1932ರ ಜೂನ್ 25ರಂದು ಜನಿಸಿದ ಡಾ. ಶಿವಪುತ್ರಪ್ಪ ರಾಯಪ್ಪ ಗುಂಜಾಳ್ ಇವರದು ಪ್ರಾಧ್ಯಾಪಕ, ಸಂಶೋಧಕ ಹಾಗೂ ಆಡಳಿತಗಾರರಾಗಿ ಬಹುಮುಖ ವ್ಯಕ್ತಿತ್ವ. ಧಾರವಾಡ ಜಿಲ್ಲೆಯ ಕೋಳಿವಾಡದಲ್ಲಿ ಜನಿಸಿದ ಇವರ ತಂದೆ ರಾಯಪ್ಪ, ತಾಯಿ ರುದ್ರಮ್ಮ. ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು 1979ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯ ವಿಭಾಗದ ಮುಖ್ಯಸ್ಥರಾಗಿದ್ದರು. ‘ಉತ್ತಂಗಿ ಚನ್ನಪ್ಪನವರ ಜೀವನ ಮತ್ತು ಕೃತಿಗಳು : ಒಂದು ಅಧ್ಯಯನ’ ಪ್ರಬಂಧಕ್ಕೆ ಬಂಗಾರದ ಪದಕದೊಡನೆ ಪಿ.ಎಚ್.ಡಿ. ಪದವಿಯನ್ನು ಗಳಿಸಿಕೊಂಡರು. ಅಧ್ಯಾಪನದ ಜೊತೆಗೆ ಸಂಶೋಧನೆ, ಬರವಣಿಗೆ, ಗ್ರಂಥಾಲಯ ವಿಜ್ಞಾನ ಗ್ರಂಥಗಳು ಸೇರಿದಂತೆ 72 ಕೃತಿಗಳು 150 ಲೇಖನಗಳನ್ನು ರಚಿಸಿದರು. ಇಪ್ಪತ್ತು ವಿಶ್ವ ವಿದ್ಯಾಲಯಗಳ ಅಭ್ಯಾಸ ಮಂಡಳಿಯ ಸದಸ್ಯರಾಗಿ, ಗುಲ್ಬರ್ಗ ವಿಶ್ವ ವಿದ್ಯಾಲಯದ ಸಮಾಜ ವಿಜ್ಞಾನ ವಿಭಾಗದ ಡೀನ್ ಆಗಿ ಅಪ್ರತಿಮ ಶೈಕ್ಷಣಿಕ ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶರಣ ಸಾಹಿತ್ಯ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳಿಂದ ಭೂಷಿತರಾದ ಗುಂಜಾಳ್ ನಿಯತಕಾಲಿಕೆಗಳ ಸಂಪಾದಕರು ಹಾಗೂ ಪಿ.ಎಚ್.ಡಿ. ವಿದ್ಯಾರ್ಥಿಗಳ ಮಾರ್ಗದರ್ಶಕರಾಗಿ ಸೇವೆಗೈದ ಸಾಧಕಮಣಿ. ಎಸ್.ಆರ್. ಗುಂಜಾಳ ಇವರು ಗ್ರಂಥಾಲಯ ವಿಜ್ಞಾನ ಮತ್ತು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ. ಅವರು ಬಸವ ತತ್ವಗಳ ಪ್ರಸಾರ ಮತ್ತು ವಚನ ಸಾಹಿತ್ಯದ ಸಂಶೋಧನೆಯಲ್ಲಿ ನೀಡಿರುವ ಸೇವೆ ಅಮೋಘವಾದದ್ದು.
-ಅಕ್ಷರೀ