ಕಾಸರಗೋಡು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ದಿನಾಂಕ 27 ಜುಲೈ 2025ರ ಆದಿತ್ಯವಾರದಂದು ತೆಂಕುತಿಟ್ಟು ಯಕ್ಷಗಾನ ಹಿಮ್ಮೇಳ ಕಲಾವಿದರ ಶಿಬಿರ ನಡೆಯಿತು.
ಈ ಶಿಬಿರವನ್ನು ತೆಂಕುತಿಟ್ಟು ಯಕ್ಷಗಾನದ ಹಿಮ್ಮೇಳ ಗುರುಗಳಾದ ಶ್ರೀ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಇವರು ದೀಪ ದೀಪಬೆಳಗುವ ಮೂಲಕ ಉದ್ಘಾಟಿಸಿ “ಪ್ರಾತಃಸ್ಮರಣೀಯರಾದ ಶ್ರೀ ನೆಡ್ಲೆ ನರಸಿಂಹ ಭಟ್ ಇವರು ನಮಗೆಲ್ಲ ಗುರು ಸಮಾನರು. ಅವರು ಚೆಂಡೆ ಮದ್ದಲೆ ಬಾರಿಸುವ ವಿಧಾನವೇ ಬಹಳ ಸೊಗಸು. ಸಾಹಿತ್ಯ, ಲಯ, ಘಾತಪೆಟ್ಟುಗಳ, ಹುಸಿಪೆಟ್ಟುಗಳ ವ್ಯತ್ಯಾಸದೊಂದಿಗೆ ಸ್ಪಷ್ಟತೆಯಿಂದ, ಮಹಿಷಾಸುರಾದಿ ಬಣ್ಣದ ವೇಷಗಳ ನಡೆಗಳನ್ನು ಬಾರಿಸುವ ವಿಧಾನ ಬಹಳ ಅಂದವಾದವು. ಅವರ ಸಂಸ್ಕರಣೆಯೊಂದಿಗೆ ಯಕ್ಷಗಾನ ಹಿಮ್ಮೇಳ ಕಲಾವಿದರ ಶಿಬಿರ ಆಯೋಜನೆಯು ಅರ್ಥಪೂರ್ಣ” ಎಂದರು.
ಹಿರಿಯ ಹಿಮ್ಮೇಳ ವಾದಕರಾದ ಶ್ರೀ ಪದ್ಯಾಣ ಶಂಕರನಾರಾಯಣ ಭಟ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಯಕ್ಷಗಾನ ಕ್ಷೇತ್ರದ ಮಹಾಪೋಷಕ ಶ್ರೀ ಟಿ. ಶ್ಯಾಮ ಭಟ್, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಕರ್ನಾಟಕ ಸರಕಾರ ಇವರು ಮುಖ್ಯ ಅತಿಥಿಯಾಗಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೃತ್ತಿಪರ ಮೇಳಗಳ ಹಿಮ್ಮೇಳದ ಪ್ರತಿಯೊಬ್ಬ ಕಲಾವಿದನು ಇಂತಹ ಶಿಬಿರದಲ್ಲಿ ಭಾಗವಹಿಸಿ ತನ್ನ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕೆಂದು ಸಲಹೆ ಇತ್ತರು. ಸಿರಿಬಾಗಿಲು ಪ್ರತಿಷ್ಠಾನ ವತಿಯಿಂದ ಗೌರವಾನ್ವಿತ ಶ್ರೀ ಟಿ. ಶ್ಯಾಮ್ ಭಟ್ ಇವರನ್ನು ವಿಶೇಷವಾಗಿ ಗೌರವಿಸಲಾಯಿತು. ಬಡಗುತ್ತಿಟ್ಟಿನ ಪ್ರಸಿದ್ಧ ಭಾಗವತರಾದಂತಹ, ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಕೊಳಗಿ ಕೇಶವ ಹೆಗಡೆ ಇವರನ್ನು ಗಡಿನಾಡು ಕಾಸರಗೋಡಿನ ಹಿರಿಯ ವಿದ್ವಾಂಸ ಕಲಾವಿದ ಶ್ರೀ ವಿಶ್ವವಿನೋದ ಬನಾರಿ, ಹಿರಿಯ ಭಾಗವತ ಶ್ರೀ ಸರಪಾಡಿ ಶಂಕರನಾರಾಯಣ ಕಾರಂತ ಇವರನ್ನು ಪ್ರತಿಷ್ಠಾನ ವತಿಯಿಂದ ಗೌರವಿಸಲಾಯಿತು.
