ಶಿವಮೊಗ್ಗ : ಗೋಪಿಶೆಟ್ಟಿಕೊಪ್ಪದ ಸಾಹಿತ್ಯ ಗ್ರಾಮದಲ್ಲಿ ಏರ್ಪಡಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ತನ್ನ ಮೂರು ವರ್ಷದ ಕಾರ್ಯಚಟುವಟಿಕೆಗಳ ದಾಖಲೆಗಳಿರುವ ‘ಕ್ರಿಯಾಶೀಲತೆಯ ಒಳನೋಟ’ ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಬಾನು ಮುಷ್ತಾಕ್ ಅವರ ‘ಎದೆಯ ಹಣತೆ’ ಕೃತಿ ಕುರಿತು ಚರ್ಚೆ ಕಾರ್ಯಕ್ರಮವು ದಿನಾಂಕ 28 ಮೇ 2025ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ 19ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು, ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಜೆ.ಕೆ. ರಮೇಶ್ “ಕ್ರಿಯಾಶೀಲತೆಯ ಒಳನೋಟಕ್ಕೆ ಹೊರನೋಟವು ಇದೆ. ಮಲೆನಾಡಿನ ಚಿತ್ರಣ, ಜಿಲ್ಲೆಯ ನಕ್ಷೆ, ರಾಷ್ಟ್ರಕವಿಯ ಚಿತ್ರ ಎಲ್ಲವನ್ನೂ ಒಳಗೊಂಡಿದೆ. ಪರಿಷತ್ತು ಚಟುವಟಿಕೆಗಳು, ಅತಿಥಿಗಳ ಮಾತು ಸಂಘಟಿಸಿದ ನಾಲ್ಕು ಸಮ್ಮೇಳನಗಳ ಭಾಷಣಗಳ ಸಂಗ್ರಹಗಳಲ್ಲಿ ನೂರ ಇಪ್ಪತೈದು ಜನರ ಭಾಷಣಗಳ ಟಿಪ್ಪಣಿಗಳಿವೆ. ಇಲ್ಲಿ ಎಲ್ಲಾ ಬಗೆಯ ಅಭಿಪ್ರಾಯಗಳಿವೆ. ಒಳಹೊಕ್ಕು ನೋಡಿದಾಗ ಒಳನೋಟದ ಅರಿವಾಗುತ್ತೆ. ಈ ಸಂಚಿಕೆಯಲ್ಲಿ ಕನ್ನಡ ಭಾಷೆ, ಅದರ ಸ್ವರೂಪ, ಸ್ಥಿತಿ, ಸ್ಥಾನಮಾನಗಳ ಕುರಿತು ಚಿಂತಿಸಿರುವ ಲೇಖನಗಳಿವೆ. ಸಾಹಿತ್ಯ ಕೃತಿಗಳು, ಅಭಿವೃಚಿ, ಓದುಗರ ದೃಷ್ಟಿ, ಓದುವ ಹಂಬಲವೇ ಕಡಿಮೆ ಆಗುತ್ತಿರುವ ವಿಚಾರವಾಗಿ, ಪುಸ್ತಕದ ಮಹತ್ವ ಕುರಿತು ಮಾತುಗಳಿವೆ. ದತ್ತಿ ಉಪನ್ಯಾಸದಲ್ಲಿ ಒಂದೇ ವಿಚಾರ ಬೇರೆ ಬೇರೆ ಮಾತುಗಳನ್ನು ದಾಖಲಿಸಲಾಗಿದೆ. ಅಸಮಾನತೆ ಅಸಹಿಷ್ಣುತೆ, ಕೋಮುವಾದ ವಿಚಾರಗಳು, ಪರಿಸರಕ್ಕೆ ಸಂಬಂಧಿಸಿದ ಲೇಖನಗಳು ಇಲ್ಲಿವೆ. ಮಡಿವಂತಿಕೆಯಿಲ್ಲದೆ ಎಲ್ಲವನ್ನೂ ಒಳಗೊಂಡಿದೆ” ಎಂದು ವಿಶ್ಲೇಷಣೆ ಮಾಡಿದವರು.
