ಮಂಗಳೂರು : ನಂತೂರು ಶ್ರೀ ಭಾರತಿ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಘಟಕ, ಹವ್ಯಕ ಸಭಾ ಮಂಗಳೂರು ಹಾಗೂ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಇವುಗಳು ಜಂಟಿಯಾಗಿ ಆಯೋಜಿಸಿದ ‘ಕೌಟುಂಬಿಕ ಹಾಗೂ ಸಾಮಾಜಿಕ ಮೌಲ್ಯಗಳ ಅನಿವಾರ್ಯತೆ’ ಎಂಬ ವಿಚಾರಗೋಷ್ಠಿಯು ದಿನಾಂಕ 25 ಜನವರಿ 2026ರಂದು ನಡೆಯಿತು.
ಈ ವಿಚಾರಗೋಷ್ಠಿಯಲ್ಲಿ ಸಂಪನ್ನೂಲ ವ್ಯಕ್ತಿಯಾಗಿ ಮಾತನಾಡಿದ ಮಾಯಾಮೃಗ ಖ್ಯಾತಿಯ ಹಿರಿಯ ಖ್ಯಾತ ನಟ ಹಾಗೂ ಆದಾಯ ತೆರಿಗೆ ಇಲಾಖೆಯ ನಿವೃತ್ತ ಸಹ ಆಯುಕ್ತರಾದ ಸೇತುರಾಮ್ “ನಾವು ಅಪ್ರಾಮಾಣಿಕರಾದರೆ ನಮ್ಮ ಸುತ್ತಲಿನವರೂ ನಮಗೆ ಅಪ್ರಾಮಾಣಿಕರಾಗಿಯೇ ಕಾಣುತ್ತಾರೆ. ಅದೇ ನಾವು ಪ್ರಾಮಾಣಿಕರಾಗಿದ್ದರೆ ಎಲ್ಲರೂ ಪ್ರಾಮಾಣಿಕರೇ. ಸಮಾಜದಲ್ಲಿ ಮೌಲ್ಯಗಳು ಸತ್ತಿವೆ ಎನ್ನುವುದು ಸರಿಯಲ್ಲ. ಮೌಲ್ಯಗಳು ಸತ್ತಿದ್ದರೆ ಲಂಚ ತೆಗೆದುಕೊಳ್ಳುವವರು ಯಾಕೆ ನೇರವಾಗಿ ತೆಗೆದುಕೊಳ್ಳುತ್ತಿಲ್ಲ. ಅವರೊಳಗಿನ ಅಂತಸ್ಸಾಕ್ಷಿ ಅದು ಸರಿ ಅಲ್ಲ ಎನ್ನುವ ಕಾರಣದಿಂದಲ್ಲವೇ? ನಮಗೆ ಈಗ ಯಾರ ಬಗ್ಗೆಯೂ ಯಾರ ಬಗ್ಗೆಯೂ ನಂಬಿಕೆ ಇಲ್ಲ. ಮೆಷೀನ್ ಗಳನ್ನು ನಂಬುವ ನಾವು ಮನುಷ್ಯರನ್ನು ನಂಬುವುದಿಲ್ಲ. ಬೃಹತ್ ನಗರಗಳಿಗೆ ಹೋಲಿಸಿದರೆ ಸಣ್ಣ ಸಣ್ಣ ಊರುಗಳಲ್ಲಿ ಇನ್ನೂ ಮೌಲ್ಯಗಳು ಜೀವಂತವಾಗಿವೆ” ಎಂದು ಹೇಳಿದರು.

ಬ್ಯಾಂಕ್ ಆಫ್ ಬರೋಡ ಮಂಗಳೂರು ವಲಯದ ವಲಯ ಮುಖ್ಯಸ್ಥರಾದ ರಾಜೇಶ್ ಖನ್ನಾರವರು ಮುಖ್ಯ ಅತಿಥಿಗಳಾಗಿದ್ದು, “ಸಾಹಿತ್ಯ ಜನಜೀವನದ ಕನ್ನಡಿ. ಸಮಾಜವನ್ನು ಮುಟ್ಟುವ ಮತ್ತು ತಟ್ಟಿ ಎಚ್ಚರಿಸುವ ಕೆಲಸವನ್ನು ಸಾಹಿತ್ಯ ಮಾಡಬೇಕು. ಆ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ಘಟಕ ಉತ್ತಮ ಕೆಲಸ ಮಾಡುತ್ತಿದೆ” ಎಂದು ಶ್ಲಾಘಿಸಿದರು. ಇನ್ನೋರ್ವ ಮುಖ್ಯ ಅತಿಥಿ ಖ್ಯಾತ ದಂತ ವೈದ್ಯ ಡಾ. ರಾಜೇಂದ್ರ ಪ್ರಸಾದರು ಶುಭ ಹಾರೈಸಿದರು.


ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರು ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮಂಜುನಾಥ ರೇವಣಕರರವರು ತಮ್ಮ ಅಹರ್ನಿಷಿ ಪ್ರಯತ್ನದಿಂದ ಮಂಗಳೂರಿನ ವಾಮಂಜೂರಿನಲ್ಲಿ ಸಾಹಿತ್ಯ ಪರಿಷತ್ತಿನ ಮಂಗಳೂರು ಘಟಕಕ್ಕೆ ಸರ್ಕಾರದಿಂದ ಅರ್ಧ ಎಕರೆ ಜಮೀನನ್ನು ಮಂಜೂರು ಮಾಡಿಸಿದುದಕ್ಕಾಗಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಾ. ಮುರಳಿ ಮೋಹನ ಚೂಂತಾರ್ ಗಣ್ಯರನ್ನು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರ್ವಹಿಸಿದರು. ಕೋಶಾಧಿಕಾರಿ ಸುಬ್ರಾಯ ಭಟ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಗಣೇಶ ಪ್ರಸಾದ ಜೀಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪರಿಷತ್ತಿನ ಸದಸ್ಯೆ ರತ್ನಾವತಿ ಜೆ. ಬೈಕಾಡಿ ಪ್ರಾರ್ಥಿಸಿದರು. ಇಂಚರ ತಂಡ ಮಂಗಳೂರಿನ ಸದಸ್ಯೆಯರಿಂದ ವಚನ ಗಾಯನ ನಡೆಯಿತು. ಕ.ಸಾ.ಪ. ಮಂಗಳೂರು ತಾಲೂಕು ಘಟಕದ ಸರ್ವಸದಸ್ಯರು ಹಾಗೂ ಹವ್ಯಕ ಸಭಾದ ಸದಸ್ಯರು ಉಪಸ್ಥಿತರಿದ್ದರು.


