ಮೂಲ್ಕಿ : ಪ್ರಸಿದ್ಧ ಛಾಂದಸ ಯಕ್ಷಗಾನ ಕವಿ, ವಿಮರ್ಶಕ, ಪಾರ್ಥಿಸುಬ್ಬ ಪ್ರಶಸ್ತಿ ಪುರಸ್ಕೃತ ಗಣೇಶ ಕೊಲೆಕಾಡಿಯವರು (54) ದಿನಾಂಕ 07 ನವೆಂಬರ್ 2025ರಂದು ಸಂಜೆ ಸ್ವಗೃಹದಲ್ಲಿ ನಿಧನರಾದರು.
ಅವರು ಪ್ರಸಿದ್ಧ ಹಿಮ್ಮೇಳ ವಾದಕರಾದ ದಿವಾಣ ಭೀಮ ಭಟ್ಟರಲ್ಲಿ ಭಾಗವತಿಕೆ ಮತ್ತು ಮದ್ದಳೆ ವಾದನವನ್ನು ಹಾಗೂ ಛಾಂದಸರಾದ ಡಾ. ಶಿಮಂತೂರು ನಾರಾಯಣ ಶೆಟ್ಟಿಯವರಲ್ಲಿ ಯಕ್ಷಗಾನ ಕಾವ್ಯ ರಚನೆಯನ್ನು ಅಭ್ಯಾಸ ಮಾಡಿದ್ದರು. ಸುಮಾರು 50ಕ್ಕಿಂತಲೂ ಹೆಚ್ಚು ಪ್ರಸಂಗಗಳನ್ನು ರಚಿಸಿದ್ದರು. ಯಕ್ಷಗಾನದಲ್ಲಿ ಬಳಕೆಯಾಗಿರುವ ಛಂದಸ್ಸಿನ ವೈಶಿಷ್ಟ್ಯದ ಕುರಿತು ವಿದ್ವತ್ಪೂ ಣವಾಗಿ ಮಾತನಾಡಬಲ್ಲವರಾಗಿದ್ದರು. ತಮ್ಮ ಮನೆಯಲ್ಲೇ ಆಸಕ್ತರಿಗೆ ಛಂದಸ್ಸಿನ ಸೂಕ್ಷ್ಮತೆಗಳನ್ನು, ವಿವಿಧ ಮಟ್ಟುಗಳನ್ನು ತಿಳಿಸಿಕೊಟ್ಟು ಬಹುಸಂಖ್ಯೆಯಲ್ಲಿ ಭಾಗವತರನ್ನು ರೂಪಿಸಿದ ಹೆಗ್ಗಳಿಕೆ ಕೊಲೆಕಾಡಿಯವರದ್ದು. ದೀರ್ಘಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಅನೇಕ ಬಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಗೊಳಗಾಗಿದ್ದರು. ತಾಯಿಯೊಂದಿಗೆ ಮುಲ್ಕಿ ಬಳಿಯ ಮೈಲೊಟ್ಟು ಎಂಬಲ್ಲಿ ವಾಸಿಸುತ್ತಿದ್ದ ಅವರಿಗೆ ಯಕ್ಷಗಾನ ಕಲಾರಂಗವು 2014ರಲ್ಲಿ ಮನೆಯನ್ನು ನಿರ್ಮಿಸಿ ಕೊಟ್ಟಿತ್ತು. ಯಕ್ಷಗಾನ ಕಲಾರಂಗ ಅವರ ನಿರ್ದೇಶನದಲ್ಲಿ ಭಾಗವತಿಕೆಯ ಕಮ್ಮಟವನ್ನು ಆಯೋಜಿಸಿತ್ತು. ಇವರಿಗೆ ಸಂಸ್ಥೆಯು ಕನಕಾ ಅಣ್ಣಯ್ಯ ಶೆಟ್ಟಿ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.
