ಉಡುಪಿ : ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯು 14ನೇ ವರ್ಷದ ‘ರಂಗಹಬ್ಬ–14’ ನಾಟಕೋತ್ಸವವನ್ನು ದಿನಾಂಕ 22ರಿಂದ 28 ಫೆಬ್ರವರಿ 2026ರವರೆಗೆ ಪ್ರತಿದಿನ ಸಂಜೆ ಗಂಟೆ 6-30ಕ್ಕೆ ಉಡುಪಿಯ ಅಜ್ಜರಕಾಡು ಭುಜಂಗ ಪಾರ್ಕ್ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದೆ.
ಈ ಬಾರಿಯ ರಂಗಹಬ್ಬವು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ನಗರಸಭೆ, ನವದೆಹಲಿಯ ಸಂಸ್ಕೃತಿ ನಿರ್ದೇಶನಾಲಯವು ಸಹಯೋಗ ನೀಡಿವೆ. ತುಳು ರಂಗಭೂಮಿ ಮತ್ತು ತುಳು ಚಲನಚಿತ್ರ ರಂಗದ ಹಿರಿಯ ರಂಗಕರ್ಮಿ ಡಾ. ಪಿ. ಸಂಜೀವ ದಂಡೆಕೇರಿಯವರು ನಾಟಕೋತ್ಸವವನ್ನು ಉದ್ಘಾಟಿಸಲಿದ್ದಾರೆ. ಶಾಸಕ ಯಶ್ಪಾಲ್ ಎ. ಸುವರ್ಣ ಅಧ್ಯಕ್ಷತೆ ವಹಿಸಲಿದ್ದು, ಪ್ರತಿದಿನ ರಂಗಸಾಧಕರಿಗೆ ಸನ್ಮಾನ, ಅದೃಷ್ಟ ಪ್ರೇಕ್ಷಕರಿಗೆ ಟ್ರಾವೆಲಿಂಗ್ ಬ್ಯಾಗ್ನ ಕೊಡುಗೆ ಇರಲಿದೆ. ಯಕ್ಷಗುರು ಯು.ದುಗ್ಗಪ್ಪ ಇವರ ನೆನಪಿನಲ್ಲಿ ‘ಯಕ್ಷಸುಮ’ ಪ್ರಶಸ್ತಿಯನ್ನು ಯಕ್ಷಗಾನ ಗುರು ಬಿ. ಕೃಷ್ಣ ಸ್ವಾಮಿ ಜೋಷಿ ಇವರಿಗೆ ಪ್ರದಾನ ಮಾಡಲಾಗುವುದು.
ದಿನಾಂಕ 22 ಫೆಬ್ರವರಿ 2026ರಂದು ಜರ್ನಿ ಥೇಟರ್ ಗೂಪ್ ಮಂಗಳೂರು ತಂಡವು ಚೇತನ್ ಗಣೇಶಪುರ ಇವರ ನಿರ್ದೇಶನದಲ್ಲಿ ಕನ್ನಡ ನಾಟಕ ‘ಸಾಹೇಬರು ಬರುತ್ತಾರೆ’, ದಿನಾಂಕ 23 ಫೆಬ್ರವರಿ 2026ರಂದು ಸುಮನಸಾ ಕೊಡವೂರು ಉಡುಪಿ ತಂಡದ ಕಲಾವಿದರು ವಿದ್ದು ಉಚ್ಚಿಲ್ ಇವರ ನಿರ್ದೇಶನದಲ್ಲಿ ತುಳು ನಾಟಕ ‘ಯೇಸ’, ದಿನಾಂಕ 24 ಫೆಬ್ರವರಿ 2026ರಂದು ಶಿವಮೊಗ್ಗದ ಸಹ್ಯಾದ್ರಿ ಕಲಾತಂಡದವರು ಡಾ. ಲವ ಇವರ ನಿರ್ದೇಶನದಲ್ಲಿ ಕನ್ನಡ ನಾಟಕ ‘ಜೋಕುಮಾರ ಸ್ವಾಮಿ’, ದಿನಾಂಕ 25 ಫೆಬ್ರವರಿ 2026ರಂದು ಸುಮನಸಾ ಕೊಡವೂರು ತಂಡದ ಸದಸ್ಯರಿಂದ ನರಸಿಂಹ ತುಂಗ ಇವರ ನಿರ್ದೇಶನದಲ್ಲಿ ಕನ್ನಡ ಯಕ್ಷನಾಟಕ ‘ಮೈಂದ ದ್ವಿವಿದ ಕಾಳಗ’, ದಿನಾಂಕ 26 ಫೆಬ್ರವರಿ 2026ರಂದು ಪಾಂಡಿಚೇರಿಯ ಅದಿಶಕ್ತಿ ಥೇಟರ್ ಸದಸ್ಯರಿಂದ ವಿನಯ ಕುಮಾರ್ ಇವರ ನಿರ್ದೇಶನದಲ್ಲಿ ಇಂಗ್ಲೀಷ್ ನಾಟಕ ‘ಎ ಉಮೆನ್ ಆರ್ ನಾಟ್ ಟು ಬಿ’, ದಿನಾಂಕ 27 ಫೆಬ್ರವರಿ 2026ರಂದು ಉಡುಪಿಯ ಸುಮನಸಾ ಕೊಡವೂರು ತಂಡದಿಂದ ವಿದ್ದು ಉಚ್ಚಿಲ್ ಇವರ ನಿರ್ದೇಶನದಲ್ಲಿ ಕನ್ನಡ ನಾಟಕ ‘ಈದಿ’, ದಿನಾಂಕ 28 ಫೆಬ್ರವರಿ 2026ರಂದು ಮೈಸೂರು ರಂಗವಲ್ಲಿ ತಂಡದಿಂದ ರವಿ ಪ್ರಸಾದ್ ಇವರ ನಿರ್ದೇಶನದಲ್ಲಿ ಕನ್ನಡ ನಾಟಕ ‘ಪರಮೇಶಿ ಪೇಮಪ್ರಸಂಗ’ ಪ್ರದರ್ಶನಗೊಳ್ಳಲಿದೆ.

