ನೃತ್ಯ ಕಲಾವಿದ/ ಕಲಾವಿದೆಯಾಗಿ ಕಲಾಮಾತೆಯ ಸೇವಾ ಕೈಂಕರ್ಯದಲ್ಲಿ ನಿರಂತರವಾಗಿ ಮುಂದುವರೆದು, ನಟರಾಜನ ದಯೆಗೆ ಪಾತ್ರರಾಗಿ, ಕಲಾ ರಸಿಕರ ಮನದಲ್ಲಿ ಸದಾ ನೆಲೆಗೊಂಡು ಅತ್ಯುತ್ತಮ ಸ್ಥಾನ ಗಳಿಸಿಕೊಳ್ಳುವುದು ಒಂದು ದೊಡ್ಡ ಸಾಧನೆ. ಈ ಸಾಧನೆಗೆ ಪರಿಪಕ್ವ ಮನಸ್ಸು ಮತ್ತು ಶಾಂತಚಿತ್ತದಿಂದ ಎಲ್ಲವನ್ನೂ ಒಂದೇ ರೀತಿಯಲ್ಲಿ ಒಪ್ಪಿಕೊಳ್ಳುವ – ಅಪ್ಪಿಕೊಳ್ಳುವ ಗುಣವು ಬೇಕೇ ಬೇಕು. ಧನಾತ್ಮಕ ಮತ್ತು ಮುಖ್ಯವಾಗಿ ಋಣಾತ್ಮಕ ಅಂಶಗಳನ್ನೂ ಪಡೆದುಕೊಂಡು, ಅದನ್ನು ಮನದಲ್ಲಿ ಅಳೆದು ತೂಗಿ, ತಪ್ಪುಗಳಿದ್ದರೆ ತಿದ್ದಿಕೊಂಡು ಮುಂದಿನ ದಿನಗಳಲ್ಲಿ ಹೊಸ ಬದಲಾವಣೆಯನ್ನು ಸೃಷ್ಟಿಸಿ ಎಲ್ಲರಿಂದ ಸೈ ಅನ್ನಿಸಿಕೊಳ್ಳಲು ಬಹಳ ಕಾಲ ಹಿಡಿಯುತ್ತದೆ. ಈ ಮಧ್ಯೆ ಅದೆಷ್ಟೋ ಅಡಚಣೆಗಳು, ಕಠೋರ ಮಾತುಗಳು, ಮೂಕ ರೋದನೆ ಮತ್ತು ಕೆಲವೊಮ್ಮೆ ಪ್ರತಿಭಟನೆ ಹೀಗೆ ಹಲವಾರು ಆಪತ್ತನ್ನು ಎದುರಿಸುತ್ತಾ, ಒಳ್ಳೆಯದನ್ನು ಸ್ವೀಕರಿಸಿ, ಖುಷಿ ಪಟ್ಟುಕೊಳ್ಳುತ್ತಾ ಸಾಗುತ್ತದೆ ಕಲಾ ಬದುಕು. ನಾವು ಮಾಡುವ ಕೆಲಸಗಳು ಎಲ್ಲರನ್ನೂ ತಲುಪುವುದಿಲ್ಲ, ತಲುಪಿದರೂ ಸಹಜವಾದ ಬದಲಾವಣೆಯನ್ನು ಅವರವರ ದೃಷ್ಟಿಕೋನದಲ್ಲಿ ಉಂಟುಮಾಡಿ ನಮ್ಮನ್ನು ಕ್ರಿಯಾತ್ಮವಾಗಿ ಬೆಳೆಸುತ್ತದೆ. ಇಂತಹ ಕ್ರಿಯಾತ್ಮಕ ಕಲಾವಿದ/ಕಲಾವಿದೆಯರು ನಮ್ಮ ನಡುವೆ ಹಲವರಿದ್ದಾರೆ.
