ಆಧುನಿಕ ಕನ್ನಡ ಕಾವ್ಯ ನಿರ್ಮಾಪಕರಲ್ಲಿ ಬೇಂದ್ರೆಯವರದು ಎದ್ದು ಕಾಣುವ ಹೆಸರು. “ಒಂದು ಪೂರ್ಣ ಆಯುಷ್ಯವನ್ನು ಸಾರ್ಥಕವಾಗಿ ಸಫಲವಾಗಿ ಯಾರ ಕಾವ್ಯದ ಅಭ್ಯಾಸಕ್ಕಾಗಿ ಮೀಸಲಾಗಿಡಬಹುದೋ ಅಂಥ ಕನ್ನಡ ಕವಿಗಳಲ್ಲಿ ಶ್ರೀಮಾನ್ ಬೇಂದ್ರೆಯವರು ಅತ್ಯಾಧುನಿಕರು. ಇಪ್ಪತ್ತನೆಯ ಶತಮಾನದಲ್ಲಿ ಇಂಥ ಕವಿ ಕನ್ನಡದಲ್ಲಿ ಇರುವುದು ಕನ್ನಡ ಭಾಷೆಯ ಸುದೈವವೇ ಸರಿ” ಎಂಬುದಾಗಿ ಖ್ಯಾತ ಸಾಹಿತಿ ವಿಮರ್ಶಕ ಶಂಕರ ಮೊಕಾಶಿ ಪುಣೇಕರ ಅವರು ಹೇಳಿರುವ ಮಾತಿನಲ್ಲಿ ಅತ್ಯುಕ್ತಿ ಇಲ್ಲ. ಬೇಂದ್ರೆ ಕನ್ನಡಿಗರ ಭಾವಕೋಶದಲ್ಲಿ ಸೇರಿಹೋದ ಅದ್ಭುತ ಕವಿ ಚೇತನ. ಅವರ ಸಮಗ್ರ ಸಾಹಿತ್ಯವನ್ನು ತಾಳೆ ಹಾಕಿ ಒರೆಗೆ ಹಚ್ಚಿ ನೋಡಿ ಅವರನ್ನು ‘ಭುವನದ ಭಾಗ್ಯ’ ಎಂದು ಕರೆದು ಅವರ ದೈತ್ಯ ಪ್ರತಿಭೆಯ ಪ್ರಕಾಶವನ್ನು ಲೋಕ ಸಮ್ಮುಖಗೊಳಿಸಿದವರು ವಿಮರ್ಶಕ ಡಾ. ಆಮೂರ.
‘ಡಾ. ಜಿ.ಎಸ್. ಆಮೂರ ಅವರ ಸಮಗ್ರ ಬೇಂದ್ರೆ ವಿಮರ್ಶೆ’ ಈ ಮಹಾಕೃತಿಯನ್ನು ವಿಮರ್ಶಕ ಡಾ. ಜಿ.ಎಂ. ಹೆಗಡೆಯವರು ಇತ್ತೀಚಿಗೆ ಸಂಪಾದಿಸಿ ಕೊಟ್ಟಿದ್ದಾರೆ. “ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆ ಒಂದು ಸಜೀವ ವಿಕಾಸ ಪ್ರಕ್ರಿಯೆ. ಅದಕ್ಕೆ ಶತಮಾನಗಳೂ ಬೇಕಾಗಬಹುದು. ನನ್ನನ್ನು ಪೂರ್ತಿಯಾಗಿ ಅರ್ಥ ಮಾಡಿಕೊಳ್ಳುವುದು ಭವಿಷ್ಯತ್ತಿನಲ್ಲಿದೆ” ಎಂಬುದಾಗಿ ಬೇಂದ್ರೆಯವರೇ ಒಂದು ಕಡೆ ಹೇಳಿಕೊಂಡಿದ್ದರು. ಇದನ್ನು ಸಾಕಾರಗೊಳಿಸಿದ್ದು ಈ ಕೃತಿಯ ಹೆಚ್ಚುಗಾರಿಕೆ. ಬೇಂದ್ರೆಯವರು ದರ್ಶಕ ಕವಿ, ಅವರ ದರ್ಶನವನ್ನು ಸಮಗ್ರವಾಗಿ ಖಚಿತವಾಗಿ ವಿಭಿನ್ನ ಆಯಾಮಗಳಲ್ಲಿ ಅಧ್ಯಯನ ಮಾಡಿ ಪ್ರಚಂಡವಾದ ಕೃತಿಗಳನ್ನು ರಚಿಸಿದ ಹಿರಿಮೆ ಆಮೂರ ಅವರಿಗೆ ಸಲ್ಲುತ್ತದೆ. ಆಮೂರ ಅವರು ಕಳೆದ ನಾಲ್ಕು ದಶಕಗಳಲ್ಲಿ ನಡೆಸಿದ ಬೇಂದ್ರ ಸಾಹಿತ್ಯ ಚಿಂತನೆ, ಅನುಸಂಧಾನ ಪ್ರಸಕ್ತ ಕೃತಿಯಲ್ಲಿ ಒಂದೆಡೆ ಅಚ್ಚರಿ ಪಡುವ ಹಾಗೆ ದಾಖಲಾಗಿರುವುದು ಕನ್ನಡದ ಪುಣ್ಯ.
