ಧಾರವಾಡ : ‘ಆರ್ಯ’ ಎಂಬ ಹೆಸರಿನಿಂದ ಸಾಹಿತ್ಯ ಕೃತಿ ರಚಿಸಿದ ಪಿ.ಆರ್. ಆಚಾರ್ಯ ಇವರು ಚಿತ್ರಕಲಾವಿದ, ನಾಟಕಕಾರರೂ ಆಗಿದ್ದರು. 1945ರ ಡಿಸೆಂಬರ್ 7ರಂದು ಉಡುಪಿಯಲ್ಲಿ ಜನಿಸಿದ ಆಚಾರ್ಯ ಅವರ ತಂದೆ ವಿಠಲಾಚಾರ್ಯ ಮತ್ತು ತಾಯಿ ರುಕ್ಮಿಣಿ. ಉಡುಪಿಯ ಬೋರ್ಡ್ ಹೈಸ್ಕೂಲಿನಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದ ಆರ್ಯ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕ ಮತ್ತು ಸ್ನಾತಕೋತ್ತರ (ಸಂಸ್ಕೃತ) ಪದವಿ ಪಡೆದಿದ್ದರು. 1963ರಲ್ಲಿ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠದ ಸ್ವಾಮೀಜಿಯಾಗಿ ಸನ್ಯಾಸತ್ವ ಸ್ವೀಕರಿಸಿದ್ದರು. 1973ರಲ್ಲಿ ಸನ್ಯಾಸತ್ವ ಬಿಡುವುದರ ಜೊತೆಗೆ ಮಠದ ವ್ಯವಸ್ಥೆಯಿಂದ ಹೊರಬಂದ ಆರ್ಯ ಅವರು ಸಿಂಡಿಕೇಟ್ ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿ ಕೆಲಸ ಆರಂಭಿಸಿದರು. 1976ರಲ್ಲಿ ಗೃಹಸ್ಥಾಶ್ರಮ ಸ್ವೀಕರಿಸಿ ಧಾರವಾಡದಲ್ಲಿಯೇ ನೆಲೆ ನಿಂತರು. ಕೇವಲ ಮೂರು ವರ್ಷದ ನಂತರ ಅವರು ಪತ್ನಿ ವಿಯೋಗ ಅನುಭವಿಸಬೇಕಾಯಿತು. ಚಿತ್ರಕಲೆ-ಸಾಹಿತ್ಯ- ನಾಟಕ ಆರ್ಯ ಅವರ ಪ್ರೀತಿಯ ಕಲಾ ಪ್ರಕಾರಗಳು. ಸ್ವಯಂ ಚಿತ್ರಕಲೆಯನ್ನು ಕಲಿತ ಆರ್ಯ ಅವರು ಧಾರವಾಡದ ಮನೋಹರ ಗ್ರಂಥಮಾಲೆಯ ಹಲವಾರು ಗ್ರಂಥಗಳಿಗೆ ಮುಖಪುಟ ರಚಿಸಿದ್ದಾರೆ. ಬಹುಕಾಲ ಧಾರವಾಡದಲ್ಲಿಯೇ ನೆಲೆಸಿದ್ದ ಆರ್ಯ ಅವರು ಮಂಗಳೂರು, ಬೆಂಗಳೂರು, ಮುಂಬಯಿಗಳಲ್ಲಿ ಚಿತ್ರಕಲೆಯ ಏಕವ್ಯಕ್ತಿ ಪ್ರದರ್ಶನ ಏರ್ಪಡಿಸಿದ್ದರು. ಜರ್ಮನಿಯಲ್ಲಿ ಮೂರು ಬಾರಿ, ಇಟಲಿಯಲ್ಲಿ ನಾಲ್ಕು ಸಲ ಹಾಗೂ ಪ್ಯಾರೀಸ್ ನಲ್ಲಿ ಮೂರು ಸಲ ಹಾಗೂ ನೆದರ್ ಲ್ಯಾಂಡ್, ಫಿನ್ಲೆಂಡ್ ಗಳಲ್ಲಿಯೂ ಏಕವ್ಯಕ್ತಿ ಪ್ರದರ್ಶನ ನಡೆಸಿದ್ದರು. ನಾಟಕ-ಸಣ್ಣಕತೆ- ಕಾದಂಬರಿ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಕೃತಿ ಪ್ರಕಟಿಸಿದ್ದರು.
ಆರ್ಯರ ನೆನಪಿನಲ್ಲಿ ಎಂಬತ್ತು ವರ್ಷಗಳು ತುಂಬಿದ ನಿಮಿತ್ತ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ‘ಆರ್ಯ ಸ್ಮರಣೆ’ ಕಾರ್ಯಕ್ರಮವನ್ನು ದಿನಾಂಕ 08 ಫೆಬ್ರವರಿ 2026ರ ರವಿವಾರ ಬೆಳಗ್ಗೆ 10-00 ಗಂಟೆಗೆ ಧಾರವಾಡ ರಂಗಾಯಣದ ಆವರಣದಲ್ಲಿ ಇರುವ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ಹಮ್ಮಿಕೊಂಡಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ.ಸಿ. ತಲ್ಲೂರು ವಹಿಸಲಿದ್ದು, ಬಿ.ಎಲ್. ಪಾಟೀಲ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀಮತಿ ಗಾಯತ್ರಿ ದೇಸಾಯಿ, ಆನಂದ ನಿಲೇಕಣಿ ಮತ್ತು ಲಾತವ್ಯ ಆಚಾರ್ಯ ಉಪಸ್ಥಿತರಿರಲಿದ್ದಾರೆ. ಮೊದಲ ಗೋಷ್ಠಿಯಲ್ಲಿ ಆರ್ಯರ ಸೃಜನಶೀಲ ಸಾಹಿತ್ಯ : ನಾಟಕ ಕುರಿತು ನಡೆಯಲಿದ್ದು ಡಾ.ಪ್ರಕಾಶ ಗರುಡ ಮತ್ತು ವಿಜಯಸಿಂಹ ಆಚಾರ್ಯ ಭಾಗವಹಿಸಲಿದ್ದು, ಡಾ. ಶಶಿಧರ ನರೇಂದ್ರ ನಿರ್ವಾಹಕರಾಗಿರುತ್ತಾರೆ. ಎರಡನೇ ಗೋಷ್ಠಿಯಲ್ಲಿ ಆರ್ಯರ ಸೃಜನಶೀಲ ಸಾಹಿತ್ಯ : ಕಥೆಗಳು ಕುರಿತು ಡಾ. ಶ್ಯಾಮಸುಂದರ ಬಿದರಕುಂದಿ ಮತ್ತು ಹರ್ಷ ಡಂಬಳ ಮಾತನಾಡುತ್ತಾರೆ. ಡಾ. ವಿನಾಯಕ ನಾಯಕ ನಿರ್ವಾಹಕರಾಗಿರುತ್ತಾರೆ. ದಯವಿಟ್ಟು ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಜಿ. ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಸಂಚಾಲಕ ಸಮೀರ ಜೋಶಿ ವಿನಂತಿಸಿದ್ದಾರೆ.


