ತೆಕ್ಕಟ್ಟೆ : ಯಶಸ್ವೀ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ ಮತ್ತು ಯಕ್ಷಗಾನ ಕಲಿಕಾ ಕೇಂದ್ರ ತೆಕ್ಕಟ್ಟೆ ಇವರ ಸಹಯೋಗದಲ್ಲಿ ನಡೆಯುವ ಆರು ತಿಂಗಳುಗಳ ಕಾಲದ ಬಡಗು ಹಿಮ್ಮೇಳ ಮುಮ್ಮೇಳ ಯಕ್ಷಗಾನದ ತರಗತಿಯು ದಿನಾಂಕ 01 ಜೂನ್ 2025ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ಉದ್ಘಾಟನೆಗೊಂಡಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀ ಶಾರದಾ ಪೀಠಂ ಶೃಂಗೇರಿಯ ಪ್ರಾಂತೀಯ ಧರ್ಮಾಧಿಕಾರಿ ವೇದಮೂರ್ತಿ ಲೋಕೇಶ ಅಡಿಗರು “ಸನಾತನ ಧರ್ಮದಲ್ಲಿ ಸತ್ಕಾರ್ಯಗಳೆಲ್ಲವಕ್ಕೂ ಮನ್ನಣೆ ಇದೆ. ಪ್ರತೀ ಮನೆ ಮನೆಗಳ ಒಂದೊಂದು ಮಗುವಿನ ಹೃದಯದಲ್ಲೂ ಕಲೆ ಇರುತ್ತದೆ. ಹಲವು ಮಕ್ಕಳು ಜನ್ಮತಃ ಕಲಾವಿದರಾಗಿರುತ್ತಾರೆ. ಅವರನ್ನು ಹೊರ ಪ್ರಪಂಚಕ್ಕೆ ತೋರಿಸುವುದಕ್ಕೆ ಇಂತಹ ಸಂಸ್ಥೆ ಬೇಕು, ಗುರುಗಳು ಬೇಕು. ಅನೇಕ ಮಕ್ಕಳನ್ನು ಕಲಾ ಪ್ರಪಂಚಕ್ಕಾಗಿ ತಯಾರಿ ಮಾಡುವಲ್ಲಿ ಸಂಸ್ಥೆಯ ಸ್ವಾರ್ಥ ಇರುವುದಿಲ್ಲ. ಗುರುಗಳಿಗೆ ಯಾವುದೇ ನಿರೀಕ್ಷೆ ಇರುವುದಿಲ್ಲ. ಕೇವಲ ಕಲೆ ಬೆಳೆಯಬೇಕೆಂಬುದಷ್ಟೇ ಆಗಿರುತ್ತದೆ. ಸಂಸ್ಥೆ ಅನೇಕ ಶಿಷ್ಯರನ್ನು ಹೊಂದಿ ಇನ್ನಷ್ಟು ಬೆಳೆಯಲಿ” ಎಂದು ಶುಭಾಶಂಸನೆಗೈದರು.
ತರಗತಿಯನ್ನು ಮಕ್ಕಳಿಗೆ ಕೋರೆ ತಾಳ ಹೇಳಿಕೊಡುವ ಮೂಲಕ ಉದ್ಘಾಟಿಸಿದ ಪ್ರಾಚಾರ್ಯ ಕೆ.ಪಿ. ಹೆಗಡೆ ಮಾತನಾಡಿ “ಒಂದು ತರಗತಿ ಕೇಂದ್ರವನ್ನು ನಡೆಸುವುದು ಬಹಳ ಕಷ್ಟ ಎನ್ನುವುದು ತಿಳಿದವರಿಗಷ್ಟೇ ಗೊತ್ತು. ಸಂಸ್ಥೆಗೆ ಬೆನ್ನೆಲುಬಾಗಿ ಗುರುಗಳು, ಶಿಷ್ಯರೂ ಜೊತೆಯಾದಾಗ ಸಂಸ್ಥೆ ಮುಂದುವರಿಯಲು ಸಾಧ್ಯ. ಶಿಷ್ಯರ ಏಳ್ಗೆಯೊಂದೇ ಗುರಿಯಾಗಿಸಿಕೊಂಡು ಶ್ರಮಿಸಿದರೆ ಪ್ರತಿಫಲ ಸುಲಭ ಸಾಧ್ಯ. ಇತ್ತೀಚೆಗೆ ಯಶಸ್ವೀ ಕಲಾವೃಂದ ಅನೇಕ ಶಿಷ್ಯರನ್ನು ಹೊಂದಿ ಬೆಳೆಯುತ್ತಿರುವುದು ಅತ್ಯಂತ ಸಂತೋಷ ತಂದಿದೆ” ಎಂದು ಹೇಳಿದರು.
ಯಕ್ಷಗಾನಾಭಿಮಾನಿ ಆಂಡ್ರು ಡಿ’ಸಿಲ್ವ ಮಾತನಾಡಿ “ಯಾವುದೇ ಧರ್ಮ, ಜಾತಿ ಬೇಧಗಳೆನ್ನುವುದು ಕಲೆಗಿಲ್ಲ. ಎಲ್ಲವರೂ ಕಲೆತು, ಕಲಿಕೆಗಾಗಿ ಸೇರುವ ಕೇಂದ್ರವಿದು ಎನ್ನುವದನ್ನು ಹತ್ತಿರದಿಂದ ತಿಳಿದವನು ನಾನು” ಎಂದರು. ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ “ಹೊಸ ಹೊಸ ಮುಖಗಳು ಯಕ್ಷಗಾನಕ್ಕೆ ಒಲವು ತೋರಿ ಕಲಿಯುವಂತಾಗಲಿ” ಎಂದರು. ಲಂಬೋದರ ಹೆಗಡೆ “ಶಿಸ್ತು ಸಂಯಮದಿಂದ ಉಳಿದರೆ ಕಲೆಯು ಬೇಗ ಒಲಿಯುತ್ತದೆ” ಎಂದರು. ಮಲ್ಯಾಡಿ ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕುಮಾರಿ ಪಂಚಮಿ ವೈದ್ಯ, ಕುಮಾರಿ ಹರ್ಷಿತ ಅಮೀನ್ ಕಾರ್ಯಕ್ರಮ ನಿರೂಪಿಸಿ, ಪರಿಣಿತ ವೈದ್ಯ ಸ್ವಾಗತಿಸಿ, ಆರಭಿ ಹೆಗಡೆ ವಂದಿಸಿದರು. ಬಳಿಕ ವಿದ್ಯಾರ್ಥಿಗಳು ತಾಳಾಭ್ಯಾಸದಲ್ಲಿ ನಿರತರಾಗಿ ಸಹಕರಿಸಿದರು.