ಸಾಂಪ್ರತ ಗ್ರಂಥದಲ್ಲಿ ಮುಖ್ಯವಾಗಿ ನಾಲ್ಕು ವಿಭಾಗಗಳಿವೆ. ಮೊದಲನೆಯ ಭಾಗದಲ್ಲಿ ‘ಭುವನದ ಭಾಗ್ಯ’, ಎರಡನೆಯ ಭಾಗದಲ್ಲಿ ‘ಭುವನದ ಭಾಗ್ಯ ಕೃತಿಯ ಕುರಿತು ಕನ್ನಡ ವಿಮರ್ಶೆಯ ಸಹಸ್ಪಂದನ’, ಮೂರನೆಯ ಭಾಗದಲ್ಲಿ ‘ಭುವನದ ಭಾಗ್ಯ’ದ ನಂತರದಲ್ಲಿ ಬಂದ ಆಮೂರರ ಬೇಂದ್ರೆ ಸಾಹಿತ್ಯ ವಿಮರ್ಶೆಯ ಲೇಖನಗಳ ‘ಒಳಗಿರುವ ಬೆಳಕು’, ನಾಲ್ಕನೆಯ ಭಾಗದಲ್ಲಿ ಬೇಂದ್ರೆ ಕವಿತೆಗಳ ಇಂಗ್ಲೀಷ್ ಅನುವಾದ ‘The Spider and The Web’, ಜತೆಗೆ ಅಂಬಿಕಾತನಯದತ್ತರ ಮೂಲ ಕನ್ನಡ ಕವಿತೆಗಳನ್ನು ಒಳಗೊಂಡಿರುವುದು ವಿಶೇಷ.
ಭುವನದ ಭಾಗ್ಯ ಆಮೂರ ವಿರಚಿತ ಅತ್ಯಂತ ಮಹತ್ವದ ವಿಮರ್ಶಾ ಕೃತಿ. ಬೇಂದ್ರೆ ಅವರ ಸಮಗ್ರ ಕಾವ್ಯ ದರ್ಶನವನ್ನು ಸಶಕ್ತವಾಗಿ ಹಿಡಿದಿಟ್ಟ ಅಪೂರ್ವ ಕೃತಿ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ಬೇಂದ್ರೆಯವರ ದರ್ಶನದ ಅಖಂಡತೆಯನ್ನು ವಸ್ತು ಮತ್ತು ಆಕೃತಿಗಳ ವಿಕಾಸ ಕ್ರಮವನ್ನು, ಅಭಿವ್ಯಕ್ತಿ ವೈವಿಧ್ಯವನ್ನು ಅದರ ಚಾರಿತ್ರಿಕ ಸಂದರ್ಭದಲ್ಲಿಟ್ಟು ನೋಡುವ ಡಾ. ಆಮೂರರ ವಿಮರ್ಶೆ ವಿದ್ವತ್ ವಲಯದಲ್ಲಿ ಬಹು ಪ್ರಶಂಸೆಗೆ ಪಾತ್ರವಾಗಿದೆ. ಕವಿ ಬೇಂದ್ರೆಯವರ ಕಾವ್ಯದ ವಿಭಿನ್ನ ನೆಲೆಗಳ ವಿಮರ್ಶೆಯನ್ನು ಪರಿಶೀಲಿಸಿ, ಎದ್ದ ತಕರಾರುಗಳಿಗೆ ಸಮಚಿತ್ತದಿಂದ ಪ್ರತಿಕ್ರಿಯಿಸಿ ವಿಚಾರಾತ್ಮಕವಾದ ದೃಷ್ಟಿಕೋನವನ್ನು ಒದಗಿಸಿದ ಶ್ರೇಯಸ್ಸು ಆಮೂರರಿಗೆ ಸಲ್ಲುತ್ತದೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೂ ಈ ಕೃತಿ ಪಾತ್ರವಾಗಿದೆ. ‘ಒಳಗಿರುವ ಬೆಳಕು’ ಇದೂ ಸಹ ಬೇಂದ್ರೆ ಅವರ ಸಾಹಿತ್ಯದ ಕುರಿತಾಗಿ ಆಮೂರ ಅವರ ಬರೆದ ಪ್ರೌಢ ಚಿಂತನೆಯನ್ನು ಒಳಗೊಂಡ ಕೃತಿ. ಇದರಲ್ಲಿ ಕವಿ ಬೇಂದ್ರೆ ಅವರ ವ್ಯಕ್ತಿತ್ವ, ಪ್ರತಿಭೆ, ಅವರ ಜೀವನ ಪ್ರಜ್ಞೆ, ಅವರ ಕಾವ್ಯ ಧರ್ಮ, ಬೇಂದ್ರೆ ಅವರ ಕಾವ್ಯದಲ್ಲಿ ಪ್ರಜ್ಞೆ ಮತ್ತು ಪ್ರಯೋಗ, ಬೇಂದ್ರೆಯವರ ಕಾವ್ಯಾನುಸಂಧಾನದ ಅನನ್ಯತೆಯನ್ನು ಇಲ್ಲಿ ತುಲನಾತ್ಮಕವಾಗಿ ಅನಾವರಣಗೊಳಿಸಲಾಗಿದೆ.
“ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ತಮ್ಮಲ್ಲಿಯ ಕವಿಯನ್ನು ‘ಅಂಬಿಕಾತನಯದತ್ತ’ ಎಂದು ಕರೆದು ತಮ್ಮ ತಾಯಿಯ ಹೆಸರಿನಲ್ಲಿಯೇ ಕೀರ್ತಿ ಗಳಿಸಿದರು. ಜೀವನದಲ್ಲಿ ಅವರು ಸುಖ ದುಃಖಗಳೆರಡನ್ನೂ ಅತ್ಯಂತಿಕವಾಗಿ ಅನುಭವಿಸಿದರು. ಆದರೆ ನಾದಲೀಲೆಯ ಪ್ರಾರಂಭದಲ್ಲಿ ಅವರು ಹೇಳಿದಂತೆ ತಮ್ಮ ಯಾತನೆಯನ್ನು ತಮಗಾಗಿ ಇರಿಸಿಕೊಂಡು ಅದರ ಹಾಡನ್ನು ಮಾತ್ರ ರಸಿಕರಿಗೆ ನೀಡಿದರು. ಅವರ ಕಾವ್ಯ ತೀರ ಸ್ವಂತದ್ದೆಂದೆನಿಸುವ ಅನುಭವವನ್ನೇ ಆಧರಿಸಿದರೂ ಅದು ನಿಜವಾದ ಸಾರ್ವತ್ರಿಕತೆಯನ್ನೂ, ಅಪೌರುಷೇಯತ್ವವನ್ನೂ ಸಾಧಿಸಿತು” ಹೀಗೆ ಬೇಂದ್ರೆ ಅವರ ಕಾವ್ಯದ ಬಲ್ಮೆಯನ್ನು ವಿರಾಟ್ ಸ್ವರೂಪ ದರ್ಶನವನ್ನು ಮಾಡಿಕೊಟ್ಟಿರುವುದು ಈ ಕೃತಿಯ ಅತಿಶಯತೆ.
