ಮುಂಡಾಜೆ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ವತಿಯಿಂದ 2025- 26ನೇ ಸಾಲಿನ ಯಕ್ಷಧ್ರುವ – ಯಕ್ಷಶಿಕ್ಷಣ ‘ಯಕ್ಷಗಾನ ಶಿಕ್ಷಣ ಅಭಿಯಾನ’ವು ದಿನಾಂಕ 25 ಜೂನ್ 2025ರಂದು ಮುಂಡಾಜೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಾರಂಭವಾಯಿತು.
ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ಟ್ರಸ್ಟ್ ಬೆಳ್ತಂಗಡಿ ಘಟಕ ಇದರ ಸ್ಥಾಪಕ ಸಂಚಾಲಕರಾದ ಶ್ರೀ ರಘುರಾಮ್ ಶೆಟ್ಟಿ ಇವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉದ್ಘಾಟನಾ ಭಾಷಣದಲ್ಲಿ ಉದ್ಘಾಟಕರು ಯಕ್ಷ ಶಿಕ್ಷಣದ ಪ್ರಾಮುಖ್ಯತೆ ಮತ್ತು ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣದಿಂದ ಆಗುವ ಅನುಕೂಲಗಳ ಬಗ್ಗೆ ಮನ ಮುಟ್ಟುವಂತೆ ತಿಳಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ.) ಟ್ರಸ್ಟ್ ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಶ್ರೀ ಸುರೇಶ್ ಶೆಟ್ಟಿ ಮಾತನಾಡಿ “ಮಾನ್ಯ ಶ್ರೀ ಸತೀಶ್ ಶೆಟ್ಟಿ ಪಟ್ಲ ಇವರ ಮೂಲಕ ಇಂದು ರಾಜ್ಯಾದ್ಯಂತ ಯಕ್ಷಗಾನ ಪಸರಿಸುತ್ತಿದ್ದು, ಯುವ ಪೀಳಿಗೆಯು ಯಕ್ಷಗಾನವನ್ನು ಬೆಳೆಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡುತ್ತಾ ಮೂರನೇ ವರ್ಷ ವಸತಿ ಶಾಲೆ ಮುಂಡಾಜೆಯಲ್ಲಿ ಯಕ್ಷಗಾನ ತರಗತಿಗಳನ್ನು ಇಂದು ಉದ್ಘಾಟಿಸಲಾಗಿದೆ. ಇದರ ಉಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಹಾಗೂ ತಮಗೆ ಅತ್ಯುತ್ತಮ ಯಕ್ಷಗಾನ ಗುರುಗಳಾದ ಶ್ರೀ ಅರುಣ್ ಕುಮಾರ್ ಧರ್ಮಸ್ಥಳ ಇವರು ದೊರೆತಿರುವುದು ನಿಮ್ಮ ಅದೃಷ್ಟವೇ ಸರಿ ಅವರ ಗರಡಿಯಲ್ಲಿ ಪಳಗಿ ಉತ್ತಮ ಯಕ್ಷಗಾನ ಕಲಾವಿದರಾಗಿ” ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಯಕ್ಷಧ್ರುವ ಪಟ್ಲ ಪೌಂಡೇಶನ್ (ರಿ.) ಬೆಳ್ತಂಗಡಿ ಘಟಕದ ಸಂಚಾಲಕರಾದ ಶ್ರೀ ವಸಂತ ಶೆಟ್ಟಿ ಇವರು ಉಪಸ್ಥಿತರಿದ್ದು “ದಕ್ಷಿಣ ಕನ್ನಡದ ಗಂಡು ಕಲೆಯಾದ ಯಕ್ಷಗಾನವನ್ನು ಇಲ್ಲಿ ಅಭ್ಯಾಸ ಮಾಡುತ್ತಿರುವ ಬಾಗಲಕೋಟೆ, ಹಾಸನ, ಚಿಕ್ಕಮಗಳೂರು, ಕೊಪ್ಪಳ, ಬೆಳಗಾಂ ಮುಂತಾದ ಜಿಲ್ಲೆಗಳಿಂದ ಬಂದಿರುವ ಎಲ್ಲಾ ವಿದ್ಯಾರ್ಥಿಗಳು ಕಲಿತು ರಾಜ್ಯಾದ್ಯಂತ ಪಸರಿಸಬೇಕು” ಎಂದು ತಿಳಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಶ್ರೀ ಮುರಳೀಧರ್ ಜಿ.ಎನ್. ಪ್ರಾಸ್ತವಿಕವಾಗಿ ಮಾತನಾಡಿದರು ಹಾಗೂ ವೇದಿಕೆಯ ಮೇಲೆ ಶಾಲಾ ವಿದ್ಯಾರ್ಥಿ ಮಂತ್ರಿಮಂಡಲದ ಮುಖ್ಯಮಂತ್ರಿ ಶ್ರೀ ವೀರೇಶ್ ಇವರು ಹಾಗೂ ಯಕ್ಷ ಗುರುಗಳಾದ ಶ್ರೀ ಅರುಣ್ ಕುಮಾರ್ ಧರ್ಮಸ್ಥಳ ಮತ್ತು ನಿಲಯ ಮೇಲ್ವಿಚಾರಕರಾದ ರೋಹಿಣಿ ಆರ್.ಜಿ.ಯವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಗಳು ಕೂಡಾ ಉಪಸ್ಥಿತರಿದ್ದರು. ವಿದ್ಯಾರ್ಥಿ ತನ್ವಿತ್ ಕಾರ್ಯಕ್ರಮವನ್ನು ನಿರೂಪಿಸಿ, ಜನಿತ್ ಇವರು ಸ್ವಾಗತಿಸಿ, ವಿದ್ಯಾರ್ಥಿಗಳಾದ ಸಾತ್ವಿಕ್ ಹಾಗೂ ವಿದ್ಯಾಸಾಗರ್ ಪ್ರಾರ್ಥಿಸಿ, ವಿದ್ಯಾರ್ಥಿ ರಾಜು ವಂದನಾರ್ಪಣೆಗೈದರು.