ಕನ್ನಡದ ಹಿರಿಯ ಹಾಗೂ ಅಪರೂಪದ ವಿದ್ವಾಂಸರಾದ ಬಿ. ಎಸ್. ಸಣ್ಣಯ್ಯ ಇವರು ಸಂಶೋಧನೆ ಮತ್ತು ಹಸ್ತಪ್ರತಿ ಶಾಸ್ತ್ರದಲ್ಲಿ ಅಪಾರ ಪಾಂಡಿತ್ಯವುಳ್ಳವರು.
ಸಣ್ಣೇಗೌಡ ಹಾಗೂ ಬೋರಮ್ಮ ದಂಪತಿಗಳ ಪುತ್ರರಾದ ಇವರು 18 ಜೂನ್ 1926ರಂದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಭೋಗನಹಳ್ಳಿಯಲ್ಲಿ ಜನ್ಮ ತಾಳಿದರು. ಎಂ. ಎ., ಬಿ. ಲಿಬ್, ಡಿಪ್ಲೋಮಾ ಇನ್ ಆರ್ಕೈವ್ಸ್ ಪದವೀಧರರು.
ಗ್ರಾಮೀಣ ಪರಿಸರದಲ್ಲಿ ಬೆಳೆದ ಸಣ್ಣಯ್ಯನವರದು ಸರಳ – ಸಜ್ಜನಿಕೆಯ ವ್ಯಕ್ತಿತ್ವ. ಯಾವ ಅಧಿಕಾರ, ಪ್ರಶಸ್ತಿ, ಪುರಸ್ಕಾರ, ವೇದಿಕೆಗಳ ಬಗ್ಗೆ ಗಮನವೀಯದೆ, ಶ್ರದ್ಧೆಯಿಂದ ಸದ್ದು ಮಾಡದೆ, ಮೌನವಾಗಿ ಕೆಲಸ ಮಾಡುತ್ತಾ ಬಂದವರು. ಕುವೆಂಪು, ಡಿ. ಎಲ್. ನರಸಿಂಹಾಚಾರ್, ಎಸ್. ವಿ. ಪರಮೇಶ್ವರ ಭಟ್ಟ, ತ. ಸು. ಶಾಮರಾಯ ಇಂತಹ ಘನ ವಿದ್ವಾಂಸರ ಶಿಷ್ಯರಾಗಿದ್ದು ಅವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡವರು. ಡಿ. ಎಲ್. ನರಸಿಂಹಾಚಾರ್ ಬೋಧಿಸುತ್ತಿದ್ದ ಪ್ರಾಚೀನ ಕಾವ್ಯಗಳ ಪಾಠದಿಂದ ಆಕರ್ಷಿತರಾಗಿ ಹಸ್ತಪ್ರತಿ ಶಾಸ್ತ್ರದ ಕಡೆಗೆ ತಮ್ಮ ಒಲವನ್ನು ತೋರಿ ಅಧ್ಯಯನವನ್ನು ಆರಂಭಿಸಿದರು. ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯ ಸಂಶೋಧನಾಲಯದಲ್ಲಿ ತಮ್ಮ ವೃತ್ತಿ ಜೀವನಕ್ಕೆ 1956ರಲ್ಲಿ ಪಾದಾರ್ಪಣೆ ಮಾಡಿ, ಮುಂದೆ ‘ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ’ಯ ಗ್ರಂಥ ಸಂಪಾದನಾ ವಿಭಾಗದಲ್ಲಿ ಉಪನಿರ್ದೇಶಕರಾಗಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದರು.