“ಜೀವನದಲ್ಲಿಯೇ ಆಗಲಿ, ಸಾಹಿತ್ಯದಲ್ಲಿಯೇ ಆಗಲಿ ಬೇಂದ್ರೆಯವರು ಸಮನ್ವಯ, ಸಾಮಂಜಸ್ಯ, ಸಾಮರಸ್ಯ ಸೂತ್ರಗಳ ಆರಾಧಕರಾಗಿದ್ದರು. ಬದಲಾವಣೆಯನ್ನಾಗಲೀ, ಆಧುನಿಕತೆಯನ್ನಾಗಲೀ ಅವರೆಂದೂ ವಿರೋಧಿಸಲಿಲ್ಲ. ಹೀಗಿದ್ದರೂ ಅವರು ತಮ್ಮ ಸಾಹಿತ್ಯಿಕ ಜೀವನದ ಉತ್ತರಾರ್ಧದಲ್ಲಿ ಸಮಾಜ ವಿಮುಖರಾಗಿ ಅಧ್ಯಾತ್ಮದಲ್ಲಿ ಮುಳುಗಿಬಿಟ್ಟರು ಎಂಬ ಗ್ರಹಿಕೆಯೊಂದು ಅವರ ಕೆಲ ಓದುಗರಲ್ಲಿ ರೂಢವಾಗಿದೆ. ಆದರೆ ಈ ಗ್ರಹಿಕೆಯಲ್ಲಿ ತಥ್ಯವಿಲ್ಲ. ವಾತ್ಸಲ್ಯ, ಪ್ರೇಮ, ಗೆಳೆತನ ಇಂಥ ವಸ್ತುಗಳನ್ನಾಧರಿಸಿದ ಅವರ ಕವಿತೆಗಳು ಕೆಲವೊಂದು ಕಾಲಖಂಡಗಳಿಗೆ ಸೀಮಿತವಾಗಿವೆ. ಆದರೆ ಅವರ ಸಮಷ್ಟಿಪ್ರಜ್ಞೆಯ ಕವಿತೆಗಳಿಗೆ ಇಂಥ ಕಾಲಮಿತಿಗಳಿಲ್ಲ. ಯಾವ ‘ಇಜಂ’ಗಳನ್ನೂ ಅವರು ಸ್ವೀಕರಿಸಲಿಲ್ಲ. ಆದರೆ ಸಮಾಜದ ಆಗುಹೋಗುಗಳಿಗೆ ಅವರಷ್ಟು ಸಂವೇದನಾಶೀಲರಾಗಿ ಸ್ಪಂದಿಸಿದ ಕವಿಗಳು ವಿರಳ. ಶ್ರೀ ಅರವಿಂದರ ಪ್ರಭಾವ ಅವರ ಸಮಷ್ಟಿಪ್ರಜ್ಞೆಗೆ ವಿರುದ್ಧವಾದ ದಿಕ್ಕಿನಲ್ಲಿ ಕಾರ್ಯ ಮಾಡಲಿಲ್ಲ. ತದ್ವಿರುದ್ಧವಾಗಿ ಅದಕ್ಕೊಂದು ಭದ್ರವಾದ ತಾತ್ವಿಕ ನೆಲೆಯನ್ನು ಒದಗಿಸಿಕೊಟ್ಟಿತು” ಇದು ಆಮೂರ ಅವರು ತೆರೆದಿಟ್ಟಿರುವ ಸಾಲು ಸಾಲು ಒಳನೋಟಗಳು.
ಅಮೂರರ ಭುವನದ ಭಾಗ್ಯ ಕನ್ನಡ ಸಾಹಿತ್ಯ ವಿಮರ್ಶೆಯ ವಲಯದಲ್ಲಿ ಹೊಸ ಸಂಚಲನವನ್ನು ಉಂಟು ಮಾಡಿದ ಕೃತಿ.
