Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ವಿರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಟ್ರಸ್ಟ್ ವತಿಯಿಂದ ‘ಭಾರತ ಭೂಷಣ’ ಹಾಗೂ ‘ಕರುನಾಡ ಭೂಷಣ’ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ನೃತ್ಯೋತ್ಸವ ಕಾರ್ಯಕ್ರಮ ದಿನಾಂಕ 07 ಡಿಸೆಂಬರ್ 2024ರಂದು ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಕೆ. ಪಿ. ಸಿ. ಸಿ. ಸಂಯೋಜಕ ಮಂಜುನಾಥ ಶೆಟ್ಟಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶಶಿಧರ್ ಕೋಟೆ, ಡಾ. ಕೆಂಚನೂರು ಶಂಕರ್, ಡಾ. ಶ್ರೀಧರ್ ಹಾಗೂ ಕಾಂತಿ ಶೆಟ್ಟಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತೋತಾಪುರಿ ಮಠದ ಸೋಮಶೇಖರ ಗುರೂಜಿ ಮಾತನಾಡಿ ಕಲೆಯನ್ನು ಪ್ರೋತ್ಸಾಹಿಸಬೇಕು ಎಂಬಂತೆ ಹಿತನುಡಿಗಳನ್ನಾಡಿದರು. ಮಲ್ಲಿಕಾ ಕೇಶವ್, ವೆಂಕಟರಾಜು ಹಾಗೂ ವಿರಾಜಪೇಟೆಯ ‘ನಾಟ್ಯ ಮಯೂರಿ’ ನೃತ್ಯ ಟ್ರಸ್ಟ್ ಇದರ ಪ್ರೇಮಾಂಜಲಿ ಉಪಸ್ಥಿತರಿದ್ದು, ಅನೇಕ ಕಡೆಗಳಿಂದ ನೃತ್ಯ ತಂಡಗಳು ಆಗಮಿಸಿ ಉತ್ತಮ ನೃತ್ಯ ಪ್ರದರ್ಶನ ನೀಡಿದರು. ಕಾರ್ಯಕ್ರಮದಲ್ಲಿ 80 ಮಂದಿ ಸಾಧಕರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಶಿರ್ವ : ಶಿರ್ವದಲ್ಲಿ ಮೂರು ದಿನಗಳ ಕಾಲ ನಡೆದ ಕಿಶೋರ ಯಕ್ಷಗಾನ ಸಂಭ್ರಮದ ಸಮಾರೋಪ ಸಮಾರಂಭವು ದಿನಾಂಕ 17 ಡಿಸೆಂಬರ್ 2024ರಂದು ಶಿರ್ವದ ಮಹಿಳಾ ಸೌಧದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶೀರ್ವ ವಿದ್ಯಾವರ್ಧಕ ಸಂಘದ ಆಡಳಿತ ಅಧಿಕಾರಿಯಾದ ಭಾಸ್ಕರ ಶೆಟ್ಟಿ ಇವರು ಭಾಗವಹಿಸಿದ ಶಾಲೆಯ ಮುಖ್ಯ ಶಿಕ್ಷಕರಿಗೆ ಪ್ರಮಾಣ ಪತ್ರ ಮತ್ತು ಗುಂಪಿನ ಭಾವಚಿತ್ರ ವಿತರಿಸಿದರು. ಅಭ್ಯಾಗತರಾಗಿ ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎ. ಗಂಗಾಧರ್ ರಾವ್, ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾದ ಕುತ್ಯಾರ್ ಪ್ರಸಾದ್ ಶೆಟ್ಟಿ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ವಿಠಲ ಬಿ. ಅಂಚನ್ ಭಾಗವಹಿಸಿದರು. ಪ್ರದರ್ಶನ ಸಂಘಟನಾ ಸಮಿತಿಯ ಅಧ್ಯಕ್ಷರಾದ ಶ್ರೀಪತಿ ಕಾಮತ್ ಸ್ವಾಗತಿಸಿ, ಟ್ರಸ್ಟಿನ ಕಾರ್ಯದರ್ಶಿ ಮುರಳಿ ಕಡೆಕಾರ್ ಪ್ರಸ್ತಾವಿಕ ಮಾತುಗಳನ್ನಾಡಿ, ಪ್ರದರ್ಶನ ಸಂಘಟನಾ ಸಮಿತಿಯ ಸದಸ್ಯರಾದ ಅನಂತ ಮುಡಿತ್ತಾಯರು ಕಾರ್ಯಕ್ರಮ ನಿರೂಪಿಸಿ, ನಾರಾಯಣ ಎಂ. ಹೆಗಡೆ ಧನ್ಯವಾದ ಸಲ್ಲಿಸಿದರು.
