Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ – ಶತಾಯುಷಿ, ಕನ್ನಡದ ಖ್ಯಾತ ಬರಹಗಾರ ಡಾ. ಎ. ಎನ್. ಮೂರ್ತಿರಾವ್

    June 16, 2025

    ಭರತಾಂಜಲಿಯಿಂದ ಕಣ್ಮನ ತಣಿಸಿದ ರಂಗಪ್ರವೇಶ…ಗುರು ನಮನ..

    June 16, 2025

    ಪುಸ್ತಕ ಬಹುಮಾನಕ್ಕಾಗಿ ಜಾನಪದ ಕೃತಿ ಆಹ್ವಾನ | ಕೊನೆಯ ದಿನಾಂಕ ಜೂನ್ 30

    June 16, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ನಿರಂಜನರ ‘ಚಿರಸ್ಮರಣೆ’
    Article

    ಪುಸ್ತಕ ವಿಮರ್ಶೆ | ನಿರಂಜನರ ‘ಚಿರಸ್ಮರಣೆ’

    June 16, 2025No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಸ್ವಾತಂತ್ರ್ಯಪ್ರಿಯರ ಮನಸ್ಸನ್ನು ಪ್ರಚೋದಿಸುವ ಕಮ್ಯೂನಿಸ್ಟ್ ಪಕ್ಷವು ನಡೆಸಿದ ಲೋಕೋತ್ತರ ಹೋರಾಟಗಳಲ್ಲಿ ಕಯ್ಯೂರು ರೈತ ಹೋರಾಟವೂ ಒಂದು. ಅಲ್ಲಿನ ರೈತಾಪಿ ಸಂಗಾತಿಗಳಾದ ಮಠತ್ತಿಲ್ ಅಪ್ಪು, ಕೋಯಿತ್ತಾಟಿಲ್ ಚಿರುಕಂಡನ್, ಪೊಡೋರ ಕುಂಞಂಬು ನಾಯರ್ ಮತ್ತು ಅಬೂಬಕ್ಕರನ್ನು ಬ್ರಿಟಿಷ್ ಸಾಮ್ರಾಜ್ಯಶಾಹಿ ಆಡಳಿತವು 1943 ಮಾರ್ಚ್ 29ರಂದು ಗಲ್ಲಿಗೇರಿಸಿತು. ಕಯ್ಯೂರು ತೇಜಸ್ವಿನಿ ನದಿಯ ತೀರವು ಈ ಕ್ರಾಂತಿಕಾರಿಗಳ ಸಮರ ಗೀತೆಯನ್ನು ಇಂದಿಗೂ ಹಾಡುತ್ತಿದೆ. ಕಯ್ಯೂರಿನ ಚರಿತ್ರೆಯು ಕಾದಂಬರಿಯಾಗಿ, ಕ್ರಾಂತಿಗೀತೆಯಾಗಿ, ಚಲನಚಿತ್ರವಾಗಿ ಜನರ ನಡುವೆ ಹರಿದಾಡುತ್ತಿದೆ.

    ಭಾರತ ದೇಶದ ಸ್ವಾತಂತ್ರ್ಯ ಹೋರಾಟದ ಪುಟಗಳಲ್ಲಿ ಕಯ್ಯೂರು ಹೋರಾಟಕ್ಕೆ ದೊರಕಬೇಕಾದ ಸ್ಥಾನ ದೊಡ್ಡದು. ಸ್ವಾತಂತ್ರ್ಯಕ್ಕಾಗಿ ನಡೆಸಿದ ಕಯ್ಯೂರು ಸಮರವೇ ಈ ಕಾದಂಬರಿಯ ವಸ್ತು. ಈ ಹೋರಾಟಕ್ಕೆ ಸಮೀಪದ ನಿರೀಕ್ಷಕರಾಗಿದ್ದ ಕನ್ನಡ ಪ್ರಗತಿಶೀಲ ಲೇಖಕ ನಿರಂಜನರು ಬ್ರಿಟಿಷ್ ಏಕಾಧಿಪತ್ಯದ ಕರಾಳ ವ್ಯವಸ್ಥೆಯ ವಿರುದ್ಧ ದಂಗೆಯೆದ್ದ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ನಾಲ್ವರು ಹೋರಾಟಗಾರರ ವೀರಗಾಥೆಯನ್ನು ಸರಳ ಭಾಷೆಯಲ್ಲಿ, ಓದುಗರ ಕುತೂಹಲವನ್ನು ಕೆರಳಿಸುವಂತೆ, ದೇಶಪ್ರೇಮ ಹಾಗೂ ಕ್ರಾಂತಿಯನ್ನು ಬಡಿದೆಬ್ಬಿಸುವಂತೆ ವಿವರಿಸಿದ್ದಾರೆ.

