ಮಂಗಳೂರು : ಕಲಾಭಿ (ರಿ.) ಮಂಗಳೂರು ಇದರ ವತಿಯಿಂದ 5ನೇ ವರ್ಷದ ಸಂಭ್ರಮ ಮಕ್ಕಳಿಗಾಗಿ ಹತ್ತು ದಿನಗಳ ‘ಅರಳು 2026’ ವೃತ್ತಿಪರ ರಂಗಭೂಮಿ ಕಾರ್ಯಾಗಾರವನ್ನು ದಿನಾಂಕ 13 ಏಪ್ರಿಲ್ 2025ರಿಂದ 26 ಏಪ್ರಿಲ್ 2025ರವರೆಗೆ ಪ್ರತಿದಿನ ಬೆಳಗ್ಗೆ 9-00 ಗಂಟೆಯಿಂದ ಸಂಜೆ 5-00 ಗಂಟೆ ತನಕ ಬೋಂದೆಲ್ ಕಲಾಗ್ರಾಮದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಾಗಾರವು ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸಿ, ಕಲ್ಪನೆಯನ್ನು ಪೋಷಿಸಿ, ನಟನ ಕೌಶಲ್ಯವನ್ನು ಹೆಚ್ಚಿಸಲು ಮತ್ತು ಕಲೆಯನ್ನು ಪ್ರೀತಿಸುವುದನ್ನು ಉತ್ತೇಜಿಸಲು ವಿನ್ಯಾಸಗೊಳಿಸಲಾಗಿದೆ. ಮಂಗಳೂರಿನ ಎಲ್ಲಾ ಮಕ್ಕಳಿಗೂ ಮುಕ್ತ ಅವಕಾಶವಿದ್ದು, ಹೆಚ್ಚಿನ ಮಾಹಿತಿಗಾಗಿ 8431631998 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

ಮಕ್ಕಳ ಸೃಜನಶೀಲತೆ ಮತ್ತು ರಂಗಭೂಮಿ ಪ್ರತಿಭೆಯನ್ನು ಉತ್ತೇಜಿಸುವ ಉದ್ದೇಶದಿಂದ ನಡೆಸಲ್ಪಡುವ ‘ಅರಳು’ ಮಕ್ಕಳ ರಂಗಶಿಬಿರವು ಕಳೆದ 3 ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದ್ದು, ಅನೇಕ ಮಕ್ಕಳಿಗೆ ರಂಗಭೂಮಿ ವೇದಿಕೆಯ ಅನುಭವವನ್ನು ನೀಡುತ್ತಿದೆ. ಅರಳು 2023ರಲ್ಲಿ 60ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದು, ನವೀನ್ ಸಾಣೇಹಳ್ಳಿ ನಿರ್ದೇಶನದ ‘ಮೃಗ ಮತ್ತು ಸುಂದರಿ’, ಬಿಂದು ರಕ್ಸಿದಿ ನಿರ್ದೇಶನದ ‘ರಾಜನ ಸವಾಲ್ ಮಕ್ಕಳ ಕಮಾಲ್’ ಹಾಗೂ ಭುವನ್ ಮಣಿಪಾಲ್ ನಿರ್ದೇಶನದ ‘ಮೋಗ್ಲಿ’ ಎಂಬ ಮೂರು ನಾಟಕಗಳು, ಅರಳು 2024ರಲ್ಲಿ 40ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದು, ರಾಜು ಮಣಿಪಾಲ್ ನಿರ್ದೇಶನದ ‘ಹಕ್ಕಿಹಾಡು’ ಹಾಗೂ ರಮೇಶ್ ಬೆಣಕಲ್ ನಿರ್ದೇಶನದ ‘ಕಪಟ ಸಂನ್ಯಾಸಿ ಮರ್ಜಾಲ ಮತ್ತು ಮೂಷಕಕುಲ’ ಎಂಬ ಎರಡು ನಾಟಕಗಳು ಹಾಗೂ ಅರಳು 2025ರಲ್ಲಿ 40ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದು, ಚೇತನ್ ಗಣೇಶಪುರ ನಿರ್ದೇಶನದ ‘ಗಾಳಿಮಾತು’ ಹಾಗೂ ಭುವನ್ ಮಣಿಪಾಲ್ ನಿರ್ದೇಶನದ ‘ಅಲ್ಲಾದಿನ್ ಮಾಯದೀಪ’ ಎಂಬ ಎರಡು ನಾಟಕಗಳನ್ನೂ ಪ್ರದರ್ಶಿಸಲಾಯಿತು.
ಹೀಗೆ ಅರಳು ಕಾರ್ಯಗಾರದಲ್ಲಿ ಪ್ರಾರಂಭವಾದ ಮಕ್ಕಳ ಈ ರಂಗಭೂಮಿ ಪಯಣವು ಮುಂದೆ ರಾಜ್ಯದಾದ್ಯಂತ ಹಾಗೂ ರಂಗಾಯಣ ಮೈಸೂರು ಆಯೋಜನೆಯ ರಾಷ್ಟ್ರೀಯ ನಾಟಕೋತ್ಸವವಾದ ಬಹುರೂಪಿ ನಾಟಕೋತ್ಸವದ ವೇದಿಕೆಯವರೆಗೂ ಬೆಳೆದ ಸಾರ್ಥಕ ಪ್ರಯಾಣವಾಗಿದೆ. ಮೂರು ವರ್ಷಗಳ ಅರಳು ಶಿಬಿರವು ಯಶಸ್ವಿಯಾಗಿ ಮೂಡಿಬಂದಿದ್ದು 7 ನಾಟಕಗಳು ರಚನೆಗೊಂಡಿವೆ. ಮಕ್ಕಳಲ್ಲಿ ರಂಗಭೂಮಿಯ ಮೇಲಿನ ಆಸಕ್ತಿ ಮತ್ತು ಪ್ರತಿಭೆಯನ್ನು ಉತ್ತೇಜಿಸಿದೆ. ಈ ವರ್ಷವೂ ಅರಳು ರಂಗಭೂಮಿ ಕಾರ್ಯಗಾರವನ್ನು ಆಯೋಜಿಸಲು ಯೋಜಿಸಲಾಗಿದೆ.
