Subscribe to Updates

    Get the latest creative news from FooBar about art, design and business.

    What's Hot

    ಕರ್ನಾಟಕ ಲೇಖಕಿಯರ ಸಂಘದ 2025ನೆಯ ಸಾಲಿನ ಪುಸ್ತಕ ಬಹುಮಾನಕ್ಕೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಫೆಬ್ರುವರಿ 10

    January 14, 2026

    ಮಂಗಳೂರಿನ ಪುರಭವನದಲ್ಲಿ ‘ಅನುಪಮ’ ಮಾಸಿಕದ ರಜತ ಮಹೋತ್ಸಹ ವರ್ಷಾಚರಣೆ | ಜನವರಿ 15

    January 14, 2026

    ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಶ್ರೀಮತಿ ಜಲಜಾ ಶೇಖರ್ ಆಯ್ಕೆ

    January 13, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ‘ದುಂಡು ಮಲ್ಲಿಗೆಯ ಮುಖದವಳು’ ಕಥಾಸಂಕಲನ
    Article

    ಪುಸ್ತಕ ವಿಮರ್ಶೆ | ‘ದುಂಡು ಮಲ್ಲಿಗೆಯ ಮುಖದವಳು’ ಕಥಾಸಂಕಲನ

    September 11, 2025No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಲೇಖಕಿ ಸೃಜನಾ ಸೂರ್ಯ ಇವರ ಮೊದಲ ಕಥಾಸಂಕಲನ ‘ದುಂಡು ಮಲ್ಲಿಗೆಯ ಮುಖದವಳು’. ಇದರಲ್ಲಿ ಹತ್ತೊಂಬತ್ತು ಸುಂದರ ಕಥೆಗಳಿವೆ. ಮನಶ್ಶಾಸ್ತ್ರದಲ್ಲಿ ಎಂ.ಎ. ಮಾಡಿದ ಸೃಜನಾರವರಿಗೆ ಅದೇ ವಿಷಯವನ್ನು ಹಿನ್ನೆಲೆಯಾಗಿಟ್ಟುಕೊಂಡು ಕುತೂಹಲ ಹುಟ್ಟಿಸುತ್ತಾ ಹೋಗುವ ಕಥೆಗಳನ್ನು ಬರೆಯುವುದು ಕಷ್ಟವೇನಲ್ಲ ಅನ್ನುವುದಕ್ಕೆ ಇಲ್ಲಿನ ಹಲವು ಕಥೆಗಳು ಸಾಕ್ಷಿಯಾಗಿವೆ. ಅಲ್ಲದೆ ಪಾತ್ರಗಳ ಒಳತೋಟಿಯನ್ನು ಗುರುತಿಸುವುದರಲ್ಲೂ ಅದು ಅವರಿಗೆ ಸಹಕಾರಿಯಾಗಿದೆ.

    ಮೊದಲ ಕಥೆ ‘ಮುಚ್ಚಿದ ಕಿಟಿಕಿ’ಯಲ್ಲಿ ಪೂಜಾ- ಸೀಮಾ ಅನ್ನುವ ಇಬ್ಬರು ಆತ್ಮೀಯ ಗೆಳತಿಯರು. ಇಬ್ಬರ ನಡುವಣ ಪ್ರೀತಿ ಅದೆಷ್ಟು ಗಾಢವಾಗಿದೆಯೆಂದರೆ ಸೀಮಾಗೆ ಪೂಜಾಳ ಜತೆಗೇ ಬದುಕು ಸಾಗಿಸೋಣ ಅನ್ನಿಸುತ್ತದೆ. ಆದರೆ ಹಿರಿಯರ ಮುಂದೆ ಹೇಳಿಕೊಳ್ಳುವ ಧೈರ್ಯವಾಗುವುದಿಲ್ಲ. ಹಾಗೆ ಸೀಮಾಳ ಮದುವೆ ನಿಶ್ಚಯವಾದಾಗ ಕೊನೆಯದಾಗಿ ಅವಳು ಪೂಜಾಳಲ್ಲಿ ಭವಿಷ್ಯದ ಬದುಕಿನ ಭರವಸೆ ಕೊಡಬಹುದೇ ಎಂದು ಕೇಳುತ್ತಾಳೆ. ಆದರೆ ಪೂಜಾ ಬೇಡವೆನ್ನುತ್ತಾಳೆ. ತನ್ನಂಥ ಸಲಿಂಗಿಗೆ ಮದುವೆಯಿಂದ ತೊಂದರೆಯಾದೀತು. ಆದರೆ ಸೀಮಾಳಂಥ ದ್ವಿಲಿಂಗಿಗೆ ಏನೂ ನಷ್ಟವಾಗಲಾರದು ಅನ್ನುತ್ತಾಳೆ. ಮದುವೆಯಾಗಿ ಬೆಂಗಳೂರಿಗೆ ಹೋಗಿ ನೆಲೆಯೂರುವ ಸೀಮಾ, ಕೆಲವು ವರ್ಷಗಳ ನಂತರ ಒಂದು ದಿನ ಅಕಸ್ಮಿಕವಾಗಿ ದಾರಿಯಲ್ಲಿ ಕಂಡ ಪೂಜಾ ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿ ಇದ್ದುದನ್ನು ಕಂಡು ಅಪರಾದಿ ಭಾವದಿಂದ ನಲುಗುತ್ತಾಳೆ.