“ಬೇಂದ್ರೆಯವರನ್ನು ಕುರಿತು ಈವರೆಗೂ ಇಷ್ಟು ಕೂಲಂಕಷವಾದ ಚರ್ಚೆಯನ್ನು ಒಳಗೊಂಡ ಸಮಗ್ರ ವಿವೇಚನೆ ಕನ್ನಡದಲ್ಲಿ ನಡೆದಿರಲಿಲ್ಲ. ಕವಿಕಾವ್ಯಪರವಾದ ಮುಕ್ತ ಸಹೃದಯತೆ, ಬಹುಶ್ರುತ ವಿದ್ವತ್ತು, ಅಪಾರವಾದ ವಿನಯ, ಸಮತೂಕದ ವಿಮರ್ಶನಪ್ರಜ್ಞೆ -ಇವು ‘ಭುವನದ ಭಾಗ್ಯ’ದ ವಿವೇಚನೆಯ ನೆಲೆಗಟ್ಟಾಗಿವೆ. ಬೇಂದ್ರೆಯವರ ಕಾವ್ಯದ ಮುಖ್ಯ ಆಶಯಗಳನ್ನೂ, ಮಾದರಿಗಳನ್ನೂ, ಪ್ರತೀಕಗಳನ್ನೂ, ಒಟ್ಟಾರೆ ಬೇಂದ್ರೆ ಸಾಹಿತ್ಯದ ನಿಲುವುಗಳನ್ನೂ ಇದುವರೆಗೆ ಬೇಂದ್ರೆಯವರನ್ನು ಕುರಿತು ನಡೆದಿರುವ ವಿಮರ್ಶೆಯ ಹಿನ್ನೆಲೆಯಲ್ಲಿ ಮತ್ತು ಸಮಕಾಲೀನ ಸಂದರ್ಭದಲ್ಲಿ ಚರ್ಚೆಗೆ ಗುರಿಪಡಿಸುವದರ ಮೂಲಕ ಬೇಂದ್ರೆಯವರ ಸಾಹಿತ್ಯದ ಮರುಪರಿಶೀಲನೆಗೆ ಹಾಗೂ ಅರ್ಥವಂತಿಕೆಗೆ ಭದ್ರವಾದ ಬುನಾದಿಯನ್ನು ಡಾ. ಆಮೂರರು ಹಾಕಿಕೊಟ್ಟಿದ್ದಾರೆ” ಎಂದು ಡಾ. ಜಿ.ಎಸ್. ಶಿವರುದ್ರಪ್ಪ ಅವರು ಹೇಳಿರುವ ಮಾತುಗಳಲ್ಲಿ ಉತ್ಪ್ರೇಕ್ಷೆ ಇಲ್ಲ.
“ಕಾವ್ಯಸೃಷ್ಟಿಯಂತೆ ಕಾವ್ಯಚಿಂತನವನ್ನೂ ನಿಷ್ಠೆಯಿಂದ ನಡೆಯಿಸಿದ ಕವಿಚಿಂತಕರಲ್ಲಿ ಬೇಂದ್ರೆಯವರು ಅಗ್ರಪಂಕ್ತಿಗೆ ಸೇರಿದವರು. ಕವಿಯ ಸ್ವರೂಪವನ್ನು ಅವರು ದೃಷ್ಟಾರ ಮತ್ತು ಸೃಷ್ಟಾರ ಎಂಬ ಎರಡು ಸ್ತರಗಳಲ್ಲಿ ಗುರುತಿಸಿದರು. ದೃಷ್ಟಾರನಾಗದೆ ಕವಿ ಸೃಷ್ಟಾರನಾಗಲಾರ ಎಂದು ಅವರು ದೃಢವಾಗಿ ನಂಬಿದ್ದರು. ಕಾವ್ಯಸೃಷ್ಟಿಯನ್ನು ‘ಯೋಗ’ ಎಂದು ಕರೆದು ಅದರ ಎರಡು ಮುಖಗಳನ್ನು ಅವರು ಗುರುತಿಸಿದರು – ಅಂತರಂಗ ಯೋಗ ಹಾಗೂ ಬಹಿರಂಗ ಯೋಗ. ಅಂತರಂಗದ ‘ಅನಿರ್ವಚನೀಯ’ ದರ್ಶನವನ್ನು ಭಾಷೆಯ ಎಲ್ಲ ಸ್ತರಗಳನ್ನು ಬಳಸಿಕೊಂಡು ‘ವಚನ’ಕ್ಕೆ ಇಳಿಸುವುದು ಕವಿ ಬಹಿರಂಗ ಯೋಗದಲ್ಲಿ ನಡೆಸುವ ಕ್ರಿಯೆ. ಬಹಿರಂಗ ಯೋಗವನ್ನು ಅವರು ‘ಕರ್ಮಯೋಗ’ ಎಂತಲೂ ಕರೆದರು. ಈ ಕ್ರಿಯೆಯಲ್ಲಿ ಕವಿ ದೊರಕಿಸುವ ಯಶಸ್ಸು ಅವನ ಯೋಗ್ಯತೆಯನ್ನು ನಿರ್ಧರಿಸುತ್ತದೆ ಎಂಬ ಗಂಭೀರ ಜಿಜ್ಞಾಸೆ ಈ ಕೃತಿಯಲ್ಲಿ ಅಡಕಗೊಂಡಿದೆ.
