ನಮ್ಮ ಕುಟುಂಬದಲ್ಲಿ ಒಬ್ಬರಾಗಿ ಬೆರೆತುಹೋಗಿರುವ ಸಂಪಿಗೆ ಲಕ್ಷ್ಮಮ್ಮನವರು ನನ್ನ ಬಾಲ್ಯದ ದಿನಗಳಲ್ಲಿ ಪುನರಾವರ್ತಿತವಾಗಿ ಹೇಳುತ್ತಿದ್ದ ವಿಧಿಯಮ್ಮನ ಜನಪದ ಕಥೆಯು ಸೋಫೋಕ್ಲಿಸ್ಸಿನ ‘ಈಡಿಪಸ್ ರೆಕ್ಸ್’ ನಾಟಕಕ್ಕೆ ಹೋಲುತ್ತಿದ್ದುದನ್ನು ಸಾಹಿತ್ಯಾಸಕ್ತಿ ಬೆಳೆದ ನಂತರದ ದಿನಗಳಲ್ಲಿ ಕಂಡುಕೊಂಡೆ. ಸಿಗ್ಮಂಡ್ ಫ್ರಾಯ್ಡ್ ಈ ಕಥೆಯ ಹಿನ್ನೆಲೆಯಲ್ಲಿ ‘ಈಡಿಪಸ್ ಕಾಂಪ್ಲೆಕ್ಸ್’ ಎಂಬ ಮಾನಸಿಕ ಪರಿಕಲ್ಪನೆಯೊಂದನ್ನು ಹೆಸರಿಸಿದ್ದಾನೆ. ವಿಧಿಯಮ್ಮನ ಕಥೆಯನ್ನು ಕಾದಂಬರಿಯಾಗಿಸುವ ಕನಸು ಬಹಳ ದಿನಗಳಿಂದ ಇತ್ತು. ಆದರೆ ಕಾದಂಬರಿಯ ವಿಸ್ತಾರವಾದ ವ್ಯಾಪ್ತಿಗೆ ಕಥಾ ಎಳೆಯು ಸಾಲದು ಎನ್ನಿಸಿತು. ಹೀಗಾಗಿ ವಿಧಿಗೆ ಸಂಬಂಧಿಸಿದ ಜನಪದ ಕಥೆಗಳನ್ನೆಲ್ಲಾ ಒಟ್ಟು ಹಾಕತೊಡಗಿದೆ. ಕನ್ನಡ ಮಾತ್ರವಲ್ಲದೆ ಮರಾಠಿ, ಸಂತಾಲಿ, ಗೊಂಡಿ, ತಮಿಳು ಮೊದಲಾದ ಇತರ ಭಾಷೆಗಳಲ್ಲಿಯೂ ಇರುವ ಹಲವು ಜನಪದ ಕಥೆಗಳನ್ನು ಆಧರಿಸಿ ನನ್ನ ಕಲ್ಪನೆಯ ಸಂಯೋಗದೊಂದಿಗೆ ಒಂದು ಬಂಧದಲ್ಲಿ ಕಾದಂಬರಿಯ ರೂಪಕ್ಕೆ ತರುವ ಯತ್ನವನ್ನು ಮಾಡಿದ್ದೇನೆ. ಈ ಕಥೆಗಳಲ್ಲಿ ಕೆಲವು ‘ಬದುಕು ವಿಧಿಯ ಅನುಸಾರವೇ ನಡೆಯುತ್ತದೆ’ ಎಂಬ ಸಿದ್ಧಾಂತವನ್ನು ಸಾರಿದರೆ, ‘ಮನುಷ್ಯ ಪ್ರಯತ್ನದಿಂದ ಅಥವಾ ಯುಕ್ತಿಯಿಂದ ವಿಧಿಗೇ ತಿರುಗೇಟು ನೀಡಬಹುದು’ ಎಂಬ ವಾದವನ್ನು ಇನ್ನೂ ಕೆಲವು ಕಥೆಗಳು ಪ್ರತಿಪಾದಿಸುತ್ತವೆ. ಎರಡೂ ಬಗೆಯ ಕಥೆಗಳನ್ನೂ ಇಲ್ಲಿ ಸ್ವೀಕರಿಸಲಾಗಿದೆ. ಕಡೆಗೆ ವಿಧಿಗೆ ಮರುಬಾಣವೆಂಬಂತೆ ‘ಮಾರ್ಕೋಲು’ ಎಂಬ ಶೀರ್ಷಿಕೆಯ ಈ ಕಾದಂಬರಿ ಸಾಂಕೇತಿಕವಾಗಿ ಕೊನೆಗೊಳ್ಳುತ್ತದೆ. ತುಮಕೂರಿನ ಆಸುಪಾಸಿನ ಭಾಷೆಯಲ್ಲಿ ಬರೆಯಲು ಯತ್ನಿಸಿದರೂ, ಅಲ್ಲಲ್ಲಿ ನಂಜನಗೂಡಿನ ಭಾಷೆಯೂ ಇಣುಕಿದೆ. ಹೀಗಾಗಿ ಗ್ರಾಮೀಣ ಭಾಷೆಯಲ್ಲಿ ಬರೆಯಲಾಗಿದೆ ಎಂದಷ್ಟೇ ಹೇಳಬಹುದು.
ಎ.ಕೆ. ರಾಮಾನುಜನ್ ಇವರು ಇಂಗ್ಲೀಷಿನಲ್ಲಿ ಸಂಗ್ರಹ, ಸಂಪಾದನೆ ಮಾಡಿರುವ, ಮಹಾಬಲೇಶ್ವರ ರಾವ್ ಅವರು ಕನ್ನಡಕ್ಕೆ ಅನುವಾದಿಸಿರುವ ‘ಭಾರತೀಯ ಜನಪದ ಕತೆಗಳು’, ಜೀ.ಶಂ. ಪರಮಶಿವಯ್ಯ ಇವರು ಸಂಪಾದಿಸಿರುವ ‘ಕನ್ನಡ ಜನಪದ ಕಥೆಗಳು’ ಕೃತಿಗಳೊಂದಿಗೆ ನಾನು ಕೇಳಿದ್ದ ಜನಪದ ಕಥೆಗಳಲ್ಲಿ ವಿಧಿ ಸಂಬಂಧಿತ ಕಥೆಗಳನ್ನು ತೆಗೆದುಕೊಂಡಿದ್ದೇನೆ. ನಮ್ಮ ಮನೆಯ ಸಂಪಿಗೆ ಲಕ್ಷ್ಮಮ್ಮನವರು ಹೇಳಿದ್ದ ವಿಧಿಯಮ್ಮನ ಕಥೆಯು ‘ಭಾರತೀಯ ಜನಪದ ಕತೆಗಳು’ ಕೃತಿಯಲ್ಲಿ, ‘ಮಗನನ್ನು ಮದುವೆಯಾದ ತಾಯಿ’ ಎಂಬ ಶೀರ್ಷಿಕೆಯ ಮರಾಠಿ ಕಥೆಯು, ಸಣ್ಣಪುಟ್ಟ ವ್ಯತ್ಯಾಸವನ್ನು ಹೊರತುಪಡಿಸಿದರೆ, ಉಳಿದಂತೆ ಒಂದೇ ಆಗಿರುವುದನ್ನು ಗಮನಿಸಿ ಅಚ್ಚರಿಯಾಯಿತು ! ವಿಧಿಯಮ್ಮನ ಕಥೆಯಾಗಲೀ, ಕೃತಿಯಲ್ಲಿಯ ಮರಾಠಿ ಕಥೆಯಾಗಲೀ ಎರಡು ಪುಟಗಳಷ್ಟು ಚಿಕ್ಕದು. ತಾಯಿ, ಇಬ್ಬರ ಹೆಣ್ಣುಮಕ್ಕಳನ್ನು ಬಿಟ್ಟರೆ ಬೇರೆ ಪಾತ್ರಗಳಿಲ್ಲ. ಅದು ಹೇಗೋ ಕಿರಿಮಗಳು ಬಸುರಿಯಾಗಿಬಿಡುತ್ತಾಳೆ ಎಂದು ಸಂಪಿಗೆ ಲಕ್ಷ್ಮಮ್ಮನವರು