ಮಂಗಳೂರು : ದಿನಾಂಕ 03 ಜೂನ್ 2025ರ ಮಂಗಳವಾರ ಮಧ್ಯಾಹ್ನ 3-00 ಗಂಟೆಯಿಂದ ದಿನಾಂಕ 04 ಜೂನ್ 2025ರ ಬುಧವಾರ 3-00 ಗಂಟೆ ವರೆಗೆ ನಿರಂತರವಾಗಿ 24 ಗಂಟೆಗಳ ಕಾಲ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ 270 ಹಾಡುಗಳನ್ನು ಹಾಡುವ ಮೂಲಕ ಕರಾವಳಿ ಮೂಲದ ಯಶವಂತ್ ಎಂ.ಜಿ. ಸೇರಿದಂತೆ ಆರು ಸಂಗೀತ ಕಲಾವಿದರು ತಮ್ಮ ಹೆಸರನ್ನು ವಿಶ್ವ ದಾಖಲೆ ನಿರ್ಮಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ದಾಖಲಿಸಿಕೊಂಡಿದ್ದಾರೆ.
ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಮಂಗಳವಾರ ಸಂಜೆ ಮೂರು ಗಂಟೆಗೆ ಆರಂಭವಾದ ‘ಬಾಲಗಾನ ಯಶೋಯಾನ’ ನಿರರ್ಗಳ ಗಾಯನ ಬುಧವಾರ ಸಂಜೆ ಮೂರು ಗಂಟೆಗೆ ಸಮಾಪನಗೊಳ್ಳುವ ಮೂಲಕ ಈ ದಾಖಲೆ ನಿರ್ಮಾಣವಾಗಿದೆ. ಗಾನ ಗಂಧರ್ವ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಜನ್ಮ ದಿನೋತ್ಸವದ ಪ್ರಯುಕ್ತ ಯಶವಂತ್ ಅವರು ಏಕಾಂಗಿಯಾಗಿ ಹಾಡುವ ಮೂಲಕ ದಾಖಲೆಯ ಗಾಯನ ಕಾರ್ಯಕ್ರಮ ನಡೆಸಿದ್ದಾರೆ. ಇವರ ಜತೆಗೆ ಗಿಟಾರ್ ನಲ್ಲಿ ರಾಜ್ ಗೋಪಾಲ್, ಕೀ ಬೋರ್ಡ್ ನಲ್ಲಿ ದೀಪಕ್ ಜಯಶೀಲನ್, ಡ್ರಮ್ಸ್ ಮತ್ತು ರಿದಂನಲ್ಲಿ ವಾಮನ್ ಕೆ., ತಬಲಾದಲ್ಲಿ ಪ್ರಜ್ವಲ್ ಆಚಾರ್ಯ, ಕೊಳಲಿನಲ್ಲಿ ವರ್ಷ ಬಸ್ರೂರ್ ಹಾಗೂ ಸಿತಾರ್ ನಲ್ಲಿ ಸುಮುಖ್ ಆಚಾರ್ಯ ಸಾಥ್ ಕೊಡುವ ಮೂಲಕ ಇವರು ಕೂಡ ದಾಖಲೆ ಪಟ್ಟಿಯನ್ನು ಸೇರಿಕೊಂಡರು.
ಕಾರ್ಯಕ್ರಮ ಪೂರ್ಣ ವೀಕ್ಷಿಸಿದ ಬಳಿಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನ ಏಷ್ಯಾ ಮುಖ್ಯಸ್ಥ ಡಾ. ಮನೀಶ್ ವಿಶ್ನೋಯ್ ಅವರು ಗಣ್ಯರ ಸಮ್ಮುಖದಲ್ಲಿ ಪ್ರಮಾಣ ಪತ್ರ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಮನೀಶ್ ವಿಶ್ನೋಯ್, “ಯಶವಂತ್ ಅವರು ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಜನ್ಮ ದಿನ ಆಚರಿಸಿದಂತೆ ಇಲ್ಲಿಯವರೆಗೆ ಯಾರೂ ಆಚರಿಸಿಲ್ಲ. ಇವರು ವಿಶ್ವ ದಾಖಲೆ ಮಾಡಿರುವುದು ಅತ್ಯಂತ ಕಠಿಣ ವಿಷಯದಲ್ಲಿ. 24 ಗಂಟೆಗಳ ಕಾಲ ನಿರಂತರ ಗಾಯನ ಸಾಮಾನ್ಯ ವಿಷಯವಲ್ಲ. ಸಾಕಷ್ಟು ವಿಶ್ವ ದಾಖಲೆಗಳನ್ನು ನಾನು ಕಂಡಿದ್ದು, ಇಂತಹ ಮಧುರವಾದ ದಾಖಲೆ ಯಾವತ್ತೂ ನೋಡಿಲ್ಲ” ಎಂದರು.
ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್, ಮಂಗಳೂರು ಎಸಿಪಿ ಗೀತಾ ಕುಲಕರ್ಣಿ,ಡೈಜಿ ವರ್ಲ್ಡ್ ಸಂಸ್ಥೆಯ ಸಂಸ್ಥಾಪಕ ವಾಲ್ಟರ್ ನಂದಳಿಕೆ ಶುಭ ಹಾರೈಸಿದರು. ಮೂಡುಬಿದರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಮಾಜಿ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಭಾಕರ್ ಶರ್ಮಾ, ಉದ್ಯಮಿ ಪೂರ್ಣಚಂದ್ರ ಜೈನ್, ಜಿ.ಎಸ್. ಕಾಮತ್, ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಮಲ್ಪೆ, ಪಾಲಿಕೆ ಮಾಜಿ ಸದಸ್ಯ ಜಗದೀಶ್ ಶೆಟ್ಟಿ, ಯಶವಂತ್ ಅವರ ತಾಯಿ ಹೇಮಾವತಿ ಉಪಸ್ಥಿತರಿದ್ದರು.