ತೆಂಕುತಿಟ್ಟು ಯಕ್ಷಗಾನದ ಹಿರಿಯ ಅನುಭವಿ ಕಲಾವಿದ ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್ ಅವರು ನರಸಿಂಹ ಭಟ್ ಕುರಿತಾದ ಸಂಸ್ಮರಣ ಭಾಷಣ ಮಾಡಿದರು. ನೆಡ್ಲೆ ನರಸಿಂಹ ಭಟ್ಟರು ಸರಳ ರೀತಿಯಿಂದ ಪ್ರತಿಯೊಬ್ಬ ಕಲಾವಿದನಿಗೂ ಹೇಳಿಕೊಡುವ ವಿಧಾನ, ಅವರ ಜೊತೆಗಿನ ಒಡನಾಟದ ಕೆಲವು ನೆನಪುಗಳನ್ನು ಬಿತ್ತರಿಸಿದರು.
ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್ ಅವರು ಪಾತ್ರ ಪ್ರಸ್ತುತಿಯಲ್ಲಿ ಔಚಿತ್ಯ ಪ್ರಜ್ಞೆಯ ಕುರಿತಾಗಿ ರಂಗದಲ್ಲಿ ಕಲಾವಿದ ಯಾವ ರೀತಿ ಪ್ರಸಂಗದೊಳಗಿದ್ದು ಸ್ಪಂದಿಸಬೇಕು ಎಂಬುದನ್ನು ಸ್ಪುಟುವಾಗಿ ವಿವರಿಸಿದರು. ಶ್ರೀ ಬಲಿಪ ಶಿವಶಂಕರ ಭಟ್ ಮತ್ತು ಶ್ರೀ ಕೃಷ್ಣ ಪ್ರಕಾಶ್ ಒಳಿತ್ತಾಯ ಇವರು ಪ್ರಸಂಗ ಸಾಹಿತ್ಯದ ಪ್ರಸ್ತುತಿ ಮತ್ತು ಮದ್ದಳೆ ಸಹಯೋಗವನ್ನು ಪ್ರಾತ್ಯಕ್ಷಿಕೆ ಮೂಲಕ ನಿರೂಪಿಸಿ ವಿವರಿಸಿದರು. ಮೇಳವೆಂಬ ಸಮೂಹ ವ್ಯವಸ್ಥೆಯೊಂದಿಗೆ ವೈಯಕ್ತಿಕ ಹೊಂದಾಣಿಕೆ ಈ ಕುರಿತಾಗಿ ವಿದ್ವಾಂಸರಾದ ಶ್ರೀ ಉಜಿರೆ ಅಶೋಕ್ ಭಟ್ ಅವರು ನಿರೂಪಿಸಿದರು. ಪ್ರಸಂಗ ಸಾಹಿತ್ಯ ಪ್ರಸ್ತುತಿಯಲ್ಲಿ ಛಂದಸ್ಸಿನ ಮಹತ್ವದ ಕುರಿತಾಗಿ ಕಟೀಲು ಮೇಳದ ಪ್ರಧಾನ ಭಾಗವತರಾದ ಶ್ರೀ ಅಂಡಾಲ ದೇವಿ ಪ್ರಸಾದ ಶೆಟ್ಟಿಯವರು, ಧ್ವನಿವರ್ಧಕದ ಸಮರ್ಪಕ ಬಳಕೆಯ ಕುರಿತಾಗಿ ವಿಶ್ರಾಂತ ಆಕಾಶವಾಣಿ ಕಲಾವಿದ, ಹವ್ಯಾಸಿ ಭಾಗವತ ಶ್ರೀ ಸುಬ್ರಾಯ ಸಂಪಾಜೆಯವರು, ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಇವರು ಪ್ರಸಂಗಗಳ ಸಾಂಪ್ರದಾಯಿಕ ನಡೆ, ಉತ್ತರ ಕನ್ನಡ ಜಿಲ್ಲೆಯ ಯಕ್ಷರಂಗ ಮಾಸ ಪತ್ರಿಕೆಯ ಸಂಪಾದಕರಾಗಿರುವ ಶ್ರೀ ಕಡತೋಕ ಗೋಪಾಲಕೃಷ್ಣ ಭಾಗವತ ಇವರು ಕಲಾವಿದನ ಸಾಮಾಜಿಕ ಸಾಂಸ್ಕೃತಿಕ ಜವಾಬ್ದಾರಿ ಕುರಿತಾಗಿ, ಶ್ರೀ ಕೊಂಕನಣಾಜೆ ಚಂದ್ರಶೇಖರ ಭಟ್ ಇವರು ಮದ್ದಲೆಗಾರನ ಸ್ಥಾನ-ಹೊಂದಾಣಿಕೆ ಕುರಿತಾಗಿ ವಿವರಿಸಿದರು.
ಯಕ್ಷಗಾನದ ಹಿರಿಯ ಕಲಾವಿದರುಗಳಾದ ಶ್ರೀ ವಾಸುದೇವರಂಗ ಭಟ್ ಮಧೂರು, ಶ್ರೀ ರಮೇಶ್ ಭಟ್ ಪುತ್ತೂರು ಸತ್ಯನಾರಾಯಣ ಪುಣಿಚಿತ್ತಾಯ ಪೆರ್ಲ, ಡಾ. ಸತೀಶ್ ಪುಂಚಿತ್ತಾಯ ಮುಂತಾದವರು ಉಪಸ್ಥಿತರಿದ್ದರು. ಡಾ. ಸುಣ್ಣಂಗಳಿ ಶ್ರೀ ಕೃಷ್ಣ ಭಟ್ ಹಾಗೂ ಶ್ರೀ ಎಸ್.ಎನ್. ಭಟ್ ಬಾಯಾರು ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಶ್ರೀ ರಾಧಾಕೃಷ್ಣ ಕಲ್ಚಾರ್ ಇವರು ಸಂಪೂರ್ಣ ಕಾರ್ಯಕ್ರಮದ ಅವಲೋಕನ ಮಾಡಿದರು. ಇತ್ತೀಚೆಗೆ ಅಗಲಿದ ಶ್ರೀಗಳಾದ ಪಾತಾಳ ವೆಂಕಟರಮಣ ಭಟ್, ಸದಾಶಿವ ಶೆಟ್ಟಿಗಾರ್ ಸಿದ್ದ ಕಟ್ಟೆ, ಡಾ. ಬಿ.ಎಸ್. ರಾವ್ ಕಾಸರಗೋಡು ಇವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀರಾಮಕೃಷ್ಣ ಮಯ್ಯ ಸಿರಿಬಾಗಿಲು ಅತಿಥಿಗಳನ್ನು ಸ್ವಾಗತಿಸಿ ಧನ್ಯವಾದವಿತ್ತರು. 60ಕ್ಕೂ ಹೆಚ್ಚು ಹಿಮ್ಮೇಳ ಕಲಾವಿದರುಗಳು ಭಾಗವಹಿಸಿದ್ದರು. ಒಂದು ಇಡೀ ದಿನ ಅಧ್ಯಯನ ಪೂರ್ಣ ಕಾರ್ಯಕ್ರಮ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಬೆಳಗಿ ಬಂತು.