ಕುಂದಾಪುರ : ತೆಂಕು ಹಾಗೂ ಬಡಗುತಿಟ್ಟಿನ ಮೇರು ಕಲಾವಿದ ಕೋಡಿ ಕುಷ್ಟ ಗಾಣಿಗ (78) ದಿನಾಂಕ 12 ಜೂನ್ 2025ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಪತ್ನಿ, ಪುತ್ರಿ, ಮೂವರು ಪುತ್ರರು ಇದ್ದಾರೆ.
ಆರಂಭದಲ್ಲಿ ಬಡಗಿನ ಅಮೃತೇಶ್ವರಿ, ಮಾರಣಕಟ್ಟೆ ಮೇಳಗಳಲ್ಲಿ ತಿರುಗಾಟ ನಡೆಸಿದ ಬಳಿಕ ಕಲ್ಲಾಡಿ ವಿಠಲ ಶೆಟ್ಟರ ಕಲಾವಿಹಾರ ಮೇಳದ ಮೂಲಕ ತೆಂಕುತಿಟ್ಟಿಗೆ ಪ್ರವೇಶ ಮಾಡಿ, ಆನಂತರ ರಾಜರಾಜೇಶ್ವರಿ ಮೇಳದಲ್ಲಿ ಕಲಾ ವ್ಯವಸಾಯ ನಡೆಸಿದ್ದರು. ಬಡಗು ತಿಟ್ಟಿನ ಹಲವು ಮೇಳಗಳಲ್ಲಿ ಸೇವೆ ಸಲ್ಲಿಸಿ ಕಟೀಲು ಮೇಳದಲ್ಲಿ ಎರಡು ದಶಕ ಕಾಲ ತಿರುಗಾಟ ನಡೆಸಿ ಕಟೀಲು ಕ್ಷೇತ್ರ ಮಹಾತ್ಮೆಯ ನಂದಿನಿ ಪಾತ್ರದ ಮೂಲಕ ಜನಮನ ಸೂರೆಗೊಂಡಿದ್ದರು. ದೇವಿ ಮಹಾತ್ಮೆಯ ದೇವಿ ಪಾತ್ರಕ್ಕೆ ಜೀವ ತುಂಬಿದವರು. ಈ ಕಲಾ ಸೇವೆಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಉಡುಪಿ ಕಲಾರಂಗ, ಹಾರಾಡಿ ರಾಮ ಗಾಣಿಗ, ಯಕ್ಷಧ್ರುವ ಪಟ್ಲ ಪ್ರತಿಷ್ಠಾನ, ಡಾ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರಶಸ್ತಿ, ಶ್ರೀಕ್ಷೇತ್ರ ಕೋಡಿ ಪ್ರಶಸ್ತಿಗಳು ಸಂದಿದೆ.