ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರ ಮತ್ತು ಸ್ನಾತಕೋತ್ತರ ಕೇಂದ್ರ ಹಾಗೂ ನಾಡೋಜ ಕವಿ ಡಾ. ಸಿದ್ಧಲಿಂಗಯ್ಯ ಸ್ಮಾರಕ ಪ್ರತಿಷ್ಠಾನ (ರಿ.) ಇದರ ವತಿಯಿಂದ ‘ಜೀವಧ್ವನಿ’ ಕಾರ್ಯಕ್ರಮವನ್ನು ದಿನಾಂಕ 11 ಜೂನ್ 2025ರಂದು ಬೆಳಗ್ಗೆ 10-30 ಗಂಟೆಗೆ ಬೆಂಗಳೂರು ಜ್ಞಾನಭಾರತಿ ಆವರಣದಲ್ಲಿರುವ ಪ್ರೊ. ವೆಂಕಟಗಿರಿಗೌಡ ಸ್ಮಾರಕ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಜನ ಮಾನಸ ಕವಿ ಪದ್ಮಶ್ರೀ ನಾಡೋಜ ಡಾ. ಸಿದ್ಧಲಿಂಗಯ್ಯನವರ 4ನೇ ವರ್ಷದ ಪರಿನಿಬ್ಬಾಣ ಸ್ಮರಣಾ ಕಾರ್ಯಕ್ರಮ ಹಾಗೂ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ.
ಈ ಕಾರ್ಯಕ್ರಮವನ್ನು ಕರ್ಣಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ನಾಗರಾಜ ಮೂರ್ತಿ ಕೆ.ವಿ. ಇವರು ಉದ್ಘಾಟನೆ ಮಾಡಲಿದ್ದು, ನಾಡೋಜ ಕವಿ ಡಾ. ಸಿದ್ಧಲಿಂಗಯ್ಯ ಸ್ಮಾರಕ ಪ್ರತಿಷ್ಠಾನ ಇದರ ಉಪಾಧ್ಯಕ್ಷರಾದ ಶ್ರೀಮತಿ ರಮಾಕುಮಾರಿ ಸಿದ್ಧಲಿಂಗಯ್ಯ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಸಿದ್ಧ ಲೇಖಕರಾದ ಡಾ. ಬಿ.ಯು. ಸುಮಾ ಇವರ ಅಧ್ಯಕ್ಷತೆಯಲ್ಲಿ ನಡೆಯುವ ವಿಚಾರಗೋಷ್ಠಿಯಲ್ಲಿ ‘ದಲಿತ ಕವಿ ಸಿದ್ಧಲಿಂಗಯ್ಯನವರ ಕಾವ್ಯ’ ಎಂಬ ವಿಷಯದ ಬಗ್ಗೆ ಪ್ರಸಿದ್ಧ ಕವಿಗಳಾದ ಡಾ. ರವಿಕುಮಾರ್ ನೀಹ, ‘ಗ್ರಾಮ ದೇವತೆಗಳು ಕೃತಿ ಅವಲೋಕನ’ ಎಂಬ ವಿಷಯದ ಬಗ್ಗೆ ಪ್ರಾಂಶುಪಾಲರಾದ ಡಾ. ನಾಗವೇಣಿ ಮತ್ತು ‘ಅವತಾರಗಳು – ಒಂದು ವಿವೇಚನೆ’ ಎಂಬ ವಿಷಯದ ಬಗ್ಗೆ ಸಂಶೋಧನಾ ವಿದ್ಯಾರ್ಥಿ ಮೋಹನ್ ಕುಮಾರ್ ಆರ್. ಇವರುಗಳು ವಿಷಯ ಮಂಡನೆ ಮಾಡಲಿದ್ದಾರೆ. ಬಳಿಕ ಕಾವ್ಯ ವಾಚನ ಮತ್ತು ಗಾಯನ ಪ್ರಸ್ತುತಗೊಳ್ಳಲಿದೆ.