ಮಂಗಳೂರು : ಮಂಗಳೂರಿನ ಕೂಳೂರಿನಲ್ಲಿರುವ ಯೆನೆಪೊಯ ಇನ್ಸಿಟ್ಯೂಟ್ ಆಫ್ ಆರ್ಟ್ಸ್ ಸೈನ್ಸ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಇಲ್ಲಿನ ಸಹಾಯಕ ಪ್ರಾಧ್ಯಾಪಕ ನಿಯಾಝ್ ಪಡೀಲ್ ರಚಿಸಿದ ಕನ್ನಡ ಕಾದಂಬರಿಯ ಬ್ಯಾರಿ ಅನುವಾದಿತ ‘ಯತೀಮ್’ ಕೃತಿಯ ಲೋಕರ್ಪಣಾ ಸಮಾರಂಭವು ದಿನಾಂಕ 23 ಏಪ್ರಿಲ್ 2025ರ ಬುಧವಾರದಂದು ಕಾಲೇಜಿನ ವೈ. ಎಂ. ಕೆ. ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿದ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾದ ಯು. ಎಚ್. ಉಮರ್ ಮಾತನಾಡಿ “ಸಾಧನೆಗೆ ಯಾವುದೂ ಕೂಡ ಅಡ್ಡಿಯಾಗಬಾರದು. ಬದುಕಿನಲ್ಲಿ ಸಾಧಿಸುವ ಗುರಿಯೊಂದೇ ಮುಖ್ಯ. ಅನಕ್ಷರಸ್ಥ ಕೂಡ ತನ್ನದೇ ಆದ ಕ್ಷೇತ್ರದಲ್ಲಿ ಸಾಧಿಸಿ ತೋರಿಸಿದ ಉದಾಹರಣೆ ಇದೆ. ಸಾಧಿಸುವ ಮೊದಲು ತನ್ನಲ್ಲಿರುವ ಕೀಳರಿಮೆಯನ್ನು ದೂರ ಮಾಡಬೇಕು. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿ ಕೂಡ ಸ್ಪಷ್ಟ ಗುರಿಯೊಂದಿಗೆ ಕೀಳರಿಮೆ ದೂರ ಮಾಡಿ ಸಾಧಿಸಿ ತೋರಿಸಬೇಕು. ಭಾಷೆಯು ಕೇವಲ ಸಂವಹನ ಕಲೆಯಲ್ಲ. ಅದರಲ್ಲಿ ಸಂಸ್ಕೃತಿ, ಸಂಸ್ಕಾರ, ಸಂವೇದನೆ ಇರುತ್ತದೆ. ಈ ನಿಟ್ಟಿನಲ್ಲೂ ಅಧ್ಯಯನ ಆಗಬೇಕಿದೆ. ಬ್ಯಾರಿ ಅಕಾಡಮಿಯು ಸಂಶೋಧನೆಗೆ ಹೆಚ್ಚು ಆದ್ಯತೆ ನೀಡಿ ಕೆಲಸ ಮಾಡಲಿದೆ” ಎಂದು ಹೇಳಿದರು.
ಯೆನೆಪೊಯ ಇನ್ಸಿಟ್ಯೂಟ್ ಆಫ್ ಆರ್ಟ್ಸ್ ಸೈನ್ಸ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಇದರ ‘ಮಾರ್ದನಿ’ ಕನ್ನಡ ಜರ್ನಲ್ ವೆಬ್ಸೈಟ್ ಅನ್ನು ಅನಾವರಣಗೊಳಿಸಿದ ಉಜಿರೆ ಎಸ್. ಡಿ. ಎಂ. ಕಾಲೇಜಿನ ಸಹಪ್ರಾಧ್ಯಾಪಕರಾದ ಡಾ. ರಾಜಶೇಖರ ಹಳೆಮನೆ ಮಾತನಾಡಿ “ಜಾಲತಾಣಗಳು ಸಮಾಜಕ್ಕೆ ಸ್ಪಂದಿಸುವ ಅಗತ್ಯವಿದೆ. ಜಾಲತಾಣಗಳಲ್ಲಿ ಸಂಶೋಧನಾ ಪ್ರಬಂಧಗಳು ಪ್ರಕಟಗೊಳ್ಳಬೇಕು. ಸಾಮಾಜಿಕ ಸಮಸ್ಯೆಗಳ ಬಗ್ಗೆಯೂ ಅಧ್ಯಯನ ಲೇಖನಗಳಿಗೆ ಆದ್ಯತೆ ನೀಡಬೇಕು” ಎಂದರು.
ಯೆನೆಪೊಯ ಇನ್ಸಿಟ್ಯೂಟ್ ಆಫ್ ಆರ್ಟ್ಸ್ ಸೈನ್ಸ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಇದರ ಪ್ರಾಂಶುಪಾಲರಾದ ಡಾ. ಅರುಣ್ ಎ. ಭಾಗವತ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅತಿಥಿಗಳಾಗಿ ಕೃತಿಯ ಅನುವಾದಕ ಅಬ್ದುಲ್ ರಹಿಮಾನ್ ಕುತ್ತೆತ್ತೂರು, ಅಭಿಮತ ಟಿ.ವಿ. ಚಾನೆಲ್ ಇದರ ಮುಖ್ಯಸ್ಥೆಯಾದ ಮಮತಾ ಪಿ. ಶೆಟ್ಟಿ, ಅಖಿಲ ಭಾರತ ಬ್ಯಾರಿ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆಯಾದ ಶಮೀಮಾ ಕುತ್ತಾರ್, ಉಪ ಪ್ರಾಂಶುಪಾಲೆ ಡಾ. ಶರೀನಾ ಪಿ. ಮಾತನಾಡಿದರು. ಬ್ಯಾರಿ ಅಧ್ಯಯನ ಪೀಠದ ಸದಸ್ಯ ಹಂಝ ಮಲಾರ್ ಕೃತಿ ಪರಿಚಯ ಮಾಡಿದರು.
ಉಪ ಪ್ರಾಂಶುಪಾಲರಾದ ಡಾ. ಜೀವನ್ ರಾಜ್, ನಾರಾಯಣ ಸುಕುಮಾರ ಎ., ಭಾಷಾ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶಾಲಿನಿ ಸಿಕ್ವೇರಾ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಲ್ವಿತ್ ಅಹ್ಮದ್ ಪ್ರಾರ್ಥಿಸಿ, ಕೃತಿಯ ಲೇಖಕ ನಿಯಾಝ್ ಪಡೀಲ್ ಸ್ವಾಗತಿಸಿ, ಸಹಪ್ರಧ್ಯಾಪಕ ಡಾ. ದಿನಕರ ಪಚ್ಚನಾಡಿ ಮಾರ್ದನಿ ಕುರಿತು ಮಾಹಿತಿ ನೀಡಿ, ಶಹ್ಲಾ ಅಬ್ದುಲ್ ರಹ್ಮಾನ್ ಕಾರ್ಯಕ್ರಮ ನಿರೂಪಿಸಿ, ಸಹಾಯಕ ಪ್ರಾಧ್ಯಾಪಕಿಯಾದ ರಝೀನಾ ವಂದಿಸಿದರುದರು.