ಉಡುಪಿ : ಉಡುಪಿಯ ಪ್ರತಿಷ್ಠಿತ ರಾಗಧನ ಸಂಸ್ಥೆಯ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ 38ನೆಯ ಶ್ರೀ ಪುರಂದರದಾಸರು ಮತ್ತು ಸಂಗೀತ ತ್ರಿಮೂರ್ತಿ ಉತ್ಸವ ಕಾರ್ಯಕ್ರಮವು ದಿನಾಂಕ 6ರಿಂದ 8 ಫೆಬ್ರವರಿ 2026ರಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಿತು.

ಆರಂಭದ ದಿನ ಸಭಾ ಕಾರ್ಯಕ್ರಮದಲ್ಲಿ ನಾಟ್ಯಾಚಾರ್ಯ ಪ್ರೊ. ರಾಮಮೂರ್ತಿ ರಾವ್ ಮೈಸೂರು ಇವರು ಉದ್ಘಾಟಿಸಿದರು. ಗಣ್ಯರ ಸಮ್ಮುಖದಲ್ಲಿ ಸತತ ಆರು ಗಂಟೆ ಹದಿಮೂರು ನಿಮಿಷಗಳ ಕಾಲ ಪುರಂದರದಾಸರ ರಚನೆಗಳನ್ನು ತಾನೇ ಸ್ವತಃ ಹಾಡಿ ನರ್ತಿಸಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಮಾಡಿದ ದೀಕ್ಷಾ ರಾಮಕೃಷ್ಣ ಇವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಈ ದಿನ ಚೆನ್ನೈಯ ಹೆಸರಾಂತ ಕಲಾವಿದರಾದ ಸಾಯಿ ವಿಘ್ನೇಶ್ ಇವರ ಕಛೇರಿ ನಡೆಯಿತು.

ಉತ್ಸವದ ಎರಡನೇ ದಿವಸ ಪಿಳ್ಳಾರಿ ಗೀತೆಗಳು ಹಾಗೂ ತ್ಯಾಗರಾಜರ ಘನ ಪಂಚರತ್ನ ಗೋಷ್ಠಿ ಗಾಯನ ಉಡುಪಿಯ ಸಂಗೀತ ಗುರುಗಳು ಹಾಗೂ ಶಿಷ್ಯಂದಿರೊಡಗೂಡಿ ಸಮರ್ಪಕವಾಗಿ ನಡೆಸಿಕೊಟ್ಟರು. ತದನಂತರ ಉತ್ಸವದಲ್ಲಿ ಡಾ. ಸುಶೀಲಾ ಉಪಾಧ್ಯಾಯ ಸ್ಮರಣಾರ್ಥ ಡಾ. ಯು.ಪಿ. ಉಪಾಧ್ಯಾಯ ಇವರ ಸದಾಶಯದಂತೆ ‘ರಾಗ ಧನ ಪಲ್ಲವಿ ಪ್ರಶಸ್ತಿ’ ಉಡುಪಿಯ ಪ್ರತಿಭಾನ್ವಿತೆ ಕುಮಾರಿ ಪ್ರಜ್ಞ ಅಡಿಗ ಇವರಿಗೆ ಮಣಿಪಾಲದ ಯೋಗ ಗುರುಗಳಾದ ಡಾ. ಗಣಪತಿ ಜೋಯಿಸ್ ಪ್ರದಾನ ಮಾಡಿದರು. ಕುಮಾರಿ ಪ್ರಜ್ಙ ಅಡಿಗ ಇವರು ತಮ್ಮ ಕಛೇರಿಯಲ್ಲಿ ಕಾನಡ ಅಟತಾಳ ವರ್ಣ ಮುಂದೆ ‘ನಿನ್ನಚೆಪ್ಪ್ಪ ಕಾರಣಮೇಮಿಮಾನಸ’ ರಾಗ ಮಂದಾರಿಯಲ್ಲಿ ,’ಭಜರೇ ಮಾನಸ’ ಆಭೇರಿ ರಾಗದಲ್ಲಿ ನಾಟಕುರುಂಜಿ ರಾಗದಲ್ಲಿ ‘ಪಾರ್ವತಿ ಕುಮಾರ ಭಾವಯೇ’ ಮಿಶ್ರ ಛಾಪು ತಾಳದಲ್ಲಿ ‘ರಾಕಾಶಶಿವದನಾ’ ಟಕ್ಕ ರಾಗದಲ್ಲಿ ತುಂಬಾ ಸುಂದರವಾಗಿ ಮೂಡಿ ಬಂತು. ಎಲ್ಲಾ ಪ್ರಸ್ತುತಿಗಳೂ ಮನೋಹರವಾದ ಆಲಾಪನೆ ಸುಂದರವಾದ ಸ್ವರಕಲ್ಪನೆಯಿಂದ ಮೂಡಿ ಬಂತು.