    ಈ ಕಾದಂಬರಿಯ ಮುಖ್ಯ ಪಾತ್ರಧಾರಿಗಳು ಅಪ್ಪು, ಚಿರುಕಂಡ, ಕುಂಞಂಬು ಮತ್ತು ಅಬೂಬಕ್ಕರ್ ಎಂಬ ಕ್ರಾಂತಿಕಾರಿಗಳು ಮತ್ತು ಆ ಕಾಲದ ಜಮೀನ್ದಾರಿ ವ್ಯವಸ್ಥೆ ಮತ್ತು ಬ್ರಿಟಿಷ್ ಸಾಮ್ರಾಜ್ಯಶಾಹಿತ್ವದ ವಿರುದ್ಧ ಬಂಡಾಯವೆದ್ದ ಕಮ್ಯೂನಿಸ್ಟರು. ಅವರ ಮಾರ್ಗದರ್ಶಿಗಳಾದ ಮಾಸ್ಟರರ ಬೋಧನೆಯ ಮೂಲಕ ಈ ನಾಲ್ವರು ಯುವಕರು ಸಮಾಜದಲ್ಲಿ ನಡೆಯುತ್ತಿರುವ ಅನಿಷ್ಟಗಳನ್ನು, ಕೃಷಿಕರು ಅನುಭವಿಸುವ ಕಷ್ಟಗಳನ್ನು, ಭಾರತೀಯರನ್ನು ಗುಲಾಮರನ್ನಾಗಿಸಿದ ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ದನಿಯೆತ್ತುತ್ತಾರೆ. ಜಮೀನ್ದಾರರ ಹಾಗೂ ಪರಕೀಯರ ಗುಲಾಮರಾಗಿರುವುದರಿಂದ ಸಂಕಷ್ಟದಲ್ಲಿರುವ ನಾವು ಗುಲಾಮಗಿರಿಯ ಸಂಕಲೆಯನ್ನು ಮುರಿಯಬೇಕು ಎಂದು ಮಾಸ್ತರರ ಬೋಧನೆಯ ಮೂಲಕ ಅವರಿಗೆ ಮನದಟ್ಟಾಗುತ್ತದೆ. ನಂಬಿಯಾರ್ ಹಾಗೂ ಆಂಗ್ಲ ಪೊಲೀಸರ ಪಾತ್ರಗಳ ಮೂಲಕ ಪರಕೀಯ ಆಡಳಿತದ ಕರಾಳ ಮುಖವನ್ನು ವರ್ಣಿಸುವ ನಿರಂಜನರು ಕ್ರಾಂತಿಕಾರಿ ಭಾಷೆಯ ಮೂಲಕ ಈ ಕಾದಂಬರಿಯನ್ನು ಮುನ್ನಡೆಸುತ್ತಾರೆ.