ಹಿರಿಯ ಸಾಹಿತಿಗಳಾದ ಡಾ. ಜೆ.ಕೆ. ರಮೇಶ್ ಮಾತನಾಡಿ “ಸಾಹಿತ್ಯ ಗ್ರಾಮದಲ್ಲಿ ಗ್ರಂಥಾಲಯ ಆರಂಭವಾಗಿದೆ. ಬಂಗಾರಪ್ಪ ನವರ ಹೆಸರಲ್ಲಿ ಮಾಡಿದ್ದು ಸಂತೋಷ. ಗ್ರಂಥಾಲಯ ದೇಶದ ಸಂಪತ್ತು. ಯಾವ ದೇಶದಲ್ಲಿ ಗ್ರಂಥಾಲಯಗಳು ಹೆಚ್ಚಿವೆಯೋ ಅವೇ ಶ್ರೀಮಂತ ರಾಷ್ಟ್ರಗಳು. ಅಮೇರಿಕ, ಫ್ರಾನ್ಸ್, ಬ್ರಿಟನ್ ನಂತಹ ರಾಷ್ಟ್ರಗಳು ಆ ಸಾಲಿಗೆ ಸೇರಿವೆ. ನಮ್ಮ ದೇಶದ ಜನಸಂಖ್ಯೆ ಅನುಗುಣವಾಗಿ ಇಪ್ಪತ್ತೈದು ಸಾವಿರ ಜನರಿಗೆ ಒಂದು ಗ್ರಂಥಾಲಯವಿದೆ. ಶ್ರೀಮಂತ ರಾಷ್ಟ್ರಗಳಲ್ಲಿ 250 ಜನರಿಗೆ ಒಂದು ಗ್ರಂಥಾಲಯವಿದೆ. ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಹೆಚ್ಚಿವೆ. ಓದುಗರ ಸಂಖ್ಯೆ ಗಮನಿಸಿದರೆ ಶೇಕಡ 1.5 ಜನರು ಗ್ರಂಥಾಲಯಕ್ಕೆ ಹೋಗುತ್ತಾರೆ. ಓದುಗರನ್ನು ಬೆಳೆಸುವತ್ತ ಅಗತ್ಯ ಗಮನಹರಿಸುವುದು ಮುಖ್ಯ. ಪುಸ್ತಕ ಸಹವಾಸದಿಂದ ನಿಮ್ಮ ಜ್ಞಾನ ಹೆಚ್ಚುತ್ತದೆ. ಜ್ಞಾನಕ್ಕೆ ಶತ್ರುಗಳು ಹೆದರುತ್ತಾರೆ. ದೇವಾಲಯಕ್ಕೆ ಭೇಟಿ ಕೊಡಲು ಸಾಲು, ಸಾಲು ನಿಲ್ಲುತ್ತಾರೆ. ಅದೇ ಸಾಲು ಗ್ರಂಥಾಲಯದ ಮುಂದೆ ನಿಲ್ಲುವುದಾದರೆ ಆಗ ಭಾರತ ವಿಶ್ವ ಗುರುವಾಗಬಲ್ಲದು. ನೆಮ್ಮದಿಯ ಬದುಕಿಗೆ ಗ್ರಂಥಾಲಯ ಬೇಕು” ಎಂದರು.
