ವ್ಯಾಸ ಮಹಾಭಾರತವು ಸಾವಿರಾರು ಕೃತಿಗಳಿಗೆ ಜನ್ಮವಿತ್ತ ಮೂಲ ಬೇರು. ಸಾವಿರಾರು ಮಂದಿ ಲೇಖಕರು ಇದರ ಕಥೆಯನ್ನು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಕೆಲವರು ಇದ್ದದ್ದಿದ್ದ ಹಾಗೆಯೇ ರಚಿಸಿದರೆ ಇನ್ನು ಕೆಲವರು ಆಧುನಿಕ ಯುಗಕ್ಕೆ ಅನ್ವಯಿಸುವ ಹಾಗೆ ತಮ್ಮ ಕಲ್ಪನೆಗಳ ಮೂಸೆಯಲ್ಲಿ ಅದನ್ನು ಅದ್ದಿ ಕಥೆಗೆ ಬೇರೆಯೇ ಆದ ಸ್ವರೂಪವನ್ನು ಕೊಟ್ಡಿದ್ದಾರೆ. ಉದಯಕುಮಾರ್ ಹಬ್ಬು ಅವರ ‘ಉತ್ತರೆ’ ಮೂಲದ ಮರು ಓದು ಎಂಬ ಪರಿಕಲ್ಪನೆಯಲ್ಲಿ ಬರೆಯಲ್ಪಟ್ಟಿಲ್ಲವಾದರೂ ಮೂಲದ ಕೆಲವು ವಿಚಾರಗಳ ಮೇಲೆ ಹೊಸ ಬೆಳಕನ್ನು ಹಾಯಿಸಲು ಪ್ರಯತ್ನಿಸಿದೆ. ಉತ್ತರೆಯ ಪಾತ್ರವು ಮೂಲದಲ್ಲಿ ಯಾವುದೇ ಪ್ರಾಮುಖ್ಯವನ್ನು ಪಡೆಯದೆ ಅವಗಣನೆಗೆ ತುತ್ತಾದ ಪಾತ್ರ. ಹಬ್ಬು ಅವರು ಈ ಪಾತ್ರಕ್ಕೆ ತಮ್ಮ ಕಲ್ಪನೆಯ ಮೂಲಕ ಜೀವತುಂಬಿ ಆಕೆಯನ್ನು ಒಂದು ಪ್ರಬುದ್ಧ ಚಿಂತನೆಯುಳ್ಳ ಮಹತ್ವದ ಪಾತ್ರವನ್ನಾಗಿಸಿದ್ದಾರೆ. 206 ಪುಟಗಳ ಈ ಕಾದಂಬರಿ ಪೌರಾಣಿಕವೂ ಹೌದು. ಮರು ಸೃಷ್ಟಿಯೂ ಹೌದು.
‘ಉತ್ತರೆ’ ಕಾದಂಬರಿ ಆರಂಭವಾಗುವುದು ವಿರಾಟಪರ್ವದಲ್ಲಿ ಉತ್ತರೆಯ ಆಗಮನದೊಂದಿಗೆ. ಈ ನೆಪದಲ್ಲಿ ಲೇಖಕರು ನಮಗೆ ಪಾಂಡವರ ಅಜ್ಣಾತವಾಸದ ಕಥೆಯನ್ನೂ ಅದಕ್ಕೆ ಮೊದಲು ಕೌರವರು ಪಾಂಡವರಿಗೆ ವಿನಾಕಾರಣ ಕೊಟ್ಟ ಹಿಂಸೆ ಮತ್ತು ಅವರು ಮಾಡಿದ ವಂಚನೆಗಳ ಕಥೆಯನ್ನೂ ಹೇಳುತ್ತಾರೆ. ವಿರಾಟಪುತ್ರಿ ಉತ್ತರೆ ಆಗ ಅದ್ಭುತ ರೂಪಲಾವಣ್ಯಗಳನ್ನು ಹೊಂದಿದ್ದ ಹನ್ನೆರಡು ವರ್ಷ ಪ್ರಾಯದ ಪೋರಿ. ಸಖಿಯರ ಜತೆಗೆ ಅರಮನೆಯ ಎಲ್ಲಾ ಕಡೆಗೂ ಚುರುಕಾಗಿ ಓಡಾಡುತ್ತಿದ್ದ ಸುಂದರ ಚಿಗರೆಮರಿ. ಅರಮನೆಗೆ ಯಾರು ಬಂದರೂ ಅವರ ಬಗ್ಗೆ ಕೂಲಂಕಷವಾಗಿ ತಿಳಿದುಕೊಳ್ಳುವ ಕುತೂಹಲ ಅವಳಲ್ಲಿದೆ. ಆದ್ದರಿಂದಲೇ ಕಂಕಭಟ್ಟ, ವಲಲ, ಬೃಹನ್ನಳೆ, ಸೈರಂಧ್ರಿ- ಎಲ್ಲರ ಹತ್ತಿರವೂ ಹೋಗಿ ಸಂಭಾಷಣೆ ನಡೆಸಿ ಪಾಂಡವರ ಬಗ್ಗೆ ತಿಳಿದುಕೊಳ್ಳುತ್ತಾಳೆ. ಅಷ್ಟು ಚಿಕ್ಕವಳಾದರೂ ಅವಳಲ್ಲಿ ಅತಿಥಿ ಸತ್ಕಾರದ ಪ್ರಜ್ಞೆ ಪ್ರಖರವಾಗಿದೆ. ಅವರಲ್ಲಿ ಪ್ರತಿಯೊಬ್ಬನ ಹತ್ತಿರವೂ ಮಾತನಾಡುವ ಅವಳು ಅವರಿಗಾದ ಅನ್ಯಾಯಗಳ ವಿರುದ್ಧ ಧ್ವನಿ ಎತ್ತುತ್ತಾಳೆ. ತುಂಬಿದ ಸಭೆಯಲ್ಲಿ ದ್ರೌಪದಿಗಾದ ಅಪಮಾನದ ಬಗ್ಗೆ ಕೇಳಿದಾಗ ಸ್ತ್ರೀಪರವಾಗಿ ವಾದಿಸುತ್ತಾಳೆ. ಮೃದು ಮನಸ್ಸಿನ ಮುಗ್ಧೆಯಾದ ಅವಳು ವೇಷ ಮರೆಸಿದ ಪಾಂಡವರ ಮನಸ್ಸನ್ನು ಗೆಲ್ಲುತ್ತಾಳೆ.
ಉತ್ತರೆಗೆ ನೃತ್ಯ ಕಲಿಸುವ ಬೃಹನ್ನಳೆ (ಅರ್ಜುನ)ಯ ಮನಸ್ಸು ಅವಳ ಕಡೆಗೆ ವಾಲಿದರೂ ತಾನು ಅವಳ ತಂದೆಯ ವಯಸ್ಸಿನವನು ಎಂಬ ಅರಿವಿನಿಂದ ಅರ್ಜುನ ತನ್ನ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳುತ್ತಾನೆ. ಪಾಂಡವರ ಅಜ್ಞಾತ ವಾಸದ ಅವಧಿ ಮುಗಿದು ಅವರು ತಮ್ಮ ನಿಜರೂಪವನ್ನು ಅನಾವರಣಗೊಳಿಸಿದ ನಂತರ ಹದಿನಾಲ್ಕರ ಹರೆಯದ ಅಭಿಮನ್ಯುವಿನಂತಹ ಸಕಲ ಗುಣ ಸಂಪನ್ನನ ಜತೆಗೆ ಅವಳ ವಿವಾಹವಾಗುತ್ತದೆ. ವಿವಾಹಾನಂತರದ ಈ ಅನುರೂಪ ಜೋಡಿಯ ಪ್ರೇಮಕಥೆಯನ್ನು ಹಬ್ಬು ಅವರು ಬಹಳ ಹೃದಯಂಗಮವಾಗಿ ಕಟ್ಟಿಕೊಟ್ಟಿದ್ದಾರೆ. ಆರೇ ತಿಂಗಳಲ್ಲಿ ಮಹಾಭಾರತ ಯುದ್ಧ ಆರಂಭವಾದಾಗ ಅಭಿಮನ್ನು ರಣಾಂಗಣಕ್ಕೆ ಹೊರಟು ನಿಂತಾಗ ಉತ್ತರೆಯ ತಳಮಳವೂ ಬಹಳ ಚೆನ್ನಾಗಿ ಚಿತ್ರಿತವಾಗಿದೆ. ಅದರಲ್ಲೂ ಯಾರಿಂದಲೂ ಭೇಧಿಸಲಾಗದ ಚಕ್ರವ್ಯೂಹವನ್ನು ತಾನು ಭೇಧಿಸುವೆನೆಂದು ಅವನು ಮುಂದಾದಾಗ ಉತ್ತರೆಯ ದಿಗಿಲು ಮುಗಿಲು ಮುಟ್ಟುತ್ತದೆ. ಅವಳು ಯುದ್ಧದ ವಿನಾಶಕಾರಿ ಸ್ವಭಾವದ ಬಗ್ಗೆ ಪ್ರೌಢಳಂತೆ ಮಾತನಾಡುತ್ತಾಳೆ.