ಬೇಂದ್ರೆಯವರ ಸಾಹಿತ್ಯವನ್ನು ಅದರ ಚಾರಿತ್ರಿಕ ಸಂದರ್ಭದಲ್ಲಿಟ್ಟು ಇಡಿಯಾಗಿ ನೋಡುವ ಪ್ರಾಮಾಣಿಕ ಪ್ರಯತ್ನ ಈ ಕೃತಿಯಲ್ಲಿ ಎದ್ದು ಕಾಣುತ್ತದೆ. ಬೇಂದ್ರೆಯವರ ಮನೆ ಮಾತು ಮರಾಠಿ. ಅವರು ಪದವಿ ಶಿಕ್ಷಣ ಪೂರೈಸಿದ್ದು ಪುಣೆಯಲ್ಲಿ. ಹೀಗಾಗಿ ಕೆಲವರು ಬೇಂದ್ರೆ ಅವರ ಕಾವ್ಯ ರಚನೆಗೆ ಮರಾಠಿ ಪ್ರೇರಣೆ ನೀಡಿದೆ ಎಂಬ ವಾದವನ್ನು ಮಂಡಿಸಿದ್ದೂ ಉಂಟು. ಈ ಕುರಿತು ಆಮೂರ ಅವರ ಅವರ ವಿಚಾರ ವಿಮರ್ಶೆ ಹೀಗಿದೆ “ಮರಾಠಿ ಕಾವ್ಯ ಆಧುನಿಕ ಕನ್ನಡ ಕಾವ್ಯದ ಮೇಲೆ ವಿಶೇಷವಾದ ಯಾವ ಪ್ರಭಾವವನ್ನೂ ಬೀರಿಲ್ಲ ಎಂದು ಸ್ವತಃ ಬೇಂದ್ರೆಯವರೇ ಸ್ಪಷ್ಟವಾಗಿ ಹೇಳಿದ್ದರೂ, ಅವರ ಕಾವ್ಯ ಸ್ಫೂರ್ತಿಯ ಪ್ರಾಥಮಿಕ ನೆಲೆ ಮರಾಠಿ ಕಾವ್ಯದಲ್ಲಿದೆ ಎಂದು ಸಾಧಿಸುವ ಪ್ರಯತ್ನಗಳು ನಡೆದಿವೆ. ಬೇಂದ್ರೆಯವರ ಪ್ರಾರಂಭದ ಕವಿತೆಗಳ ಸ್ವರೂಪವನ್ನು ನೋಡಿದಾಗ ಅವರು ತಮ್ಮನ್ನು ಕನ್ನಡ ಕಾವ್ಯ ಪರಂಪರೆಯೊಡನೆ ಎಷ್ಟು ಗಾಢವಾಗಿ ಜೋಡಿಸಿಕೊಂಡಿದ್ದರೆನ್ನುವುದರ ಬಗ್ಗೆ ಸಂಶಯ ಉಳಿಯಲಾರದು. ಆಧುನಿಕ ಕನ್ನಡ ಕಾವ್ಯದ ಸಂದರ್ಭದಲ್ಲಿ ಬೇಂದ್ರೆಯವರ ಕಾವ್ಯ ಮಹತ್ತ್ವದ್ದಾಗುವುದು ಅಭಿವ್ಯಕ್ತಿ ನಿಷ್ಠ ಕಾವ್ಯರೂಪಗಳನ್ನು ಸೃಷ್ಟಿಸುವುದರ ಮೂಲಕ. ಈ ದೃಷ್ಟಿಯಿಂದ 1919ರಲ್ಲಿಯೇ ಅವರು ಬರೆದ ‘ಬೆಳಗು’ ಕವಿತೆಗೆ ಐತಿಹಾಸಿಕ ಮಹತ್ವವಿದೆ” ಎಂಬುದನ್ನು ಇಲ್ಲಿ ಲೇಖಕರು ವಿವಿಧ ಪುರಾವೆಗಳ ಮೂಲಕ ರುಜುವಾತು ಪಡಿಸಿದ್ದಾರೆ