ಮಂಗಳೂರು: ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ 2024 – 25 ನೇ ಸಾಲಿನ ನೂತನ ಯಕ್ಷೋತ್ಸವ ಸಮಿತಿಯ ಉದ್ಘಾಟನಾ ಸಮಾರಂಭವು ದಿನಾಂಕ 14 ಡಿಸೆಂಬರ್ 2024 ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಜಾನಪದ – ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯರಾದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ “ಶಾಲಾ ಕಾಲೇಜುಗಳಲ್ಲಿ ಯಕ್ಷಗಾನೀಯ ಚಟುವಟಿಕೆಗಳಿಗೆ ಪ್ರೋತ್ಸಾಹ ಲಭಿಸುತ್ತಿರುವುದು ಇತ್ತೀಚಿನ ಒಂದು ಉತ್ತಮ ಬೆಳವಣಿಗೆ. ಮೂರೂವರೆ ದಶಕಗಳ ಹಿಂದೆ ಎಸ್. ಡಿ. ಎಂ. ಲಾ ಕಾಲೇಜಿನಲ್ಲಿ ಪ್ರಾರಂಭವಾದ ಅಂತರ್ ಕಾಲೇಜು ಯಕ್ಷಗಾನ ಸ್ಪರ್ಧೆ ‘ಯಕ್ಷೋತ್ಸವ’ದಿಂದಾಗಿ ವಿದ್ಯಾರ್ಥಿಗಳಲ್ಲಿ ಯಕ್ಷಗಾನದ ಬಗ್ಗೆ ವಿಶೇಷ ಜಾಗೃತಿ ಉಂಟಾಗಿದೆ. ಪ್ರಸ್ತುತ ಅಲ್ಲಲ್ಲಿ ನಡೆಯುವ ಯಕ್ಷಗಾನ ಪ್ರದರ್ಶನ ಮತ್ತು ಸ್ಪರ್ಧಾ ಕಾರ್ಯಕ್ರಮಗಳನ್ನು ‘ಯಕ್ಷೋತ್ಸವ’ ಎಂದು ಕರೆಯುವುದು ವಾಡಿಕೆಯಾಗಿದೆ. ಧರ್ಮಸ್ಥಳ ಸಂಸ್ಥೆಯ ‘ಯಕ್ಷೋತ್ಸವ’ವೇ ಅದಕ್ಕೆ ಮೂಲ ಪ್ರೇರಣೆ. ವಿವಿಧ ವೃತ್ತಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಯಕ್ಷಗಾನದ ಹವ್ಯಾಸಿ ಕಲಾವಿದರಲ್ಲಿ ಹೆಚ್ಚಿನವರು ಬೇರೆ ಬೇರೆ ಕಾಲೇಜು ತಂಡಗಳ ಮೂಲಕ…
ಮಡಿಕೇರಿ : ಕೊಡವ ಮಕ್ಕಳ ಕೂಟ (ರಿ.) ಮಡಿಕೇರಿ ಆಶ್ರಯದಲ್ಲಿ ‘ಕೊಡಗಿನ ಕ್ರೀಡಾಪಟುಗಳ ಜೀವನ ಚರಿತ್ರೆ’ ಪುಸ್ತಕದ ಲೋಕಾರ್ಪಣಾ ಸಮಾರಂಭವು ದಿನಾಂಕ 22 ಡಿಸೆಂಬರ್ 2024ನೇ ಭಾನುವಾರ ಬೆಳಿಗ್ಗೆ ಘಂಟೆ 10.30ಕ್ಕೆ ಮಡಿಕೇರಿಯ ಪತ್ರಿಕಾ ಭವನ ಸಭಾಂಗಣದಲ್ಲಿ ನಡೆಯಲಿದೆ. ಕೊಡವ ಮಕ್ಕಡ ಕೂಟ ಮಡಿಕೇರಿ ಇದರ ಅಧ್ಯಕ್ಷರಾದ ಶ್ರೀ ಬೊಳ್ಳಜಿರ ಬಿ. ಅಯ್ಯಪ್ಪ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವವಾನ್ವಿತ ನ್ಯಾಯಾಧೀಶರಾದ ಶ್ರೀ ಚೆಪ್ಪುಡೀರ ಎಂ. ಪೂಣಚ್ಚ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ಮಾಜಿ ಮಂತ್ರಿಗಳಾದ ಶ್ರೀ ಮೇರಿಯಂಡ ಸಿ. ನಾಣಯ್ಯ, ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ಜಿ. ರಾಜೇಂದ್ರ, 1975 ಹಾಕಿ ವರ್ಲ್ಡ್ ಕಪ್ ವಿನ್ನರ್ ತಂಡದ ಸದಸ್ಯರಾದ ಶ್ರೀ ಪೈಕೇರ ಇ. ಕಾಳಯ್ಯ, ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಪಾಂಡಂಡ ಕೆ. ಬೋಪಣ್ಣ ಹಾಗೂ ‘ಕೊಡಗಿನ ಕ್ರೀಡಾಪಟುಗಳ ಜೀವನ ಚರಿತ್ರೆ’ ಕೃತಿಯ ಲೇಖಕರಾದ ಶ್ರೀ ಚೆಪ್ಪುಡೀರ ಎ.…
ಸಿದ್ದಾಪುರ: ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ‘ವಚನ ಗಾಯನ’ ಕಾರ್ಯಕ್ರಮವು ದಿನಾಂಕ 19 ಡಿಸೆಂಬರ್ 2024ರಂದು ನೆಲ್ಲಿಹುದಿಕೇರಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಸಾಹಿತಿ ಕಣಿವೆ ಭಾರಧ್ವಜ್ ಆನಂದತೀರ್ಥ ಮಾತನಾಡಿ “ಭೂಮಿಯ ಮೇಲಿನ ಸಕಲ ಜೀವಿಗಳಿಗೂ ಬದುಕುವ ಸಮಾನ ಹಕ್ಕನ್ನು ಪ್ರತಿಪಾದಿಸಿದ ಶರಣರು ದಯೆಯನ್ನು ಧರ್ಮದ ಮೂಲವಾಗಿಸಿದರು. ಜೊತೆಗೆ ಎಲ್ಲಾ ಧರ್ಮಗಳ ಸಾರವೂ ಇದೇ ಆಗಿದೆ ಎಂದು ಹೇಳಿದರು. ಪ್ರಾಣಿ ಪಕ್ಷಿಗಳೊಂದಿಗಿನ ಜೀವರಾಶಿಗಳು ಹಾಗೂ ಮನುಷ್ಯನ ಜೀವ ಒಂದೇ. ಯಾವ ಕಾರಣಕ್ಕೂ ಅನಗತ್ಯವಾಗಿ ಹರಣವಾಗಬಾರದು ಎಂಬ ಸದುದ್ದೇಶದಿಂದ ಬಸವಾದಿ ಶರಣರು, ಕಲಬೇಡ ಕೊಲಬೇಡ ಎಂಬ ವಚನದ ಮೂಲಕ ಮನುಷ್ಯನ ಸುಂದರ ಬದುಕಿಗೆ ಅಗತ್ಯವಿರುವ ದೀವಿಗೆ ಹಚ್ಚಿದ್ದಾರೆ. ಹಾಗೆಯೇ ಇಸ್ಲಾಂ, ಕ್ರೈಸ್ತ, ಬೌದ್ಧ ಮೊದಲಾದ ಎಲ್ಲಾ ಧರ್ಮಗಳು ಕೂಡ ಅದೇ ಸಂದೇಶ ಸಾರಿವೆ. ಆದರೆ ನಾವು ಅವುಗಳನ್ನು ಅರಿಯುವಲ್ಲಿ ಹಾಗೂ ಪಾಲನೆ ಮಾಡುವಲ್ಲಿ ಎಡವಿದ್ದೇವೆ. ಹಾಗಾಗಿ ಸಂಕೋಲೆಗಳಲ್ಲಿ ಸಿಲುಕಿದ್ದೇವೆ.” ಎಂದು ವಿಷಾದಿಸಿದರು. ‘ಸಾಂಸ್ಕೃತಿಕ ನಾಯಕ…
