ಉಡುಪಿ ; ಕೊಡವೂರು ಶ್ರೀ ಶಂಕರನಾರಾಯಣ ದೇವಳ ಹಾಗೂ ನೃತ್ಯ ನಿಕೇತನ ಕೊಡವೂರು ಜಂಟಿಯಾಗಿ ಆಯೋಜಿಸಿದ್ದ ನೃತ್ಯ ಶಂಕರ ನಾಟ್ಯ ಸರಣಿಯ ನೂರನೇ ಕಾರ್ಯಕ್ರಮ ದಿನಾಂಕ 09 ಜೂನ್ 2025ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಮಾತನಾಡಿ ಶ್ರದ್ಧೆ, ಬದ್ಧತೆಯಿಂದ ಶ್ರೇಷ್ಠತೆ ಪಡೆದುಕೊಂಡ ನೃತ್ಯ ನಿಕೇತನ ಕೊಡವೂರು ಸಂಸ್ಥೆ ಹಲವಾರು ನೃತ್ಯ ವಿದ್ಯಾರ್ಥಿಗಳೊಂದಿಗೆ ನೃತ್ಯ ಗುರುಗಳನ್ನೂ ಸೃಷ್ಟಿಸಿ ನಮ್ಮ ನಾಡಿನ ಸಾಂಸ್ಕೃತಿಕ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಿದೆ. ಕಲೆ ಯಾವತ್ತೂ ಕಲಿಕೆಗೆ ಪೂರಕವಾಗಿದ್ದು ಅದು ಎಂದಿಗೂ ಮಾರಕವಾಗಿರಲು ಸಾಧ್ಯವಿಲ್ಲ” ಎಂಬ ಆಶಯ ವ್ಯಕ್ತ ಪಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಜಿ. ಕೊಡವೂರು ಅಭಿನಂದನಾ ಮಾತುಗಳನ್ನಾಡಿದರು . ಉದ್ಯಮಿಗಳಾದ ಸಾಧು ಸಾಲಿಯಾನ್, ಕಲಾ ಪೋಷಕರಾದ ವಿಶ್ವನಾಥ್ ಶೆನೋಯ್, ರಂಗ ಕಲಾವಿದ ಎಮ. ಶ್ರೀನಿವಾಸ್ ಭಟ್ ಶುಭ ಹಾರೈಸಿದರು. ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರಾಜ ಸೇರಿಗಾರ, ಭಾಸ್ಕರ ಪಾಲನ್, ಯಶೋಧರ ಸಾಲಿಯಾನ್, ಕೆ. ಬಾಬ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಲಾ ದಂಪತಿಗಳನ್ನು ಶ್ರೀ ದೇವಳದ ವತಿಯಿಂದ “ಶಂಕರನಾರಾಯಣಾನುಗ್ರಹ “ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಮಧುಶ್ರೀ ಪ್ರಾರ್ಥಿಸಿ, ನೃತ್ಯ ನಿಕೇತನ ಕೊಡವೂರು ಸಂಸ್ಥೆಯ ನಿರ್ದೇಶಕರಾದ ವಿದ್ವಾನ್ ಸುಧೀರ್ ರಾವ್ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿ, ಪೂರ್ಣಿಮಾ ಜನಾರ್ದನ ನಿರೂಪಿಸಿ, ನೃತ್ಯ ನಿಕೇತನ ಸಂಸ್ಥೆಯ ನಿರ್ದೇಶಕಿ ಮಾನಸಿ ಸುಧೀರ್ ಕೃತಜ್ಞತೆ ಸಲ್ಲಿಸಿ, ಜನಾರ್ದನ ಕೊಡವೂರು ಧನ್ಯವಾದವಿತ್ತರು. ಸಭಾ ಕಾರ್ಯಕ್ರಮದ ಬಳಿಕ ನೃತ್ಯ ಶಂಕರ ಸರಣಿಯ ನೂರನೇ ಪ್ರಸ್ತುತಿ ಸಂಪನ್ನ ಗೊಂಡಿತು.
Subscribe to Updates
Get the latest creative news from FooBar about art, design and business.
Previous Articleಕಥೆ – ‘ತೊರೆದು ಹೋಗುವ ಮುನ್ನ’