“ಬೇಂದ್ರೆಯವರು ತಮ್ಮ ಕಾವ್ಯಜೀವನದ ಮೊದಲಿನಿಂದ ಕೊನೆಯವರೆಗೆ ಒಂದೇ ರೀತಿಯ ಕವಿತೆ ಬರೆಯಲಿಲ್ಲ. ಸಾಂಪ್ರದಾಯಿಕ ರಚನೆಗಳು, ಹಾಡು-ಲಾವಣಿಗಳು, ಸಾನೆಟ್, ಸೀಸಪದ್ಯ ಮೊದಲಾದ ರೂಪಗಳು, ‘ನಾಕುತಂತಿ’ಯಂಥ ಸಂಕೀರ್ಣ ರಚನೆಗಳು, ತತ್ವಪದ ಇಂಥ ಅನೇಕ ಪ್ರಕಾರಗಳಲ್ಲಿ ಅವರ ಕಾವ್ಯ ಹಬ್ಬಿಕೊಂಡಿದೆ. ಅವರ ಕಾವ್ಯದ ಉಗಮ ದೇಸೀ ಪರಂಪರೆಯಲ್ಲಿದ್ದಂತೆ ಶಿಷ್ಟ ಪರಂಪರೆಯಲ್ಲಿಯೂ ಇದೆ. ಇದು ಕನ್ನಡದ ಮಹತ್ವದ ಕವಿಗಳ ವೈಶಿಷ್ಟ್ಯವೂ ಆಗಿದೆ. ವಿಮರ್ಶೆಯ ಮಾನದಂಡಗಳು ಈ ಸತ್ಯವನ್ನು ಅವಶ್ಯವಾಗಿ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಸಾಧ್ಯವಿದ್ದ ಮಟ್ಟಿಗೆ ನನ್ನ ಪುಸ್ತಕದಲ್ಲಿ ಇಂಥ ಮಾನದಂಡಗಳನ್ನು ಹೊರಗಿನಿಂದ ತರದೆ ಆಂತರಿಕವಾಗಿ ರೂಪಿಸಿಕೊಳ್ಳಲಾಗಿದೆ.
ಕೃತಿನಿಷ್ಠೆ ವಿಮರ್ಶೆಯಲ್ಲಿ ನಾನು ಯಾವಾಗಲೂ ಕಾಯ್ದುಕೊಂಡು ಬಂದಿರುವ ಒಂದು ಗುಣ. ಅದನ್ನು ಇಲ್ಲಿಯೂ ಬಿಟ್ಟುಕೊಟ್ಟಿಲ್ಲ. ಬೇಂದ್ರೆಯವರ ಮಹತ್ವದ ಕವಿತೆಗಳ ವಿಶ್ಲೇಷಣೆ ತಕ್ಕ ಪ್ರಮಾಣದಲ್ಲಿ ನಡೆದಿದೆಯಾದರೂ ಅನೇಕ ಅವಾಸ್ತವ ಅಂಶಗಳೂ ಅದರಲ್ಲಿ ಸೇರಿಕೊಂಡಿವೆ, ಸೇರಿಕೊಳ್ಳುತ್ತಲಿವೆ. ಇವುಗಳನ್ನು ಗುರುತಿಸುವುದು ಅವಶ್ಯವಿದೆ. ಇದೂ ಅಲ್ಲದೆ, ಪ್ರಸ್ತುತವಾದ ಹೊಸ ಅಂಶಗಳನ್ನು ಗಮನಿಸುವುದರ ಮೂಲಕ ಅರ್ಥೈಸುವ ಕ್ರಿಯೆ ಇನ್ನೂ ಹೆಚ್ಚು ಸಮೃದ್ಧವಾಗಬಲ್ಲುದು” ಪ್ರಸ್ತಾವನೆಯಲ್ಲಿ ಆಮೂರ ಅವರು ಹೇಳಿದ ಮಾತು ಈ ಕೃತಿಯಲ್ಲಿ ಚೆನ್ನಾಗಿ ನೆರವೇರಿದೆ. ಬೇಂದ್ರೆಯವರ ದರ್ಶನದ ಅಖಂಡತೆಯನ್ನು ವಸ್ತು ಮತ್ತು ಆಕೃತಿಗಳ ವಿಕಾಸ ಕ್ರಮವನ್ನು, ಅಭಿವ್ಯಕ್ತಿಯ ವೈವಿಧ್ಯವನ್ನು ಅತ್ಯಂತ ಸಮರ್ಪಕವಾಗಿ ಗುರುತಿಸಿರುವುದು ಈ ಕೃತಿಯ ಹೆಚ್ಚುಗಾರಿಕೆ.
