ಕಾಸರಗೋಡು : ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತಮ ಬಿಳಿಮಲೆ ಯವರಿಗೆ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನದ ಪ್ರತಿಷ್ಠಿತ ಅಂತರ್ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ” ಪ್ರದಾನ ಸಮಾರಂಭ ದಿನಾಂಕ 24 ಜೂನ್ 2025ರಂದು ನಡೆಯಿತು. ಕನ್ನಡ ಭವನದ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾ ರಾಣಿ ದಂಪತಿಗಳು ಪ್ರಶಸ್ತಿ ಪ್ರದಾನ ಮಾಡಿದರು.
ಕಾಸರಗೋಡಿನ ಏತಡ್ಕ ನಾರಾಯಣ ಅಲೆವೂರಾಯರ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ ಕರ್ನಾಟಕ ಸರಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಶ್ರೀ ಎ. ಆರ್. ಸುಬ್ಬಯ್ಯಕಟ್ಟೆ ಮಾತನಾಡಿ “ಕಾಸರಗೋಡು ಪ್ರದೇಶದ ಕನ್ನಡಿಗರ ಅತಿತ್ಯ, ಗೌರವ ಭಾವಕ್ಕೆ ಶರಣು. ಇಲ್ಲಿಯವರು ತೋರುವ ಪ್ರೀತಿ, ಆದರಗಳು ಆದರಣೀಯ. ಕಾಸರಗೋಡು ಕನ್ನಡಿಗರು ಅನುಭವಿಸುತ್ತಿರುವ ಕನ್ನಡಪರ ಸಂಕಷ್ಟಗಳ ಬಗ್ಗೆ ಪೂರ್ಣ ಅರಿವಿದ್ದ ನಾನು ಪ್ರಾಧಿಕಾರದ ಸೀಮಿತ ಪರಿದಿಗೂ ಮೀರಿ ಸಹಾಯ ಸಹಕಾರಗಳನ್ನು ಮಾಡಲು ಪ್ರಯತ್ನಿಸುವೆ” ಎಂದರು.
ಪ್ರೊ. ಎ. ಶ್ರೀನಾಥ್ ಇವರು ಬಿಳಿಮಲೆಯವರ ವ್ಯಕ್ತಿ ಸಾಧನೆ ಪರಿಚಯ ನೀಡಿದರು. ಮುಖ್ಯ ಅತಿಥಿಯಾಗಿ ಡಾ. ನವೀನ್ ಕುಲಮರ್ವ, ಪತ್ರಕರ್ತ ಪುರುಷೋತ್ತಮ್ ಭಟ್, ಪತ್ರಕರ್ತ ಪುರುಷೋತ್ತಮ ಪೆರ್ಲ, ಮಾತನಾಡಿದರು. ಕೇರಳ ರಾಜ್ಯ – ಕನ್ನಡ ಚುಟುಕು ಸಾಹಿತ್ಯ ಪರಿಷತ್ ಇದರ ಉಪಾಧ್ಯಕ್ಷರಾದ ನರಸಿಂಹ ಭಟ್ ಏತಡ್ಕ ಶಾಲು ಹೊದಿಸಿ, ಪ್ರೊ. ಎ. ಶ್ರೀನಾಥ್ ಹಾರ ತೊಡಿಸಿ, ಸಂದ್ಯಾ ರಾಣಿ ಟೀಚರ್ ಸ್ಮರಣಿಕೆ ನೀಡಿ, ವಾಮನ್ ರಾವ್ ಬೇಕಲ್ ಪಯಸ್ವಿನಿ ಪ್ರಶಸ್ತಿ ನೀಡಿ ಗೌರವಿಸಿದರು.
ವಾಮನ್ ರಾವ್ ಬೇಕಲ್ ಸ್ವಾಗತಿಸಿ, ಪುರುಷೋತ್ತಮ್ ಭಟ್ ಕಾರ್ಯಕ್ರಮ ನಿರ್ವಹಿಸಿ, ಭವನ ಕಾರ್ಯದರ್ಶಿ ವಸಂತ್ ಕೆರೆಮನೆ ವಂದಿಸಿದರು.