ಕಾಸರಗೋಡು : ದೇಲಂಪಾಡಿ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಮಂದಿರದ ಕೀರಿಕ್ಕಾಡು ಸ್ಮಾರಕ ಅಧ್ಯಯನ ಕೇಂದ್ರ ಸಭಾಭವನದಲ್ಲಿ ದಿನಾಂಕ 08 ಮಾರ್ಚ್ 2025 ಶನಿವಾರ ವಿಶೇಷ ಕಲಾರಾಧನಾ ಕಾರ್ಯಕ್ರಮಗಳು ನೆರವೇರಿತು.
ನವನೀತ ಭಟ್ ಕೊಡಪಾಲ ಮತ್ತು ಮನೆಯವರ ವತಿಯಿಂದ ಸೇವಾರೂಪವಾಗಿ ನಡೆಸಲ್ಪಟ್ಟ ಈ ಕಾರ್ಯಕ್ರಮದ ಮೊದಲಿಗೆ ಸ್ಥಳ ಸಾನ್ನಿಧ್ಯ ಶ್ರೀ ದೇವರಿಗೆ ಪೂಜಾರ್ಚನೆ ಸಲ್ಲಿಸಲಾಯಿತು. ಗೋಪಾಲಯ್ಯ ಕೋಟಿಗದ್ದೆ, ಶಾಂತಾಕುಮಾರಿ ದೇಲಂಪಾಡಿ, ಪೂರ್ಣಿಮ ಬನಾರಿ ಇವರ ಸಂಯೋಜನೆಯಲ್ಲಿ ‘ಭಗವದ್ಗೀತೆ’ ಪಾರಾಯಣ ಸಂಪನ್ನಗೊಂಡಿತು.
ಅನಂತರ ಸಂಘದ ಹಿರಿಯ ಭಾಗವತ ವಿಶ್ವವಿನೋದ ಬನಾರಿಯವರ ಮಾರ್ಗದರ್ಶನದಲ್ಲಿ ‘ಧರ್ಮ ಜಿಜ್ಞಾಸೆ’ ಮತ್ತು ‘ಸಮರ ಸಂಘರ್ಷ’ ಯಕ್ಷಗಾನ ತಾಳಮದ್ದಳೆ ನೆರವೇರಿತು. ಹಲಸಿನ ಹಳ್ಳಿ ನರಸಿಂಹ ಶಾಸ್ತ್ರಿಯವರ ಪ್ರಸಂಗ ಸಾಹಿತ್ಯವನ್ನೊಳಗೊಂಡ ಈ ಅಧ್ಯಯನ ಶೀಲ ಕಥಾ ಭಾಗದ ಪ್ರಸ್ತುತಿಯಲ್ಲಿ ಭಾಗವತರಾಗಿ ಮೋಹನ ಮೆಣಸಿನಕಾನ ಮತ್ತು ಉದಯೋನ್ಮುಖ ಪ್ರತಿಭೆ ಕುಮಾರಿ ವಿದ್ಯಾಶ್ರೀ ಆಚಾರ್ಯ ಈಶ್ವರಮಂಗಲ ಇವರು ಕಾಣಿಸಿಕೊಂಡರು. ಚೆಂಡೆಮದ್ದಳೆಯಲ್ಲಿ ಶ್ರೀಧರ ಆಚಾರ್ಯ ಈಶ್ವರಮಂಗಲ, ಅಪ್ಪಯ್ಯ ಮಣಿಯಾಣಿ ಮಂಡೆಕ್ಕೋಲು, ವಿಷ್ಣುಶರಣ ಬನಾರಿ, ಬಿ.ಎಚ್. ಕೃಷ್ಣಪ್ರಸಾದ , ಸದಾನಂದ ಮಯ್ಯಾಳ ಮತ್ತು ಚಕ್ರತಾಳದಲ್ಲಿ ಮಾಸ್ಟರ್ ಶ್ರೀದೇವ್ ಈಶ್ವರಮಂಗಲ ಸಹಕರಿಸಿದರು. ಅರ್ಥಧಾರಿಗಳಾಗಿ ಎಂ. ರಮಾನಂದ ರೈ ದೇಲಂಪಾಡಿ, ರಾಮಣ್ಣ ಮಾಸ್ತರ್ ದೇಲಂಪಾಡಿ, ಐತ್ತಪ್ಪ ಗೌಡ ಮುದಿಯಾರು, ರಾಮನಾಯ್ಕ ದೇಲಂಪಾಡಿ, ನಾರಾಯಣ ಪಾಟಾಳಿ ಮಯ್ಯಾಳ, ಪದ್ಮನಾಭ ರಾವ್ ಮಯ್ಯಾಳ ಇವರು ಪಾತ್ರೋಚಿತ ಸಂವಹನ ರೂಪದಿಂದ ನಿರೂಪಿಸಿ ರಂಜಿಸಿದರು. ನಂದಕಿಶೋರ ಬನಾರಿಯವರು ವಂದನಾರ್ಪಣೆ ಗೈದರು.