ಬೇಂದ್ರೆ ಅವರ ಕಾವ್ಯದ ಪ್ರತಿಮಾಲೋಕ, ಬೇಂದ್ರೆಯವರ ಕಾವ್ಯಾನುಸಂಧಾನ, ಅವರ ತಾತ್ವಿಕ ಚಿಂತನೆ -ಇಂಥ ಕೆಲವು ವಿಶಿಷ್ಟ ಆಯಾಮಗಳನ್ನು ಕುರಿತು ವಿವರವಾದ ವಿಶ್ಲೇಷಣೆ ಇಲ್ಲಿದೆ. ಬೇಂದ್ರೆ ಕಾವ್ಯ ಎಲ್ಲ ತಲೆಮಾರುಗಳ ಓದುಗರ, ವಿಮರ್ಶಕರ ಹಾಗೂ ಚಿಂತಕರ ಅಭ್ಯಾಸದ ವಿಷಯವಾಗಿ ಉಳಿದಿರುವುದು ಈ ಕೃತಿಯ ಓದಿನಿಂದ ಮನದಟ್ಟಾಗುತ್ತದೆ. ಈ ಕೃತಿಯನ್ನು ವಿಶೇಷವಾದ ಕಾಳಜಿಯಿಂದ ಸಂಪಾದಿಸಿ ಕೊಟ್ಟವರು ನಾಡಿನ ಹಿರಿಯ ವಿಮರ್ಶಕ, ಆಮೂರರ ನಿಕಟವರ್ತಿ ಡಾ. ಜಿ.ಎಂ. ಹೆಗಡೆ. “ಕನ್ನಡ ವಿಮರ್ಶೆಯ ಪ್ರಪಂಚದಲ್ಲಿ ಡಾ. ಜಿ.ಎಸ್. ಆಮೂರ ಅವರು ಶತಮಾನದ ಶ್ರೇಷ್ಠ ವಿಮರ್ಶಕರಾಗಿ ಖ್ಯಾತರಾಗಿದ್ದರು. ಅವರು ಕನ್ನಡ ಹಾಗೂ ಇಂಗ್ಲೀಷಗಳೆರಡರಲ್ಲೂ ಸಮೃದ್ಧ ವಿಮರ್ಶಾ ಸಾಹಿತ್ಯ ರಚಿಸಿದ್ದ ವಿದ್ವತ್ತಿನ ಶಿಖರವಾಗಿದ್ದರು. ಪ್ರತಿಭೆ ಪಾಂಡಿತ್ಯ, ಸದಭಿರುಚಿ, ಸಹೃದಯತೆಯಿಂದ ಕೂಡಿದ ಡಾ. ಆಮೂರರ ವಿಮರ್ಶೆ ಕನ್ನಡ ಸಾಹಿತ್ಯಲೋಕದಲ್ಲಿ ಅಪಾರ ಮನ್ನಣೆಯನ್ನು ಗಳಿಸಿದೆ. ಆಧುನಿಕ ಕನ್ನಡ ಸಾಹಿತ್ಯದ ಮಹತ್ವದ ಲೇಖಕರು ಹಾಗೂ ಕೃತಿಗಳ ಬಗೆಗೆ ಡಾ. ಆಮೂರ ಬರೆದ ವಿಮರ್ಶೆ ಹೊಸ ಅರ್ಥಲೋಕವನ್ನೇ ತೆರೆದಿದೆ. ಆಧುನಿಕ ಕನ್ನಡ ಸಾಹಿತ್ಯದ ಕೇಂದ್ರ ಪ್ರಮೇಯಗಳನ್ನು, ಅದರ ಪರಂಪರೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಹೊಸ ಚಿಂತನೆಗಳನ್ನು ಅವರು ನೀಡಿದ್ದಾರೆ. ಗಟ್ಟಿಯಾದ ತಾತ್ವಿಕ ಚಿಂತನೆಯನ್ನು ಹೊಂದಿರುವ ಆಮೂರರ ಚಿಂತನೆ ಕನ್ನಡ ವಿಮರ್ಶೆಯಲ್ಲಿ ಹೊಸ ಮಾರ್ಗವನ್ನೇ ತೆರೆದಿದೆ” ಎಂಬುದಕ್ಕೆ ಸಾಕ್ಷಿ ಈ ಉದ್ಗ್ರಂಥ. ಇದೊಂದು ಅಪರೂಪದ ಶತಮಾನದ ಕೃತಿ. ಇದನ್ನು ಪ್ರಕಟಿಸಿದ ಸಾಹಿತ್ಯ ಪ್ರಕಾಶನಕ್ಕೆ ಕನ್ನಡಿಗರು ಕೃತಜ್ಞರು.
ಪ್ರೊ. ಜಿ.ಎನ್. ಉಪಾಧ್ಯ ಮುಂಬೈ