ಕಾರ್ಕಳ : ಶಾರದಾ ಮಹಿಳಾ ಮಂಡಲದ ಅಧ್ಯಕ್ಷೆ ಸಾವಿತ್ರಿ ಮನೋಹರ ಇವರ ಹಾಗೂ ಪುತ್ರಿ ಸ್ವಾತಿ ಅಜಿತ್ ಶರ್ಮರವರ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ 19 ಮೇ 2025ರಂದು ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆ ಹಾಗೂ ಶಾರದಾ ಮಹಿಳಾ ಮಂಡಳಿ ಅನಂತಶಯನ ಇವುಗಳ ಸಹಭಾಗಿತ್ವದಲ್ಲಿ ಪೆರ್ವಾಜೆ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು.
ನಿವೃತ್ತ ಮುಖ್ಯೋಪಾಧ್ಯಾಯಿನಿ ಸಾವಿತ್ರಿ ಮನೋಹರರವರು ತಮ್ಮ ಕೃತಿಯ ಕುರಿತು ಅನಿಸಿಕೆಗಳನ್ನು ಹಂಚಿಕೊಂಡರು. ಇವರ ‘ಮಾನನಿಧಿ ಮೌನವಾದ’ ಎಂಬ ನಾಟಕ ಕೃತಿಯನ್ನು ಲೇಖಕಿ ಡಾ. ಜಾನಕಿ ಸುಂದರೇಶ್ ಬಿಡುಗಡೆ ಮಾಡಿ ಕೃತಿಯ ಕುರಿತು ಮಾತನಾಡಿದರು. ಸ್ವಾತಿ ಅಜಿತ್ ಶರ್ಮರವರ ‘ಪಂಜರದೊಳಗಿನ ಪಕ್ಷಿ’ ಚೊಚ್ಚಲ ಕವನ ಸಂಕಲನವನ್ನು ಇವರ ಹೆತ್ತವರಾದ ನಿವೃತ್ತ ಮುಖ್ಯೋಪಾಧ್ಯಾಯರಾದ ಮನೋಹರ ರಾವ್ ಹಾಗೂ ಸಾವಿತ್ರಿ ಮನೋಹರರವರು ಲೋಕಾರ್ಪಣೆ ಮಾಡಿದರು. ಸ್ವಾತಿ ಅಜಿತ್ ಶರ್ಮ ತಮ್ಮ ಕೃತಿಯ ಕುರಿತು ಮಾತನಾಡಿದರು. ನಿವೃತ್ತ ಅಧ್ಯಾಪಕಿ ಸುಲೋಚನ ತಿಲಕ್ ‘ಪಂಜರದೊಳಗಿನ ಪಕ್ಷಿ’ ಕೃತಿಯ ಕುರಿತು ಮಾತನಾಡಿದರು.
ಅಧ್ಯಕ್ಷತೆಯನ್ನು ಜಾಗೃತಿಯ ಅಧ್ಯಕ್ಷೆ ಪ್ರೊ. ಮಿತ್ರಪ್ರಭಾ ಹೆಗ್ಡೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪೂರ್ಣಚಂದ್ರ ಹಂದಿಗೋಡು ಇವರ ತೆಂಗಿನ ಕರಟದಿಂದ ಮಾಡಿದ ಕರಕುಶಲ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಕನ್ನಡದಲ್ಲಿ ಪೂರ್ಣ ಅಂಕಗಳನ್ನು ಪಡೆದ ಕುಮಾರಿ ಅಕ್ಷರರನ್ನು ಸನ್ಮಾನ ಮಾಡಲಾಯಿತು. ಪ್ರಾರ್ಥನೆಯನ್ನು ಕುಮಾರಿ ಆದ್ಯಾ ಶರ್ಮ, ವಿಶ್ರುತ್ ಶರ್ಮ, ನಿರ್ಜರ ರಾವ್, ಓಂಕಾರ್ ರಾವ್ ರವರು ನೆರವೇರಿಸಿದರು. ಸ್ವಾಗತವನ್ನು ಜಾಗೃತಿಯ ಕಾರ್ಯದರ್ಶಿ ಮಾಲತಿ ಜಿ. ಪೈ, ಧನ್ಯವಾದ ಶಿಕ್ಷಕಿ ಲಕ್ಷ್ಮಿ ಹೆಗ್ಡೆ, ಕಾರ್ಯಕ್ರಮ ನಿರೂಪಣೆ ಶಿಕ್ಷಕಿ ಜ್ಯೋತಿ ಪಾಠಕ್ ನಿರ್ವಹಿಸಿದರು.