ಶ್ರವಣಬೆಳಗೊಳದ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಮುಖ್ಯಸ್ಥರಾಗಿ, ನೇಮಿಚಂದ್ರ ಸಿದ್ಧಾಂತ ಚಕ್ರವರ್ತಿಯ ‘ಗೊಮ್ಮಟ ಸಾರ’ ಕೃತಿಗೆ ಕನ್ನಡ ವ್ಯಾಖ್ಯಾನ ಬರೆದಿರುವ ಕೇಶವಣ್ಣನ ‘ಗೊಮ್ಮಟ ಸಾರ’ ಕೃತಿಯ ಪರಿಷ್ಕರಣೆಯ ಕೆಲಸವನ್ನು ಮಾಡಿದ್ದು ನಿವೃತ್ತಿಯ ನಂತರವೇ.
ಸಣ್ಣಯ್ಯನವರು ನಾಡಿನಾದ್ಯಂತ ಸಂಚರಿಸಿ ಕನ್ನಡಕ್ಕೆ ಸಂಬಂಧಿಸಿದಂತೆ ತಾಡೋಲೆ ಹಾಗೂ ಕೋರಿಕಾಗದಂತಹ ಹಸ್ತಪ್ರತಿ ಸಂಗ್ರಹಣೆ ಮಾಡಿ, ಅವುಗಳ ಸಹಾಯದಿಂದ ಸುಮಾರು 70ಕ್ಕೂ ಹೆಚ್ಚು ಗ್ರಂಥಗಳನ್ನು ಶೋಧಿಸಿ, ಪರಿಷ್ಕರಿಸಿ, ಪ್ರಕಟಿಸಿ, ಸಾಹಿತ್ಯ ಲೋಕದ ಅಗ್ರಗಣ್ಯರೆನಿಸಿದ್ದಾರೆ. ದೇವಚಂದ್ರನ ‘ರಾಜಾವಳಿ ಕಥಾಸಾರ’, ನಾಗವರ್ಮನ ‘ವರ್ಧಮಾನ ಪುರಾಣ’ ಮುಂತಾದ ಅಪರೂಪದ ಗ್ರಂಥಗಳನ್ನು ಸಂಗ್ರಹಿಸಿದ್ದಾರೆ. ಇದು ಅವರ ಜೀವಮಾನದ ಸಾಧನೆಗಳಲ್ಲಿ ಬಹಳ ಮುಖ್ಯವಾಗಿರುವುದು.
‘ನೇಮಿನಾಥ ಪುರಾಣ’, ‘ಹರಿವಂಶಾಭ್ಯುದಯಂ’, ‘ಮೋಹನ ತರಂಗಿಣಿ’, ’ತೊರವೆ ರಾಮಾಯಣ’, ‘ಕಾವ್ಯಾವಲೋಕನ’, ‘ಸಾಹಸಭೀಮ ವಿಜಯ’, ‘ಅಜಿತ ಪುರಾಣ’, ‘ಖಗೇಂದ್ರ ಮಣಿದರ್ಪಣಂ’ ಮುಂತಾದವುಗಳನ್ನೂ ಇವರು ಸಂಪಾದಿಸಿದ್ದಾರೆ. ಇದು ಕನ್ನಡ ಸಾಹಿತ್ಯಕ್ಕೆ ಇವರು ನೀಡಿದ ವಿಶಿಷ್ಟ ಕೊಡುಗೆ. ಕನ್ನಡ ಹಸ್ತಪ್ರತಿ ವರ್ಣನಾತ್ಮಕ ಸೂಚಿಯನ್ನು ತಮ್ಮ ಸಹೋದ್ಯೋಗಿಗಳೊಡನೆ ಸೇರಿ 10 ಸಂಪುಟಗಳಲ್ಲಿ ಪ್ರಕಟಿಸಿದರು. ಗ್ರಂಥ ಸಂರಕ್ಷಣೆ, ಹಸ್ತ ಪ್ರತಿ ಶಾಸ್ತ್ರ ಪರಿಚಯ ಈ ಗ್ರಂಥಗಳ ಜೊತೆಗೆ ಇವರು ಸಂಪಾದಿಸಿರುವ ಅತಿ ಮಹತ್ವದ ಕೃತಿ ಎಂದರೆ ‘ಪ್ರಾಚೀನ ಗ್ರಂಥ ಸಂಪಾದನೆ’. ಇದು ಸಾಹಿತ್ಯ ಲೋಕಕ್ಕೆ ಅವರ ಅನನ್ಯ ಕೊಡುಗೆ. ಸಂಪಾದಕರಾಗಿ, ಪಠ್ಯ ವಿಮರ್ಶಕರಾಗಿ ಹಾಗೂ ಹಸ್ತಪ್ರತಿ ರಕ್ಷಕರಾಗಿ ನಿರಂತರ ಕೆಲಸ ಮಾಡಿದ್ದಾರೆ ಎಂಬುದಕ್ಕೆ ಅವರು ಸಂಪಾದಿಸಿದ ಗ್ರಂಥಗಳೇ ಸಾಕ್ಷಿಯಾಗಿ ನಮ್ಮ ಮುಂದಿವೆ.
