ಮಂಗಳೂರು : ಸಪ್ತಕ ಬೆಂಗಳೂರಿನ ನೇತೃತ್ವದಲ್ಲಿ , ಚಿರಂತನ ಚಾರಿಟೆಬಲ್ ಟ್ರಸ್ಟ್ ಸುರತ್ಕಲ್ ಹಾಗೂ ರಾಮಕೃಷ್ಣ ಮಠ ಮಂಗಳೂರು ಇವರ ಸಹಯೋಗ ಹಾಗೂ ಮಂಗಳೂರಿನ ಹತ್ತಾರು ಹಿಂದೂಸ್ಥಾನಿ ಸಂಗೀತ ಸಂಸ್ಥೆಗಳ ಸಹಕಾರದಲ್ಲಿ ಮಂಗಳೂರಿನ ರಾಮಕೃಷ್ಣ ಮಠದ ಸಭಾಭವನದಲ್ಲಿ ದೇಶ ವಿದೇಶಗಳಲ್ಲಿ ತಮ್ಮ ವಿಶಿಷ್ಟ , ವಿಶೇಷ ತಬಲಾ ವಾದನದಿಂದ ಪ್ರಖ್ಯಾತರಾದ ತಮ್ಮ ಉದಾತ್ತ ನಡೆನುಡಿಯಿಂದ ಅಜಾತ ಶತ್ರುವಾಗಿಯೂ ಅಪಾರ ಅಭಿಮಾನಿಗಳನ್ನು ಪಡೆದಿರುವ ಮಂಗಳೂರಿನವರೇ ಆದ ಪಂಡಿತ ಓಂಕಾರ ಗುಲ್ವಾಡಿ ಇವರಿಗೆ ಸನ್ಮಾನ ಸಮಾರಂಭ ದಿನಾಂಕ 13 ಏಪ್ರಿಲ್ 2025ರಂದು ನಡೆಯಿತು. ಪ್ರಾರಂಭದಲ್ಲಿ ಪ್ರತಿಭಾವಂತ ಯುವ ಕಲಾವಿದರಾದ ಅಂಕುಶ ನಾಯಕ ಇವರ ಸಿತಾರ್ ಹಾಗೂ ಕಾರ್ತಿಕ ಭಟ್ಟ ಇವರ ಕೊಳಲು ವಾದನ ಜುಗಲ್ಬಂದಿಗೆ ಹೇಮಂತ ಜೋಶಿ ಅವರ ತಬಲಾ ವಾದನ ಹಾಲು ಜೇನಿನಂತೆ ಸೇರಿ ಶೋತೃಗಳ ಮನ ಸೂರೆಗೊಳ್ಳುವಲ್ಲಿ ಯಶಸ್ವೀ ಆಯಿತು.
ನಂತರ ಪಂಡಿತ ವೆಂಕಟೇಶ ಕುಮಾರ ಧಾರವಾಡ ಇವರ ಅಧ್ಯಕ್ಷತೆಯಲ್ಲಿ ಓಂಕಾರ ಗುಲ್ವಾಡಿ ಅವರನ್ನ ಹುಟ್ಟೂರಿನ ಸಮಸ್ತ ಕಲಾಭಿಮಾನಿಗಳ ಪರವಾಗಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದೆ ಓಂಕಾರ ಗುಲ್ವಾಡಿ “ಇದೆಲ್ಲವೂ ನನ್ನಿಂದ ಸಾಧ್ಯ ಆದದ್ದು, ವಿದ್ಯಾ ಗುರುಗಳಾದ ಪಂಡಿತ ತಾರಾನಾಥ ಹಾಗೂ ಆಧ್ಯಾತ್ಮ ಗುರುಗಳಾದ ಪಂಡಿತ ಚಿದಾನಂದ ನಗರಕರ ಕಲಿಸಿದ ವಿದ್ಯೆಯಿಂದ, ಆಡಿದ ಕಿವಿಮಾತಿನಿಂದ ಹಾಗೂ ತೋರಿದ ಸನ್ಮಾರ್ಗದಿಂದ ಸಾಧ್ಯವಾಯಿತು” ಎಂದರು.
‘ಸಪ್ತಕ’ ಇದರ ಜಿ. ಎಸ್. ಹೆಗಡೆ ಮಾತನಾಡಿ “ಈ ಕಾರ್ಯಕ್ರಮವನ್ನು ಹೀಗೆ ಏರ್ಪಡಿಸಬೇಕು ಎಂಬ ಬಹು ದಿನದ ಆಸೆ ಕೈಗೂಡಿದ್ದು ದೈವ ಕೃಪೆ ಹಾಗೂ ಸಹೃದಯದರ ಸಹಕಾರದಿಂದ” ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವೆಂಕಟೇಶ ಕುಮಾರ ಅವರು ಓಂಕಾರ ಗುಲ್ವಾಡಿಯರ ತಬಲಾ ನುಡಿಸಾಣಿಕೆಯ ವಿಶೇಷತೆಯನ್ನು ವಿಶ್ಲೇಷಿಸಿ, ಯಾಕೆ ಗಾಯಕರಾಗಲಿ ,ವಾದಕರಾಗಲಿ ಇವರನ್ನೇ
ಸಾಥ್ ಸಂಗತ್ ಗಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದರು ಎಂದು ವಿವರಿಸಿದರು. ಅಷ್ಟೇ ಸಮರ್ಥವಾಗಿ ಸ್ವತಂತ್ರ ತಬಲಾ ವಾದನದಲ್ಲಿಯೂ , ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾ ದಾನ ಮಾಡುತ್ತಿರುವ ಗುರುವಾಗಿಯೂ ಗುಲ್ವಾಡಿ ಅವರು ಅಭಿನಂದನಾರ್ಹರು, ಅನುಕರಣೀಯರು ಹೌದು ಎಂದು ಹೇಳಿದರು.
ಓಂಕಾರ ಗುಲ್ವಾಡಿ ಅವರ ಕುರಿತ ಚಿಕ್ಕದಾದ ಸಾಕ್ಷ್ಯಚಿತ್ರ ಪ್ರದರ್ಶನವು ನಡೆಯಿತು.
ನಂತರ ಸುಮಾರು ಎರಡು ಘಂಟೆಗಳ ಕಾಲ ನಡೆದ ಪಂ ವೆಂಕಟೇಶಕುಮಾರ ಅವರ ಅಮೋಘ ಗಾಯನಕ್ಕೆ ಪಂ. ಓಂಕಾರ ಗುಲ್ವಾಡಿ ಅವರ ತಬಲಾ ಹಾಗೂ ಪಂ. ಸುಧೀರ ನಾಯಕ ಅವರ ಹಾರ್ಮೋನಿಯಂ ವಾದನ ಶ್ರೋತುಗಳಿಗೆ ದಿವ್ಯಾನಂದ ನೀಡಿತು. ಜೂನಿಯರ್ ಶಂಕರ ಇಂದ್ರಜಾಲ ಪ್ರವೀಣ ತೇಜಸ್ವಿ ಶಂಕರ ಕಾರ್ಯಕ್ರಮವನ್ನು ನಿರ್ವಹಿಸಿದರು.