ಹೇಳಿದರೆ, ಕಾಡಿನಲ್ಲಿ ರಾಜನೊಬ್ಬ ಬಾಯಿ ಮುಕ್ಕಳಿಸಿ ಉಗಿದು ಹೋದ ನೀರು ಕುಡಿದು ಕಿರಿಮಗಳು ಬಸುರಿಯಾಗುತ್ತಾಳೆ ಎಂದು ಮರಾಠಿ ಕತೆಯಲ್ಲಿದೆ. ಹೀಗಾಗಿ ನನ್ನದೇ ಆದ ಕಲ್ಪನೆಯ ಮೂಸೆಯಲ್ಲಿ ಕಥೆ ಬೆಳೆಸಿದ್ದೇನೆ. ದ್ಯಾವಮ್ಮ, ಕಾಮರಾಯ, ತಿಮ್ಮರಾಯ, ಕಾಡಜ್ಜಿ ಮೊದಲಾದ ಪಾತ್ರಗಳನ್ನು ಪೂರಕವಾಗಿ ಸೃಷ್ಟಿಸಿದ್ದೇನೆ.
ಕಾದಂಬರಿಯನ್ನು ಚೆನ್ನಾಗಿ ಅಳೆದುತೂಗಿ ಮೌಲ್ಯಯುತವಾದ ಮುನ್ನುಡಿಯನ್ನು ಬರೆದುಕೊಟ್ಟಿರುವ ಶ್ರೀ ಶ್ರೀನಿವಾಸ ಪ್ರಭು ಇವರಿಗೆ, ಮೊದಲ ಪ್ರತಿಕ್ರಿಯೆಗಳನ್ನು ನೀಡಿದ ಹಿರಿಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಇವರಿಗೆ, ಹೆಸರಾಂತ ಕಥೆಗಾರ್ತಿ ಶ್ರೀಮತಿ ಸುನಂದಾ ಕಡಮೆಯವರಿಗೆ ಹಾಗೂ ಸಾಹಿತಿ ಡಾ. ಚಿದಾನಂದ ಸಾಲಿ ಇವರಿಗೆ ನನ್ನ ಗೌರವಪೂರ್ವಕ ನಮನಗಳನ್ನು ಅರ್ಪಿಸುತ್ತೇನೆ. ಈ ಕೃತಿಗೆ ಮುಖಪುಟ ವಿನ್ಯಾಸ ಮಾಡಿಕೊಟ್ಟ ಶ್ರೀ ಅರುಣ್ ಕುಮಾರ್ ಜಿ.ಯವರಿಗೆ, ಅಂದವಾಗಿ ಮುದ್ರಿಸಿಕೊಟ್ಟ ಲಕ್ಷ್ಮಿಮುದ್ರಣಾಲಯದ ಸಿಬ್ಬಂದಿಗೆ ಹಾಗೂ ನಿಮಗೆ ನನ್ನ ಅನಂತ ವಂದನೆಗಳು.
ಈ ಕಾದಂಬರಿಯನ್ನು pre-order ಮಾಡ ಬಯಸುವವರು 973978057ಗೆ ತಮ್ಮ ವಿಳಾಸವನ್ನು ಕಳುಹಿಸಿ, 160/- ರೂ.ಗಳನ್ನು ಫೋನ್ ಪೇ ಮೂಲಕ ಸಂದಾಯ ಮಾಡಬಹುದು. ಉಚಿತ ಅಂಚೆ ವೆಚ್ಚದೊಂದಿಗೆ ಕೃತಿಯು ತಮ್ಮ ಮನೆ ಬಾಗಿಲಿಗೆ ತಲುಪುವುದು. ಪ್ರೀತಿ ಇರಲಿ. ಧನ್ಯವಾದ.
ಆಶಾ ರಘು
ಉಪಾಸನ ಬುಕ್ಸ್