ವಿಧಿಲಿಖಿತದಂತೆ ಅಭಿಮನ್ಯುವಿನ ಸಾವನ್ನು ಯಾರಿಂದಲೂ ತಡೆಹಿಡಿಯಲಾಗುವುದಿಲ್ಲ. ಆದರೆ ದುಷ್ಟ ಕೌರವರು ಮಾತ್ರವಲ್ಲದೆ ದ್ರೋಣ ಕೃಪರಂಥ ಹಿರಿಯರೂ ಅಭಿಮನ್ಯುವನ್ನು ಬೆನ್ನ ಹಿಂದಿನಿಂದ ಇರಿದು ನಡೆಸಿದ ಕಗ್ಗೊಲೆಯನ್ನು ಉತ್ತರೆಯಿಂದ ಸಹಿಸಿಕೊಳ್ಳಲಾಗುವುದಿಲ್ಲ. ಆದ್ದರಿಂದಲೇ ಪತಿಯ ಜತೆಗೆ ತಾನೂ ಚಿತೆಯೇರುತ್ತೇನೆಂದು ಅವಳು ಪ್ರಲಾಪಿಸುತ್ತಾಳೆ. ಆದರೆ ಅವಳ ಗರ್ಭದಲ್ಲಿರುವ ಅಭಿಮನ್ಯುವಿನ ಕುಡಿ ಅವಳನ್ನು ತಡೆಯುತ್ತದೆ.
ವಿರಾಟನ ಅರಮನೆಯೊಳಗಿನ ಸೇವಕಿಯರ ಉತ್ತಮ ಆರೈಕೆಯಲ್ಲಿ ತುಂಬು ಗರ್ಭಿಣಿಯಾಗಿ ಉತ್ತರೆ ಗಂಡುಮಗುವಿಗೆ ಜನ್ಮವೀಯುತ್ತಾಳೆ. ಅಪ್ಪನ ತದ್ರೂಪಿಯಂತಿರುವ ಮಗು ಪರೀಕ್ಷಿತ ಉತ್ತರೆಗೆ ಮರುಜನ್ಮವೀಯುತ್ತದೆ. ಕ್ರಮೇಣ ಅವಳು ದುಃಖವನ್ನು ಮರೆತು ಮಗುವಿನ ಭವಿಷ್ಯದ ಕಡೆಗೆ ಗಮನವೀಯುತ್ತಾಳೆ. ಯುದ್ಧಾನಂತರ ಹದಿನೈದು ವರ್ಷಗಳ ಕಾಲ ಯುಧಿಷ್ಠಿರನು ರಾಜ್ಯವಾಳುತ್ತಾನೆ. ಧೃತರಾಷ್ಟ್ರ-ಗಾಂಧಾರಿ-ಕುಂತಿ-ವಿದುರರು ವಾನಪ್ರಸ್ಥಕ್ಕೆ ಹೋಗಿ ಕಾಡಿನಲ್ಲೇ ಸಾಯುತ್ತಾರೆ.
