ಮಂಗಳೂರು : ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅಭಿವಂದನಾ ಸಮಿತಿ ವತಿಯಿಂದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅಭಿವಂದನ ಮತ್ತು ‘ಕರ್ಮಯೋಗಿ’ ಬಿರುದು ಪ್ರದಾನ ಸಮಾರಂಭವು ಪಿಲಿಕುಳದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ತರಬೇತಿ ಕೇಂದ್ರದಲ್ಲಿ ದಿನಾಂಕ 10 ಮೇ 2025ರಂದು ನೆರವೇರಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ “ಬಹಳ ಉತ್ತಮವಾಗಿ ಆಯೋಜಿಸಲಾದ ಈ ಅಭಿವಂದನಾ ಕಾರ್ಯಕ್ರಮವು ಸಾಮಾನ್ಯ ಕಾರ್ಯಕ್ರಮಗಳಂತಲ್ಲ. ಇದು ಕರ್ನಾಟಕದ ಯುವ ಸಮುದಾಯಕ್ಕೆ ಹರಿಕೃಷ್ಣ ಪುನರೂರು ಅವರ ವ್ಯಕ್ತಿತ್ವದ ಪರಿಚಯದ ಕಾರ್ಯಕ್ರಮ. ಶಾಲಾ, ಕಾಲೇಜುಗಳಲ್ಲಿ ಒಂದಷ್ಟನ್ನು ಕಲಿಯಬಹುದು. ಇಂತಹ ವ್ಯಕ್ತಿ ಪರಿಚಯದಿಂದ ಈಗಿನ ಪೀಳಿಗೆ ಕಲಿಯಲು ಅಗಾಧವಾಗಿದೆ. ಜಿಲ್ಲೆಯ ಪರಂಪರೆ ಮತ್ತು ಸಂಸ್ಕತಿಯನ್ನು ಕಾಣುವುದಿದ್ದರೆ ಅದು ಪುನರೂರರಿಂದ ಮಾತ್ರ. ಇವರ ಸೇವಾ ಗುಣವು ನಿಜಕ್ಕೂ ಸಮಾಜಕ್ಕೆ ಮಾದರಿ. ಮನುಷ್ಯ ಕೊನೆಗೆ ಹೋಗುವಾಗ ತನ್ನ ಯಾವುದೇ ಅಧಿಕಾರವನ್ನು ತೆಗೆದುಕೊಂಡು ಹೋಗುವುದಿಲ್ಲ. ಆತ ಯಾವುದನ್ನಾದರೂ ತೆಗೆದುಕೊಂಡು ಹೋಗುವುದಿದ್ದರೆ ಅದು ಪ್ರೀತಿ ಮತ್ತು ವಿಶ್ವಾಸ ಮಾತ್ರ” ಎಂದರು.
ನಂತರ ಮಾತನಾಡಿದ ಡಾ. ವೀರೇಂದ್ರ ಹೆಗ್ಗಡೆ “ಅನೇಕ ಸ್ಥಾನಗಳನ್ನು ಪುನರೂರರು ಅಲಂಕರಿಸಿ ಅದರ ಶ್ರೇಯಸ್ಸನ್ನು ಹೆಚ್ಚಿಸಿದ್ದಾರೆ. ಈ ದಿನ ಅವರಿಗೆ ನೀಡಿರುವ ‘ಕರ್ಮಯೋಗಿ’ ಎನ್ನುವ ಬಿರುದು ಅವರ ವ್ಯಕ್ತಿತ್ವ ಹಾಗೂ ಅವರು ನೀಡಿದ ಕೊಡುಗೆಗಳಿಗೆ ಸೂಕ್ತವಾಗಿದೆ” ಎಂದರು.