    ಪರತಂತ್ರ ಭಾರತದ ಕರಿನಾಡು ಕೇರಳ. ಆ ಭೂಮಿಯ ಕಿರು ಗ್ರಾಮ ಕಯ್ಯೂರು. ನಂಬಿಯಾರರ ಅಡಿಯಾಳಾಗಿದ್ದ ರೈತ ಬಾಂಧವರನ್ನು ಪರಾಧೀನತೆಯ ಸಂಕಲೆಗಳಿಂದ ಮುಕ್ತಗೊಳಿಸಲು ಪಣತೊಟ್ಟ ಅಪ್ಪು, ಚಿರುಕಂಡ, ಕುಂಞಂಬು ಹಾಗೂ ಅಬೂಬಕ್ಕರ್. ಕಮ್ಯೂನಿಷ್ಟರ ರೈತ ಸಂಘಟನೆ ಸ್ಥಾಪಿತಗೊಂಡು ಚಳುವಳಿಗಳು ಆರಂಭಗೊಂಡಂತೆ, ನಂಬಿಯಾರರು ಮಾತ್ರವಲ್ಲದೆ, ಸತ್ಯದ ಹಾದಿಯಲ್ಲಿ ಚಲಿಸುವ ಕಮ್ಯೂನಿಸ್ಟ್ ಪಕ್ಷವನ್ನು ಇಲ್ಲವಾಗಿಸಲು ಯತ್ನಿಸುತ್ತಿದ್ದ ಬ್ರಿಟಿಷ್ ಸರಕಾರವು ಚಳುವಳಿಯನ್ನು ಹತ್ತಿಕ್ಕಲು ಹೊಸದುರ್ಗದ ಠಾಣೆಯಿಂದ ಸುಬ್ಬಯ್ಯನೆಂಬ ಪೊಲೀಸನ್ನು ಏರ್ಪಾಡು ಮಾಡುತ್ತಾರೆ. ಆದರೆ ಈ ಕ್ರಾಂತಿಕಾರಿಗಳು ಅವನನ್ನು ಲೆಕ್ಕಿಸುವುದಿಲ್ಲ. ಇದರಿಂದಾಗಿ ಸುಬ್ಬಯ್ಯನಿಗೆ ಅಹಂಕಾರ, ಕೋಪ ತಲೆಗೆ ಏರುತ್ತದೆ. ಪಕ್ಷದ ಸಮ್ಮೇಳನ ನಡೆಯುವಾಗ ಅದಕ್ಕೆ ಕೆಂಪು ಸೇನೆಯನ್ನು ಸಜ್ಜುಗೊಳಿಸಿ ಮೆರವಣಿಗೆಯನ್ನು ಮಾಡುವ ಸಮಯದಲ್ಲಿ ಸುಬ್ಬಯ್ಯನು ಒಂಟಿಯಾಗಿ ಮೆರವಣಿಗೆಯನ್ನು ತಡೆಗಟ್ಟಿ, ಅದರ ಮುಂದಾಳುಗಳಲ್ಲಿ ಒಬ್ಬನಾದ ಅಬೂಬಕ್ಕರನ ಕೆನ್ನೆಗೊಂದು ಏಟು ಬಿಗಿಯುತ್ತಾನೆ. ಬಾಲಸಂಘದ ನೇತಾರ ಕುಟ್ಟಿಕೃಷ್ಣನನ್ನು ಹಿಂದಕ್ಕೆ ನೂಕಿ ಬೂಟುಗಾಲಿನಿಂದ ತುಳಿಯುತ್ತಾನೆ. ಆ ಹುಡುಗನ ಎಳೆಯ ಕಂಠದಿಂದ “ಆ..” ಎಂದು ನೋವಿನ ಸ್ವರ ಹೊರಟಾಗ ರೈತಾಪಿ ಜನರು ಸುಬ್ಬಯ್ಯನ ಮೈಮೇಲೆ ಬಿದ್ದು ಬಡಿಯುತ್ತಾರೆ. ಪ್ರಾಣ ಉಳಿಸುವ ಸಲುವಾಗಿ ಸುಬ್ಬಯ್ಯ ನದಿಗೆ ಹಾರಿದರೂ ಈಜು ಗೊತ್ತಿಲ್ಲದಿದ್ದುದರಿಂದ ನೀರಿನಲ್ಲಿ ಮುಳುಗಿ ಸಾಯುತ್ತಾನೆ. ಕಯ್ಯೂರಿನ ಕಮ್ಯೂನಿಸ್ಟರು ಪೊಲೀಸ್ ಅಧಿಕಾರಿಯನ್ನು ಕೊಂದರು ಎಂಬ ಸುಳ್ಳು ಸುದ್ದಿ ಊರಲ್ಲಿಡೀ ಹಬ್ಬುತ್ತದೆ. ಇದನ್ನು ಒಂದು ಅವಕಾಶವನ್ನಾಗಿ ಬಳಸಿಕೊಂಡ ಜಮೀನ್ದಾರರು ಮತ್ತು ಬ್ರಿಟಿಷ್ ಸರ್ಕಾರವು ಭೂಗತರಾಗಿದ್ದ ಕ್ರಾಂತಿಕಾರಿಗಳನ್ನು ಹುಡುಕುವ ನೆಪದಲ್ಲಿ ಊರಿನ ಜನಸಾಮಾನ್ಯರನ್ನು ಶೋಷಣೆ ಮಾಡುತ್ತಾರೆ. ನಾಯಕರನ್ನು ಹುಡುಕಲು ಬೇಕಾಗಿ ಬಂದ ಪೊಲೀಸರು ಜನಸಾಮಾನ್ಯರನ್ನು ಹಿಂಸಿಸಿ, ಅವರ ಸಂಪತ್ತನ್ನು ದೋಚುತ್ತಾರೆ. ಕುಟ್ಟಿ ಕೃಷ್ಣ, ಪ್ರಭು ಹಾಗೂ ದಾಂಡಿಗ ಮುಂತಾದ ನಾಯಕರನ್ನು ಬಂಧಿಸುತ್ತಾರೆ. ಮುಗ್ಧ ಜನರನ್ನು ಈ ರೀತಿ ಪೀಡಿಸುವುದನ್ನು ಕಾಣಲಾರದೆ ಅಪ್ಪು, ಚಿರುಕಂಡ, ಕುಂಞಂಬು ಮತ್ತು ಅಬೂಬಕ್ಕರು ಶರಣಾಗುತ್ತಾರೆ. ನಂತರ ನ್ಯಾಯಾಲಯದಲ್ಲಿ ನಡೆದದ್ದು ಒಂದು ಕಪಟ ನಾಟಕ, ಐದು ಕಮ್ಯೂನಿಸ್ಟ್ ನಾಯಕರಿಗೆ ಮರಣದಂಡನೆ. ಇದರಲ್ಲಿ ಕುಟ್ಟಿ ಕೃಷ್ಣ ಪ್ರಾಯದಲ್ಲಿ ಚಿಕ್ಕವನಾದ್ದರಿಂದ ಮರಣದಂಡನೆ ಇಲ್ಲವಾಗುತ್ತದೆ. ಮಿಕ್ಕ ನಾಲ್ಕು ಸಂಗಾತಿಯರ ಕೊರಳಿಗೆ ನೇಣಿನ ಉರುಳು ಪುಷ್ಪಮಾಲೆಯಾಗುತ್ತದೆ. ಮರಣದಂಡನೆಯ ಸಮಯದಲ್ಲಿ ಮುಖಕ್ಕೆ ಮುಸುಕು ಹಾಕುವುದನ್ನು ಇವರು ಪ್ರತಿಭಟಿಸುತ್ತಾರೆ. ತಮ್ಮ ಕೊರಳು ಬಿಗಿದು ಉಸಿರು ನಿಲ್ಲುವ ಹೊತ್ತಿನವರೆಗೆ, ಆ ಧೀರ ಹೋರಾಟಗಾರರ ಕೊರಳಿನಿಂದ ‘ಇಂಕ್ವಿಲಾಬ್ ಜಿಂದಾಬಾದ್’, ‘ಸಾಮ್ರಾಜ್ಯಶಾಹಿ ನಾಶವಾಗಲಿ’, ‘ಕ್ರಾಂತಿಗೆ ಜಯವಾಗಲಿ’ ಎಂಬ ಘೋಷಣೆಗಳು ಮೊಳಗುತ್ತವೆ.

