ಮೈಸೂರು : ವೃತ್ತಿ ರಂಗಭೂಮಿಯ ಹಿರಿಯ ನಟಿಯರಾದ ರಾಧಾ–ರುಕ್ಕಿಣಿ ಸಹೋದರಿಯರನ್ನು ಇಲ್ಲಿನ ನಟನ ರಂಗಶಾಲೆಯಿಂದ ನೀಡುವ ‘ನಟನ ಪುರಸ್ಕಾರ-2025’ಕ್ಕೆ ಆಯ್ಕೆ ಮಾಡಲಾಗಿದೆ. ‘ನಟನ’ದ ಸಂಸ್ಥಾಪಕ ಅಧ್ಯಕ್ಷ ಎನ್. ಸುಬ್ರಹ್ಮಣ್ಯಂ ನೆನಪಿನಲ್ಲಿ ನೀಡುವ ಪುರಸ್ಕಾರ ಇದಾಗಿದೆ.
ಈ ಕಲಾವಿದೆಯರು ರಂಗಭೂಮಿಗೆ ಅತಿ ದೀರ್ಘ ಅವಧಿಯಿಂದ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿಯು ರೂ. ಹತ್ತು ಸಾವಿರ, ಸ್ಮರಣಿಕೆ ಹಾಗೂ ಅಭಿನಂದನಾಪತ್ರ ಒಳಗೊಂಡಿದೆ. ದಿನಾಂಕ 11 ಏಪ್ರಿಲ್ 2025ರಂದು ದಟ್ಟಗಳ್ಳಿಯ ಸುಪ್ರೀಂ ಪಬ್ಲಿಕ್ ಶಾಲೆಯ ಆವರಣದಲ್ಲಿ ನಡೆಯಲಿರುವ ‘ರಜಾ-ಮಜಾ’ ಶಿಬಿರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು ಎಂದು ರಂಗಕರ್ಮಿ ಮಂಡ್ಯ ರಮೇಶ್ ತಿಳಿಸಿದ್ದಾರೆ.
1948ರಲ್ಲಿ ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ಸಂಗೀತ ವಿದ್ವಾನ್ ಹನುಮಂತಾಚಾರ್- ಗೌರಮ್ಮ ದಂಪತಿಗೆ ಅವಳಿ ಮಕ್ಕಳಾಗಿ ರಾಧಾ – ರುಕ್ಕಿಣಿ ಜನಿಸಿದರು. 1961ರಲ್ಲಿ ಕೆ.ಆರ್. ನಗರ ಕ್ಯಾಂಪ್ನಲ್ಲಿ ಗುಬ್ಬಿ ವೀರಣ್ಣನವರ ನಾಟಕ ಕಂಪನಿಗೆ ಚಿಕ್ಕ ವಯಸ್ಸಿನಲ್ಲೇ ರಂಗಪ್ರವೇಶ ಮಾಡಿದರು. ‘ಲವ-ಕುಶ’ ನಾಟಕದಲ್ಲಿ ಲವಕುಶ, ‘ಕೃಷ್ಣ ಲೀಲಾ’ದಲ್ಲಿ ಕೃಷ್ಣ-ಬಲರಾಮರಾಗಿ, ‘ಗಾಜಿನ ಮನೆ’ ನಾಟಕದಲ್ಲಿ ನಾಗೇಶ ಸುರೇಶ ಪಾತ್ರಧಾರಿಗಳಾಗಿ ಅಭಿನಯಿಸಿ ರಾಜ್ಯದಾದ್ಯಂತ ಜನಮೆಚ್ಚುಗೆ ಗಳಿಸಿದವರು. ಒಟ್ಟು ಇಪ್ಪತ್ತು ಸಾವಿರ ಪ್ರಯೋಗಗಳಲ್ಲಿ ನಟಿಸಿದ್ದಾರೆ. ಇವರು, ಗುಬ್ಬಿ ಕಂಪನಿಯಲ್ಲಿ ಹುಟ್ಟಿ ಬೆಳೆದಂತಹ ಜಿ.ವಿ. ಕೃಷ್ಣ ಅವರನ್ನು ವರಿಸಿದ್ದಾರೆ. 1974ರಲ್ಲಿ ತಮ್ಮದೇ ಆದ ಜಿ.ವಿ. ಕೃಷ್ಣ ನಾಟಕ ಕಂಪೆನಿ ಪ್ರಾರಂಭಿಸಿದರು.
ಹೆಸರಾಂತ ಕಲಾವಿದರಾದ ಗುಬ್ಬಿ ವೀರಣ್ಣ, ಬಿ. ಜಯಮ್ಮ, ಮಾಲತಿ, ಸ್ವರ್ಣ, ಬಿ. ಜಯಶ್ರೀ. ಶಿವಾನಂದ, ಪಿ. ಕಾಳಿಂಗ ರಾವ್, ಚೋಮನದುಡಿ ವಾಸುದೇವ ರಾವ್, ಜಿ.ವಿ. ಅಯ್ಯರ್, ಬಿ.ವಿ. ಕಾರಂತ, ಉದಯ್ಕುಮಾರ್, ಕಲ್ಯಾಣ್ ಕುಮಾರ್, ಬಾಲಕೃಷ್ಣ, ನರಸಿಂಹರಾಜು, ದಿನೇಶ್, ಮುಸುರಿ ಕೃಷ್ಣಮೂರ್ತಿ, ಡಿಂಗ್ರಿ ನಾಗರಾಜ್, ಎಂ.ಎಸ್. ಉಮೇಶ್, ಲೀಲಾವತಿ, ಕಲ್ಪನಾ, ಮಾಸ್ಟರ್ ಹಿರಣ್ಣಯ್ಯ, ಸುಬ್ಬಯ್ಯ ನಾಯ್ಡು ಅವರಂತಹ ಹಿರಿಯ ಕಲಾವಿದರೊಂದಿಗೆ ನಟಿಸಿದ್ದಾರೆ. ಕೃಷ್ಣ-ರಾಧಾ-ರುಕ್ಕಿಣಿ ದಂಪತಿಯ ಮಕ್ಕಳಾದ ಶರಣ್, ಶ್ರುತಿ, ಉಷಾ ಹೆಸರಾಂತ ಕಲಾವಿದರಾಗಿದ್ದಾರೆ.