ಮೂಡುಬಿದಿರೆ : ಇರುವೈಲು ಮೇಳದ ಹಿರಿಯ ಹಾಸ್ಯ ಕಲಾವಿದ ಅನಂತ ಪ್ರಭು ಕಟ್ಟಣೆಗೆ (84) ಅನಾರೋಗ್ಯದಿಂದ ನಿಧನರಾಗಿದ್ದಾರೆ. ಇರುವೈಲು ಗ್ರಾಮದ ನಿವಾಸಿಯಾಗಿರುವ ಕಟ್ಟಣಿಕೆ ಅವರು ಯಕ್ಷಗಾನದಲ್ಲಿ ಹಾಸ್ಯಗಾರರಿಗೆ ಸ್ಟಾರ್ ವ್ಯಾಲ್ಯೂ ಇಲ್ಲದಂತಹ ಕಾಲದಲ್ಲಿ ರಂಗಸ್ಥಳದಲ್ಲಿ ಹಾಸ್ಯಗಾರನಾಗಿ ಪ್ರೇಕ್ಷಕರನ್ನು ರಂಜಿಸಿರುವ ಇವರು ಇರುವೈಲು ಮೇಳದ ಪ್ರಮುಖ ಹಾಸ್ಯ ಕಲಾವಿದರಾಗಿದ್ದರು.
ದಿನ್ನಕ 25 ಜನವರಿ 1945ರಲ್ಲಿ ಇರುವೈಲಿನ ನಡುಬಾಳಿಕೆಯಲ್ಲಿ ಜನಿಸಿದ ಇವರು ತಮ್ಮ 12ನೇ ವಯಸ್ಸಿನಲ್ಲಿ ಯಕ್ಷಗಾನದ ರಂಗಸ್ಥಳವನ್ನು ಪ್ರವೇಶಿಸಿದರು. ಕಟೀಲು ಮೇಳವನ್ನು ಮುನ್ನಡೆಸುತ್ತಿದ್ದ ದಿ. ಅಣ್ಣಪ್ಪ ಸಾಮಂತರಿಂದಾಗಿ ಯಕ್ಷಗಾನದ ಒಲವು ಬೆಳೆಸಿಕೊಂಡಿದ್ದರು. ಇರುವೈಲು ವಾಸುದೇವ ಆಚಾರಿಯವರಲ್ಲಿ ಹೆಜ್ಜೆಗಾರಿಕೆಯನ್ನು ಕಲಿತು, ಸಂಜೀವ ಪ್ರಭು ಕಟ್ಟಣಿಗೆಯವರ ಮಾರ್ಗದರ್ಶನದಲ್ಲಿ, ಇರುವೈಲು ಶ್ರೀರಾಮ ಅಸ್ರಣ್ಣ ಮತ್ತು ಜನಾರ್ದನ ಆಚಾರಿ ಕಲ್ಲಮರಾಯಿ ನೇತೃತ್ವದಲ್ಲಿ ಪುನರ್ ಸಂಘಟಿತವಾದ ಇರುವೈಲು ಮೇಳದಲ್ಲಿ ಯಶಸ್ವಿ ಹಾಸ್ಯ ಕಲಾವಿದರಾಗಿ ಯಕ್ಷಗಾನ ರಂಗದಲ್ಲಿ ಮಿಂಚಿದರು. ಆರೋಗ್ಯ ಸಂಬಂಧಿ ಸಮಸ್ಯೆಯಿಂದಾಗಿ ಕಳೆದ 18 ವರ್ಷಗಳಿಂದ ಯಕ್ಷಗಾನದಿಂದ ದೂರ ಉಳಿದರೂ, ಯಕ್ಷಗಾನದತ್ತ ಸದಾ ಚಿತ್ತವಿರಿಸಿಕೊಂಡಿದ್ದರು. ಅವರ ಸೇವೆಗೆ ಹಲವು ಪ್ರಶಸ್ತಿ, ಸನ್ಮಾನಗಳು ಸಂದಿವೆ.