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕರಾವಳಿ ಲೇಖಕಿಯರ – ವಾಚಕಿಯರ ಸಂಘ (ರಿ), ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ (ರಿ) ಹಾಗೂ ಆಕೃತಿ ಆಶಯ ಪಬ್ಲಿಕೇಷನ್ಸ್ ಮಂಗಳೂರು, ಇವರ ಸಹಯೋಗದೊಂದಿಗೆ ಸುಖಲಾಕ್ಷಿ ವೈ. ಸುವರ್ಣ ಇವರ ಮುಂಬಯಿ ಮಹಿಳೆಯರ ಬದುಕಿನ ಕುರಿತಾದ ಕ್ಷೇತ್ರ ಕಾರ್ಯದ ಸಂಕಲನ ‘ಮುಂಬಯಿ ಮತ್ತು ಮಹಿಳೆ’ ಪುಸ್ತಕದ ಲೋಕಾರ್ಪಣಾ ಸಮಾರಂಭವು ದಿನಾಂಕ 24 ಡಿಸೆಂಬರ್ 2024ರ ಮಂಗಳವಾರ ಸಂಜೆ ಘಂಟೆ 4.00ಕ್ಕೆ ಮಂಗಳೂರಿನ ಎಮ್. ಜಿ. ರಸ್ತೆಯಲ್ಲಿರುವ ಎಸ್. ಡಿ. ಎಮ್. ಲಾ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷರಾದ ಡಾ. ಎಂ. ಪಿ. ಶ್ರೀನಾಥ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷರಾದ ಶ್ರೀಮತಿ ಶಕುಂತಲಾ ಟಿ. ಶೆಟ್ಟಿ ದೀಪ ಪ್ರಜ್ವಲನೆಗೈದು ಉದ್ಘಾಟಿಸಲಿರುವರು. ಸಂಶೋಧಕರು ಮತ್ತು ಮುಂಬಯಿ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ವಸಂತ…
ಮಂಗಳೂರು : ಮಹಿಳಾ ತಾಳಮದ್ದಳೆ ಬಳಗ ‘ಯಕ್ಷ ಮಂಜುಳಾ ಕದ್ರಿ’ ಇದರ ವತಿಯಿಂದ ಇತ್ತೀಚೆಗೆ ಅಗಲಿದ ತೆಂಕುತಿಟ್ಟಿನ ಮಹಿಳಾ ಭಾಗವತರಾದ ಲೀಲಾವತಿ ಬೈಪಡಿತ್ತಾಯ ಇವರಿಗೆ ನುಡಿ ನಮನ ಕಾರ್ಯಕ್ರಮ ದಿನಾಂಕ 15 ಡಿಸೆಂಬರ್ 2024 ರಂದು ‘ಯಕ್ಷ ಮಂಜುಳಾ ಕದ್ರಿ’ ಇದರ ಅಧ್ಯಕ್ಷೆಯಾದ ಪೂರ್ಣಿಮಾ ಪ್ರಭಾಕರ ರಾವ್ ಪೇಜಾವರ ಇವರ ನಿವಾಸದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿದ ಹಿರಿಯ ವಿದ್ವಾಂಸ ಡಾ. ಪ್ರಭಾಕರ ಜೋಶಿ ಮಾತನಾಡಿ “ಯಕ್ಷಗಾನಕ್ಕೆ ಒಬ್ಬರೇ ಲೀಲಕ್ಕ…. ಪತಿ ಕಲಾಗುರು ಹರಿನಾರಾಯಣ ಬೈಪಡಿತ್ತಾಯರ ಪ್ರೋತ್ಸಾಹ- ಮಾರ್ಗದರ್ಶನದಲ್ಲಿ ಅರಳಿ, ಉತ್ತಮ ಕಲಾವಿದೆಯಾದ ಇವರು ಯಕ್ಷಗಾನ ಮೇಳದಲ್ಲಿ ವೃತ್ತಿಪರ ಭಾಗವತರಾಗಿ ದಾಖಲೆ ನಿರ್ಮಿಸಿದವರು. ಈ ಪತಿ – ಪತ್ನಿ ಜೋಡಿ ಅಪೂರ್ವ” ಎಂದರು. ‘ಯಕ್ಷ ಮಂಜುಳಾ ಕದ್ರಿ’ ಇದರ ಅಧ್ಯಕ್ಷೆಯಾದ ಪೂರ್ಣಿಮಾ ಪ್ರಭಾಕರ ರಾವ್ ಪೇಜಾವರ ಮಾತನಾಡಿ “ಯಕ್ಷಗಾನ ಕ್ಷೇತ್ರದ ಗಾನಸರಸ್ವತಿಯಾಗಿ ತನ್ನ ಕಂಠ ಸಿರಿಯಿಂದ ಹೊಸ ಶಕೆಯನ್ನು ಆರಂಭಿಸಿದ ಸಾಧಕ ಶ್ರೇಷ್ಠ ಮಹಿಳಾ ಮಣಿ ಲೀಲಾವತಿ ಬೈಪಡಿತ್ತಾಯ. ಯಕ್ಷ ಮಂಜುಳಾ…
