Subscribe to Updates

    Get the latest creative news from FooBar about art, design and business.

    What's Hot

    ಸಂಪೆಕಟ್ಟೆಯಲ್ಲಿ ಯಶಸ್ವಿ ಕಲಾವೃಂದದ ಮಕ್ಕಳ ಮೇಳದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ

    May 13, 2025

    ಸುರತ್ಕಲ್ಲಿನ ಅನುಪಲ್ಲವಿಯಲ್ಲಿ ‘ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ’ | ಮೇ 17

    May 13, 2025

    ಕೊಡಗು ಪತ್ರಿಕಾ ಭವನದಲ್ಲಿ ದಿ. ಬಿ.ಎಸ್. ಗೋಪಾಲಕೃಷ್ಣರವರ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ ಪ್ರದಾನ | ಮೇ 15

    May 13, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ನಾಟಕ ವಿಮರ್ಶೆ – ಅಸ್ವಸ್ಥ ಅಶ್ವತ್ಥಾಮ
    Drama

    ನಾಟಕ ವಿಮರ್ಶೆ – ಅಸ್ವಸ್ಥ ಅಶ್ವತ್ಥಾಮ

    April 1, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಅಶ್ವತ್ಥಾಮ ನಾಟೌಟ್ – ರಚನೆ, ವಿನ್ಯಾಸ ಮತ್ತು ನಿರ್ದೇಶನ ಮೋಹನಚಂದ್ರ, ಪ್ರಸ್ತುತಿ ಅಯನ ನಾಟಕದ ಮನೆ. ತಂದೆ ದ್ರೋಣನಿಂದ ಪಡೆದ ಚಿರಂಜೀವಿತ್ವದ ವರವನ್ನು, ಪ್ರಾಸಂಗಿಕ ವೈಪರೀತ್ಯಗಳಿಂದ ಶಾಪವಾಗಿ ಅನುಭವಿಸುವಂತಾದ ಅಶ್ವತ್ಥಾಮನ ಪ್ರಸಂಗ. ಇಂದಿಗೂ ಅಶ್ವತ್ಥಾಮ ಬದುಕಿದ್ದಾನೆ ಎಂದೊಪ್ಪಿ, ಅದಕ್ಕೆ ಸರಿಯಾಗಿ ಆತನನ್ನು ಹುಚ್ಚಾಸ್ಪತ್ರೆಯಲ್ಲಿ ಗುರುತಿಸುವುದರೊಡನೆ ಪ್ರದರ್ಶನ ತೊಡಗುತ್ತದೆ. ಅಲ್ಲಿ ಅಶ್ವತ್ಥಾಮನ ಭ್ರಾಮಕ ಕಣ್ಣುಗಳಿಗೆ, ಚಿಕಿತ್ಸೆಗೆ ಮುಂದಾಗುವ ಮನೋವೈದ್ಯ ಮತ್ತು ಸಹಾಯಕರು (ಪ್ರಹರಿ) ಪುನರ್ಜನ್ಮದ ಕೃಷ್ಣ ಶಕುನಿಯರಾಗಿ ತೋರುತ್ತಾರೆ. ಅದನ್ನವರು ಪ್ರಜ್ಞಾಪೂರ್ವಕವಾಗಿ ತಿರಸ್ಕರಿಸಿದರೂ ಚಿಕಿತ್ಸಾಕ್ರಮವಾಗಿ ಒಪ್ಪಿ ನಡೆಯುವಲ್ಲಿಗೆ ನಾಟಕ ಹೊಸದೇ ಆಯಾಮವನ್ನು ಪಡೆಯುತ್ತದೆ. ಹಾಗೆ ನಡೆಯುವ ನಂಬಿಕೆ (ಉದಾ : ನೂರೊಂದು ಕೌರವರ ಜನನ, ದ್ರೌಪದಿ ಅಕ್ಷಯಾಂಬರ…) ಮತ್ತು ವೈಚಾರಿಕತೆಗಳ ಮುಖಾಮುಖಿ ಸ್ವಾರಸ್ಯವನ್ನು ಹೆಚ್ಚಿಸುತ್ತದೆ.

    ಪುರಾಣ ವ್ಯಕ್ತಿ ಹಾಗೂ ಸತ್ಯಗಳು ಭಕ್ತ ಜನ ನಂಬಿದಂತೆ ಸಾತ್ವಿಕ (ಅಥವಾ ತಾಮಸಿಕ) ಏಕ ಪ್ರವಾಹವಲ್ಲ, ಎಲ್ಲ ಕಾಲದಲ್ಲೂ ಮಾನವ ಮತಿ ಮತ್ತು ಗತಿ ಬಹುಮುಖಿಯಾದದ್ದು ಮತ್ತು ಬಹುತೇಕ ಸ್ವಾರ್ಥಪರವಾದದ್ದು ಎನ್ನುವುದು ಸ್ಪಷ್ಟವಾಗುತ್ತದೆ. ಸಂಸಾರ ಸುಖ ವಂಚಿತನಾದ ಭೀಷ್ಮ, ಗಾಂಧಾರದ ಸೋಲಿನ ಪ್ರತೀಕವಾದ ಗಾಂಧಾರಿ, ದೊಡ್ಡ ಮನೆಯ ಅನಾಚಾರಗಳ ರೂಪಕವಾದ ನೂರೊಂದು ಕೌರವರು, ಬಂಧುಗಳ ಸಾವಿನ ಸೇಡಿಗೆ ದುಡಿದ ಶಕುನಿ, ಗೊಲ್ಲರಿಗೆ ನಿಷ್ಕಂಟಕ ರಾಜ್ಯರೂಪಿಸಿದ ಕೃಷ್ಣ…. ಈ ಸೂಕ್ಷ್ಮಗಳ ಕೊನೆಯಲ್ಲಿ ಉಪಪಾಂಡವರ ತಲೆ ತರಿದ ಅಶ್ವತ್ಥಾಮನಾದರೂ ದುರ್ಯೋಧನ ನಿಷ್ಠೆಯವನಲ್ಲ, ದ್ರುಪದನಿಂದಾದ ದ್ರೋಣಾಪಮಾನ ತೀರುವಳಿಗೇ ಹೆಣಗಿದವನು ಎಂಬಲ್ಲಿಗೆ ಕಥನ ಸಾರ್ವಕಾಲಿಕ ಸತ್ಯ ಸಾರಿ ಮುಗಿಯುತ್ತದೆ.

