ಮೂಡುಬಿದಿರೆ : ಕನ್ನಡ ಸಂಘ ಕಾಂತಾವರದ ಐವತ್ತರ ಸಂಭ್ರಮದ ದ್ವಿತೀಯ ಕಾರ್ಯಕ್ರಮದ ಅಂಗವಾಗಿ ದಿನಾಂಕ 28 ಡಿಸೆಂಬರ್ 2025ರಂದು ಕಾಂತಾವರ ಕನ್ನಡ ಭವನದಲ್ಲಿ ನಾಡಿನ ಎಂಟು ಮಂದಿ ಸಾಧಕರಿಗೆ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಹಿರಿಯ ಸಾಹಿತಿ ಮೋಹನ ಕುಂಟಾರ್ ಕಾಸರಗೋಡು “ನಮ್ಮ ಭಾಷೆ, ಸಂಸ್ಕೃತಿ ಉಳಿವಿಗೆ ಕನ್ನಡ ಪರ ಕೆಲಸಗಳು ನಿರಂತರವಾಗಿ ನಡೆಯುತ್ತಿರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಚಟುವಟಿಕೆಗಳು ಕುಂಠಿತವಾಗುತ್ತಿರುವುದು ಖೇದಕರ ಸಂಗತಿ. ಆದರೆ ಡಾ. ನಾ. ಮೊಗಸಾಲೆಯವರು ಕಾಂತಾವರ ಎಂಬ ಸಣ್ಣ ಹಳ್ಳಿಯಲ್ಲಿ ಕನ್ನಡ ಸಂಘವನ್ನು ಕಟ್ಟಿ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಕನ್ನಡದ ಕಂಪನ್ನು ನಾಡಿನ ಉದ್ದಕ್ಕು ಪಸರಿಸುತ್ತಿರುವುದು ಶ್ಲಾಘನಾರ್ಹ” ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಧರ್ಮದರ್ಶಿ ಹರಿಕೃಷ್ಣ ಪುನರೂರು “ಕಾಂತಾವರದಲ್ಲಿ ಕನ್ನಡ ಸಂಘವನ್ನು ಕಟ್ಟಿ ಬೆಳೆಸಿದ ಡಾ. ಮೊಗಸಾಲೆಯವರು ಜನರಲ್ಲಿ ಕನ್ನಡ ಪುಸ್ತಕದ ಪ್ರೀತಿ, ಓದುವ ಹವ್ಯಾಸವನ್ನು ಬೆಳೆಸಿ ಲೇಖಕರು, ಸಾಹಿತಿಗಳಿಗೆ ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದಾರೆ” ಎಂದರು.
ಮೊಗಸಾಲೆ ಕುಟುಂಬ ಸ್ಥಾಪಿಸಿದ ‘ಕಾಂತಾವರ ಸಾಹಿತ್ಯ ಪ್ರಶಸ್ತಿ’ಯನ್ನು ರೂ. ಹತ್ತು ಸಾವಿರ ನಗದು, ತಾಮ್ರ ಪತ್ರದೊಂದಿಗೆ ಕಾಸರಗೋಡಿನ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಇವರಿಗೆ ನೀಡಿ ಸನ್ಮಾನಿಸಲಾಯಿತು. ಸರೋಜಿನಿ ನಾಗಪ್ಪಯ್ಯ ಈಶ್ವರಮಂಗಲ ದತ್ತಿನಿಧಿಯಿಂದ ‘ಯಕ್ಷಗಾನ ಸಾಹಿತ್ಯ ಸಂಶೋಧನಾ ಪ್ರಶಸ್ತಿ’ಯನ್ನು ಉತ್ತರ ಕನ್ನಡದ ಆಶೋಕ ಹಾಸ್ಯಗಾರ ಇವರಿಗೆ ರೂ.ಹತ್ತು ಸಾವಿರ ನಗದು ಹಾಗೂ ತಾಮ್ರದ ಪತ್ರದೊಂದಿಗೆ ನೀಡಿ ಸನ್ಮಾನಿಸಲಾಯಿತು. ಹಿರಿಯ ರಂಗಕರ್ಮಿ ಶ್ರೀಪತಿ ಮಂಜನಬೈಲ್ ಇವರ ‘ಮಂಜನಬೈಲ್ ರಂಗ ಸ್ಮಾರಕ ಪ್ರಶಸ್ತಿ’ಯನ್ನು ರೂ. ಹತ್ತು ಸಾವಿರ ನಗದು ಹಾಗೂ ತಾಮ್ರ ಪತ್ರದೊಂದಿಗೆ ಶಶಿರಾಜ ರಾವ್ ಕಾವೂರು ಇವರಿಗೆ ನೀಡಿ ಸನ್ಮಾನಿಸಲಾಯಿತು. ‘ಸಂಘದ ವಾರ್ಷಿಕ ಗೌರವ ಪ್ರಶಸ್ತಿ’ಯನ್ನು ಹುಲಿಮನೆ ಜಯರಾಮ ಹೆಗಡೆ ಮಿಜಾರು ಇವರಿಗೆ ರೂ. ಐದು ಸಾವಿರ ನಗದು. ತಾಮ್ರಪತ್ರ ನೀಡಿ ಗೌರವಿಸಲಾಯಿತು. ಇದೇ ವೇಳೆ ದತ್ತಿ ಪ್ರಶಸ್ತಿ ಪ್ರಾಯೋಜಕರನ್ನು ಗೌರವಿಸಲಾಯಿತು.