ಮುಖ್ಯವಾಗಿ ನನ್ನ ತವರೂರು ಕರಾವಳಿ ಕರ್ನಾಟಕದ ಬಗ್ಗೆ ಅವಲೋಕಿಸುವುದಾದರೆ, ನೃತ್ಯ ಕ್ಷೇತ್ರದಲ್ಲಿ ಮೊದಲಿನಿಂದಲೂ ಹಲವಾರು ವಿಭಿನ್ನ ಸಾಧನೆಯನ್ನು ಮಾಡುತ್ತಾ ಬರುತ್ತಿದೆ. ಮಹಾಗುರುಗಳಾದ ಶಾಂತಲಾ ಪ್ರಶಸ್ತಿ ಪುರಸ್ಕೃತರಾದ ವಿದ್ವಾನ್ ಶ್ರೀ ಉಳ್ಳಾಲ ಮೋಹನ ಕುಮಾರ್ ಇವರು ಭರತನಾಟ್ಯ ಕಲೆಯನ್ನು ಕರಾವಳಿಯಲ್ಲಿ ಸೃಷ್ಟಿಸಿ ನೃತ್ಯವನ್ನು ಹಲವರಿಗೆ ಧಾರೆ ಎರೆದ ಮಹಾನುಭಾವರು. ಅವರ ಗರಡಿಯಲ್ಲಿ ಪಳಗಿ, ನೃತ್ಯ ಕ್ಷೇತ್ರವನ್ನೇ ಉಸಿರಾಗಿಸಿಕೊಂಡಿರುವ ಅನೇಕ ಕಲಾ ಚೈತನ್ಯಗಳು ನೃತ್ಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮೂಲಕ, ಪೀಳಿಗೆಯಿಂದ ಪೀಳಿಗೆಗೆ ಈ ದೈವಿಕ ಕಲೆಯನ್ನು ನಿರಂತರವಾಗಿ ಕೊಂಡೊಯ್ಯುವ ಕಾರ್ಯವನ್ನು ಮಾಡುತ್ತಿದ್ದಾರೆ. ಮಹಾಗುರುಗಳ ಶಿಷ್ಯವರ್ಗದಲ್ಲಿ ಅಗ್ರಪಂಕ್ತಿಯ ಸ್ಥಾನದಲ್ಲಿರುವ ಓರ್ವ ಸಾಧಕ ಗುರುಗಳು ಕರ್ನಾಟಕ ಕಲಾಶ್ರೀ ಗುರು ಗೀತಾ ಸರಳಾಯ. ಇವರ ಹೆಮ್ಮೆಯ ಶಿಷ್ಯೆಯಾಗಿ ಬೆಳೆದವರಲ್ಲಿ ಗುರು ಶ್ರೀವಿದ್ಯಾ ಶಶಿಧರ್ ಅವರೂ ಒಬ್ಬರು.
ನೃತ್ಯ ಸಂಸ್ಥೆಯನ್ನು ಮೈಸೂರಿನಲ್ಲಿ ಸ್ಥಾಪಿಸಿ, ಹತ್ತು ವರ್ಷಗಳಿಗಿಂತಲೂ ಹೆಚ್ಚಿನ ಅವಧಿಯನ್ನು ಪೂರೈಸಿದ ಶ್ರೀ ದುರ್ಗಾ ಅಕಾಡೆಮಿ, ಈ ಸುದೀರ್ಘ ಅವಧಿಯಲ್ಲಿ ಅನೇಕ ವಿದ್ಯಾರ್ಥಿಗಳನ್ನು ನೃತ್ಯ ಕಲಾವಿದ/ಕಲಾವಿದೆಯರನ್ನಾಗಿ ರೂಪಿಸಿದೆ. ಮನೆಯವರ ಸಹಕಾರದ ಜೊತೆಗೆ, ಹೆಚ್ಚಿನ ನೃತ್ಯ ಶಿಕ್ಷಣವನ್ನು ಗುರು ಚೇತನ ರಾಧಾಕೃಷ್ಣ ಮತ್ತು ಪ್ರಸ್ತುತ ಶಿಕ್ಷಣವನ್ನು ಗುರು ಶಿಜಿತ್ ನಂಬಿಯಾರ್, ಪಾರ್ವತಿ ಮೆನನ್ ಅವರಲ್ಲಿ ಪಡೆದುಕೊಳ್ಳುತ್ತಾ ಓರ್ವ ಪ್ರತಿಭಾನ್ವಿತ ಗುರುವಾಗಿ ಮೈಸೂರಿನಲ್ಲಿ ಬೆಳೆಯುತ್ತಿದ್ದಾರೆ ಗುರು ಶ್ರೀವಿದ್ಯಾ.
