ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠ ಉಡುಪಿ ಇದರ ಆಶ್ರಯದಲ್ಲಿ ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನದ 8ನೇ ವಾರ್ಷಿಕೋತ್ಸವದ ಪ್ರಯುಕ್ತ ಪಣಂಬೂರು ವೆಂಕಟ್ರಾಯ ಐತಾಳ ಸಂಸ್ಮರಣಾ ಯಕ್ಷಗಾನ ಸಪ್ತಾಹ ಹಾಗೂ ಅಷ್ಟಾವಧಾನ ಕಾರ್ಯಕ್ರಮವು ದಿನಾಂಕ 15 ಜೂನ್ 2025ರಂದು ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಉದ್ಘಾಟನೆಗೊಂಡಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ “ಕಲೆ ಯಾವತ್ತೂ ಒಂದೇ ಭಾಷೆಗೆ ಸೀಮಿತವಾಗಿರಬಾರದು. ಅದು ಸೀಮಾತೀತವಾಗಿರಬೇಕು. ಯಕ್ಷಗಾನ ಕೂಡ ಇಂದು ಜಾಗತಿಕ ಕಲೆಯಾಗಿದೆ. ಯಕ್ಷಗಾನ ಇಂದು ಜಾಗತೀಕ ಕಲೆಯಾಗಿ ಪ್ರಸಿದ್ಧಿಯಾಗಲು ಇಂಗ್ಲೀಷ್ ಮೂಲಕ ಯಕ್ಷಗಾನ ನಡೆಸಿಕೊಟ್ಟ ಪಣಂಬೂರು ವೆಂಕಟ್ರಾಯ ಐತಾಳರ ಪ್ರಯತ್ನವೇ ಕಾರಣ. ಸಾಧಿಸಿದ ಕಲೆಯ ಮೂಲಕವೇ ಆ ವ್ಯಕ್ತಿಯನ್ನು ಗುರುತಿಸುವುದೇ ಆ ವ್ಯಕ್ತಿಯ ಸಾಧನೆಯಾಗುತ್ತದೆ. ಅಂತಹ ಗೌರವಕ್ಕೆ ವೆಂಕಟ್ರಾಯ ಐತಾಳರು ಭಾಜನರಾಗಿದ್ದಾರೆ. ನಾವು ಚಿಕ್ಕವರಿರುವಾಗ ಇಂಗ್ಲೀಷ್ ನಲ್ಲಿ ಹೇಗೆ ಯಕ್ಷಗಾನ ಮಾಡಬಹುದು ಎಂಬ ಕುತೂಹಲವಿತ್ತು. ಅದನ್ನು ಐತಾಳರು ತೋರಿಸಿಕೊಟ್ಟಿದ್ದಾರೆ. ಯಕ್ಷಗಾನ ಸಪ್ತಾಹದ ಮೂಲಕ ಆ ಕ್ಷೇತ್ರದ ಸಾಧಕರನ್ನು ಗುರುತಿಸುವುದು ಅರ್ಥಪೂರ್ಣವಾಗಿದೆ. ಇವರಂತೆ ಯಕ್ಷಗಾನ ಕ್ಷೇತ್ರಕ್ಕೆ ಅಪಾರ ಸೇವೆ ನೀಡಿದ್ದು ಕಟೀಲು ಮೇಳ. ಹರಕೆಯ ರೂಪದಲ್ಲಿ ಇರುವ ವಿಶ್ವದ ಏಕೈಕ ಪುಣ್ಯಪ್ರದವಾದ ಕಲೆ ಇರುವುದು ಯಕ್ಷಗಾನ ಮಾತ್ರ. ಇದು ಕೇವಲ ಕರಾವಳಿಯ ಕಲೆಯಲ್ಲ. ವಿಶ್ವದ ಕಲೆ. ವಿಶ್ವವನ್ನು ಸೆಳೆಯುವ ಶಕ್ತಿ ಇದಕ್ಕಿದೆ. ವಿದೇಶದಲ್ಲಿ ಇದನ್ನು ಆಯೋಜಿಸಿದರೆ ಹಿಂದಿ, ಮಲಯಾಳ, ಬಿಳಿಯರು ಕೂಡ ಯಕ್ಷಗಾನ ವೀಕ್ಷಿಸುತ್ತಾರೆ. ಇಂತಹ ಯಕ್ಷಗಾನಕ್ಕೆ ಕೊಡುಗೆ ನೀಡಿದವರು ಯಾವತ್ತೂ ಸ್ಮರಣೀಯವಾಗಿರುತ್ತಾರೆ” ಎಂದು ಅಭಿಪ್ರಾಯಪಟ್ಟರು.
ಎಡನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ ಮಾತನಾಡಿ, “ಯಕ್ಷಗಾನ ಕಲೆ ಹಿಂದೂ ಸಮಾಜದಲ್ಲಿ ಸಂಸ್ಕಾರ ಬಿತ್ತಿದ ಕಲೆ. ಪುರಾಣ, ಐತಿಹಾಸಿಕ, ಸಾಮಾಜಿಕ ಸಂದೇಶಗಳನ್ನು ಯಕ್ಷಗಾನ ನೀಡಿದೆ. ಯಾವುದೇ ಅಪರಾಧ ಚಟುವಟಿಕೆಗಳಲ್ಲೂ ಯಕ್ಷಗಾನ ಕಲಾವಿದರು ಹಾಗೂ ಯಕ್ಷಗಾನ ಅಭಿಮಾನಿಗಳು ಇರುವುದು ವಿರಳ. ಕರಾವಳಿ ಭಾಗದಲ್ಲಿ ವೃದ್ಧಾಶ್ರಮಗಳು ಕೂಡ ಕಾಣಿಸುತ್ತಿಲ್ಲ. ಇಂತಹ ಸಭ್ಯ ಸಮಾಜ ನಿರ್ಮಾಣಕ್ಕೆ ಯಕ್ಷಗಾನ ನೀಡಿದ ಕೊಡುಗೆ ಅಪಾರ ಎಂದರು. ದೇಶದಲ್ಲಿ ಪಾಶ್ಚಾತ್ಯ ಬಂದು, ಪಾಶ್ಚಾತ್ಯ ದೇಶದಲ್ಲೂ ನಮ್ಮ ಸಂಸ್ಕಾರ ಕಲಿಯಲು ಪ್ರೇರೇಪಿಸಿದ್ದು ಪುತ್ತಿಗೆ ಶ್ರೀಗಳು. ಅವರು ವಿದೇಶದಲ್ಲಿ ಯಕ್ಷಗಾನಕ್ಕೆ ವಿಶೇಷ ಒತ್ತು ನೀಡಿ ಪ್ರೋತ್ಸಾಹಿಸುತ್ತಿದ್ದಾರೆ” ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಹಿರಿಯ ಯಕ್ಷಗಾನ ಕಲಾವಿದ ಕೆ. ಗೋವಿಂದ ಭಟ್, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್. ಸಾಮಗ, ಹಿರಿಯ ಯಕ್ಷಗಾನ ಭಾಗವತರಾದ ಕುರಿಯ ಗಣಪತಿ ಶಾಸ್ತ್ರಿ, ಪೊಲ್ಯ ಲಕ್ಷ್ಮಿ ನಾರಾಯಣ ಶೆಟ್ಟಿ ಮತ್ತು ಹಿರಿಯ ಯಕ್ಷಗಾನ ಹಿಮ್ಮೇಳ ಕಲಾವಿದ ಪದ್ಯಾಣ ಶಂಕರನಾರಾಯಣ ಭಟ್ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಸುಶೀಂದ್ರ ತೀರ್ಥ ಸ್ವಾಮೀಜಿ, ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಲಕ್ಷ್ಮೀನಾರಾಯಣ ಅಸ್ರಣ್ಣ ಹಿರಿಯ ಯಕ್ಷಗಾನ ಚಿಂತಕ ಎಂ. ಪ್ರಭಾಕರ ಜೋಶಿ, ಅಷ್ಟಾವಧಾನಿ ಡಾ. ರಾಮಕೃಷ್ಣ ಪೆಜತ್ತಾಯ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಗಂಗಾಧರ ರಾವ್, ಯಕ್ಷನಂದನ, ಪಣಂಬೂರು ಸಂಚಾಲಕ ಸಂತೋಷ್ ಐತಾಳ್, ಕರ್ಣಾಟಕ ಬ್ಯಾಂಕ್ ಡಿ.ಜಿ.ಎಂ. ವಸಂತ್ ಹೇರಳೆ, ಕ.ಸಾ.ಪ. ಮಾಜಿ ಅಧ್ಯಕ್ಷ ಡಾ. ಹರಿಕೃಷ್ಣ ಪುನರೂರು, ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷೆ ಗೋಪಿಕಾ ಮಯ್ಯ ಸದಸ್ಯರಾದ ಸತೀಶ್ ಮಯ್ಯ, ಸಿರಿಬಾಗಿಲು ರಾಮಕೃಷ್ಣ ಮಯ್ಯ ಹಾಗೂ ಯಕ್ಷ ಗುರು ರಾಕೇಶ್ ರೈ ಅಡ್ಡ ಉಪಸ್ಥಿತರಿದ್ದರು.