    ಈ ಕಾದಂಬರಿಯ ಕೊನೆಗೆ ‘ಕಯ್ಯೂರು ವೀರಗಾಥ’ ಎಂಬ ನಾಟಕವನ್ನು ವೇದಿಕೆಯಲ್ಲಿ ಪ್ರದರ್ಶಿಸಿದ ನಂತರ ಊರಿನ ಜನರು ಹುತಾತ್ಮರಿಗೆ ತಮ್ಮ ಮಾತುಗಳ ಮೂಲಕ ವಿಪ್ಲವ ವಂದನೆಯನ್ನು ಸಲ್ಲಿಸುತ್ತಾರೆ. ‘ಬದುಕನ್ನು ಪ್ರೀತಿಸಿದ ಈ ಬಾಂಧವರು ಒಳ್ಳೆಯ ಬದುಕಿಗೋಸ್ಕರ ದುಡಿದರು, ಮಡಿದರು. ಅಗಲಿದ ಸೋದರರಿಗೆ ಇಗೋ ನಮ್ಮ ವಿಪ್ಲವ ವಂದನೆ. ಇಗೋ ನಮ್ಮ ರಕ್ತ ನಮಸ್ಕಾರ. ನಿಮ್ಮ ಕನಸನ್ನು ಪೂರ್ತಿಗೊಳಿಸುವ ಹೊಣೆ ನಮ್ಮದು. ಕಯ್ಯೂರಿನ ವೀರರ ಸ್ಮರಣೆ ಚಿರಾಯುವಾಗಲಿ. ಕಯ್ಯೂರಿನ ಹುತಾತ್ಮರು ಅಮರರಾಗಲಿ’ ಎಂಬ ಸಾಲುಗಳನ್ನು ಶಿಲೆಯ ಮೇಲೆ ರಕ್ತಾಕ್ಷರಗಳಲ್ಲಿ ಕೊರೆದಿರುತ್ತದೆ.