ದಿನಾಂಕ 16 ಆಗಸ್ಟ್ 2025ರ ಶನಿವಾರದಂದು ಮೈಸೂರಿನ ರಮಗೋವಿಂದ ಸಭಾಂಗಣದಲ್ಲಿ ‘ಅರ್ಪಣಂ’ ಎನ್ನುವ ನೃತ್ಯ ಉತ್ಸವವನ್ನು ಸಂಯೋಜಿಸಿ, ಎರಡು ಗಂಟೆಗಳ ಕಾಲ ನನ್ನ ರಚನೆಯ ಸಂಪೂರ್ಣ ನೃತ್ಯ ಮಾರ್ಗವನ್ನು ತನ್ನ ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಪ್ರಸ್ತುತಪಡಿಸಿದ್ದು ನವೀನ ಶೈಲಿಯ ನೃತ್ಯ ರಚನೆಗಳಿಗೆ ನೀಡಿದ ಗೌರವಕ್ಕೆ ಮಾದರಿಯಾಗಿತ್ತು. ‘ಅರ್ಪಣಂ’ ಸಾಂಪ್ರದಾಯಿಕ ಮಾರ್ಗ ನೃತ್ಯಬಂಧವಾದ ಪುಷ್ಪಾಂಜಲಿಯಿಂದ ಪ್ರಾರಂಭವಾಯಿತು. ರೀತಿಗೌಳ ರಾಗದಲ್ಲಿ, ಆದಿ ತಾಳದಲ್ಲಿ ನಾನು ಸಂಯೋಜಿಸಿದ ರಚನೆಗೆ ಅತ್ಯುತ್ತಮ ಲೆಕ್ಕಾಚಾರಗಳೊಂದಿಗೆ ನರ್ತಿಸಲಾಯಿತು. ಈ ನೃತ್ಯಬಂಧವು ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಿಂದ ಪ್ರದರ್ಶಿತವಾಗಿದ್ದು, ಅಚ್ಚುಕಟ್ಟಾದ ನೃತ್ಯ ಸಂಯೋಜನೆ, ವಿಭಿನ್ನ ಅಡವುಗಳ ಜೋಡಣೆ ಮತ್ತು ನೃತ್ಯ ಪ್ರದರ್ಶಕರ ನಡುವಿನ ಹೊಂದಾಣಿಕೆಯಿಂದ ಕಲಾರಸಿಕರನ್ನು ತಲುಪಿತು.
ಎರಡನೇ ನೃತ್ಯ ಬಂಧವೇ ಅಲರಿಪು. ಸಂಕೀರ್ಣ ಜಾತಿ ರೂಪಕ ತಾಳದಲ್ಲಿ ರಚಿತವಾದ ಅಲರಿಪು. ಇದರ ವಿಶೇಷವೆಂದರೆ ಗುರು ಶ್ರೀವಿದ್ಯಾ ಶಶಿಧರ್ ಅವರ ನಟುವಾಂಗ ಮತ್ತು ಅಲರಿಪುವಿನ ಸೊಲ್ಲುಕಟ್ಟುಗಳ ಉಚ್ಛಾರ. ಮಕ್ಕಳಿಗೆ ಮನಮುಟ್ಟುವ ರೀತಿಯಲ್ಲಿ ಸಾಗಿದ ಸೊಲ್ಲುಗಳ ಉಚ್ಛಾರ, ಆ ಮಕ್ಕಳಿಗೆ ವೇದಿಕೆಯ ಬಗೆಗಿನ ಭಯ ಹೋಗುವ ರೀತಿಯಲ್ಲಿ ಗುರುಗಳು ನಿಭಾಯಿಸಿದ್ದು ಅವರ ವೃತ್ತಿ ಜೀವನದ ಅನುಭವವನ್ನು ಸಾರುವಂತಿತ್ತು ಎಂದರೆ ಅತಿಶಯೋಕ್ತಿಯಲ್ಲ.
ನೃತ್ಯ ಉತ್ಸವ ಎಂದ ಮೇಲೆ ಕಲಿಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಅದೊಂದು ಉತ್ತಮ ವೇದಿಕೆ. ತಮ್ಮ ಪ್ರತಿಭೆಯನ್ನು ಓರೆಗೆ ಹಚ್ಚಿ ಎಲ್ಲರಿಂದಲೂ ಶಹಭಾಸ್ ಗಿರಿ ಗಿಟ್ಟಿಸಿಕೊಳ್ಳಲು ಒಂದೊಳ್ಳೆ ಅವಕಾಶ. ಇದನ್ನು ಪುಟ್ಟ ವಿದ್ಯಾರ್ಥಿ ಕಲಾವಿದೆಯರು ಜಾಣ್ಮೆಯಿಂದ ಬಳಸಿಕೊಂಡರು.