ಕರ್ನಾಟಕ ಏಕೀಕರಣದ ನೇತಾರ ಕೆ.ಬಿ. ಜಿನರಾಜ ಹೆಗ್ಡೆ ಇವರ ಪುತ್ರಿ ಸರಸ್ವತಿ ಬಲ್ಲಾಳ್ ಮತ್ತು ಪತಿ ಡಾ. ಸಿ.ಕೆ. ಬಲ್ಲಾಳ್ ಸ್ಥಾಪಿಸಿದ ‘ಸಾಂಸ್ಕೃತಿಕ ಏಕೀಕರಣ ಪ್ರಶಸ್ತಿ’ಯನ್ನು ಲೋಹಿಯಾ ಪ್ರಕಾಶನದ ಚೆನ್ನಬಸವಣ್ಣ ಇವರಿಗೆ ರೂ. ಹತ್ತು ಸಾವಿರ ನಗದು, ತಾಮ್ರ ಪತ್ರ ನೀಡಿ ಅಭಿನಂದಿಸಲಾಯಿತು. ಧಾರವಾಡದ ಜಿ.ಎಂ. ಹೆಗಡೆ ಸ್ಥಾಪಿಸಿದ ‘ಪ್ರಾಧ್ಯಾಪಕ ಸಂಶೋಧಕ ಪ್ರಶಸ್ತಿ’ಯನ್ನು ತುಮಕೂರಿನ ಡಾ. ಆರ್. ಲಕ್ಷ್ಮೀ ನಾರಾಯಣ ಇವರಿಗೆ ರೂ. ಹತ್ತು ಸಾವಿರ ನಗದು ಹಾಗೂ ತಾಮ್ರದ ಪತ್ರ ನೀಡಿ ಅಭಿನಂದಿಸಲಾಯಿತು. ನಾಡಿಗೆ ನಮಸ್ಕಾರ ಗ್ರಂಥ ಮಾಲೆಗೆ ಕೃತಿಗಳನ್ನು ಬರೆದುಕೊಟ್ಟ ಲಕ್ಷ್ಮಣ ಕೊಡಸೆ ಇವರಿಗೆ ರೂ. ಹತ್ತು ಸಾವಿರ ನಗದು, ತಾಮ್ರ ಪತ್ರದೊಂದಿಗೆ ‘ಶ್ರೇಷ್ಠ ಪತ್ರಕರ್ತ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬಾಲಕೃಷ್ಣ ಆಚಾರ್ ಇವರ ಪತ್ನಿ ವಾಣಿ ಬಿ.ಆಚಾರ್ ಸ್ಥಾಪಿಸಿದ ‘ಶ್ರೇಷ್ಠ ಶಿಕ್ಷಕ ಸೌರಭ ಪ್ರಶಸ್ತಿ’ಯನ್ನು ಕಾಂತಾವರದ ಸರೋಜಿನಿ ನಾಗಪ್ಪಯ್ಯ ಇವರಿಗೆ ರೂ. ಹತ್ತು ಸಾವಿರ ನಗದು, ತಾವು ಪತ್ರದೊಂದಿಗೆ ಸನ್ಮಾನಿಸಲಾಯಿತು.
ದತ್ತಿ ಪ್ರಶಸ್ತಿ ಪ್ರಾಯೋಜಕರ ಪರವಾಗಿ ಡಾ. ಸಿ.ಕೆ. ಬಲ್ಲಾಳ್ ದಂಪತಿ ಪ್ರಸನ್ನ ಮೊಗಸಾಲೆ ಮತ್ತು ಶ್ರೀಪತಿ ಮಂಜನಬೈಲ್ ಇವರನ್ನು ಗೌರವಿಸಲಾಯಿತು. ಹಿರಿಯ ವಿಮರ್ಶಕ ಬೆಳಗೋಡು ರಮೇಶ್ ಭಟ್ ಮೈಸೂರು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿದರು. ಉಡುಪಿ ಸಂಸ್ಕೃತಿ ವಿಶ್ವಪ್ರತಿಷ್ಠಾನದ ಅಧ್ಯಕ್ಷ ಯು. ವಿಶ್ವನಾಥ ಶೆಣೈ, ಉದ್ಯಮಿ ಕೆ. ಶ್ರೀಪತಿ ಭಟ್, ರಾಮಚಂದ್ರ ನಾಯಕ್ ಕಾರ್ಕಳ ಉಪಸ್ಥಿತರಿದ್ದರು. ದಿವಾಕರ ಕುಮಾರ್ ಸ್ವಾಗತಿಸಿ, ಡಾ. ನಾ. ಮೊಗಸಾಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಾನಂದ ನಾರಾವಿ ನಿರೂಪಿಸಿ, ಧರ್ಮರಾಜ ಕಂಬಳಿ ವಂದಿಸಿದರು.

