ವೆಂಕಟೇಶ ಹುಣಶೀಕಟ್ಟಿ ಸರ್ ನಮಗೆ ಕಾಲೇಜಿನಲ್ಲಿ ಭೌತ ರಸಾಯನಶಾಸ್ತ್ರ ಬೋಧಿಸಿದವರು. ಜೊತೆ ಜೊತೆಗೆ ಕಾವ್ಯ ಕೃಷಿಯಲ್ಲೂ ತೊಡಗಿದವರು. ಅವರು ಮತ್ತು ಅವರ ಸಮಕಾಲೀನ ಸಾಹಿತ್ಯ,ರಂಗಭೂಮಿಯನ್ನು ಪ್ರೀತಿಸುತ್ತಿದ್ದ, ತೊಡಗಿಕೊಂಡಿದ್ದ ಪ್ರೊಫೆಸರ್ ಗಳು ನಮ್ಮ ಮೇಲೆ ಬೀರಿದ ಪ್ರಭಾವ ಬಹಳ ದೊಡ್ಡದು. ಇವತ್ತು ನಾವು ಏನಾಗಿದ್ದೆವೋ ಅದಕ್ಕೆ ಅವರೂ ಕಾರಣರು.
ಹುಣಶೀಕಟ್ಟಿ ಸರ್ ನಮ್ಮ ಮೇಲೆ ಇಟ್ಟಿರುವ ಪ್ರೀತಿ, ಅಭಿಮಾನ ಅಪಾರ. ಮೊನ್ನೆ ಮೊನ್ನೆ ನಾನು ದೂರದರ್ಶನದ ಸಂದರ್ಶನ ಮುಗಿಸಿ ಹೊರಬರುತ್ತಿದ್ದಂತೆಯೇ ಕರೆ ಮಾಡಿದವರು ಅವರು. ಅವರ ಮಾತುಗಳಲ್ಲಿ ಅತೀವ ಪ್ರೀತಿಯಿತ್ತು.
ಅಂಥ ಹುಣಶೀಕಟ್ಟಿ ಸರ್ ನನ್ನ ‘ ಹೌಸ್ ಫುಲ್’ ಕುರಿತು ಬರೆದಿದ್ದಾರೆ.
ನನ್ನ ವಿದ್ಯಾರ್ಥಿ ಮಿತ್ರರಾದಂಥ ಕಿರಣ ಭಟ್ಟ (ಹೊನ್ನಾವರ )ಅವರು ಕಳುಹಿಸಿದ ಪುಸ್ತಕ “ಹೌಸ್ ಫುಲ್”–ಕೃತಜ್ಞತೆಗಳು.
ಕಿರಣ ಭಟ್ಟ ಅವರ ಎರಡನೇ ಕೃತಿ ಇದು. ಮೊದಲನೆಯದು “ರಂಗಕೈರಳಿ” (ಇದರ ಕುರಿತೂ ಅಭಿಪ್ರಾಯ ತಿಳಿಸಿದ್ದೆ ).ಜಿ. ಎನ್. ಮೋಹನ್ ಅವರ ಪ್ರೋತ್ಸಾಹದಿಂದ, ಒತ್ತಾಸೆಯಿಂದ ಇವೆರಡೂ ಕೃತಿಗಳು ಹೊರಬಂದಿವೆ. ಇಲ್ಲದೇ ಹೋಗಿದ್ದರೆ ಕಿರಣ ಅವರಲ್ಲಿ ಹುದುಗಿದ ಸುಪ್ತ ಪ್ರತಿಭೆ ಸದ್ದಿಲ್ಲದೆ ಮುದ್ದೆಯಾಗಿ ಹೋಗಿಬಿಡುತ್ತಿತ್ತು. ಅದಕ್ಕಾಗಿ ಮೋಹನ್ ಅವರೂ ಅಭಿನಂದನಾರ್ಹರು.
ಒಂದೇ ಬೈಠಕ್ ನಲ್ಲಿ ಓದಿ ಮುಗಿಸುವಂಥ ಪುಸ್ತಕವಿದು.ನಾನು ಎರಡು ಬೈಠಕ್ ತೆಗೆದುಕೊಂಡೆ. ಸರಳ ಭಾಷೆ,ಚುಟುಕಾದ ವಿಶ್ಲೇಷಣೆ. ಆದರೂ ನಾಟಕಗಳ ಪೂರ್ಣ ರೂಪ ಕಟ್ಟಿಕೊಡುವಲ್ಲಿ ಭಟ್ಟರು ಯಶಸ್ವಿಯಾಗಿದ್ದಾರೆ. ಅವರಿಗೆ ನಾಟಕದ ಹುಚ್ಚು ಎಷ್ಟಿದೆಯೆಂಬುದಕ್ಕೆ ಈ ಸಾಕ್ಷಿ. ಎಲ್ಲ ಭಾಷೆಗಳ ನಾಟಕಗಳನ್ನೂ ಅವರು ನೋಡಿದ್ದಾರೆ, ಅಂದರೆ ಅವರಿಗೆ ಇನ್ನಿತರೆ ಭಾಷೆಗಳ ಬಗ್ಗೆಯೂ ಅರಿವಿದೆ ಎಂದಂತಾಯ್ತು. ತಮ್ಮ ಬಿಡುವಿಲ್ಲದ ಕೆಲಸದ ಮಧ್ಯೆಯೂ ಅವರು ನಾಟಕ ನೋಡಲು ಸಮಯ ಹೊಂದಿಸಿಕೊಳ್ಳುತ್ತಿದ್ದುದೇ ಸೋಜಿಗ.