ಪುತ್ತೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಕೊಡಮಾಡುವ 2023-24 ಮತ್ತು 2024-25ನೇ ಸಾಲಿನ ಶಿಷ್ಯ ವೇತನಕ್ಕೆ ನೃತ್ಯದ ಭರತನಾಟ್ಯ ವಿಭಾಗದಲ್ಲಿ ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿಯ ಮೂರು ಮಂದಿ ವಿದ್ಯಾರ್ಥಿಗಳಾದ ತನುವಿ, ಸಿಂಚನಾ ಭಟ್ ಹಾಗೂ ತೇಜಸ್ವಿರಾಜ್ ಆಯ್ಕೆಯಾಗಿದ್ದಾರೆ.ಇವರುಗಳು ನೃತ್ಯ ಗುರು, ವಿದುಷಿ ಶಾಲಿನಿ ಆತ್ಮಭೂಷಣ್ ಇವರಲ್ಲಿ ನೃತ್ಯಾಭ್ಯಾಸ ನಡೆಸುತ್ತಿದ್ದಾರೆ. ತನುವಿ ಇವರು ಉಪ್ಪಿನಂಗಡಿ ನಿವಾಸಿಯಾಗಿದ್ದು, ಶ್ರೀಮತಿ ಮತ್ತು ಶ್ರೀ ಯೋಗಾನಂದ ಮತ್ತು ಸುನೀತಾ ದಂಪತಿಯ ಪುತ್ರಿಯಾಗಿದ್ದಾರೆ. ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪ್ರಥಮ ವರ್ಷ ಬಿ. ಸಿ. ಎ. ವ್ಯಾಸಂಗ ಮಾಡುತ್ತಿದ್ದು, ಕಳೆದ 15 ವರ್ಷಗಳಿಂದ ಈ ಕೇಂದ್ರದಲ್ಲಿ ನೃತ್ಯ ಕಲಿಯುತ್ತಿದ್ದಾರೆ. ಭಾರತನಾಟ್ಯದಲ್ಲಿ ಸೀನಿಯರ್ ಆಗಿ ಈಗ ವಿದ್ವತ್ ಪೂರ್ವ ಪರೀಕ್ಷೆ ಬರೆದಿದ್ದಾರೆ. ಸಿಂಚನಾ ಎಸ್. ಭಟ್ ಮಾಣಿಯ ನೇರಳಕಟ್ಟೆ ನಿವಾಸಿಯಾಗಿದ್ದು, ಶ್ರೀಮತಿ ಮತ್ತು ಶ್ರೀ ಶಂಕರನಾರಾಯಣ ಭಟ್ ಮತ್ತು ಪಾವನಾ ಎಸ್. ಭಟ್ ದಂಪತಿಯ ಪುತ್ರಿಯಾಗಿದ್ದಾರೆ. ಮಂಗಳೂರಿನ ವಳಚ್ಚಿಲ್ ಇಲ್ಲಿನ ಶ್ರೀನಿವಾಸ ಫಾರ್ಮಸಿ ವಿದ್ಯಾಲಯದಲ್ಲಿ ಪ್ರಥಮ ಸ್ನಾತಕೋತ್ತರ ಫಾರ್ಮಾ ಕಲಿಯುತ್ತಿದ್ದಾರೆ.…
ಹಿರಿಯಡಕ : ಯಕ್ಷ ಶಿಕ್ಷಣ ಟ್ರಸ್ಟ್ (ರಿ.) ಉಡುಪಿ ಆಯೋಜಿಸುತ್ತಿರುವ ‘ಕಿಶೋರ ಯಕ್ಷಗಾನ ಸಂಭ್ರಮ 2024’ ಪ್ರಯುಕ್ತ ಕಾಪು ವಿಧಾನ ಸಭಾ ವ್ಯಾಪ್ತಿಯ ಮೂರು ಶಾಲೆಗಳ ಪ್ರದರ್ಶನದ ಸಮಾರೋಪ ಸಮಾರಂಭವು ದಿನಾಂಕ 19 ಡಿಸೆಂಬರ್ 2024ರಂದು ಹಿರಿಯಡಕದ ಶ್ರೀ ವೀರಭದ್ರ ದೇವಳದ ವಠಾರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ಬಾಗಲಕೋಟೆಯ ಹರೀಶ್ ಮತ್ತು ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕದ ವಿದ್ಯಾರ್ಥಿ ಶ್ರೀವತ್ಸ ತಮ್ಮ ಅನುಭವ ಹಂಚಿಕೊಂಡರು. ಶಾಲಾ ಮುಖ್ಯೋಪಾಧ್ಯಾಯರಿಗೆ ಪ್ರಮಾಣಪತ್ರ, ಗುಂಪು ಛಾಯಾಚಿತ್ರ ವಿತರಿಸಲಾಯಿತು. ಅಭ್ಯಾಗತರಾಗಿ ಭಾಗವಹಿಸಿದ್ದ ದೇವಳದ ಅರ್ಚಕ ರಂಗನಾಥ ಭಟ್, ಪ್ರಾಂಶುಪಾಲ ಮಂಜುನಾಥ ಭಟ್, ನಿವೃತ್ತ ಅಧ್ಯಾಪಕ ಅನಂತ ಪದ್ಮನಾಭ ಭಟ್, ಉದ್ಯಮಿ ಶ್ರೀನಿವಾಸ ರಾವ್ ಯಕ್ಷಗಾನದ ಮಹತ್ವ ತಿಳಿಸಿ ಯಕ್ಷಶಿಕ್ಷಣ ಟ್ರಸ್ಟ್ ಮತ್ತು ಕಲಾರಂಗದ ಅಗಾಧ ಕಾರ್ಯವಿಸ್ತಾರವನ್ನು ಶ್ಲಾಘಿಸಿದರು. ಉದ್ಯಮಿ ವಿಶ್ವನಾಥ ಸೇರೀಗಾರ್, ಎಸ್.ಡಿ.ಎಂ.ಸಿ. ಸದಸ್ಯ ಸುಬ್ರಮಣ್ಯ ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಡಾ. ರಾಜೇಶ ನಾವಡ ಸ್ವಾಗತಿಸಿ, ನಾಗರಾಜ…
ಮಂಗಳೂರು : ಸಂಗೀತ್ ಭಾರತಿ ಫೌಂಡೇಷನ್ (ರಿ.) ಪ್ರಸ್ತುತ ಪಡಿಸುವ ‘ಯುವ ಮಹೋತ್ಸವ್ 2025’ ಕಾರ್ಯಕ್ರಮದಲ್ಲಿ ರಾಷ್ಟ್ರ ಮಟ್ಟದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಸ್ಪರ್ಧೆಯು ದಿನಾಂಕ 08 ಫೆಬ್ರುವರಿ 2025 ಮತ್ತು 09 ಫೆಬ್ರುವರಿ 2025ರಂದು ಮಂಗಳೂರಿನಲ್ಲಿ ನಡೆಯಲಿದೆ. ಈ ಸ್ಪರ್ಧೆಯು ವಾದ್ಯ ಸಂಗೀತ ಮತ್ತು ಗಾಯನ ಎಂಬ ಎರಡು ವಿಭಾಗಗಳಲ್ಲಿ ನಡೆಯಲಿದ್ದು, 18ರಿಂದ 30 ವರ್ಷ ವಯಸ್ಸಿನವರು ಭಾಗವಹಿಸಲಿಬಹುದು. ಆನ್ಲೈನ್ ಸ್ಕ್ರೀನಿಂಗ್ ರೌಂಡ್ ಗೆ ಅರ್ಜಿ ಸಲ್ಲಿಸಲು ದಿನಾಂಕ 05 ಜನವರಿ 2025 ಕೊನೆಯ ದಿನವಾಗಿದ್ದು, ಅಂತಿಮ ಸ್ಪರ್ಧೆಯು ದಿನಾಂಕ 08 ಫೆಬ್ರುವರಿ 2025 ಮತ್ತು 09 ಫೆಬ್ರುವರಿ 2025ರಂದು ನಡೆಯಲಿದೆ. YUVA2025.SANGEETBHARATI.ORG ನಲ್ಲಿ ಅರ್ಜಿ ಸಲ್ಲಿಸಿದ ಸ್ಪರ್ಧಿಗಳು ರೂ.500/- ಪ್ರವೇಶ ಶುಲ್ಕವನ್ನು ಭರಿಸತಕ್ಕದ್ದು.