ಪುಟಾಣಿ ಮಕ್ಕಳಿಂದ ನರ್ತಿಸಲ್ಪಟ್ಟ ಕೌತ್ವ, ಸರಸ್ವತಿ ರಾಗ ಮತ್ತು ರೂಪಕ ತಾಳದಲ್ಲಿ ರಚಿತವಾಗಿದ್ದು, ಚೆನ್ನಾಗಿತ್ತು. ಮುಂದೆ ನರ್ತಿಸಿದ ಜತಿಸ್ವರ ರಾಗ ಶಹನಾ, ಖಂಡಚಾಪು ತಾಳದಲ್ಲಿ ಸಂಯೋಜಿತಗೊಂಡಿದ್ದು, ಉತ್ತಮವಾದ ನೃತ್ಯ ಸಂಯೋಜನೆಯಿಂದ ಕೂಡಿತ್ತು. ಮುಂದೆ ಪದವರ್ಣವನ್ನು ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು. ಈ ನೃತ್ಯ ಗೆದ್ದಿದ್ದು ಉತ್ತಮ ನೃತ್ಯ ಸಂಯೋಜನೆ, ವಿದ್ಯಾರ್ಥಿಗಳ ಸಾಮರ್ಥ್ಯದ ಪರಿಪೂರ್ಣ ಅನಾವರಣ ಮತ್ತು ಹಿಮ್ಮೇಳದ ಪರಿಪಕ್ವ ಜೋಡಣೆಯ ಕಾರಣದಿಂದ. ಈ ನೃತ್ಯದಲ್ಲಿ ಗುಂಪಿನ ಅಗಾಧವಾದ ಪರಿಶ್ರಮವು ಎದ್ದು ಕಾಣುತ್ತಿತ್ತು. ದ್ರೌಪದಿಯ ಸ್ವಗತವನ್ನು ಗುಂಪು ಸಂಯೋಜನೆಗೈದಿದ್ದು ಮತ್ತು ವಿದ್ಯಾರ್ಥಿಗಳ ಮನಮುಟ್ಟುವ ಅಭಿನಯ ಎಲ್ಲರ ಮನಮುಟ್ಟಿತು.
ತದನಂತರ ಜಾವಳಿಯ ಪ್ರಸ್ತುತಿ. ವಿರಹೋತ್ಕಂಠಿತ ನಾಯಿಕೆ ಪ್ರಧಾನವಾದ ಜಾವಳಿಯಲ್ಲಿ ಆಕೆಯ ಬೇರೆ ಬೇರೆ ಲಕ್ಷಣಗಳನ್ನು ಐವರು ಪ್ರತಿಭಾವಂತ ಕಲಾವಿದೆಯರು ಪ್ರಸ್ತುತ ಪಡಿಸಿದರು. ಆಳವಾದ ಅಭಿನಯ ಇಲ್ಲಿ ಹೈಲೈಟ್ ಆಗಿತ್ತು. ಇದಾದ ಬಳಿಕ ರಾಗಮಾಲಿಕೆಯ ದೇವರನಾಮ. ಪುಟ್ಟ ವಿದ್ಯಾರ್ಥಿಗಳು ಕೃಷ್ಣನ ವಿವಿಧ ಸಂಚಾರಿಗಳನ್ನು ಅತ್ಯದ್ಭುತವಾಗಿ ತೋರಿಸಿದರು. ನೃತ್ಯ ಸಂಯೋಜನೆ ನಿಜಕ್ಕೂ ವಾವ್.
ಕೊನೆಗೆ ತಿಲ್ಲಾನದ ಪ್ರಸ್ತುತಿ ಪ್ರಾರಂಭವಾಗುತ್ತಿದ್ದಂತೆ ನನ್ನ ಕಂಗಳಲ್ಲಿ ಆನಂದಭಾಷ್ಪ ನನಗೆ ಅರಿವಿಲ್ಲದೆ ಸುರಿಯಿತು. ಸಾರ್ಥಕತೆಯ ಭಾವ. ನೃತ್ಯ ಲೋಕದೊಳಗೆ ಇಂದು ಮಂಜುನಾಥ್ ಎನ್. ಪುತ್ತೂರು ಎಂಬ ಕಲಾವಿದ ಸಕ್ರೀಯನಾಗಿದ್ದಾನೆ ಎಂಬುದಕ್ಕೆ ಇಂತಹ ಕೆಲವೊಂದು ಪ್ರದರ್ಶನಗಳೇ ಸಾಕ್ಷಿ. ಕೊನೆಯ ಮಂಗಳವು ನನ್ನದೇ. ಕಲಾ ಜೀವನದಲ್ಲಿ ಅಲ್ಪ ಸ್ವಲ್ಪ ಸಾಧಿಸಿದ್ದೇನೆ ಎನ್ನುವುದಕ್ಕೆ ಇವುಗಳೇ ನಿದರ್ಶನ.
