ಮಂಗಳೂರು : ತುಳು ಪರಿಷತ್ ಮಂಗಳೂರು ಇದರ ವತಿಯಿಂದ ಮ್ಯಾಪ್ಸ್ ಕಾಲೇಜಿನಲ್ಲಿ ಆಯೋಜಿಸಿದ್ದ ನುಡಿ ನಮನ ಸಮಾರಂಭವು ದಿನಾಂಕ 25 ಸೆಪ್ಟೆಂಬರ್ 2025ರಂದು ನಡೆಯಿತು.
ಈ ಸಮಾರಂಭದಲ್ಲಿ ಮಾತನಾಡಿದ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಕೃಷ್ಣ ಮೂರ್ತಿ ಪಿ. “ತುಳುನಾಡಿನ ಪ್ರಮುಖ ಇತಿಹಾಸ ಸಂಶೋಧಕರ ಪರಂಪರೆಯನ್ನು ಸಮರ್ಥವಾಗಿ ಮುನ್ನಡೆಸಿದ ಡಾ. ಕೆ.ಜಿ. ವಸಂತ ಮಾಧವ ಹಾಗೂ ಕನ್ನಡ ಕಾದಂಬರಿ ಪರಂಪರೆಗೆ ನೂತನ ಆಯಾಮ ನೀಡಿದ ಎಸ್.ಎಲ್. ಭೈರಪ್ಪರ ಕೊಡುಗೆ ಅನನ್ಯವಾದುದು. ಹಿರಿಯರ ಅಗಲಿಕೆಯ ನೋವಿನೊಂದಿಗೆ ಅವರ ಕೊಡುಗೆಗಳನ್ನು ಸ್ಮರಣೆ ಮಾಡಿಕೊಳ್ಳುವುದು ಅತಿ ಅಗತ್ಯ. ಕೆ.ಜಿ. ವಸಂತ ಮಾಧವರು ಕರಾವಳಿ ಕರ್ನಾಟಕದ ಇತಿಹಾಸದ ಕಟ್ಟುವಿಕೆಯನ್ನು ಪ್ರಧಾನವಾಗಿಸಿಕೊಂಡು ಸಾಂಸ್ಕೃತಿಕ ಇತಿಹಾಸದ ರಚನೆಗೆ ಮೂಲ ಆಕರಗಳನ್ನು ಶೋಧಿಸಿ ಭವಿಷ್ಯದ ಸಂಶೋದಕರಿಗೆ ಮಾರ್ಗದರ್ಶನ ನೀಡಿರುತ್ತಾರೆ. ಅವರ ನೂತನ ಶೋಧಗಳ ಸಮಗ್ರ ಅಧ್ಯಯನ ನಡೆಯ ಬೇಕಾಗಿದೆ. ಕಾದಂಬರಿಯನ್ನೇ ತನ್ನ ಅಭಿವ್ಯಕ್ತಿ ಮಾಧ್ಯಮವೆಂದು ಪರಿಭಾವಿಸಿದ ಭೈರಪ್ಪರು ಸಂಕೀರ್ಣವಾದ ಜೀವನದ ಸತ್ಯಗಳನ್ನು ಕಾದಂಬರಿಗಳ ಮೂಲಕ ನಿರ್ವಹಿಸಿದ್ದಾರೆ. ಜೀವನದ ಅರ್ಥವನ್ನು ಹುಡುಕ ಬಯಸುವ ಅವರ ಸಾಹಿತ್ಯ ಸೃಷ್ಟಿ ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ” ಎಂದು ನುಡಿದರು.
ತುಳು ಪರಿಷತ್ತಿನ ಅಧ್ಯಕ್ಷರಾದ ಶುಭೋದಯ ಆಳ್ವ ಮಾತನಾಡಿ “ನಮ್ಮ ಅರಿವಿನ ವಿಸ್ತರಣೆಗೆ ಕಾರಣರಾಗುವ ಶ್ರೇಷ್ಠರ ಸ್ಮರಣೆ ಮತ್ತು ಕೃತಿಗಳ ಓದು ನಿರಂತರವಾಗಿ ನಡೆಸಬೇಕು” ಎಂದರು. ತುಳು ಪರಿಷತ್ ಇದರ ಗೌರವ ಅಧ್ಯಕ್ಷ ಡಾ. ಪ್ರಭಾಕರ ನೀರುಮಾರ್ಗ ಮಾತನಾಡಿ “ಅಗಲಿದ ಹಿರಿಯ ಆದರ್ಶಗಳನ್ನು ಅರಿತು ಕಾರ್ಯ ತತ್ಪರರಾಗಬೇಕು” ಎಂದರು. ಕಾರ್ಯದರ್ಶಿ ಬೆನೆಟ್ ಅಮ್ಮನ್ನ ಪ್ರಾಸ್ತವಿಕ ನುಡಿಗಳನ್ನಾಡಿದರು. ಸದಸ್ಯರುಗಳಾದ ಸುಧಾ ನಾಗೇಶ್, ಮಾಲತಿ ಶೆಟ್ಟಿ ಮಾಣುರು, ಬಿ. ಶ್ರೀನಿವಾಸ್, ಶಾರದ ಬಾರ್ಕುರು, ಶಾಲಿನಿ ರೈ, ಸುಮತಿ ಹೆಗ್ಡೆ, ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.