     

    ಕಥೆಯ ಹೊಸತನ, ಸಂವಾದಗಳ ಸ್ಪಷ್ಟತೆ, ಮಹಾಭಾರತದಿಂದ ಆಧುನಿಕ ಭಾರತದವರೆಗೇನು, ನಾಟಕ ನೋಡಲು ನೆರೆದ ನಮ್ಮವರೆಗೂ ಸಾರಿದ ಸಂದೇಶದಿಂದ ಪ್ರಯೋಗ ನಿಸ್ಸಂದೇಹವಾಗಿ ಎಲ್ಲರನ್ನೂ ಹಿಡಿದಿಟ್ಟಿತ್ತು. ಆದರೂ ನನ್ನ ಒಂದು ನೋಟದ ಗ್ರಹಿಕೆಯ ಮಿತಿಯೊಳಗೆ ಮೂಡಿದ ಕೆಲವು ಭಿನ್ನ ಅಭಿಪ್ರಾಯಗಳನ್ನು ಹೇಳಬಹುದಾದರೆ, ಮೊದಲು ಭಾಷಾರೂಪಗಳ ನೆಲೆ ಸ್ಪಷ್ಟವಾದದ್ದು ಸಾಲದೆನ್ನಿಸಿತು (ವಾಚ್ ಮ್ಯಾನ್ ಉವಾಚ “ತಂಬಾಕಿನ ಧೂಮ ಸೇವನೆ”….). ಪ್ರಯೋಗದ ಓಘಕ್ಕೆ ಏನೂ ಹೊಂದದಂತೆ (ವಿಷಯ ಸರಿಯೇ ಇದ್ದರೂ) ವೈದ್ಯನಾದವನು ಮನೋವಿಜ್ಞಾನ ಪಾಠ ಮಾಡಿ, ಚಪ್ಪಾಳೆ ಗಿಟ್ಟಿಸುವುದು! ಆಶಯಗಳನ್ನು ವರ್ಷಗಳ ಅಥವಾ ಒಂದು ಆಯುರ್ಮಾನದ ಬಂಧ ಹಿಡಿಯಲಾರದು ಎನ್ನುವ ಚೂಪು ಪಡೆದದ್ದು ಸಾಕಾಗಲಿಲ್ಲ…. ಏನೇ ಇರಲಿ, ಅದ್ಭುತ ರಂಗಪ್ರಸ್ತುತಿ ನೋಡಿದ ಸಂತೋಷ ಕೊಟ್ಟದ್ದಕ್ಕೆ ‘ಅಯನ ನಾಟಕದ ಮನೆ’ಗೂ ವೇದಿಕೆಯಾದ ‘ಕಲಾಗ್ರಾಮ’ಕ್ಕೂ ಧನ್ಯವಾದಗಳು.

     ಜಿ. ಎನ್. ಅಶೋಕವರ್ಧನ
    ವಿಮರ್ಶಕರು, ಮಂಗಳೂರು

    ಚಿತ್ರ ಕೃಪೆ – ಅರವಿಂದ ಕುಡ್ಲ 

    http://nannasaakshi.blogspot.com

    baikady drama kannada Kannada drama review roovari
    Share. Facebook Twitter Pinterest LinkedIn Tumblr WhatsApp Email
    Previous Articleಮೈಸೂರಿನಲ್ಲಿ ‘ಯುಗಾದಿ ಕವಿ-ಕಾವ್ಯ ಸಂಭ್ರಮ’ ರಾಜ್ಯ ಮಟ್ಟದ ಕವಿಮೇಳ ಮತ್ತು ಪ್ರಶಸ್ತಿ ಪ್ರದಾನ | ಏಪ್ರಿಲ್ 06
    Next Article ‘ಕಿಂಕಿಣಿ ತ್ರಿಂಶತಿ’ ಕಾರ್ಯಕ್ರಮದಲ್ಲಿ ಅಮೋಘವಾದ ಭರತನಾಟ್ಯ ಪ್ರದರ್ಶನ
    roovari

    Add Comment Cancel Reply


    Related Posts

    ಸಂಪೆಕಟ್ಟೆಯಲ್ಲಿ ಯಶಸ್ವಿ ಕಲಾವೃಂದದ ಮಕ್ಕಳ ಮೇಳದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ

    May 13, 2025

    ಸುರತ್ಕಲ್ಲಿನ ಅನುಪಲ್ಲವಿಯಲ್ಲಿ ‘ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ’ | ಮೇ 17

    May 13, 2025

    ಕೊಡಗು ಪತ್ರಿಕಾ ಭವನದಲ್ಲಿ ದಿ. ಬಿ.ಎಸ್. ಗೋಪಾಲಕೃಷ್ಣರವರ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ ಪ್ರದಾನ | ಮೇ 15

    May 13, 2025

    ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲ್ವತ್ತೈದನೇ ಉಪನ್ಯಾಸ

    May 13, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.