ದಾವಣಗೆರೆ : ವೃತ್ತಿ ರಂಗಭೂಮಿ ರಂಗಾಯಣ ದಾವಣಗೆರೆ ಇದರ ವತಿಯಿಂದ ರಾಷ್ಟ್ರೀಯ ವೃತ್ತಿ ರಂಗೋತ್ಸವ-2025ರ ಅಂಗವಾಗಿ ಲಾಂಛನ ಬಿಡುಗಡೆ ಹಾಗೂ ಚಿತ್ರಕಲಾ ಶಿಬಿರ ಉದ್ಘಾಟನಾ ಸಮಾರಂಭವು ದಿನಾಂಕ 05 ಮಾರ್ಚ್ 2025ರಂದು ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ನಡೆಯಿತು.
ಈ ಸಮಾರಂಭವನ್ನು ಉದ್ಘಾಟಿಸಿದ ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕ ಹಿರಿಯ ರಂಗಕರ್ಮಿ ಮಲ್ಲಿಕಾರ್ಜುನ ಕಡಕೋಳ ಇವರು ಮಾತನಾಡಿ “ದಾವಣಗೆರೆಯಲ್ಲಿ ಪ್ರಪ್ರಥಮ ಬಾರಿಗೆ ರಾಷ್ಟ್ರೀಯ ವೃತ್ತಿ ರಂಗೋತ್ಸವವನ್ನು 15 ಮಾರ್ಚ್ 2025ರಿಂದ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ. ವೃತ್ತಿ ರಂಗೋತ್ಸವದ ಹಿನ್ನೆಲೆ ದೃಶ್ಯಕಲಾ ಕಾಲೇಜು ವಿದ್ಯಾರ್ಥಿಗಳ ಚಿತ್ರಕಲಾ ಶಿಬಿರ ನಾಟಕೋತ್ಸವಕ್ಕೆ ಮತ್ತಷ್ಟು ಸ್ಫೂರ್ತಿ ತುಂಬುತ್ತಿದೆ. ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣ ಶುರುವಾಗಿ ಆರು ವರ್ಷವಾಗುತ್ತಿದೆ. ಮೊದಲ ಸಲ ಇಲ್ಲಿ ರಾಷ್ಟ್ರೀಯ ನಾಟಕೋತ್ಸವ ಆಯೋಜನೆಯಾಗುತ್ತಿದೆ. ಕನ್ನಡ, ತಮಿಳು, ತೆಲುಗು ಭಾಷೆಯ ನಾಟಕಗಳು ಪ್ರದರ್ಶನವಾಗಲಿವೆ. ಪ್ರೇಕ್ಷಕರಿಗೆ ಉಚಿತ ಪ್ರವೇಶ ಅವಕಾಶ ಇರುತ್ತದೆ. ಕನ್ನಡ ವೃತ್ತಿ ರಂಗಭೂಮಿಯ ರಾಜಣ್ಣ ಜೇವರ್ಗಿಯವರ ‘ಅಂಗಾರ.. ತಂಗಿ ಬಂಗಾರ’, ತೆಲುಗಿನ ‘ಮಾಯಾ ಬಜಾರ್’, ತಮಿಳು ‘ನಡೆ ಪಾವಡೈ ನಾಯಕಗಳು’ ಪ್ರದರ್ಶನವಾಗಲಿವೆ. ವೃತ್ತಿ ರಂಗಭೂಮಿಗೆ ಸಂಬಂಧಿಸಿದಂತೆ ಅನೇಕ ವಿಚಾರ ಸಂಕಿರಣ, ಸಂವಾದ ನಡೆಯಲಿವೆ. ಪ್ರಸಿದ್ಧ ನಾಟಕಕಾರರು ಇತರರು ಭಾಗವಹಿಸುವರು. ವೃತ್ತಿ ರಂಗಭೂಮಿ ನಾಟಕಗಳ ಹಬ್ಬ ನಡೆಯಬೇಕೆಂಬುದು ವೃತ್ತಿ ರಂಗಭೂಮಿ ರಂಗಾಯಣದ ಅಪೇಕ್ಷೆಯಾಗಿದೆ. ಹಿರಿಯ ಕಲಾವಿದರೊಂದಿಗೆ ಸಂವಾದ, ಕೃತಿ ಲೋಕಾರ್ಪಣೆ, ನಾಟಕ ಕೃತಿಗಳ ಪ್ರದರ್ಶನ, 45 ಸಾವಿರದಷ್ಟು ರಂಗಭೂಮಿ ದಾಖಲೆಗಳ ಪ್ರದರ್ಶನ ಸೇರಿದಂತೆ ಅನೇಕ ರೀತಿಯ ರೂಪುರೇಷೆ ಸಿದ್ಧಪಡಿಸಿದ್ದೇವೆ” ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಜೈರಾಜ ಎಂ. ಚಿಕ್ಕಪಾಟೀಲ ಮಾತನಾಡಿ, “ಕಲಾ ವಿದ್ಯಾರ್ಥಿಗಳು ಇತರೆ ಲಲಿತ ಕಲೆಯ ಬಗ್ಗೆ ಅಧ್ಯಯನ ಮಾಡಿ. ಎಲ್ಲವನ್ನೂ ತಿಳಿದಾಗ ನಿಮಗೆ ಬೇಕಾದಂತಹ ಕಲಾಕೃತಿಗಳ ಚಿತ್ರಣ ಮಾಡಬಹುದು. ದಾವಣಗೆರೆಯಲ್ಲಿ ನಡೆಯುವ ಬಹುತೇಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ದೃಶ್ಯಕಲಾ ಮಹಾವಿದ್ಯಾಲಯದ ಪಾಲ್ಗೊಳ್ಳುವ ಮತ್ತು ಪಾಲುದಾರಿಕೆ ಹೆಚ್ಚಾಗಿರುವುದು ಹೆಮ್ಮೆಯ ಸಂಗತಿ. ಸರ್ಕಾರಿ ಇಲಾಖೆಯ ಅನೇಕ ಕಾರ್ಯಕ್ರಮ ನಡೆಸಿಕೊಡಲಾಗಿದೆ. ಕಾಲೇಜು ದಾವಣಗೆರೆಯ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರ ಆಗಬೇಕೆಂಬುದು ತಮ್ಮ ಉದ್ದೇಶ” ಎಂದು ತಿಳಿಸಿದರು.
ಕಾಲೇಜಿನ ಹಿರಿಯ ಪ್ರಾಧ್ಯಾಪಕ ದತ್ತಾತ್ರೇಯ ಎನ್. ಭಟ್ ಮಾತನಾಡಿ, “ಜಗದ್ವಿಖ್ಯಾತ ಚಿತ್ರ ಕಲಾವಿದ ರಾಜಾ ರವಿವರ್ಮರ ಅನೇಕ ಕಲಾಕೃತಿಗಳಲ್ಲಿ ವಿಶೇಷವಾಗಿ ಮರಾಠಿ ರಂಗಭೂಮಿಯ ಪ್ರಭಾವ ಗಾಢವಾಗಿದೆ. ಪಾರ್ಸಿ ರಂಗಸಜ್ಜಿಕೆ, ಮರಾಠಿ ರಂಗಭೂಮಿಯ ಸ್ತ್ರೀ ಪಾತ್ರಗಳನ್ನು ರಾಜಾ ರವಿವರ್ಮರ ಕಲಾಕೃತಿಗಳಲ್ಲಿ ಕಾಣಬಹುದು. ರಂಗಭೂಮಿ ಮತ್ತು ಚಿತ್ರಕಲೆಗೆ ಅವಿನಾಭಾವ ಸಂಬಂಧವೂ ಇದೆ” ಎಂದರು.
ಉಪ ವಿಭಾಗಾಧಿಕಾರಿ ಸಂತೋಷ ಪಾಟೀಲ್ ರಾಷ್ಟ್ರೀಯ ನಾಟಕೋತ್ಸವದ ಲಾಂಛನ ಬಿಡುಗಡೆ ಮಾಡಿದರು. ಕಾಲೇಜಿನ ಪ್ರಾಧ್ಯಾಪಕ ಶಿವಶಂಕರ ಸುತಾರ, ರಂಗಾಯಣದ ವಿಶೇಷಾಧಿಕಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಇತರರು ಉಪಸ್ಥಿತರಿದ್ದರು.