ಧರ್ಮತ್ತಡ್ಕ : ಬೆಂಗಳೂರಿನ ಶಂಪಾ ಪ್ರತಿಷ್ಠಾನದ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಮತ್ತು ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ ಇದರ ಸಹಯೋಗದೊಂದಿಗೆ ಪೊಸಡಿ ಗುಂಪೆ ನಿಸರ್ಗಧಾಮದಲ್ಲಿ ದಿನಾಂಕ 15 ಮತ್ತು 16 ನವೆಂಬರ್ 2025ರಂದು ಡಾ. ಎಸ್.ಎಲ್. ಭೈರಪ್ಪನವರ ಸಂಸ್ಮರಣೆ ಮತ್ತು ಕೃತಿಗಳ ಅವಲೋಕನ ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್ ಇವರು ಸಾಲುಮರದ ತಿಮ್ಮಕ್ಕನವರ ಸ್ಮರಣೆಯೊಂದಿಗೆ ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ “ಇಪ್ಪತ್ತಕ್ಕೂ ಮಿಕ್ಕಿ ಅಮೂಲ್ಯ ಕಾದಂಬರಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಎಸ್.ಎಲ್. ಭೈರಪ್ಪನವರು ಕನ್ನಡಿಗರಲ್ಲಿ ಓದುವ ಅಭಿರುಚಿ ಹೆಚ್ಚಿಸಿದ ಮಹಾನ್ ಕಾದಂಬರಿಕಾರ” ಎಂದು ಹೇಳಿದರು.

ವಿಶ್ರಾಂತ ಕುಲಪತಿ, ಜಾನಪದ ತಜ್ಞ ಡಾ. ಕೆ. ಚಿನ್ನಪ್ಪ ಗೌಡರು ಅಧ್ಯಕ್ಷತೆಯನ್ನು ವಹಿಸಿದ್ದರು. ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಸಾಹಿತಿ ಡಾ. ಸುರೇಶ್ ಪಾಟೀಲ ಬೆಂಗಳೂರು, ಪತ್ರಕರ್ತ ಅಚ್ಯುತ ಚೇವಾರು ಮುಖ್ಯ ಅತಿಥಿಗಳಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿಯವರು ಆಶಯ ಭಾಷಣವನ್ನು ಮಾಡಿದರು.

ಬಳಿಕ ಭೈರಪ್ಪನವರ ಕಾದಂಬರಿಗಳ ಕುರಿತು ರಾಷ್ಟ್ರಮಟ್ಟದ ವಿಚಾರ ಸಂಕಿರಣ ನಡೆಯಿತು. ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಉಪನ್ಯಾಸಕ ಟಿ.ಎ.ಎನ್. ಖಂಡಿಗೆ (ಯಾನ), ಕಾಸರಗೋಡು ಸರಕಾರಿ ಕಾಲೇಜಿನ ಸಹಪ್ರಾಧ್ಯಾಪಕಿ ಡಾ. ವೇದಾವತಿ (ನಿರಾಕರಣ), ಶೇಣಿಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಅಧ್ಯಾಪಕ, ಯುವ ಲೇಖಕ ಡಾ. ಸುಭಾಷ್ ಪಟ್ಟಾಜೆ (ಉತ್ತರಕಾಂಡ), ಖ್ಯಾತ ವಿಮರ್ಶಕ ಡಾ. ಬಿ. ಜನಾರ್ದನ ಭಟ್ (ಗೃಹಭಂಗ), ಬೆಂಗಳೂರಿನ ಬಿ.ಎಂ.ಶ್ರೀ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಶಾಂತರಾಜು (ಸಾರ್ಥ), ಮೈಸೂರು ಮಹಾರಾಜ ಕಾಲೇಜಿನ ಪ್ರಾಧ್ಯಾಪಕ ಡಾ. ಟಿ.ಕೆ. ಕೆಂಪೇಗೌಡ (ಆವರಣ), ಕೇಂದ್ರ ಸಾಹಿತ್ಯ ಅಕಾಡೆಮಿಯ ನಿವೃತ್ತ ಪ್ರಾದೇಶಿಕ ಕಾರ್ಯದರ್ಶಿ ಡಾ. ಎಸ್.ಪಿ. ಮಹಾಲಿಂಗೇಶ್ವರ ಭಟ್ (ದೂರಸರಿದರು), ಶಂಪಾ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಡಾ. ಶಾರದಾ ಬೆಂಗಳೂರು (ತಂತು), ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಶಿವಶಂಕರ ಪಿ. (ಪರ್ವ), ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ. ರಾಧಾಕೃಷ್ಣ ಬೆಳ್ಳೂರು (ಅಂಚು), ಬಿ.ಎಸ್.ಎನ್.ಎಲ್.ನ ನಿವೃತ್ತ ಡಿ.ಜಿ.ಎಂ. ರಾಮಚಂದ್ರ ಕೆ. (ಸಾಕ್ಷಿ), ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕಿ ಪ್ರೊ. ಲಕ್ಷ್ಮಿ ಕೆ. (ಮಂದ್ರ), ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ. ಶ್ರೀಧರ ಏತಡ್ಕ (ಜಲಪಾತ), ಕಾಸರಗೋಡು ಸರಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಿಕೆ ಡಾ. ಆಶಾಲತಾ (ನಾಯಿ ನೆರಳು), ಅನುವಾದಕಿ, ಲೇಖಕಿ ಮಾಧುರಿ ದೇಶಪಾಂಡೆ ಬೆಂಗಳೂರು (ನೆಲೆ) ಕೃತಿಗಳ ಅವಲೋಕನವನ್ನು ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಮತ್ತು ಶಂಪಾ ಪ್ರತಿಷ್ಠಾನದ ಸಂಘಟನಾ ಕಾರ್ಯದರ್ಶಿ ಡಾ. ಎಚ್.ಎಲ್. ಮಂಜುನಾಥ್ ಬೆಂಗಳೂರು ಕಾರ್ಯಕ್ರಮ ನಿರೂಪಿಸಿದರು. ಲೇಖಕಿ ಡಾ. ಮೀನಾಕ್ಷಿ ರಾಮಚಂದ್ರ ಪ್ರಾರ್ಥನೆ ಹಾಡಿದರು. ಶಂಪಾ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಪ್ರಮೀಳಾ ಮಾಧವ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯಾಧ್ಯಕ್ಷ ಪ್ರೊ. ಪಿ.ಎನ್. ಮೂಡಿತ್ತಾಯ ವಂದಿಸಿದರು.

