧ್ಯಕ್ಷ ರಘುನಾಥ ಶೆಟ್ಟಿ, ಹಿರಿಯರಾದ ಉಮೇಶ್ ಕಿಣಿ, ಶ್ರೀಮತಿ ಶಾಂತಿ ಕಿಣಿ, ಪ್ರದೀಪ್ ನಾಯಕ್, ಯಕ್ಷಗುರು ವೆಂಕಟೇಶ್ ಕಾರ್ಕಳ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಶ್ರೀಮತಿ ರೇವತಿ ಸ್ವಾಗತಿಸಿ, ಸಹ ಅಧ್ಯಾಪಕ ಮಂಜೇ ಗೌಡ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ಶ್ರೀಮತಿಯವರು ವಂದನಾರ್ಪಣೆ ಗೈದರು. ಯಕ್ಷಗುರು ವೆಂಕಟೇಶ್ ಮಕ್ಕಳಿಗೆ ಯಕ್ಷಗಾನ ತರಗತಿ ಆರಂಬಿಸಿದರು.