    ‘ಸುಖಾಂತ್ಯ ಬೇಕಾಗಿದೆ’ ಅನ್ನುವ ಕಥೆಯಲ್ಲೂ ಹೆಣ್ಣಿನ ತಂದೆಯ ಲಿಂಗತ್ವ ಸಮಸ್ಯೆಯೇ ಅವಳು ತನ್ನ ಪ್ರೇಮಿಯನ್ನು ದೂರ ಮಾಡಲು ಕಾರಣವಾಗುತ್ತದೆ. ವಿನಯಾ ಮತ್ತು ಭರತ್ ಬಾಲ್ಯ ಸ್ನೇಹಿತರಾಗಿದ್ದವರು ಮದುವೆಯಾಗಿ ಜತೆಗೆ ಬಾಳುವ ನಿರ್ಧಾರ ಮಾಡಿದರೂ ತಂದೆ-ತಾಯಿಯರ ನಡುವೆ ಉಂಟಾದ ಬಿರುಕಿನ ಅರಿವಾದಾಗ ಚಿಂತಾಕ್ರಾಂತಳಾದ ವಿನಯಾ ಭರತನಿಂದ ದೂರವಾಗುತ್ತಾಳೆ. ಆದರೆ ಕೆಲವು ವರ್ಷಗಳ ನಂತರ ತಾಯ್ತಂದೆಯರ ಸಮಸ್ಯೆಗೆ ಪರಿಹಾರ ಸಿಕ್ಕಿ ಅವರಿಬ್ಬರೂ ಒಂದಾದಾಗ ವಿನಯಾ ಪುನಃ ಭರತನನ್ನು ಬಯಸುತ್ತಾಳೆ. ಅದು ತನಕವೂ ಅವಿವಾಹಿತನಾಗಿ ಉಳಿದಿದ್ದ ಭರತ್ ಕೊನೆಗೆ ಅವಳನ್ನು ಸೇರಿ ಕಥೆ ಸುಖಾಂತ್ಯವಾಗುತ್ತದೆ.

    ‘ಬೆನ್ನು ಬಿಡದ ಬೇತಾಳ’ ಕಥೆ ಅಪ್ಪ-ಮಗಳ ಸಂಬಂಧದ ಕುರಿತಾದದ್ದು. ಹೆಂಡತಿ ಸತ್ತ ನಂತರ ಮಗಳಿಗೋಸ್ಕರ ಎರಡನೆಯ ಮದುವೆ ಮಾಡಿಕೊಳ್ಳದೆ ಮಗಳನ್ನು ಪ್ರೀತಿಯಿಂದ ಸಾಕಿ ಬೆಳೆಸಿದ ತಂದೆ ಪ್ರತಿದಿನವೆಂಬಂತೆ ತಲೆ ನೋವಿನಿಂದ ಒದ್ದಾಡುತ್ತ ಮಾತ್ರೆ ತೆಗೆದುಕೊಂಡಾಗ ಅವನ ಮೇಲೆ ಸದಾ ಸಿಡುಕುತ್ತಾಳೆ ಮಗಳು. ತಂದೆಯ ಕಷ್ಟವನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಈ ಕಾರಣದಿಂದಾಗಿಯೇ ಅಪಾರವಾಗಿ ನೊಂದು ಅಪ್ಪನ ತಲೆನೋವು ಉಲ್ಬಣಿಸುತ್ತದೆ. ಡಾಕ್ಟರ್ ಪರೀಕ್ಷೆ ಮಾಡಿದರೆ ಎಲ್ಲವೂ ಸರಿಯಾಗಿದೆ. ಕೊನೆಗೆ ಡಾಕ್ಟರ್ ಅದು ಮನೋರೋಗವೆಂದೂ, ಅವರು ಡಿಪ್ರೆಶನ್ ಗೆ ಹೋಗಿದ್ದಾರೆಂದೂ ಮನಶ್ಶಾಸ್ತ್ರಜ್ಞರ ಬಳಿ ಕರೆದುಕೊಂಡು ಹೋಗಬೇಕೆಂದು ಹೇಳುತ್ತಾರೆ. ಆಗ ಮಗಳಿಗೆ ತನ್ನ ತಪ್ಪಿನ ಅರಿವಾಗುತ್ತದೆ.

