ಉಡುಪಿ : ಕನ್ನಡದ ಖ್ಯಾತ ಕವಿ ಎಸ್.ವಿ. ಪರಮೇಶ್ವರ ಭಟ್ಟ ಇವರ ಹೆಸರಿನ ಪ್ರಶಸ್ತಿಯು ಕನ್ನಡ ಸಾಹಿತ್ಯ, ಅನುವಾದ ಮತ್ತು ಸಂಶೋಧನ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಹಿತಿಗಳಿಗೆ ಎಸ್.ವಿ.ಪಿ. ಪ್ರತಿಷ್ಠಾನದಿಂದ ನೀಡುವ ಪ್ರಶಸ್ತಿಯಾಗಿದೆ. 2026ರ ಸಾಲಿನಿಂದ ಈ ಪ್ರಶಸ್ತಿಯನ್ನು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಮೂಲಕ ನೀಡಲಾಗುವುದು. ಪ್ರಸಕ್ತ ಸಾಲಿನ ಪ್ರಶಸ್ತಿಗೆ ಕನ್ನಡದ ಖ್ಯಾತ ಕವಿ, ಕಥೆಗಾರ ಶ್ರೀ ಸುಬ್ರಾಯ ಚೊಕ್ಕಾಡಿ ಇವರನ್ನು ಪ್ರಶಸ್ತಿ ಸಮಿತಿ ಆಯ್ಕೆ ಮಾಡಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.
ಸುಬ್ರಾಯ ಚೊಕ್ಕಾಡಿಯವರು 1940ರ ಜೂನ್ 29ರಂದು ಸುಳ್ಯ ತಾಲೂಕಿನ ಚೊಕ್ಕಾಡಿಯಲ್ಲಿ ಜನಿಸಿದರು. ಅವರ ತಂದೆ ಯಕ್ಷಗಾನ ಭಾಗವತರಾದ ಗಣಪಯ್ಯನವರು ಮತ್ತು ತಾಯಿ ಸುಬ್ಬಮ್ಮನವರು. ಸುಬ್ರಾಯ ಚೊಕ್ಕಾಡಿ ಕನ್ನಡದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. ಸುಳ್ಯ, ಪೈಲೂರು, ಕುಕ್ಕುಜಡ್ಕ ಶಾಲೆಗಳಲ್ಲಿ 39 ವರ್ಷ ಕಾಲ ಸಹಾಯಕ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದಾರೆ. ಕವಿ ಗೋಪಾಲಕೃಷ್ಣ ಅಡಿಗ, ಅನಂತಮೂರ್ತಿ, ಲಂಕೇಶ ಮುಂತಾದವರ ಸಂಪರ್ಕದಲ್ಲಿ ಇದ್ದರು. ಲಂಕೇಶರ ಮೊದಲ ನಾಟಕವನ್ನು ಪ್ರಕಟಿಸಿದ್ದು ಚೊಕ್ಕಾಡಿಯವರೇ. ಸಾಹಿತ್ಯದ ಹೊಸ ವಿಚಾರಗಳನ್ನು ಚರ್ಚಿಸುವುದಕ್ಕೆ ಹಳ್ಳಿಯಲ್ಲಿ ‘ಸುಮನಸಾ’ ಎಂಬ ವಿಚಾರ ವೇದಿಕೆಯನ್ನೂ ಕಟ್ಟಿ ಬೆಳೆಸಿ ಹತ್ತಾರು ಉತ್ತಮ ಕೃತಿಗಳ ಪ್ರಕಟಣೆಗೆ ಕಾರಣರಾದರು. ಕಾವ್ಯ, ನಾಟಕ, ಯಕ್ಷಗಾನ, ಹರಿಕಥೆ, ಸಂಘಟನೆ, ಶಿಕ್ಷಣ, ಸಾಮಾಜಿಕ ಹೋರಾಟ, ಪ್ರಕಾಶನ, ಕೃಷಿ ಇತ್ಯಾದಿಯಾಗಿ ಅವರೊಬ್ಬ ಸಕ್ರಿಯ ಸರ್ವಾಂತರ್ಯಾಮಿ.