ಶ್ರೀಕೃಷ್ಣನದ್ದೂ ಅಂತ್ಯವಾಗುತ್ತದೆ. ಅದರೊಂದಿಗೆ ದ್ವಾಪರಯುಗ ಕೊನೆಗೊಂಡು ಕಲಿಯುಗ ಆರಂಭವಾಗುತ್ತದೆ. ಇಡೀ ರಾಜ್ಯವೇ ಅತ್ಯಂತ ಹೀನಾಯ ಸ್ಥಿತಿಗೆ ಇಳಿಯುತ್ತದೆ. ಕೃಷ್ಣನಿಲ್ಲದ ರಾಜ್ಯಭಾರ ತಮಗೆ ಬೇಡವೆಂದು ಪಾಂಡವರು ಪರೀಕ್ಷಿತನಿಗೆ ಪಟ್ಟಾಭಿಷೇಕ ಮಾಡಿ ತಾವೂ ವಾನಪ್ರಸ್ಥಕ್ಕೆ ಹೋಗುತ್ತಾರೆ. ಹೋಗುವ ಮೊದಲು ಧರ್ಮರಾಯನು ಪರೀಕ್ಷಿತನಿಗೆ ಹೇಗೆ ರಾಜ್ಯಭಾರ ಮಾಡಬೇಕು, ಪರಿಸ್ಥಿತಿಯನ್ನು ಹೇಗೆ ಹತೋಟಿಗೆ ತೆಗೆದುಕೊಳ್ಳಬೇಕೆಂದು ಬೋಧಿಸುತ್ತಾನೆ. ಪರೀಕ್ಷಿತನು ರಾಜನಾದಾಗ ವೇದವ್ಯಾಸರು ಬಂದು ಪರೀಕ್ಷಿತನಿಗೆ ಪಾಂಡವರ ಪೂರ್ವಕಥೆಯನ್ನು ಹೇಳುತ್ತಾರೆ. ಪರೀಕ್ಷಿತನು 60 ವರ್ಷಗಳ ಕಾಲ ರಾಜ್ಯಭಾರ ಮಾಡುತ್ತಾನೆ ಎಂಬ ಮುನ್ಸೂಚನೆ ಕಾದಂಬರಿಯ ಕೊನೆಗೆ ಇದೆ. ಪರೀಕ್ಷಿತನ ಏಳಿಗೆಯನ್ನು ತುಂಬು ಸಂತೋಷದಿಂದಲೇ ವೀಕ್ಷಿಸುವ ಉತ್ತರೆಯ ಸ್ವಗತದಲ್ಲಿ ಅವಳು ಅಭಿಮನ್ಯುವಿನ ಜತೆಗಿನ ತನ್ನ ಉದಾತ್ತ ಪ್ರೇಮದ ಬಗ್ಗೆ ಮಾತನಾಡುತ್ತ ‘ನಮ್ಮ ಪ್ರೀತಿ ಅಗಸದಲ್ಲಿನ ನಕ್ಷತ್ರಗಳಷ್ಟೇ ಶಾಶ್ವತ’ ಎನ್ನುತ್ತಾಳೆ. ಕಾದಂಬರಿ ಇಲ್ಲಿಗೆ ಕೊನೆಗೊಳ್ಳುತ್ತದೆ.
ಹಬ್ಬು ಅವರು ಮೂಲ ಮಹಾಭಾರತದ ಅನೇಕ ಪಠ್ಯಾಂತರಗಳನ್ನು ಇಲ್ಲಿ ಪರಾಮರ್ಶಿಸಿದ್ದಾರೆ. ಉದಾಹರಣೆಗೆ ಅಜ್ಞಾತವಾಸದ ಬಳಿಕ ಪಾಂಡವರು ‘ಪಲ್ಲವಪುರ’ ಎಂಬಲ್ಲಿ ನೆಲೆನಿಂತರೆಂದು ಅವರು ಹೇಳುತ್ತಾರೆ. ಇದು ವ್ಯಾಸಭಾರತದಲ್ಲಿ ಇಲ್ಲ. ಅಂತೆಯೇ ಅಭಿಮನ್ಯುವಿನ ಮರಣದ ನಂತರ ಗಾಂಧಾರಿ ಉತ್ತರೆಯ ದುಃಖದ ಬಗ್ಗೆ ಕೃಷ್ಣನ ಬಳಿ ಹೇಳುವುದು ಕೂಡಾ. ಹೀಗೆ ಇಡೀ ಕೃತಿಯಲ್ಲಿ ಹಬ್ಬು ಅವರ ಪರಿಶ್ರಮ-ಕಲ್ಪನೆಗಳು ಬಹಳಷ್ಟು ಕೆಲಸ ಮಾಡಿದ್ದು ಸ್ಪಷ್ಟವಾಗಿ ಕಾಣುತ್ತವೆ. ಅಲ್ಲಲ್ಲಿ ಸಾಂದರ್ಭಿಕವಾಗಿ ಬರುವ ವರ್ಣನೆಗಳು ಸೊಗಸಾಗಿವೆ.
ವಿಮರ್ಶಕಿ : ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.
ಕೃತಿಯ ಹೆಸರು : ಉತ್ತರೆ (ಕಾದಂಬರಿ)
ಲೇಖಕರು : ಉದಯಕುಮಾರ್ ಹಬ್ಬು
ಪ್ರ : ಅನಿರುದ್ಧ ಪ್ರಕಾಶನ, ಮೈಸೂರು