    ‘ಬಸಿರು’ ಮತ್ತೆ ಮತ್ತೆ ಬಸಿರಾಗಿ ಮಗುವನ್ನು ಕಳೆದುಕೊಳ್ಳುವ ಮತ್ತು ಅತ್ತೆಯಿಂದಲೂ ಜನರಿಂದಲೂ ‘ತಾಯಿಯಾಗದವಳು’ ಎಂದು ಹೀಗಳೆಯಿಸಿಕೊಳ್ಳುವ ಒಬ್ಬ ಸೂಕ್ಷ್ಮ ಮನಸ್ಸಿನ ಹೆಣ್ಣಿನ ನೋವನ್ನು ಕರುಳು ಕಿತ್ತು ಬರುವಂತೆ ಚಿತ್ರಿಸುತ್ತದೆ. ಸಂಕಲನದ ಒಂದು ಅತ್ಯುತ್ತಮ ಕಥೆಯಿದು.

    ಸೃಜನಾ ಅವರು ಕಥೆಗಳಿಗೆ ಆಯ್ದುಕೊಳ್ಳುವ ವಸ್ತುಗಳು ಮತ್ತು ಕಥನಶೈಲಿಗಳು ಚೆನ್ನಾಗಿವೆ. ಕಥೆಗಳು ಮನೋಜ್ಞವಾಗಿದ್ದು, ಸಂಭಾಷಣೆಗಳಿಗೆ ಅವರು ಬಳಸುವ ಕುಂದಾಪುರ ಕನ್ನಡವು ಕಥೆಗಳ ಸೊಗಸಿಗೆ ಪೂರಕವಾಗಿದೆ. ಒಟ್ಟಿನಲ್ಲಿ ಒಬ್ಬ ಭರವಸೆಯ ಕಥೆಗಾರ್ತಿಯಾಗಿ ಈ ಕೃತಿಯ ಮೂಲಕ ಅವರು ಪ್ರಕಟವಾಗಿದ್ದಾರೆ ಎಂದು ಹೇಳಲು ಅಡ್ಡಿಯಿಲ್ಲ.

    ಕೃತಿಯ ಹೆಸರು : ದುಂಡು ಮಲ್ಲಿಗೆಯ ಮುಖದವಳು (ಸಣ್ಣ ಕಥೆಗಳು)
    ಲೇ : ಸೃಜನಾ ಸೂರ್ಯ
    ಪ್ರ. : ಗಗನ ಪ್ರಕಾಶನ ಮೈಸೂರು

    –  ಪುಸ್ತಕ ವಿಮರ್ಶಕರು : ಪಾರ್ವತಿ ಜಿ. ಐತಾಳ್

    ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.

    ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.

     

    article baikady Literature review roovari
    Share. Facebook Twitter Pinterest LinkedIn Tumblr WhatsApp Email
    Previous Articleಮೈಸೂರು ರಂಗಾಯಣದ ಭೂಮಿಗೀತ ರಂಗ ಮಂದಿರದಲ್ಲಿ ನಾಟಕ ಪ್ರದರ್ಶನ | ಸೆಪ್ಟೆಂಬರ್ 14
    Next Article ಧಾರವಾಡದ ಸೃಜನ ರಂಗ ಮಂದಿರದಲ್ಲಿ ‘ಸ್ಮರಣೆ’ ಸಂಗೀತೋತ್ಸವ -2025 | ಸೆಪ್ಟೆಂಬರ್ 14
    roovari

    Add Comment Cancel Reply


    Related Posts

    ಕರ್ನಾಟಕ ಲೇಖಕಿಯರ ಸಂಘದ 2025ನೆಯ ಸಾಲಿನ ಪುಸ್ತಕ ಬಹುಮಾನಕ್ಕೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಫೆಬ್ರುವರಿ 10

    January 14, 2026

    ಮಂಗಳೂರಿನ ಪುರಭವನದಲ್ಲಿ ‘ಅನುಪಮ’ ಮಾಸಿಕದ ರಜತ ಮಹೋತ್ಸಹ ವರ್ಷಾಚರಣೆ | ಜನವರಿ 15

    January 14, 2026

    ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಶ್ರೀಮತಿ ಜಲಜಾ ಶೇಖರ್ ಆಯ್ಕೆ

    January 13, 2026

    ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ಹೂ ದಂಡಿ’

    January 13, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.