ಸುಬ್ರಾಯ ಚೊಕ್ಕಾಡಿಯವರು ರಚಿಸಿದ ಕವನ ಸಂಕಲನಗಳಲ್ಲಿ ತೆರೆ, ಬೆಟ್ಟವೇರಿದ ಮೇಲೆ, ನಿಮ್ಮವೂ ಇರಬಹುದು, ಮೊನ್ನೆ ಸಿಕ್ಕವರು, ಇದರಲ್ಲಿ ಅದು ಇತ್ಯಾದಿ. ಅವರ ಮೊದಲ ಕವನ ಸಂಕಲನ ‘ತೆರೆ’, ಕಾದಂಬರಿ (ಸಂತೆಮನೆ), ಕಥಾ ಸಂಕಲನ (ಬೇರುಗಳು), ಕಾವ್ಯ ಸಮೀಕ್ಷೆ, ಕೃತಿಶೋಧ, ಒಳಹೊರಗು, ಸಮಾಲೋಕ, ಅವಲೋಕನ ಇವರ ವಿಮರ್ಶಾ ಕೃತಿಗಳು ಹಾಗೂ ಒಂದು ಸಂಪಾದಿತ ಕೃತಿ (ದ.ಕ. ಕಾವ್ಯ) ಪ್ರಕಟಿಸಿದ್ದಾರೆ. ಸುಬ್ರಾಯ ಚೊಕ್ಕಾಡಿಯವರ ಬರಹಗಳ ಆಧಾರಿತ ಕ್ಯಾಸೆಟ್ ಹಾಗೂ ಸಿಡಿಗಳಲ್ಲಿ ಮಿಲನ, ಮಾನಸ, ಬೆಣ್ಣೆ ಕದ್ದ ನಮ್ಮ ಕೃಷ್ಣ, ವನಸಿರಿ, ಅನುರಾಗ, ಸಲ್ಲಾಪ, ಹುಣ್ಣಿಮೆ, ನೂಪುರ, ಸಿರಿಗನ್ನಡ, ದೀಪ, ಭಾವಚಿತ್ತಾರ, ನಿನ್ನ ಬಾಂದಳದಂತೆ ಪ್ರಖ್ಯಾತಗೊಂಡಿವೆ. ಅವರು ಕೆಲವು ಚಲನಚಿತ್ರಗಳಿಗೂ ಗೀತೆಗಳನ್ನು ಬರೆದಿದ್ದಾರೆ.
ಅಖಿಲ ಭಾರತ 69ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ, ದೆಹಲಿ ಆಕಾಶವಾಣಿ ಏರ್ಪಡಿಸಿದ ಸರ್ವಭಾಷಾ ಕವಿ ಸಮ್ಮೇಳನ ಅಧ್ಯಕ್ಷತೆ, ಸುಳ್ಯ ತಾಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ. ದ.ಕ. ಜಿಲ್ಲಾ ಹದಿನೈದನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಎರಡನೇ ವಿಶ್ವ ಕನ್ನಡ ಸಮ್ಮೇಳನ-ಬೆಳಗಾವಿ, ಕವಿಗೋಷ್ಠಿ ಹೀಗೆ ಹಲವಾರು ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ.
ಸುಬ್ರಾಯ ಚೊಕ್ಕಾಡಿಯವರಿಗೆ ಸಂದ ಗೌರವ ಪ್ರಶಸ್ತಿಗಳಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಮೃತ್ಯುಂಜಯ ಸಾರಂಗಮಠ ಪ್ರಶಸ್ತಿ, ಮುದ್ದಣ ಕಾವ್ಯ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಕಲಾನಿಧಿ ಪ್ರಶಸ್ತಿ, ಸಂದೇಶ ಸಾಹಿತ್ಯ ಪ್ರಶಸ್ತಿ, ಲಷ್ಕರಿ ಪ್ರಶಸ್ತಿ, ಮುಳಿಯ ಪ್ರಶಸ್ತಿ, ಕೆ.ಎಸ್. ನರಸಿಂಹ ಸ್ವಾಮಿ ಕಾವ್ಯ ಪ್ರಶಸ್ತಿ, ನುಡಿಸಿರಿ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಸ್ವರ್ಣ ಸಾಧನಾ ಪ್ರಶಸ್ತಿ ಇತ್ಯಾದಿ ಪ್ರಮುಖವಾದವುಗಳು.