ಆಶೀರ್ವಚನ ನೀಡಿದ ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, “ಪುನರೂರು ಕರ್ನಾಟಕಕ್ಕೆ ಕೊಟ್ಟ ಕೊಡುಗೆ ಅಮೂಲ್ಯವಾದದ್ದು, ಪುಟ್ಟ ಊರು ಪುನರೂರು ಇಂದು ದೇಶದ ಉದ್ದಗಲಕ್ಕೂ ಮನೆಮಾತಾಗಿದ್ದು ಹರಿಕೃಷ್ಣ ಪುನರೂರು ಅವರ ಕರ್ಮಯೋಗದಿಂದ ಸಮಾಜದ ಮೇಲೆ ದೀನದಲಿತರ ಮೇಲೆ ವಿಶೇಷ ಕರುಣೆ ಹೊಂದಿದ್ದ ಅವರು ಓರ್ವ ನಿಗರ್ವಿ, ನಿರಹಂಕಾರಿ ವ್ಯಕ್ತಿತ್ವ ಉಳ್ಳವರು” ಎಂದರು.
ಮುಲ್ಕಿ, ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಮಾತನಾಡಿ “ರಂಗ ಭೂಮಿ, ಯಕ್ಷಗಾನಕ್ಕೆ ಅವರು ನೀಡಿದ ಕೊಡುಗೆ ಆಗಾಧವಾದದ್ದು. ಪುನರೂರು ಮತ್ತು ಅವರ ಸಂಗಡಿಗರ ಹೋರಾಟ ಇಂದು ಮುಲ್ಕಿ ತಾಲೂಕು ಸ್ಥಾಪನೆಯಾಗುವುದಕ್ಕೆ ಕಾರಣವಾಗಿದೆ” ಎಂದರು.
ಅಭಿವಂದನ ನುಡಿಯನ್ನಾಡಿದ ಸಾಹಿತಿ ಹಾಗೂ ಸಂಶೋಧಕ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ “ಸಾಧಿಸಿದವನಿಗೆ ಎಂದಿಗೂ ಕೂಡ ಬೇಸರ, ಅಹಂಕಾರ, ಆಲಸ್ಯವಿರಬಾರದು. ಇದಕ್ಕೆ ಅರ್ಥಪೂರ್ಣವಾದ ಹೆಸರು ಹರಿಕೃಷ್ಣ ಪುನರೂರು. ಬಡವರಿಗೆ ಸ್ವಂತ ಸೂರನ್ನು ಕಟ್ಟಿಸಿಕೊಟ್ಟ ಪುಣ್ಯಾತ್ಮ. ಇವರು ಮನಸ್ಸು ಮಾಡಿದ್ದರೆ ರಾಜಕೀಯವಾಗಿ ಅಥವಾ ಇನ್ಯಾವುದೋ ರೀತಿಯಲ್ಲಿ ಸಾಧಿಸಿಬಹುದಿತ್ತು. ಆದರೆ ಇವರು ವಿನಯದಿಂದ ಜನರಿಗೆ ಹಿತವಾಗುವಂತ ಸಾಧನೆಗಳನ್ನು ಮಾಡಿದ್ದಾರೆ” ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಸಾರ್ವಜನಿಕರಿಗೆ ಅಭಿನಂದನೆ ಸಲ್ಲಿಸಲು ಅವಕಾಶ ಕಲ್ಪಿಸಲಾಯಿತು. ಸಹ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಪುನರೂರು ಅವರ ಪತ್ನಿ ಉಷಾ ರಾಣಿ, ದುಗ್ಗಣ್ಣ ಸಾಮಂತರು, ಪ್ರದೀಪ್ ಕಲ್ಕೂರ, ಉದ್ಯಮಿ ಶ್ರೀಪತಿ ಭಟ್, ಡಾ. ಶ್ರೀನಾಥ್, ಭುವನಾಭಿರಾಮ ಉಡುಪ ಮತ್ತಿತರರು ಉಪಸ್ಥಿತರಿದ್ದರು. ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸ್ವಾಗತಿಸಿ, ನವನೀಶ್ ಶೆಟ್ಟಿ ಕದ್ರಿ ನಿರೂಪಿಸಿದರು.