ಎಲ್ಲರೂ ನಾಟಕ ನೋಡಿರುತ್ತಾರೆ, ಅನುಭವಿಸಿರುತ್ತಾರೆ ಆದರೆ, ಎಲ್ಲರಿಗೂ ವಿಶ್ಲೇಷಣೆ ಮಾಡಲು ಸಾಧ್ಯವಾಗುವುದಿಲ್ಲ. ಭಟ್ಟರು ಕಾಗದ, ಪೆನ್ನು ಹತ್ತಿರವಿಟ್ಟುಕೊಂಡೇ ನಾಟಕ ನೋಡಿದ್ದಿರಬಹುದು. ಯಾಕೆಂದರೆ ನಾಟಕ ನೋಡುವಾಗಲೇ ಟಿಪ್ಪಣೆ ಮಾಡಿಕೊಂಡಾಗ ಮಾತ್ರ ಇಂಥ ವಿಶ್ಲೇಷಣೆ ಬರೆಯಲು ಸಾಧ್ಯ. ಪ್ರತಿಯೊಂದು ನಾಟಕಕ್ಕೂ ಸಂಬಂಧಿಸಿದ ಒಂದೊಂದು ಚಿತ್ರವನ್ನೂ ಕಲೆಹಾಕಿದ್ದಾರೆ. ಪುಸ್ತಕ ಓದುತ್ತಿದ್ದಂತೆಲ್ಲ ನಾವೂ ನಾಟಕ ನೋಡುತ್ತಿರುವೆವೇನೋ ಎಂಬ ಅನುಭವ ಉಂಟಾಗುವಷ್ಟು ಪ್ರಭಾವಶಾಲಿಗಳಾಗಿವೆ ಲೇಖನಗಳು.
“ಇಟ್ಫಾಕ್”ಬಗ್ಗೆ ಬಹಳಷ್ಟು ಜನರಿಗೆ ಮಾಹಿತಿ ಇರಲಿಕ್ಕಿಲ್ಲ ಈ ಪುಸ್ತಕದಲ್ಲಿ ಅದರ ಬಗ್ಗೆಯೂ ಮಾಹಿತಿ ಇದೆ,ಮಾರ್ಗದರ್ಶನವೂ ಇದೆ. “ಹೌಸ್ ಫುಲ್” ಓದಿ ನನ್ನ ಮನಸ್ಸು ಫುಲ್ ಖುಷ್ (ದಿಲ್ ಖುಷ್) ಆದುದಕ್ಕೆ ಇನ್ನೊಂದು ಕಾರಣವೆಂದರೆ, ನನ್ನ ವಿದ್ಯಾರ್ಥಿನಿಯಾಗಿದ್ದ ಸುಧಾ ಆಡುಕಳ ಅವರ ಮೂರು ನಾಟಕಗಳ ಕುರಿತಾದ ವಿಶ್ಲೇಷಣೆ (ಅನುವಾದ, ಸ್ವಂತದ್ದು, ರೂಪಾಂತರ ) ಅವುಗಳ ವಿಶ್ಲೇಷಣೆ ಮಾಡಿದವರು ನನ್ನ ವಿದ್ಯಾರ್ಥೀಯಾಗಿದ್ದ ಕಿರಣ ಭಟ್ಟ ಅವರು. ಇಬ್ಬರೂ ವಿಜ್ಞಾನ ಪದವೀಧರರು (ಹೊನ್ನಾವರದ ಕಾಲೇಜ್ ನಲ್ಲಿ ನಾನವರಿಗೆ ರಸಾಯನ ಶಾಸ್ತ್ರ ಬೋಧಿಸಿದ್ದೆ )
ಎಂಭತ್ತೈದರ ಇಳಿವಯಸ್ಸಿನಲ್ಲಿ ಇಂಥ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ನನ್ನ ಗಮನಕ್ಕೆ ಬರುತ್ತಿರುವುದು ನನ್ನ ಸುದೈವವೇ.
ನಾನು ಕಲಿತದ್ದು, ಕಲಿಸಿದ್ದು ರಸಾಯನ ಶಾಸ್ತ್ರ. ಆದರೂ ನಾನು ಸಾಹಿತ್ಯ ದಲ್ಲಿ 32 ಕೃತಿ ರಚಿಸಿದ್ದೇನೆ.ನಾನು ಹೇಳುತ್ತಿರುವುದು ಈಗ ನನ್ನ ದೊಡ್ಡಿಸ್ತಿಗೆಗಾಗಿಯಲ್ಲ ನನ್ನ ಪ್ರಭಾವ ಸ್ವಲ್ಪಾದರೂ ಆಗಿರಬಹುದೇನೋ ಎಂಬ ಗುಮಾನಿ.
ನಾನೂ ಖುಷ್! ನನ್ನ ಶಿಷ್ಯ ಬಳಗವೂ ಖುಷ್!
ಪ್ರೊ.ವೆಂಕಟೇಶ ಹುಣಶೀಕಟ್ಟಿ
ಪುಸ್ತಕಗಳಿಗಾಗಿ: #bahuroopi +91 70191 82729