ಮಂಗಳೂರು: ಸರೋಜಿನಿ ಮಧುಸೂದನ ಕುಶೆ ವಿದ್ಯಾಸಂಸ್ಥೆಯಲ್ಲಿ ನಡೆದ ಸರೋಜ್ ಮಧುಕಲಾ ಉತ್ಸವದ ಸಮಾರಂಭವು ದಿನಾಂಕ 23 ನವೆಂಬರ್ 2024ರ ಶನಿವಾರ ಶಾಲಾ ಸಂಸ್ಥಾಪಕ ಸರೋಜಿನಿ ಮಧುಸೂದನ ಕುಶೆ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಮಂಗಳೂರಿನ ಐ. ಸಿ. ಎ. ಐ. ಇದರ ಮಾಜಿ ಅಧ್ಯಕ್ಷರಾದ ಸಿಎ ಎಸ್. ಎಸ್. ನಾಯಕ್ ಮಾತನಾಡಿ “ಮಕ್ಕಳಿಗೆ ಅಭಿರುಚಿ ಇರುವ ಕ್ಷೇತ್ರದಲ್ಲೇ ಅವರಿಗೆ ಪ್ರೋತ್ಸಾಹ ನೀಡಬೇಕು, ಕೇವಲ ಅಂಕಗಳಿಸುವುದೇ ಜೀವನದ ಗುರಿಯಾಗಿರಬಾರದು. ನಮ್ಮಲ್ಲಿ ಇರುವ ಪ್ರತಿಭೆಗಳಿಂದಲೇ ಜೀವನದಲ್ಲಿ ಯಶಸ್ಸು ಗಳಿಸಬಹುದು. ಸಮಯ ವ್ಯರ್ಥ ಮಾಡದೆ ನಿರಂತರ ಪ್ರಯತ್ನದ ಮೂಲಕ ಜೀವನದಲ್ಲಿ ನಾವು ಅಂದುಕೊಂಡದ್ದನ್ನು ಸಾಧಿಸಬಹುದು, ಮಕ್ಕಳ ಅನಾವರಣಕ್ಕೆ ಇದು ಉತ್ತಮ ವೇದಿಕೆಯಾಗಿದೆ.” ಎಂದು ಹೇಳಿದರು.

ಮತ್ತೋರ್ವ ಅತಿಥಿ ರಂಗಭೂಮಿ ಮತ್ತು ಸಿನಿಮಾ ಕಲಾವಿದರಾದ ಪ್ರದೀಪ್ ಚಂದ್ರ ಕುತ್ಪಾಡಿ ಮಾತನಾಡಿ “ಇಂದಿನ ಕಾಲಘಟ್ಟದಲ್ಲಿ ನಮ್ಮ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂಬ ಅಭಿಲಾಷೆ ಹೊಂದಿರುವ ಕುಶೆ ಸಂಸ್ಥೆಯ ಸಾಧನೆ ಅಮೋಘವಾದುದು, ಮಕ್ಕಳಲ್ಲಿರುವ ವ್ಯಕ್ತಿತ್ವ ವಿಕಸನಕ್ಕೆ ಪಠ್ಯದ ಜೊತೆಗೆ ಪಠ್ಯತರ ವಿಷಯಗಳು ಕೂಡ ಅತಿ ಅಗತ್ಯ, ನಮ್ಮೊಳಗಿನ ಕನಸನ್ನು ನನಸಾಗಿಸಿಕೊಳ್ಳಬೇಕಾದರೆ ಇಂತಹ ಸ್ಪರ್ಧೆಗಳ ಅಗತ್ಯವಿದೆ, ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆ ಇರುತ್ತದೆ ಅದನ್ನು ಗುರುತಿಸಿ ಹೊರ ತರಬೇಕು ಎಂದರು.
ಶಾಲೆಯ ಟ್ರಸ್ಟಿ ವಸಂತಿ ಹೊಸಬೆಟ್ಕರ್, ಪಿ. ವಿ. ಎಸ್ ಸಮೂಹ ಸಂಸ್ಥೆಯ ಮ್ಯಾನೇಜರ್ ಸಂದೇಶ್, ಅಧಿಕಾರಿ ರಾಜಾರಾಮ್ ನಾಟೇಕರ್, ಲೆಕ್ಕ ಪರಿಶೋಧಕ ರಾಮುಲ್ ನಾಯ್ಡು, ವಕೀಲರಾದ ಮಣಿರಾಜ್, ಕಾಲೇಜಿನ ಎ. ಒ. ಮುರಳೀಧರ್ ರಾವ್, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ್ಯೆ ರಂಜಿತ, ಉಪ ಕಾರ್ಯದರ್ಶಿ ಪ್ರಶಾಂತಿ ಎಸ್., ಉಪ ಪ್ರಾಂಶುಪಾಲೆ ಪವಿತ್ರ, ಸಹ ಮುಖ್ಯ ಶಿಕ್ಷಕಿ ಸೌಜನ್ಯ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಸ್ಪರ್ಧೆಯ ಎಲ್ಲಾ ವಿಜೇತರಿಗೆ ಪ್ರಶಸ್ತಿ ಫಲಕ, ಪ್ರಮಾಣಪತ್ರ ಹಾಗೂ ನಗದು ನೀಡಿ ಗೌರವಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಬಿಂದುಸಾರ ಶೆಟ್ಟಿ ಸ್ವಾಗತಿಸಿ, ಉಪನ್ಯಾಸಕಿ ಅಕ್ಷತ ನಿರೂಪಿಸಿದರು, ರೇಷ್ಮಾ ಮೋಹನ್ ವಂದಿಸಿದರು.