ಮುಂದೆ ಎಲ್ಲರೂ ನಿರೀಕ್ಷಿಸುತ್ತಿದ್ದ ‘ರಾಗ-ತಾನ-ಪಲ್ಲವಿ’ ಪ್ರಸ್ತುತಿ. ಪ್ರಾರಂಭದ ದುರ್ಗಾ ರಾಗದಲ್ಲಿ ಅತ್ಯಂತ ಮೋಹಕವಾಗಿ, ಸರಸ್ವತಿ ರಾಗದಲ್ಲಿ ದೇವಿಯ ಕೋಮಲತೆ, ಗಾಂಭೀರ್ಯವನ್ನು ಹಾಗೂ ಲಲಿತ ರಾಗದಲ್ಲಿ ಲಾಲಿತ್ಯವನ್ನೂ ಅತ್ಯಂತ ಮನೋಜ್ಞವಾಗಿ ಪ್ರಸ್ತುತ ಪಡಿಸಿದ ಕಲಾವಿದೆ ನಿಜಕ್ಕೂ ಪ್ರಶಸ್ತಿಗೆ ಅರ್ಹರು. ಅದೊಂದು ತ್ರಿರಾಗ ಪಲ್ಲವಿಯಾಗಿತ್ತು. ದುರ್ಗಾ, ಸರಸ್ವತಿ, ಲಲಿತ ರಾಗಗಳಲ್ಲಿ ಖಂಡಜಾತಿ ಅಟ್ಟತಾಳದಲ್ಲಿ ಸಾಹಿತ್ಯ ‘ದುರ್ಗೇ ಸುಖದಾಯಿದನೀ ಸರಸ್ವತಿ ವೀಣಾ ಧಾರಣೀ ಹಿರಣ್ಮಯೀ ಲಕ್ಷ್ಮೀಂ ಸದಾ ಭಜಾಮಿ’ ಪಲ್ಲವಿ ಹಾಡುಗಾರಿಕೆ ಮನೋಧರ್ಮ ಸಂಗೀತದ ಉತ್ಕೃಷ್ಟವಾದ ರಾಗಾಲಾಪನೆ ನೆರವಲ್, ಸ್ವರಪಸ್ತಾರದೊಂದಿಗೆ ಅದೆಷ್ಟು ಸುಂದರವಾಗಿ ಮೂಡಿ ಬಂದಿದೆ.

ಈ ನಿಟ್ಟಿನಲ್ಲಿ ಕಲಾವಿದೆ ಪ್ರಜ್ಞ ಅಡಿಗ ಇವರಿಗೆ ಗುರುಗಳಾದ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದೆ ಡಾ. ಜಯಂತಿ ಕುಮರೇಶ್ ತುಂಬಾ ಚೆನ್ನಾಗಿ ಪಾಠ ಮಾಡಿರುವುದು ಶ್ಲಾಘನೀಯ. ಮುಂದೆ ವಾಸಂತಿ ರಾಗದಲ್ಲಿ ಈಶ ನಿನ್ನ ಚರಣ ಭಜನೆ ಗುರುಗಳಾದ ವಿದುಷಿ ವಾರಿಜಾಕ್ಷಿ ಆರ್.ಎಲ್. ಭಟ್ ಹೇಳಿ ಕೊಟ್ಟಿರುವರು. ಹಾಗೂ ಯಮನ್ ನಲ್ಲಿ ‘ನಗುವುಲು ನಿಜಮನಿ’ ಮಧುವಂತಿ ರಾಗದಲ್ಲಿ ತಿಲ್ಲಾನದೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು. ವಯೊಲಿನ್ ನಲ್ಲಿ ವೈಭವ್ ರಮಣಿ ಬೆಂಗಳೂರು ಹಾಗೂ ಪ್ರಜ್ವಲ್ ಭಾರದ್ವಾಜ್ ಬೆಂಗಳೂರು ಕಲಾವಿದೆಗೆ ಸರಿಸಾಟಿಯಾಗಿ ಸಹಕಾರ ನೀಡಿದ್ದು ಶ್ಲಾಘನೀಯ. ಪ್ರಜ್ಞ ಅವರ ಕಚೇರಿ ನಿಜಕ್ಕೂ ಅವಿಸ್ಮರಣೀಯ. ಈ ನಿಟ್ಟಿನಲ್ಲಿ ರಾಗ ಧನ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿ ಉಮಾಶಂಕರಿ, ಖಜಾಂಚಿಯವರಾದ ಶ್ರೀ ಕೆ. ಸದಾಶಿವ ರಾವ್ ಹಾಗೂ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು.
ವಿದುಷಿ ವಾರಿಜಾಕ್ಷಿ ಆರ್.ಎಲ್. ಭಟ್.
