ಕಲ್ಮಾಡಿ : ಕಲ್ಮಾಡಿ ಶ್ರೀ ಭಗವತಿ ಮಾರಿಕಾಂಬ ಸನ್ನಿಧಿಯ ಸಹಕಾರದೊಂದಿಗೆ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ ಪೆರ್ಡೂರು ಹಾಗೂ ಮತ್ಸ್ಯರಾಜ್ ಗ್ರೂಪ್ ಮಲ್ಪೆ ಇವರ ಸಹಯೋಗದಲ್ಲಿ ಶ್ರೀಮನ್ಮಹಾ ಶಿವರಾತ್ರಿ ಪ್ರಯುಕ್ತ ದಿನಾಂಕ 15 ಫೆಬ್ರವರಿ 2026ರಂದು ಬೆಳಗ್ಗೆಯಿಂದ ಸಂಜೆಯವರೆಗೆ ಹಮ್ಮಿಕೊಂಡಿದ್ದ ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಗಳ ಖ್ಯಾತ ತಂಡಗಳಿಂದ ‘ಶಿವಗಾನಾಮೃತ’ ಭಜನಾ ಯಜ್ಞ ಭಕ್ತ-ಗಾನ-ಲಹರಿ ಸೇವೆ ಕಾರ್ಯಕ್ರಮ ಭಕ್ತ ಜನರನ್ನು ಮಂತ್ರಮುಗ್ಧಗೊಳಿಸಿತು.

ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದ ಕೊಡವೂರು ನಗರ ಸಭೆ ಸದಸ್ಯ ವಿಜಯ್ ಕೊಡವೂರು “ನಾವುಗಳು ಆರಾಧಿಸುವ ದೇವರುಗಳ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮಾನವತ್ವದಿಂದ ದೈವತ್ವದ ಕಡೆಗೆ ಹೊರಳುವ ಮನಸ್ಥಿತಿಯನ್ನ ಬೆಳೆಸಿಕೊಳ್ಳಬೇಕು. ಶಿಷ್ಟ ರಕ್ಷಣೆ ದುಷ್ಟ ಶಿಕ್ಷಣೆಯ ಹಾಗೆ ಸಮಾಜದಲ್ಲಿ ಸಜ್ಜನರನ್ನು ರಕ್ಷಿಸುತ್ತ ಸಮಾಜಘಾತುಕರನ್ನು ಮಾನವೀಯತೆಯೆಡೆಗೆ ಒಲವು ಬೆಳೆಸಿಕೊಳ್ಳುವಂತೆ ಮಾಡುವ ಕಾರ್ಯ ನಡೆಯಬೇಕಿದೆ” ಎಂದು ನುಡಿದರು.


ಅಧ್ಯಕ್ಷತೆ ವಹಿಸಿದ್ದ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಸತೀಶ್ ಕೋಟ್ಯಾನ್ ಅವರು ಮಾತನಾಡಿ “ಕೇವಲ ನಮ್ಮ ಆತ್ಮತೃಪ್ತಿಗಾಗಿ ಮಾತ್ರವಲ್ಲ ಆತ್ಮೋದ್ಧಾರಕ್ಕಾಗಿ, ದೇವರ ಅನುಗ್ರಹಕ್ಕಾಗಿ ಸದಾ ಭಜನೆಯಿಂದ ಸ್ತುತಿಸಬೇಕು. ಭಜನೆ ನಡೆವ ಸ್ಥಳದ, ಪರಿಸರದ ಹಾಗೂ ದೇಶದ ಕಲ್ಯಾಣಕ್ಕಾಗಿ ಭಜಿಸಬೇಕು. ಇದರಿಂದ ದೇವರು ಸುಪ್ರಸನ್ನರಾಗುತ್ತಾರೆ” ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಭಜನಾ ಕ್ಷೇತ್ರದಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ ಮಲ್ಪೆ ಸಸಿತೋಟದ ಎಂ. ಜಗದೀಶ ಬಂಗೇರ, ಶ್ರೀ ವಿಠೋಬಾ ಭಜನಾ ಮಂದಿರ ಮತ್ತು ಕಾನಂಗಿಯ ಮಧುಕರ ಬಂಗೇರ, ಶ್ರೀ ದೇವಿ ಜ್ಞಾನೋದಯ ಪಾಂಡುರಂಗ ಭಜನಾ ಮಂದಿರ ಇವರನ್ನು ಸಮ್ಮಾನಿಸಲಾಯಿತು. ಸಮ್ಮಾನಿತರು ಮಾತನಾಡಿ ಅರಿಷಡ್ವರ್ಗಗಳ ನಿಯಂತ್ರಣದಲ್ಲಿ, ಮಾನಸಿಕ ಸ್ಥಿರತೆಯ ಸಾಧನೆಗೆ ಭಜನೆಯ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉದ್ಯಮಿ, ಮತ್ಸ್ಯರಾಜ್ ಗ್ರೂಪ್ ನ ಕೇಶವ ಎಂ. ಕೋಟ್ಯಾನ್ ಉಪಸ್ಥಿತರಿದ್ದರು. ಉದ್ಯಮಿಗಳಾದ ಶೇಖರ ಪುತ್ರನ್, ಪ್ರಕಾಶ ಕರ್ಕೇರ, ಮತ್ಸ್ಯರಾಜ್ ಗ್ರೂಪ್ ನ ಅಭಿನಂದನ್ ಕೋಟ್ಯಾನ್ ವೇದಿಕೆಯಲ್ಲಿದ್ದರು. ರವೀಂದ್ರ ನಾಡಿಗ್ ಸ್ವಾಗತಿಸಿ, ಪ್ರಭಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