ಗುರು – ಶಿಷ್ಯಂದಿರ ನಡುವಿನ ಅತಿ ಮಧುರ ಬಾಂಧವ್ಯವನ್ನು, ಶಿಷ್ಯರಿಗಿರುವ ಗುರುಭಕ್ತಿಯನ್ನು ಎತ್ತಿ ತೋರಿಸಿದ ಕಾರ್ಯಕ್ರಮ ‘ಅರ್ಪಣಂ’. ಪುಟ್ಟದಾದ ಸಭಾ ಕಾರ್ಯಕ್ರಮದಲ್ಲಿ ನನ್ನ ಈ ಪುಟ್ಟ ಸಾಧನೆಗಾಗಿ ಸನ್ಮಾನಿಸಲಾಯಿತು. ನೃತ್ಯದ ಆಶಯ ದೇಶದ ಸಂಸ್ಕೃತಿಯನ್ನು ಉಳಿಸುವುದು ಮತ್ತು ಕಲಾವಿದ/ಕಲಾವಿದೆಯರ ಘನತೆಯನ್ನು ಹೆಚ್ಚಿಸುವುದು ಸಾಧ್ಯ ಎಂದು ಸಾಬೀತಾಯಿತು.
ಈ ಕಾರ್ಯಕ್ರಮಕ್ಕೆ ಕಳೆ ನೀಡಿದ್ದ ಇನ್ನೊಂದು ಮುಖ್ಯ ಅಂಶವನ್ನು ಉಲ್ಲೇಖಿಸಲೇಬೇಕು. ಅದುವೇ ಸಮರ್ಥ ಹಿಮ್ಮೇಳ ಕಲಾವಿದರ ಕೈಚಳಕ ‘ಅರ್ಪಣಂ’ ಯಶಸ್ಸಿಗೆ ಸಾಕ್ಷಿಯಾಯಿತು. ಅದ್ಭುತ ಹಾಡುಗಾರಿಕೆಯಲ್ಲಿ ವಿದ್ವಾನ್ ವಿನೀತ್ ಪುರವಂಕರ ಕೇರಳ, ನಟುವಾಂಗದಲ್ಲಿ ಗುರು ಶ್ರೀವಿದ್ಯಾ ಶಶಿಧರ್ ಮೈಸೂರು, ಮೃದಂಗದಲ್ಲಿ ಮೈಸೂರಿನ ಶ್ರೀ ವಿಕ್ರಂ ಭಾರಧ್ವಜ್ ಮತ್ತು ಕೊಳಲಿನಲ್ಲಿ ಶ್ರಿ ಸಮೃದ್ ಮೈಸೂರು ಸಹಕರಿಸಿದರು.
ಕಾರ್ಯಕ್ರಮದ ಗೌರವ ಅತಿಥಿಗಳಾಗಿದ್ದ ಎಲ್ಲರಿಂದಲೂ ಮುಖ್ಯವಾಗಿ ಹಿರಿಯ ನೃತ್ಯ ಗುರುಗಳು, ಕಲಾ ವಿಮರ್ಶಕರಾದ ವಿದ್ವಾನ್ ಶ್ರೀರಾಮಮೂರ್ತಿ ರಾವ್ ಇವರಿಂದ ನನ್ನ ರಚನೆಗಳಿಗೆ ದೊರೆತ ಧನಾತ್ಮಕ ವಿಮರ್ಶೆಗಳು ನಿಜಕ್ಕೂ ಖುಷಿ ನೀಡಿತು. ಒಟ್ಟಿನಲ್ಲಿ ‘ಅರ್ಪಣಂ’ ಕಾರ್ಯಕ್ರಮವು ಶ್ರೀದುರ್ಗಾ ನೃತ್ಯ ಅಕಾಡೆಮಿ ಸಂಸ್ಥೆಯ ನೃತ್ಯ ಪಯಣದ ಶಿಲ್ಪಕಾರನಾಗಿ, ನನ್ನ ಸುಂದರ ನೃತ್ಯ ಕಲಾಕೃತಿಗಳನ್ನು ಪರಿಚಯಿಸಿ, ಅನೇಕರನ್ನು ನೃತ್ಯದತ್ತ ಆಕರ್ಷಿಸಿತು ಮತ್ತು ಕಲಾ ರಸಿಕರ ಕಂಗಳಿಗೆ ದೈವಿಕ ಆನಂದವನ್ನು ನೀಡಿತು.
– ವಿದ್ವಾನ್ ಮಂಜುನಾಥ ಎನ್. ಪುತ್ತೂರು