ಪುತ್ತೂರು : ಜಿಲ್ಲಾ ಮಟ್ಟದ ಗಮಕ ಸಮ್ಮೇಳನದ ಅಂಗವಾಗಿ ಪ್ರೌಢ ಮತ್ತು ಪದವಿಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗಾಗಿ ಗಮಕ ವಾಚನ ಸ್ಪರ್ಧೆಯನ್ನು ದಿನಾಂಕ 05 ಅಕ್ಟೋಬರ್ 2025ನೇ ಆದಿತ್ಯವಾರದಂದು ಪುತ್ತೂರಿನ ಅನುರಾಗ ವಠಾರದಲ್ಲಿ ಏರ್ಪಡಿಸಲಾಯಿತು.
ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀಯುತ ಬಿ. ಪುರಂದರ ಭಟ್ಟರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗಮಕ ಕಲಾ ಪರಿಷತ್ತು ಜಿಲ್ಲಾಧ್ಯಕ್ಷರಾದ ಪ್ರೊ. ಮಧೂರು ಮೋಹನ ಕಲ್ಲೂರಾಯರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಪ್ರೊ. ವೇದವ್ಯಾಸ ರಾಮಕುಂಜ ಇವರು ಸ್ಪರ್ಧಾಳುಗಳಿಗೆ ಶುಭಾಶಯ ಕೋರಿದರು.
ಪ್ರೌಢಶಾಲಾ ವಿಭಾಗದಿಂದ 12 ಮಂದಿ ಮತ್ತು ಪದವಿಪೂರ್ವ ಹಾಗೂ ಪದವಿ ವಿಭಾಗದಿಂದ ಎಂಟು ಮಂದಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು. ಪ್ರೊ. ಮಧೂರು ಮೋಹನ ಕಲ್ಲೂರಾಯ ಮತ್ತು ಗಮಕಿ ಡಾ. ಕಾರ್ತಿಕ್ ತಾಮಣ್ಕರ್ ತೀರ್ಪುಗಾರರಾಗಿ ಸಹಕರಿಸಿದರು.
ಪ್ರೌಢಶಾಲಾ ವಿಭಾಗದಲ್ಲಿ ಸನ್ಮಯ್ 8ನೇ ತರಗತಿ ಅಂಬಿಕಾ ವಿದ್ಯಾಲಯ ಬಪ್ಪಳಿಗೆ ಮತ್ತು ಪ್ರಚೇತ್ ರಾಮ್ 8ನೇ ತರಗತಿ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ : ಪ್ರಥಮ, ಸುಪ್ರಜಾ ರಾವ್ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ : ದ್ವಿತೀಯ ಹಾಗೂ ಆರಾಧನಾ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನೆಹರುನಗರ ತೃತೀಯ ಸ್ಥಾನ ಗಳಿಸಿದರು.
ಪದವಿಪೂರ್ವ ಹಾಗೂ ಪದವಿ ವಿಭಾಗದಲ್ಲಿ ಲಿಖಿತಾ ಯು. ಪ್ರಥಮ ಪಿ.ಯು.ಸಿ. ಕೆನರಾ ಕಾಲೇಜ್ ಮಂಗಳೂರು : ಪ್ರಥಮ, ನಿತೀಶ್ ಎಸ್. ರಾವ್ ಪ್ರಥಮ ಪಿ.ಯು.ಸಿ. ಶಾರದಾ ವಿದ್ಯಾನಿಕೇತನ ಪಿಯು ಕಾಲೇಜು ತಲಪಾಡಿ : ದ್ವಿತೀಯ ಹಾಗೂ ಪೂಜಾಶ್ರೀ ಎಂ. ಅಂತಿಮ ಬಿ.ಎಸ್.ಸಿ. ವಿ.ವಿ. ಕಾಲೇಜು ಮಂಗಳೂರು : ತೃತೀಯ ಸ್ಥಾನವನ್ನು ಗಳಿಸಿದರು. ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೂ ಅಭಿನಂದನಾ ಪತ್ರವನ್ನು ನೀಡಿ ಪ್ರೋತ್ಸಾಹಿಸಲಾಯಿತು.
ಪುತ್ತೂರು ತಾಲೂಕು ಘಟಕದ ಗೌರವಾಧ್ಯಕ್ಷರಾದ ಭಾಸ್ಕರ ಬಾರ್ಯ, ಉಪಾಧ್ಯಕ್ಷರಾದ ಡಾ. ಶೋಭಿತಾ ಸತೀಶ್ ಹಾಗೂ ಮಂಗಳೂರು ತಾಲೂಕು ಘಟಕದ ಅಧ್ಯಕ್ಷರಾದ ಸುರೇಶ್ ರಾವ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪುತ್ತೂರು ತಾಲೂಕು ಘಟಕದ ಖಜಾಂಚಿ ವೀಣಾ ಸರಸ್ವತಿ ಪ್ರಾರ್ಥಿಸಿ, ಪ್ರಧಾನ ಕಾರ್ಯದರ್ಶಿ ಶಂಕರಿ ಶರ್ಮ ಕಾರ್ಯಕ್ರಮ ನಿರ್ವಹಿಸಿದರು.