    ದುಡಿಯುವ ಕಾರ್ಮಿಕರು, ರೈತರು ಈ ಸಮಾಜದಲ್ಲಿ ಸರಿಯಾದ ರೀತಿಯಲ್ಲಿ ಬದುಕಲು, ನಾಡಿನಲ್ಲಿ ಸೋದರತ್ವ, ಸುಖ-ಶಾಂತಿಯ ಬೀಡಾಗಲು ನಾವೆಲ್ಲಾ ಪ್ರಯತ್ನಿಸಬೇಕು. ಕಯ್ಯೂರು ವೀರರ ಸ್ಮರಣೆ ಚಿರಕಾಲ ಹಸುರಾಗಿರಬೇಕು ಎಂಬ ಆಶಯವನ್ನು ವ್ಯಕ್ತಪಡಿಸುವುದರಲ್ಲಿ ಈ ಕಾದಂಬರಿಯು ಯಶಸ್ವಿಯಾಗಿದೆ.

    ಚಂದ್ರನಾಥ ಪುಣಿಯೂರು

    article baikady Literature review roovari
    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನ ಸೇವಾ ಸದನದಲ್ಲಿ ‘ಗಾಯನ ಸನ್ಮಾನ ವಂದನ’ ಕಾರ್ಯಕ್ರಮ | ಜೂನ್ 21
    Next Article ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಬೈಠಕ್ @ ಕೊಡಿಯಾಲ್‌ಗುತ್ತು ಸಂಗೀತ ಕಛೇರಿ | ಜೂನ್ 21
    roovari

    Add Comment Cancel Reply


    Related Posts

    ವಿಶೇಷ ಲೇಖನ – ಶತಾಯುಷಿ, ಕನ್ನಡದ ಖ್ಯಾತ ಬರಹಗಾರ ಡಾ. ಎ. ಎನ್. ಮೂರ್ತಿರಾವ್

    June 16, 2025

    ಭರತಾಂಜಲಿಯಿಂದ ಕಣ್ಮನ ತಣಿಸಿದ ರಂಗಪ್ರವೇಶ…ಗುರು ನಮನ..

    June 16, 2025

    ಪುಸ್ತಕ ಬಹುಮಾನಕ್ಕಾಗಿ ಜಾನಪದ ಕೃತಿ ಆಹ್ವಾನ | ಕೊನೆಯ ದಿನಾಂಕ ಜೂನ್ 30

    June 16, 2025

    “ನುಡಿಮುತ್ತು” ಕೃತಿಲೋಕಾರ್ಪಣೆ | ಜೂನ್ 18

    June 16, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.