ಕಾಸರಗೋಡು : ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವಾರ್ಷಿಕೋತ್ಸವದ ಅಂಗವಾಗಿ ದಿನಾಂಕ 22 ಫೆಬ್ರವರಿ 2026ರಂದು ನಡೆಯಲಿರುವ ಕಾಸರಗೋಡು-ಕರ್ನಾಟಕ ‘ಚುಟುಕು ಸಾಹಿತ್ಯ ಸಮ್ಮೇಳನ’ದ ಆಮಂತ್ರಣ ಪತ್ರಿಕೆಯನ್ನು ದಿನಾಂಕ 16 ಫೆಬ್ರವರಿ 2026ರಂದು ಎಡನೀರು ಶ್ರೀ ಮಠದಲ್ಲಿ ಎಡನೀರು ಮಠಾಧಿಪತಿ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳು ಬಿಡುಗಡೆಗೊಳಿಸಿ ಶುಭಾಶೀರ್ವಾದ ನೀಡಿದರು.
ನಾಡೋಜ ಡಾ. ಕೃಷ್ಣಪ್ರಸಾದ್ ಕೂಡ್ಲು ಇವರ ಸರ್ವಾಧ್ಯಕ್ಷತೆಯಲ್ಲಿ, ಡಾ. ವಾಮನ್ ರಾವ್ ಬೇಕಲ್ ಸಾರಥ್ಯದ ಕನ್ನಡ ಭವನದ ಪ್ರಾಯೋಜಕತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಕನ್ನಡ ಭವನದ ಅಂಗ ಸಂಸ್ಥೆಯಾದ ‘ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವರ್ಷಾಚರಣೆ ಪ್ರಯುಕ್ತ ಪರಿಷತ್ತಿನ ಜಿಲ್ಲಾ ಘಟಕಗಳ ಸಹಕಾರದಲ್ಲಿ ಸಮ್ಮೇಳನ ಆಯೋಜಿಸಲಾಗಿದ್ದು, ಬೆಳಿಗ್ಗೆ 7-00ರಿಂದ ಭಜನೆ, 8-30ಗೆ ಸರ್ವಾಧ್ಯಕ್ಷರ ಮೆರವಣಿಗೆ, ಗಂಟೆ 9-00ಕ್ಕೆ ಉದ್ಘಾಟನೆ, ಶ್ರೀ ಶ್ರೀ ರಮೇಶ ಗುರೂಜಿ, ಗೋವಿನಾಳ ಗದಗ ಹಾಗೂ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಜಿಗಳಿಂದ ಆಶೀರ್ವಚನ, ಸ್ವಾಮೀಜಿಗಳಿಗೆ ವಿಶೇಷ ಸಮ್ಮೇಳನ ಗೌರವ ಪ್ರದಾನ. ಮಹಾನ್ ಕವಿ ಸಾಹಿತಿಗಳಿಗೆ ‘ಕವಿ ಕಾವ್ಯ ವಿಭೂಷಣ ರಾಷ್ಟ್ರೀಯ ಪ್ರಶಸ್ತಿ’, ಉಚಿತ ಸಾರ್ವಜನಿಕ ವಾಚನಾಲಯ ಲೋಕಾರ್ಪಣೆ, ಕವಿಗೋಷ್ಠಿ, ವಿಚಾರ ಸಂಕಿರಣ, ನೃತ್ಯ-ಗಾನ ವೈಭವ, ಪರಿಷತ್ತಿನ ಕಾರ್ಯಕರ್ತ, ಕವಿಗಳಿಗೆ ‘ಕವಿರತ್ನ ಪ್ರಶಸ್ತಿ’, ಕನ್ನಡ ಭವನ ಜಿಲ್ಲಾ ಘಟಕಗಳ ಪದಾಧಿಕಾರಿ ಕನ್ನಡ ಮುಖಂಡರಿಗೆ ‘ಕನ್ನಡ ಪಯಸ್ವಿನಿ ಪ್ರಶಸ್ತಿ’, ಪುಸ್ತಕ ಬಿಡುಗಡೆ ಮುಂತಾದ ಹತ್ತು ಹಲವು ಕಾರ್ಯಕ್ರಮಗಳು ಸಮ್ಮೇಳನದ ಭಾಗವಾಗಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರಾದ ಡಾ. ವೆಂಕಟ್ರಮಣ ಹೊಳ್ಳ ಕಾರ್ಯಕ್ರಮದ ರೂಪು ರೇಖೆಗಳನ್ನು ವಿವರಿಸಿದರು. ಉಪಾಧ್ಯಕ್ಷ ಶಂಕರ ಜೆ.ಪಿ. ನಗರ ನಿರೂಪಿಸಿದರು, ಗೌರವಾದ್ಯಕ್ಷ ಪ್ರದೀಪ್ ಬೇಕಲ್, ಕನ್ನಡ ಭವನ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್ ಸಂಧ್ಯಾರಾಣಿ ಟೀಚರ್ ಸ್ವಾಮೀಜಿಗಳಿಗೆ ಫಲ ಪುಷ್ಪ ನೀಡಿ ಶುಭಾನುಗ್ರಹ ಬೇಡಿಕೊಂಡರು. ನಿರ್ದೇಶಕ ಜಗನ್ನಾಥ್ ಶೆಟ್ಟಿ ವಂದಿಸಿದರು.