ಸಾಹಿತ್ಯ ಲೋಕಕ್ಕೆ ಇವರು ನೀಡಿದ ಅನನ್ಯ ಸೇವೆಗಾಗಿ ಹಲವಾರು ಪುರಸ್ಕಾರ, ಗೌರವಗಳು, ಪ್ರಶಸ್ತಿಗಳು ಸಂದಿವೆ. ಮೈಸೂರು ವಿಶ್ವವಿದ್ಯಾಲಯದ ‘ತೀ. ನಂ. ಶ್ರೀ. ಬಹುಮಾನ’, ‘ದೇವರಾಜ ಬಹದ್ದೂರ್ ಬಹುಮಾನ’, ‘ಶ್ರೀ ದೇವೇಂದ್ರ ಕೀರ್ತಿಭಟ್ಟಾರಕ ಸ್ವಾಮೀಜಿಯವರ ಬಹುಮಾನ’, ಶ್ರವಣಬೆಳಗೊಳದ ‘ಶ್ರೀ ಗೊಮ್ಮಟೇಶ್ವರ ವಿದ್ಯಾಪೀಠ ಪ್ರಶಸ್ತಿ’, ಕನ್ನಡ ಸಾಹಿತ್ಯ ಪರಿಷತ್ತಿನ ‘ಚಾವುಂಡರಾಯ ಪ್ರಶಸ್ತಿ’, ‘ಸೇಡಿಯಾಪು ಕೃಷ್ಣ ಭಟ್ಟ ಪ್ರಶಸ್ತಿ’, ಮಾತ್ರವಲ್ಲದೆ ಅಖಿಲ ಕರ್ನಾಟಕ ನಾಲ್ಕನೆಯ ಹಸ್ತಪ್ರತಿ ಶಾಸ್ತ್ರದ ಸಮ್ಮೇಳನಾಧ್ಯಕ್ಷತೆಯ ಗೌರವವೂ ಇವರಿಗೆ ದಕ್ಕಿದೆ.
ಹಸ್ತಪ್ರತಿಗಳ ಅಧ್ಯಯನ ಸಂರಕ್ಷಣೆಯಲ್ಲಿ ಮಹತ್ತರ ಪಾತ್ರ ವಹಿಸಿದ ಮಹಾನ್ ವಿದ್ವಾಂಸರೂ, ಸಂಶೋಧಕರೂ ಆದ ಬಿ. ಎಸ್. ಸಣ್ಣಯ್ಯನವರು 2021 ಮೇ 12ರಂದು ತಮ್ಮ 95ನೆಯ ವಯಸ್ಸಿನಲ್ಲಿ ಇಹಕ್ಕೆ ಶಾಶ್ವತವಾಗಿ ವಿದಾಯ ಹೇಳಿ ಸಾಹಿತ್ಯ ಶಾರದೆಯ ಮಡಿಲು ಸೇರಿದರು.
ಅದಮ್ಯ ಚೇತನಕ್ಕೆ ಅನಂತ ನಮನಗಳು
-ಅಕ್ಷರೀ