ಈ ಕಾರ್ಯಕ್ರಮದಲ್ಲಿ ಬಾನು ಮುಷ್ತಾಕ್ ಅವರ ‘ಎದೆಯ ಹಣತೆ’ ಕೃತಿಯ ಕುರಿತು ಮಾತನಾಡಿದ ಲೇಖಕಿ, ಪ್ರಕಾಶಕರಾದ ಅಕ್ಷತಾ ಹುಂಚದಕಟ್ಟೆ “ಕನ್ನಡದ ಲೇಖಕಿಗೆ ಬೂಕರ್ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ಜಗತ್ತು ಕನ್ನಡ, ಕರ್ನಾಟಕ ವಿಶೇಷ ಆಸಕ್ತಿಯಿಂದ ನೋಡುವ ಕಾಲ ಬಂದಿದೆ. ಹೆಜ್ಜೆಮೂಡದ ಹಾದಿ ಆರು ಕಥೆಗಳಿರುವ ಸಂಕಲನವನ್ನು ಆಂಗ್ಲ ಭಾಷೆಗೆ ಭಾಷಾಂತರ ಮಾಡಿ ‘ಹಾರ್ಟ್ ಲ್ಯಾಂಪ್’ ಕೃತಿಗೆ ವಿಶ್ವ ಪ್ರಶಸ್ತಿ ಬಂದಿದೆ. ಮಹಿಳೆಯರ ಬರಹವೆಂದರೆ ಅಡಿಗೆಮನೆ ಸಾಹಿತ್ಯ ಎಂದು ನಿರ್ಲಕ್ಷ್ಯ ಮಾಡುತ್ತಿದ್ದ ಕಾಲದಲ್ಲಿ ಅದೇ ಮಹಿಳಾ ಸಾಹಿತ್ಯ ವಿಶ್ವ ಮನ್ನಣೆ ತಂದುಕೊಟ್ಟಿದ್ದು ಮಹಿಳಾ ಸಾಹಿತ್ಯಕ್ಕೆ ಸಿಕ್ಕ ಮಾನ್ಯತೆ. ಪುರುಷರು ಬರೆದ ಸಾಹಿತ್ಯಕ್ಕೆ ಇರುವ ಮಾನ್ಯತೆ ಹೆಣ್ಣುಮಕ್ಕಳು ಬರೆದ ಸಾಹಿತ್ಯಕ್ಕೂ ದೊರೆಯಬೇಕು. ಪ್ರತ್ಯೇಕಿಸದೆ ಒಗ್ಗಟ್ಟಿನಿಂದ ಒಳಗೊಳ್ಳುವಿಕೆಯಲ್ಲಿ ಜಗತ್ತು ಬೆಳಗಬೇಕು. ಜನಪರ ವಾದಿಗಳಿಗೆ ಮೂಲಭೂತ ವಾದಿಗಳ ಭಯ, ಆತಂಕ, ದಾಳಿ ಮಾಡುವುದು, ಬಹಿಷ್ಕಾರದ ನೋವುಂಟು ಮಾಡುವ ಸಂದರ್ಭದ ತಲ್ಲಣಗಳನ್ನು ಕುರಿತು ಬಾನು ಮುಷ್ತಾಕ್ ಅವರು ತಮ್ಮ ಕೃತಿಯಲ್ಲಿ ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ್ದಾರೆ” ಎಂಬುದನ್ನು ವಿವರಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಕೆ.ಎಸ್. ಮಂಜಪ್ಪ ನಿರೂಪಿಸಿದರು. ಡಾ. ವಿಜಯಾದೇವಿ, ಎಂ. ನವೀನ್ ಕುಮಾರ್, ಕೆ.ಎಸ್. ಹುಚ್ಚರಾಯಪ್ಪ, ಮಂಜುನಾಥ ಕಾಮತ್, ಎಚ್.ಎಸ್. ರಘು, ಮಹಾದೇವಿ, ಎಚ್. ತಿಮ್ಮಪ್ಪ ಭದ್ರಾವತಿ, ಎಂ.ಇ. ಜಗದೀಶ್, ಮೋಹನ್ ಕುಮಾರ್, ಡಿ. ಗಣೇಶ್ ಇತರರು ವೇದಿಕೆಯಲ್ಲಿದ್ದರು.